ತಣ್ಣಗಾದ 'ನೀರ್ ದೋಸೆ'ಗೆ ರಾಗಿಣಿ ಬಿಸಿಬಿಸಿ ತುಪ್ಪ
ಈ ವರ್ಷದ ಬಲು ವಿವಾದಿತ ಹಾಗೂ ಅಷ್ಟೇ ಚರ್ಚಾಸ್ಪದ ಸಿನಿಮಾ ಎಂದರೆ 'ನೀರ್ ದೋಸೆ'. ಈ ದೋಸೆ ತಣ್ಣಗಾದರೂ ಬಿಸಿಬಿಸಿ ಸುದ್ದಿಗಳು ಮಾತ್ರ ನಿರಂತರ ಬರುತ್ತಲೇ ಇವೆ. ಹಾಗಾಗಿ ಈ 'ನೀರ್ ದೋಸೆ' ಸೀದು ಹೋಗದಂತೆ ನೋಡುಕೊಂಡು ಬಂದಿರುವುದು ಒಂದು ವಿಶೇಷ.
ಇದೀಗ ಮತ್ತೊಮ್ಮೆ 'ದೋಸೆ'ಯನ್ನು ಬಿಸಿ ಮಾಡುವ ಸಮಯ ಬಂದಿದೆ. ಲಕ್ಕಿ ಸ್ಟಾರ್ ರಮ್ಯಾ ಬಿಟ್ಟು ಹೋದ 'ನೀರ್ ದೋಸೆ' ಈಗ ಮತ್ತೆ ರಾಗಿಣಿ ದ್ವಿವೇದಿ ಪ್ಲೇಟ್ ಗೆ ರವಾನೆಯಾಗುತ್ತಿದೆ. ಚಿತ್ರದ ನಿರ್ದೇಶಕ ವಿಜಯ್ ಪ್ರಸಾದ್ ಅವರು ರಾಗಿಣಿ ಕೈಗೆ ನೀರ್ ದೋಸೆ ಕೊಡಲು ಮುಂದಾಗಿದ್ದಾರೆ ಎನ್ನುತ್ತವೆ ಮೂಲಗಳು.

ರಮ್ಯಾ ಅವರು ನೀರ್ ದೋಸೆ ಶೂಟಿಂಗ್ ಗೂ ಹಾಜರಾಗಿದ್ದರು. ಬಳಿಕೆ ತಮಗೆ ಡೇಟ್ಸ್ ಹೊಂದಾಣಿಕೆಯಾಗುತ್ತಿಲ್ಲ ಎಂಬ ಕಾರಣ ನೀಡಿ ಚಿತ್ರದಿಂದ ಹಿಂದೆ ಸರಿದಿದ್ದರು. ಬಳಿಕ ಫಿಲಂ ಚೇಂಬರ್ ಮಧ್ಯಸ್ಥಿಕೆಯಲ್ಲಿ ವಿವಾದ ಬಗೆಹರಿಸಲು ನಾನಾ ಕಸರತ್ತುಗಳನ್ನು ಮಾಡಿದರೂ ಸಾಧ್ಯವಾಗಲಿಲ್ಲ.
ರಮ್ಯಾ ಅವರಿಗೆ ಅಡ್ವಾನ್ಸ್ ಹಣವನ್ನೂ ಕೊಡಲಾಗಿತ್ತಂತೆ. ಜೊತೆಗೆ ಕಾಸ್ಟ್ಯೂಮ್ ಡಿಸೈನ್ ಗೆಂದೇ ಲಕ್ಷಾಂತರ ದುಡ್ಡು ಪೋಲಾಗಿತ್ತು. ಈ ಎಲ್ಲಾ ನಷ್ಟವನ್ನೂ ಸರಿದೂಗಿಸಿಕೊಳ್ಳಲು ಸಾಧ್ಯವಾಗದೆ 'ನೀರ್ ದೋಸೆ' ಹುಳಿ ದೋಸೆಯಾಗಿದ್ದು ಗೊತ್ತೇ ಇದೆ.
ಇದೀಗ ರಾಗಿಣಿ ಅವರನ್ನು ಕರೆತರಲು ಚಿತ್ರತಂಡ ಮುಂದಾಗಿದೆ. ಆದರೆ ರಾಗಿಣಿ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ನೀರ್ ದೋಸೆ ಮೆಲ್ಲಲು ರಾಗಿಣಿ ಬಿಸಿಬಿಸಿ ತುಪ್ಪ ಸವರಲೂಬಹುದು ಅಥವಾ ತಿರಸ್ಕರಿಸಲೂ ಬಹುದು ಎನ್ನುತ್ತವೆ ಮೂಲಗಳು. (ಏಜೆನ್ಸೀಸ್)


Click it and Unblock the Notifications











