'ವೀರ ಮದಕರಿ' ಶತದಿನೋತ್ಸವಕ್ಕೆ ಚಿತ್ರತಂಡಬಹಿಷ್ಕಾರ!
'ವೀರ ಮದಕರಿ' ಚಿತ್ರ ಶತಕದ ಸಂಭ್ರಮದಲ್ಲಿದೆ. ಮುಂದಿನ ವಾರ ಹಾಸನದಲ್ಲಿ ಶತದಿನೋತ್ಸವ ಸಂಭ್ರಮವನ್ನು ಆಚರಿಸಿಕೊಳ್ಳಲು ಸಿದ್ಧವಾಗಿದೆ. ಆದರೆ 'ವೀರ ಮದಕರಿ' ಚಿತ್ರತಂಡ ಶನದಿನೋತ್ಸವ ಸಂಭ್ರಮವನ್ನು ಬಹಿಷ್ಕರಿಸಲು ತೀರ್ಮಾನಿಸಿದೆ. ನಿರ್ಮಾಪಕ ದಿನೇಶ್ ಗಾಂಧಿ ಬಗ್ಗೆ ಇಡೀ ಚಿತ್ರತಂಡ ಸಿಡಿದೆದ್ದಿದೆ.
ಬಾಕಿ ಸಂಭಾವನೆಯನ್ನು ದಿನೇಶ್ ಗಾಂಧಿ ಇನ್ನೂ ಕೊಟ್ಟಿಲ್ಲ ಎಂಬುದು ತಂತ್ರಜ್ಞರು ಮತ್ತು ಕಲಾವಿದರ ಪ್ರಮುಖ ಆರೋಪ. ಹಾಗಾಗಿ ಶತದಿನೋತ್ಸವ ಸಂಭ್ರಮಕ್ಕೆ ಅವರು ಬಹಿಷ್ಕಾರ ಹಾಕಿದ್ದಾರೆ. ಚಿತ್ರ ಬಿಡುಗಡೆಯಾದ ದಿನದಿಂದಲೂ ನಟ ಸುದೀಪ್ ಸಂಭಾವನೆ ವಿಚಾರವಾಗಿ ದಿನೇಶ್ ಜತೆ ಗುದ್ದಾಡುತ್ತಲೇ ಇದ್ದಾರೆ. ದಿನೇಶ್ ಗಾಂಧಿ ಮತ್ತು ಚಿತ್ರತಂಡದ ನಡುವಿನ ಮುಸುಕಿನ ಗುದ್ದಾಟ ಈಗ ಬೀದಿಗೆ ಬಂದಿದೆ.
ವೀರ ಮದಕರಿ ಚಿತ್ರ ತೆರೆಕಾಣುವುದಕ್ಕೂ ಮುನ್ನ ದಿನೇಶ್ ಆರ್ಥಿಕ ಸಂಕಷ್ಟದಲ್ಲಿದ್ದರು. ಹಾಗಾಗಿ ಸಂಭಾವನೆ ವಿಚಾರವಾಗಿ ಚಿತ್ರತಂಡ ಯಾವುದೇ ಕ್ಯಾತೆ ತೆಗೆದಿರಲಿಲ್ಲ. ವಿತರಕರಿಗೆ ಮಾರಾಟವಾದ ಬಳಿಕ ಹಣ ಕೊಡುವುದಾಗಿ ಕಲಾವಿದರು ಮತ್ತು ತಂತ್ರಜ್ಞರಿಗೆ ಭರವಸೆ ಕೊಟ್ಟಿದ್ದರು. ಚಿತ್ರ ಈಗ ಶತದಿನೋತ್ಸವದ ಸಂಭ್ರಮದಲ್ಲಿದೆ. ಹೀಗಿದ್ದೂ ದಿನೇಶ್ ಗಾಂಧಿ ಬಾಕಿ ಹಣದ ಮಾತನ್ನೇ ಮರೆದಿದ್ದಾರೆ ಎಂಬುದು ಚಿತ್ರತಂಡದ ದೂರು. ಸುದೀಪ್ ಗೂ ಸಂಭಾವನೆ ಹಣ ಬಾಕಿ ಇದೆ ಎಂಬ ಮಾತು ಕೇಳಿಬಂದಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











