ಹಳ್ಳಿ ಹೈದ ರಾಜೇಶ್ ಸಹಾಯಕ್ಕೆ ನಿಂತ ನಟ ದರ್ಶನ್
'ಹಳ್ಳಿ ಹೈದ ಪ್ಯಾಟೇಗ್ ಬಂದ' ರಿಯಾಲಿಟಿ ಶೋದಲ್ಲಿ ಭಾಗವಹಿಸಿ ಗೆದ್ದು ಕರ್ನಾಟಕದ ತುಂಬೆಲ್ಲ ಮನೆಮಾತಾಗಿದ್ದ ರಾಜೇಶ ಈಗ ಮಾನಸಿಕ ಸ್ಥಿಮಿತ ಕಳೆದುಕೊಂಡು ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಮಲಗಿದ್ದಾರೆ ಎಂಬುದೀಗ ಎಲ್ಲೆಲ್ಲೂ ತಲುಪಿರುವ ಸುದ್ದಿ. ಇದೀಗ ಕರ್ನಾಟಕವನ್ನೂ ಮೀರಿ ಬಹಿರಂಗವಾಗಿದೆ. ಆದರೆ ಚಿತ್ರರಂಗದ ಯಾರೊಬ್ಬರೂ ಸಹಾಯಕ್ಕೆ ಧಾವಿಸಿದ ಸುದ್ದಿ ಇರಲಿಲ್ಲ.
ಆದರೆ ಸ್ವಲ್ಪ ತಡವಾಗಿ ಬಂದಿರುವ ಸುದ್ದಿಯ ಪ್ರಕಾರ, ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಜೇಶನ ವೈದ್ಯಕೀಯ ವೆಚ್ಚವನ್ನು ತಾವು ಭರಿಸುವದಾಗಿ ಹೇಳಿದ್ದಾರೆ. ದರ್ಶನ್ ಈ ಮೊದಲೂ ಕೂಡ ಸಾಕಷ್ಟು ಜನರಿಗೆ ಈ ರೀತಿ ಸಹಾಯ ಮಾಡಿದ್ದು ಬೆಳಕಿಗೆ ಬಂದಿರುವುದರಿಂದ ಈ ಸುದ್ದಿಯ ಸತ್ಯಾಸತ್ಯತೆ ಬಗ್ಗೆ ಯಾರಿಗೂ ಸಂಶಯವಿಲ್ಲ. ಇದರಿಂದ ರಾಜೇಶ್ ಅಭಿಮಾನಿಗಳು ಹಾಗೂ ಪೋಷಕರು ನೆಮ್ಮದಿಯ ಉಸಿರು ಬಿಟ್ಟಿದ್ದಾರೆ.
ರಿಯಾಲಿಟಿ ಶೋದಲ್ಲಿ ಗೆದ್ದಮೇಲೆ ಈ ರಾಜೇಶ್, 'ಜಂಗಲ್ ಜಾಕಿ' ಎಂಬ ಸಿನಿಮಾದಲ್ಲೂ ನಟಿಸಿದ್ದಾರೆ. ಇದು ರಾಜೇಶನಿಗೆ ಮೊದಲ ಸಿನಿಮಾ ಆಗಿದ್ದರಿಂದ ಸಹಜವಾಗಿಯೇ ಅವರಿಗೆ ಭಾರೀ ನಿರೀಕ್ಷೆ ಉಂಟಾಗಿತ್ತು. ಆದರೆ ಸಿನಿಮಾ ಬಿಡುಗಡೆ ಇನ್ನೂ ಆಗದಿರುವ ಹಿನ್ನೆಲೆಯಲ್ಲಿ ಅವರು ಮಾನಸಿಕ ರೋಗಿಯಾಗಿದ್ದಾರೆ ಎನ್ನಲಾಗುತ್ತಿದೆ.
ಸದ್ಯ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಜೇಶ್ ಸ್ಥಿತಿ ಯಾರಿಗೂ ಬೇಡ ಎಂಬಂತಾಗಿದೆ. ಆದರೆ ಚಿಕಿತ್ಸೆ ಕೊಡುತ್ತಿರುವ ವೈದ್ಯರ ಪ್ರಕಾರ, "ರಾಜೇಶ್ ದೈಹಿಕವಾಗಿ ಆರೋಗ್ಯವಾಗಿದ್ದೇನೆ. ಆದರೆ ಮಾನಸಿಕವಾಗಿ ಜರ್ಝರಿತನಾಗಿದ್ದಾನೆ, ಸ್ಥಿಮಿತ ಕಳೆದುಕೊಂಡಿದ್ದಾನೆ. ವರ್ತನೆಯನ್ನು ನಿಯಂತ್ರಿಸಲು ಸಾಧ್ಯವಾಗದೇ ಚಿಕಿತ್ಸೆ ನಡೆಯುತ್ತಿದೆ.
ರಾಜೇಶನ ಹೆತ್ತವರ ಪ್ರಕಾರ ಇದೆಲ್ಲಕ್ಕೂ 'ಜಂಗಲ್ ಜಾಕಿ' ಚಿತ್ರತಂಡವೇ ಕಾರಣ. ಬೇಡ ಬೇಡವೆಂದರೂ ಕರೆದುಕೊಂಡು ಹೋಗಿ ಸಿನಿಮಾ ಹೀರೋ ಮಾಡಿ ಚಿತ್ರದ ಬಿಡುಗಡೆಯನ್ನು ಮಾಡದೇ ಈ ಸ್ಥಿತಿಗೆ ಕಾರಣಕರ್ತರಾಗಿದ್ದಾರೆ. ಸಂಭಾವನೆಯನ್ನೂ ಕೊಡದೆ ಸತಾಯಿಸಿರುವ ಅವರು ಈಗ ಆಸ್ಪತ್ರೆಗೂ ಬಂದು ನೋಡುತ್ತಿಲ್ಲ." ಸದ್ಯಕ್ಕೆ ಚಿಕಿತ್ಸೆ ವೆಚ್ಚವನ್ನು ದರ್ಶನ್ ವಹಿಸಿಕೊಂಡಿರುವುದು ರಾಜೇಶ್ ಪೋಷಕರೊಂದಿಗೆ ಎಲ್ಲರಿಗೂ ಸಂತೋಷದ ಸಮಾಚಾರ. (ಒನ್ ಇಂಡಿಯಾ ಕನ್ನಡ)


Click it and Unblock the Notifications












