ಹಂಪಿ ಹಾಗಿರಲಿ, ಇನ್ನೆಂದೂ ನಟಿಸುವುದಿಲ್ಲ: ಅಮೂಲ್ಯಾ

ಅವರೇನೂ ತಮ್ಮಷ್ಟಕ್ಕೆ ತಾವೇ ಯಾರೂ ಕೇಳದಿದ್ದರೂ ಈ ಮಾತು ಹೇಳಿಲ್ಲ. ಇತ್ತೀಚಿಗೆ ಅಮೂಲ್ಯ ಮತ್ತೆ ಬಣ್ಣ ಹಚ್ಚುತ್ತಾರೆ ಎಂದು ಸುದ್ದಿಯಾಗಿತ್ತು. ಋಷಿ ಎಂಬ ನಿರ್ದೇಶಕರೊಬ್ಬರು ತಮ್ಮ ಚಿತ್ರದಲ್ಲಿ ಅಮೂಲ್ಯಾ ನಟಿಸಲಿದ್ದಾರೆ ಎಂದಿದ್ದರು. "ನನ್ನ ಚಿತ್ರಕ್ಕೆ ಹಂಪಿ ಎಂದು ಹೆಸರಿಟ್ಟಿದ್ದೇನೆ, ಈ ಚಿತ್ರದಲ್ಲಿ ಅಮೂಲ್ಯಾ ನಟಿಸಲಿರುವುದು ಹೆಚ್ಚು-ಕಡಿಮೆ ಖಾತ್ರಿ" ಎಂದಿದ್ದರು
ಆದರೆ "ಇದೊಂದು ವ್ಯವಸ್ಥಿತ ಅಪಪ್ರಚಾರ. ನಾನು ಯಾವ ಚಿತ್ರದಲ್ಲೂ ನಟಿಸುತ್ತಿಲ್ಲ'" ಎಂದು ಹೇಳುವ ಮೂಲಕ ಅಮೂಲ್ಯಾ ತಮ್ಮ ಹೆಸರಿನಲ್ಲಿ ಆಗುತ್ತಿರುವ ಸುಳ್ಳುಸುದ್ದಿಗೆ ತೆರೆ ಎಳೆದಿದ್ದಾರೆ. ಗಾಸಿಪ್ ಗಳಿಗೆ ತಲೆ ಕೆಡಿಸಿಕೊಳ್ಳದೆ ಆರಾಮವಾಗಿದ್ದಾರೆ. ಹಾಗೆಂದು ಅವರೇನೂ ಸುಮ್ಮನೆ ಮನೆಯಲ್ಲಿ ಕುಳಿತಿಲ್ಲ. ಚೆನ್ನಾಗಿ ಓದುತ್ತಿದ್ದಾರೆ. ಸದ್ಯಕ್ಕೆ ಅಮೂಲ್ಯಾ ಗುರಿ ಕೇವಲ ವಿದ್ಯಾಭ್ಯಾಸ ಅಷ್ಟೇ.
ಅಮೂಲ್ಯಾ ಮತ್ತೆ ನಟಿಸುತ್ತಾರೆ ಎಂದು ಹಬ್ಬಿರುವ ಸುದ್ದಿ ಅಮೂಲ್ಯಾ ಅಭಿಮಾನಿಗಳಲ್ಲಿ ಹೊಸ ಮಿಂಚಿನ ಸಂಚಾರ ಸೃಷ್ಟಿ ಮಾಡಿತ್ತು. ಹಂಪಿ ಚಿತ್ರ ಯಾವಾಗ ತೆರೆಗೆ ಬರಲಿದೆ ಎಂದು ಕಾದು ಕುಳಿತಿದ್ದರು. ಆದರೆ, ಮುಂದೊಂದು ದಿನ ಹಂಪಿ ಎಂಬ ಚಿತ್ರ ಬರಬಹುದೇ ವಿನಃ ಅದರಲ್ಲಿ ಅಮೂಲ್ಯಾ ಕಾಣಸಿಗುವುದಿಲ್ಲ ಎಂಬುದು ಸತ್ಯ.
ಕೇವಲ ಅಮೂಲ್ಯಾ ಅಭಿಮಾನಿಗಳಷ್ಟೇ ಅಲ್ಲ, ಕೆಲ ನಿರ್ಮಾಪಕರು ಹಾಗೂ ನಿರ್ದೇಶಕರುಗಳೂ ಪುಳಕಗೊಂಡಿದ್ದರು. ಕಾರಣ, ಅಮೂಲ್ಯಾಗೆ ಇರುವ ಸಾಕಷ್ಟು ಅಭಿಮಾನಿಗಳು. ಆದರೆ ಹಂಪಿಗೆ ಹಾಗಿರಲಿ, ಮುಂದೆ ನಾನು ನಟಿಸುವುದಿಲ್ಲ ಎಂದಿರುವ ಅಮೂಲ್ಯಾ ನಿರ್ಧಾರ ಸಾಕಷ್ಟು ಜನರಿಗೆ ಶಾಕ್ ನ್ಯೂಸ್.
ಈ ವಿಷಯವನ್ನು ಅಮೂಲ್ಯಾ ಅಣ್ಣ, 'ಮನಸಾಲಜಿ' ನಿರ್ದೇಶಕ ದೀಪಕ್ ಕೂಡ ಸ್ಪಷ್ಟಪಡಿಸಿದ್ದಾರೆ. "ಋಷಿ ನಮ್ಮನ್ನು ಸಂಪರ್ಕಿಸಿಯೇ ಇಲ್ಲ. ನನ್ನ ತಂಗಿ ಅಮೂಲ್ಯ ಯಾವ ಚಿತ್ರದಲ್ಲೂ ನಟಿಸುತ್ತಿಲ್ಲ. ಕೆಲವರು ಫೋನ್ ಮಾಡಿ ನಮ್ಮನ್ನು ವಿಚಾರಿಸುತ್ತಿದ್ದಾರೆ. ಅಪಪ್ರಚಾರ ಮಾಡುತ್ತಿರುವವರು ಸಿಕ್ಕಿದರೆ ಹೀಗ್ಯಾಕೆ ಮಾಡುತ್ತಿದ್ದೀರಿ ಎಂದು ಕೇಳಬೇಕಾಗಿದೆ" ಎಂದಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











