ಕಿಚ್ಚನಿಂದ ಸಹಾಯಕನಿಗೆ ಕಪಾಳಮೋಕ್ಷ
ಐಂದ್ರಿತಾ ರೇ ಹಾಗೂ ನಾಗತಿಹಳ್ಳಿ ಕಪಾಳಮೋಕ್ಷ ಪ್ರಕರಣ ಹಸಿಯಾಗಿರುವಾಗಲೇ ಸಹಾಯಕ ನಿರ್ದೇಶಕರೊಬ್ಬರಿಗೆ ಕಿಚ್ಚ ಸುದೀಪ್ ಕೆನ್ನೆಗೆ ಬಾರಿಸಿದ ಘಟನೆ ನಡೆದಿದೆ. ನಗರದ ಮಿನರ್ವಾ ಮಿಲ್ ಮೈದಾನದಲ್ಲಿ ಕನ್ವರ್ ಲಾಲ್ ಚಿತ್ರೀಕರಣ ಸಮಯದಲ್ಲಿ ಈ ಘಟನೆ ಸಂಭವಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಸಮಯಕ್ಕೆ ಸರಿಯಾಗಿ ಚಿತ್ರದ ಸ್ಕಿಪ್ಟ್ ಒದಗಿಸದೆ ಚಿತ್ರೀಕರಣ ವಿಳಂಬಕ್ಕೆ ಕಾರಣರಾದರು ಎಂದು ಸುದೀಪ್ ಸಹಾಯಕ ನಿರ್ದೇಶಕ ಸಾಗರ್ ಗೆ ಕಪಾಳ ಮೋಕ್ಷ ಮಾಡಿದ್ದಾರೆ. ಚಿತ್ರೀಕರಣದ ವೇಳೆ ನಿರ್ದೇಶಕರು ಸಿಟ್ಟಾಗುವುದು, ಕೂಗಾಡುವುದು ಎಲ್ಲ ಕಾಮನ್. ಅದರಲ್ಲೂ ಸುದೀಪ್ ರಂಥ ಬಿಸಿರಕ್ತದ ನಟ, ನಿರ್ದೇಶಕರಿದ್ದಾಗ, ಆದರೆ. ಈ ಪ್ರಕರಣವನ್ನು ಊರ ಜನರ ಕಿವಿಗೆ ಹಂಚಿದವರು ಯಾರು ಯಾಕೆ ಎಂಬುದೇ ಪ್ರಶ್ನೆ.

ಸಾಗರ್ ಗಿಂತ ಹೆಚ್ಚು ಸಹಾಯಕ ನಿರ್ದೇಶಕ ಸುರೇಶ್ ರಾಜ್ ಮೇಲೆ ಸುದೀಪ್ ಹರಿಹಾಯ್ದ ಪ್ರಕರಣ ನಡೆದಿದೆಯಂತೆ. ಸುದೀಪ್ ಮೇಲೆ ಸಿಟ್ಟಾಗಿ ಸುರೇಶ್ ಚಿತ್ರೀಕರಣ ಬಿಟ್ಟು ಹೊರನಡೆದಿದ್ದು ಆಗಿದೆಯಂತೆ. ಆದರೆ, ಸಾಗರ್ ಚಿತ್ರತಂಡ ಬಿಟ್ಟು ಹೊರನಡೆದಿಲ್ಲ. ಮಿನರ್ವ ಮಿಲ್ ನಲ್ಲಿ ಹಾಕಿರುವ ಬೃಹತ್ ಸೆಟ್ ಬಳಿಯೇ ಕೂತಿದ್ದಾರೆ ಎಂದು ತಿಳಿದುಬಂದಿದೆ.
ಸಾಗರ್ ಗೆ ಕಪಾಳ ಮೋಕ್ಷ ಆಗಿದ್ದು ಯಾವುದೋ ರೂಂ ಒಳಗೆ ಆದರೂ, ಅದರ ಸದ್ದು ಎಲ್ಲರಿಗೂ ಕೇಳುವಂತೆ ಮಾಡಿದ್ದು ಸುರೇಶ್ ರಾಜ್. ಸುದೀಪ್ ಬಳಿಗೆ ಬಂದು ಸಾಗರ್ ಗೆ ಹೊಡೆದಿದ್ದು ತಪ್ಪು. ಸಹಾಯಕರನ್ನು ಸರಿಯಾಗಿ ನಡೆಸಿಕೊಳ್ಳಬೇಕು ಎಂದೆಲ್ಲಾ ಎಲ್ಲರೆದರೂ ಕೂಗಾಡಿದ್ದು, ಕಿಚ್ಚನ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಇದರ ಪರಿಣಾಮ ಸುರೇಶ್ ರಾಜ್ ಗೆ ಸೆಟ್ ನಿಂದ ಗೇಟ್ ಔಟ್ ಅಂದಿದ್ದಾರೆ ಸುದೀಪ್.
ಮೈ ಆಟೋಗ್ರಾಫ್ ಚಿತ್ರದಿಂದ ಹಿಡಿದು ಈ ವರೆಗೂ ಸುದೀಪ್ ಗೆ ಅಣ್ಣನಂತೆ ಜೊತೆಗಿದ್ದ ಸುರೇಶ್ ಈ ರೀತಿ ವರ್ತಿಸಿದ್ದು, ಸೆಟ್ ನಲ್ಲಿದ್ದವರಿಗೆ ಅಚ್ಚರಿ ಮೂಡಿಸಿದೆ. ಅಲ್ಲದೆ ಸುದೀಪ್ ಕಾಲ್ ಶೀಟ್ ಕೊಡಿಸುವ ಭರವಸೆ ನೀಡಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಆರೋಪವನ್ನು ಸುರೇಶ್ ಮೇಲೆ ಹೊರೆಸುತ್ತದೆ ಗುಪ್ತ ವರದಿಗಾರರು. ಈ ವಂಚನೆ ಪ್ರಕರಣದಿಂದ ನುಣುಚಿಕೊಳ್ಳಲು ಸುರೇಶ್ ಸುಮ್ಮನೆ ಸೀನ್ ಕ್ರಿಯೇಟ್ ಮಾಡಿರಬಹುದು ಎನ್ನಲಾಗಿದೆ.
ಸದ್ಯ ಸುರೇಶ್ ಚಿತ್ರೀಕರಣಕ್ಕೆ ಹಿಂದಿರುಗಿಲ್ಲ. ಆದರೆ ಇದೇನು ಅಂಥಾ ದೊಡ್ಡ ವಿಷಯವಲ್ಲ. ಸುದೀಪ್ ಹಾಗೆ ಮಾಡಬಾರದಿತ್ತು ಎಂದು ಸುರೇಶ್ ಹೇಳಿ ಸುಮ್ಮನಾಗಿದ್ದಾರೆ. ಈ ಎಲ್ಲದರಿಂದ ಕಿಚ್ಚನ ಮನಸ್ಸು ಮುರಿದಿರುವುದಂತೂ ಸತ್ಯ.


Click it and Unblock the Notifications











