ಎರಡು ಪುಸ್ತಕಗಳಿಗೆ ಜನ್ಮ ನೀಡಲಿದ್ದಾರೆ ನಟಿ ರಂಜಿತಾ
ಸ್ವಾಮಿ ನಿತ್ಯಾನಂದ ರಾಸಲೀಲೆ ಪ್ರಕರಣದ ಬಳಿಕ ಕಾಣೆಯಾಗಿದ್ದ ಚಿತ್ರನಟಿ ರಂಜಿತಾ ಇದೀಗ ದಿಗ್ಗನೆ ಪ್ರತ್ಯಕ್ಷವಾಗಿದ್ದಾರೆ. ಕೈಯಲ್ಲಿ ಲೇಖನಿ ಹಿಡಿದು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ರಂಜಿತಾ ತಮ್ಮ ಅನುಭವಗಳಿಗೆ ಪುಸ್ತಕ ರೂಪ ಕೊಡಲಿದ್ದಾರಂತೆ. ಗಂಡ ಮತ್ತು ಕುಟುಂಬದ ಸದಸ್ಯರ ಬೆಂಬಲ ಪಡೆದು ಎರಡು ಪುಸ್ತಕಗಳನ್ನ್ನು ಬರೆಯುವುದಾಗಿ ರಂಜಿತಾ ತಿಳಿಸಿದ್ದಾರೆ.
ಸಮಸ್ಯೆಯ ಸುಳಿಯಲ್ಲಿರುವವರಿಗಾಗಿ ಒಂದು ಪುಸ್ತಕ ಹಾಗೂ ಮತ್ತೊಂದನ್ನು ಇಂದಿನ ಯುವಕರಿಗೆ ಸಂಬಂಧಿಸಿದಂತೆ ಬರೆಯಲಿರುವ ಕಾಲ್ಪನಿಕ ಪುಸ್ತಕ ಎಂದು ರಂಜಿತಾ ವಿವರ ನೀಡಿದ್ದಾರೆ. ಈಗಾಗಲೆ ಪ್ರಕಾಶಕರನ್ನು ಮಾತನಾಡಿದ್ದೇನೆ. ಶ್ರೀಘ್ರದಲ್ಲೆ ಪುಸ್ತಕ ಲೋಕಾರ್ಪಣೆಯಾಗಲಿದೆ ಎಂದು ಸಂದರ್ಶನವೊಂದರಲ್ಲಿ ರಂಜಿತಾ ಹೇಳಿದ್ದಾರೆ.
ರಾಸಲೀಲೆ ವಿಡಿಯೋ ತುಣುಕುಗಳಿಂದ ಆಕೆಯ ಮನಸ್ಸಿಗೆ ಗಾಯವಾಗಿದೆಯಂತೆ. ಮಾಧ್ಯಮಗಳು ಕೆಟ್ಟ ದೃಷ್ಟಿಯಲ್ಲಿ ಇದನ್ನು ಪ್ರಸಾರ ಮಾಡಿದವು. ಆದರೆ ನನ್ನ ಗಂಡ, ಪೋಷಕರು, ಸೋದರ ಸಂಬಂಧಿಗಳು ಕುಸಿದು ಬಿದ್ದಿದ್ದ ನನ್ನ ಆತ್ಮವಿಶ್ವಾಸವನ್ನು ಎತ್ತಿ ನಿಲ್ಲಿಸಿದ್ದಾರೆ ಎಂದಿದ್ದಾರೆ ರಂಜಿತಾ.
ತಮ್ಮ ಮುಂದಿನ ಯೋಜನೆಗಳ ಬಗ್ಗೆ ಮಾತನಾಡುತ್ತಾ, ನಟನೆಯಿಂದ ವಿರಾಮ ತೆಗೆದುಕೊಳ್ಳಲಿದ್ದೇನೆ. ಪುಸ್ತಕಗಳನ್ನು ಓದುವುದೆಂದರೆ ನನಗೆ ಅತೀವ ಆಸಕ್ತಿ. ಈ ವಿಚಾರದಲ್ಲಿ ನಾನೊಂದು ಪುಸ್ತಕದ ಹುಳು. ಭಾರತೀಯ ಅಧ್ಯಾತ್ಮದ ಪುಸ್ತಕಗಳ ಕಡೆಗೆ ಒಲವಿದೆ ಎಂದು ರಂಜಿತಾ ತಮ್ಮ ಮನಸ್ಸಿನ ಭಾವನೆಗಳನ್ನು ಹೊರಗೆಡಹಿದ್ದಾರೆ.


Click it and Unblock the Notifications











