ಅತಿಶೀಘ್ರದಲ್ಲೇ ಕನ್ನಡಕ್ಕೆ ನಟಿ ಶ್ರುತಿ ಹಾಸನ್ ಎಂಟ್ರಿ
ಈ ಹಿಂದೆಯೂ ಈ ಬಗ್ಗೆ ಸುದ್ದಿ ಇತ್ತು. ಅದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆಗಿನ 'ನಿನ್ನಿಂದಲೇ' ಚಿತ್ರದಲ್ಲಿ ನಟಿ ಶ್ರುತಿ ಹಾಸನ್ ಅಭಿನಯಿಸುತ್ತಾರೆ ಎಂಬುದು. ಆದರೆ ಸುದ್ದಿ ಬಂದಷ್ಟೇ ವೇಗವಾಗಿ ಠುಸ್ ಆಯಿತು. ಈಗ ಮತ್ತೊಮ್ಮೆ ಅಂಥಹದ್ದೇ ಸುದ್ದಿ ಇದೆ.
ಇದು ಬಹಿರಂಗವಾಗಿದ್ದು ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್ 4) ಫೈನಲ್ ಪಂದ್ಯದಲ್ಲಿ. ಹೈದರಾಬಾದಿನ ಲಾಲ್ ಬಹದ್ದೂರ್ ಶಾಸ್ತ್ರಿ ಮೈದಾನದಲ್ಲಿ ಶ್ರುತಿ ಹಾಸನ್ ದಂತದಗೊಂಬೆಯಂತೆ ಎಲ್ಲರ ಕಣ್ಣೂ ಸೆಳೆಯುತ್ತಿದ್ದರು. ಈ ಸಂದರ್ಭದಲ್ಲಿ ಅವರು ಕನ್ನಡ ಚಿತ್ರದಲ್ಲಿ ಅಭಿನಯಿಸುವ ಬಯಕೆಯನ್ನು ಮತ್ತೊಮ್ಮೆ ಹೊರಹಾಕಿದ್ದಾರೆ. [ಅಂಬರೀಶ್ ಗಾಗಿ ಸಿಸಿಎಲ್ ಗೆದ್ದ ಕರ್ನಾಟಕ]
ಅದೂ ಪುನೀತ್ ಚಿತ್ರದ ಮೂಲಕ ತಾವು ಸ್ಯಾಂಡಲ್ ವುಡ್ ಗೆ ಅಡಿಯಿಡಬೇಕು ಎಂಬ ಆಸೆಯನ್ನು ತೋಡಿಕೊಂಡಿದ್ದಾರೆ. ಒಂದು ಕಡೆ ಕಿಚ್ಚ ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಸಿಸಿಎಲ್ ಕಪ್ ಎತ್ತಿಕೊಂಡರೆ, ಇನ್ನೊಂದು ಕಡೆ ಶ್ರುತಿ ಹಾಸನ್ ಕನ್ನಡ ಚಿತ್ರಗಳಲ್ಲಿ ಅಭಿನಯಿಸುವ ಆಸೆಯನ್ನು ಹೊರಹಾಕಿದ್ದಾರೆ.ಇನ್ನೊಂದು ಕಡೆ ಸಾಕಷ್ಟು ತಾರೆಗಳು ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ಕಾಣಿಸಿಕೊಂಡರು. ಎಲ್ಲರನ್ನೂ ಆಕರ್ಷಿಸಿದ ತಾರೆಗಳಲ್ಲಿ ಅತ್ಯಧಿಕ ಮತಗಳು ಶ್ರುತಿ ಹಾಸನ್ ಅವರಿಗೆ ಬಿದ್ದವು. ಸದ್ಯಕ್ಕೆ ದಕ್ಷಿಣದಲ್ಲಿ ಬಿಜಿಯಾಗಿರುವ ಶ್ರುತಿ ಬಹುಶಃ ಪುನೀತ್ ಅವರ ರಣ ವಿಕ್ರಮ ಚಿತ್ರದಲ್ಲಿ ಅಭಿನಯಿಸುತ್ತಾರೋ ಏನೋ ಕಾದು ನೋಡಬೇಕು. (ಒನ್ಇಂಡಿಯಾ ಕನ್ನಡ)


Click it and Unblock the Notifications












