ಸಂಜನಾಗೆ ಮೂರೂವರೆ ಕೋಟಿ ಸುರಿದ ನಿರ್ಮಾಪಕ
ನಿರ್ಮಾಪಕರ ದುಡ್ಡು, ನಿಮಗೇನ್ರೀ ಎನ್ನಬೇಡಿ. ಕಾರಣ ಕನ್ನಡ ಚಿತ್ರವೊಂದಕ್ಕೆ ಸ್ಟಾರ್ ನಟರನ್ನು ನಂಬಿ ಎರಡು ಕೋಟಿ ಹಾಕಲೂ ಹಿಂದೇಟು ಹಾಕುವ ನಿರ್ಮಾಪಕ ಮಧ್ಯೆ ಈ ನಿರ್ಮಾಪಕರ ಧೈರ್ಯ ಗಾಬರಿಪಡಿಸಿದೆ ಅಷ್ಟೇ. ಅಂದಹಾಗೆ, ಈ ನಿರ್ಮಾಪಕ ಹೆಸರು ಗ್ಲೆನ್ ಡಯಾಝ್. ಅವರು ನಿರ್ಮಿಸುತ್ತಿರುವ ಚಿತ್ರದ ಹೆಸರು ಮಹಾನದಿ.
ಈ ಮಹಾನದಿ ಚಿತ್ರದ ನಾಯಕ ನಟ ದೀಲೀಪ್ ರಾಜ್. ಡಬ್ಬಿಂಗ್ ಆರ್ಟಿಸ್ಟ್ ಆಗಿಯೇ ಹೆಚ್ಚು ಗುರುತಿಸಿಕೊಂಡಿರುವ ದಿಲೀಪ್ ರಾಜ್, ಈ ಮೊದಲು ಪ್ರಶಾಂತ್ ರಾಜ್ ನಿರ್ದೇಶನದ 'ಲವ್ ಗುರು' ಹಾಗೂ 'ಗಾನಾ ಬಜಾನ' ಚಿತ್ರಗಳಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರೀಗ ಮಹಾನದಿಗೆ ಹೀರೋ.
ಚಿತ್ರ ಮಹಿಳಾ ಪ್ರಧಾನವಾಗಿದೆ ಎಂಬುದನ್ನು ಹೆಸರಿನ ಮೂಲಕವೇ ತಿಳಿಯಬಹುದು. ಇದನ್ನೇ ನಂಬಿ ಮಾತನಾಡಿರುವ ನಟಿ ಸಂಜನಾ "ನಿರ್ಮಾಪಕರು ನನ್ನನ್ನು ನಂಬಿಯೇ ಮೂರೂವರೆ ಕೋಟಿ ಸುರಿದಿದ್ದಾರೆ" ಎಂದು ಎಲ್ಲೆಡೆಯಲ್ಲೂ ಟಾಂ ಟಾಂ ಮಾಡಿಕೊಂಡು ಓಡಾಡುತ್ತಿದ್ದಾರೆ ಎಂಬುದು ಲೇಟೆಸ್ಟ್ ಸುದ್ದಿ. ಇದು ಮಹಾನದಿ ಸಂಜನಾ ಹೊಸ ವರಸೆ.
ಆದರೆ ನಿರ್ಮಾಪಕರು ಮಾತ್ರ ಎಲ್ಲಿಯೂ "ನಾನು ಸಂಜನಾರನ್ನು ನಂಬಿ ಈ ಚಿತ್ರಕ್ಕೆ 3.5 ಕೋಟಿ ರು. ಹಾಕುತ್ತಿದ್ದೇನೆ" ಎಂದು ಹೇಳಿಕೊಂಡಿಲ್ಲ. ಆದರೆ ಅವರು ಸಂಜನಾ ಆಯ್ಕೆಯಾಗಿರುವುದನ್ನು ದೃಢಪಡಿಸಿದ್ದಾರೆ. ಒಟ್ಟಿನಲ್ಲಿ ಸಂಜನಾ ಅದೃಷ್ಟ ಖುಲಾಯಿಸಿದರೆ ಸಾಕು ಎಂಬುದು ಅವರಭಿಮಾನಿಗಳ ಅಭಿಲಾಷೆ.
ಸದ್ಯದಲ್ಲೇ ಸಂಜನಾ ಅಭಿನಯಿಸಿರುವ ಸಾಗರ್ ಚಿತ್ರ ಬಿಡುಗಡೆಯಾದಲಿದೆ. ಪ್ರಜ್ವಲ್ ದೇವರಾಜ್ ನಾಯಕತ್ವದ ಈ ಚಿತ್ರದಲ್ಲಿ ಮೂವರು ನಾಯಕಿಯರ ಪೈಕಿ ಸಂಜನಾ ಕೂಡ ಒಬ್ಬರು. ಉಳಿದಿಬ್ಬರು ರಾಧಿಕಾ ಪಂಡಿತ್ ಹಾಗೂ ಹರಿಪ್ರಿಯಾ. ಈ ಚಿತ್ರದ ಬಿಡುಗಡೆಯನ್ನು ಸಂಜನಾ ಎದುರು ನೋಡುತ್ತಿದ್ದಾರೆ.
ಕಾರಣ, ರಾಧಿಕಾ ಪಂಡಿತ್ ಹಾಗೂ ಹರಿಪ್ರಿಯಾ ಇಬ್ಬರಿಗೂ ಕೈಯಲ್ಲಿ ಸಾಕಷ್ಟು ಚಿತ್ರಗಳು ಇವೆ. ಸಾಗರ್ ಹೀಗೆ ಬಂದು ಹಾಗೆ ಹೋದರೂ ಅವರಿಬ್ಬರೂ ಯೋಚಿಸುವ ಸ್ಥಿತಿಯಲ್ಲಿಲ್ಲ. ಆದರೆ ಸದಯಕ್ಕೆ ಸಂಜನಾ ಪರಿಸ್ಥಿತಿ ಹಾಗಿಲ್ಲ. ಸಾಗರ್ ಗೆದ್ದರೆ ಮಾತ್ರ ಕನ್ನಡದಲ್ಲಿ ಇನ್ನೊಂದಷ್ಟು ಅವಕಾಶ ಸಿಗಬಹುದು.
ಅದೇನೇ ಇರಲಿ, ಸಂಜನಾ ಅದೃಷ್ಟ ಖುಲಾಯಿಸಲಿ. ಕನ್ನಡದ ಹುಡುಗಿ ಸಂಜನಾ ಇಲ್ಲಿಯೂ ಭದ್ರವಾಗಿ ನೆಲೆ ನಿಲ್ಲಲಿ. ಮಹಾನದಿಗೆ ಹಾಕಿದ ದುಡ್ಡು 'ನೀರಿನಲ್ಲಿ ಮಾಡಿದ ಹೋಮ' ಆಗದಿರಲಿ. ಸಂಜನಾಗೆ ಅದೃಷ್ಟ ಕೈಗೂಡಿ ಬರಲಿ. ಈ ಎಲ್ಲಾ
ಹಾರೈಕೆಗಳೂ ಸಂಜನಾ ಅಭಿಮಾನಿಗಳದು. (ಒನ್ ಇಂಡಿಯಾ ಕನ್ನಡ)


Click it and Unblock the Notifications












