ಚಾಲೆಂಜಿಂಗ್ ಸ್ಟಾರ್ ದರ್ಶನ್ ರಿಯಾಲಿಟಿ ಶೋ?
ಈಟಿವಿ ಕನ್ನಡ ವಾಹಿನಿಯಲ್ಲಿ ಸುದೀಪ್ ಅವರು 'ಬಿಗ್ ಬಾಸ್' ನಿರೂಪಕರಾಗಿ ಗಮನಸೆಳೆದಿದ್ದಾರೆ. ಏತನ್ಮಧ್ಯೆ ಚಾಲೆಂಜಿಂಗ್ ಸ್ಟಾರ್ ಕಿರುತೆರೆಗೆ ಲಗ್ಗೆ ಹಾಕಲಿದ್ದಾರೆ ಎಂಬ ಸುದ್ದಿ ಸ್ಫೋಟಗೊಂಡಿದೆ. ಈ ಸಂಬಂಧ ಖಾಸಗಿ ಮನರಂಜನಾ ವಾಹಿನಿಯೊಂದು ಇತ್ತೀಚೆಗೆ ಅವರನ್ನು ಸಂಪರ್ಕಿಸಿದೆ ಎಂಬ ಮಾತುಗಳು ಧಾರಾಳವಾಗಿ ಕೇಳಿಬರುತ್ತಿವೆ.
ರಿಯಾಲಿಟಿ ಶೋ ಅಥವಾ ಗೇಮ್ ಶೋ ನಡೆಸಿಕೊಡಲು ದರ್ಶನ್ ಅವರಿಗೆ ಆಫರ್ ನೀಡಲಾಗಿದೆಯಂತೆ. ಇದಕ್ಕಾಗಿ ರು.12 ಕೋಟಿ ಆಫರ್ ನೀಡಲಾಗಿದೆಯಂತೆ. ಈ ಅಂತೆಕಂತೆ ಸುದ್ದಿಗಳ ನಡುವೆ ಮತ್ತೊಂದು ಸುದ್ದಿಯೂ ತೇಲಿಬಂದಿದೆ.
ಅದೇನೆಂದರೆ ದರ್ಶನ್ ಅವರು ಕಿರುತೆರೆಗೆ ಅಡಿಯಿಡುತ್ತಿಲ್ಲ ಎಂಬುದು. ನಾನು ಬೆಳ್ಳಿತೆರೆಯಲ್ಲೇ ಬಿಜಿಯಾಗಿದ್ದೇನೆ. ಇನ್ನು ಕಿರುತೆರೆಗೆ ಅಡಿಯಿಡುವುದು ದೂರದ ಮಾತಾಯಿತು ಎಂದಿದ್ದಾರೆ. ಆದರೂ ದರ್ಶನ್ ಕಿರುತೆರೆ ಎಂಟ್ರಿ ಬಗೆಗಿನ ಅನುಮಾನಗಳು ಬಗೆಹರಿದಿಲ್ಲ. ಬಹುಶಃ ಮೂರು ನಾಲ್ಕು ತಿಂಗಳಲ್ಲಿ ಸುದ್ದಿಯ ಸತ್ಯಾಸತ್ಯೆಗಳು ಹೊರಬೀಳಬಹುದು.
ದರ್ಶನ್ ನಡೆಸಿಕೊಡಲಿರುವ ರಿಯಾಲಿಟಿ ಶೋ ಸಹ ಹಿಂದಿ ಆವೃತ್ತಿಯ ರೀಮೇಕ್ ಅಂತೆ. ನಟ ಅಕ್ಷಯ್ ಕುಮಾರ್ ನಡೆಸಿಕೊಡುತ್ತಿದ್ದ ರಿಯಾಲಿಟಿ ಸ್ಟಂಟ್ ಶೋ 'ಖತ್ರೋನ್ ಕೆ ಖಿಲಾಡಿ' ಕನ್ನಡದಲ್ಲಿ ಮೂಡಿಬರಲಿದೆ ಎಂಬುದು ವಿಶೇಷ. (ಏಜೆನ್ಸೀಸ್)


Click it and Unblock the Notifications












