ತಾಜಾ ವಿವಾದದ ಸುಳಿಯಲ್ಲಿ ಬೀಜ ಬೀಜ ಹಾಡು
'ಆ ದಿನಗಳು' ಖ್ಯಾತಿಯ ಚೈತನ್ಯ ಅವರ ನಿರ್ದೇಶನದ ಮುಂಬರುವ ಪ್ರಾಜೆಕ್ಟ್ 'ಪರಾರಿ' ಚಿತ್ರದಲ್ಲಿನ, ಸೆಕ್ಸಿ ನರ್ತಕಿ ಮೇಘನಾ ನಾಯ್ಡು ಅವರು ಮನಸುಬಿಚ್ಚಿ ಕುಣಿದಿರುವ 'ಬೀಜ ಬೀಜ, ಬೀಜ ಮೊದಲಾ, ಬೀಜ ಮೊದಲಾ ಮರ ಮೊದಲಾ' ಹಾಡು ಯುಟ್ಯೂಬಲ್ಲಿ ಸಂಚಲನವೆಬ್ಬಿಸುವುದರ ಜೊತೆಗೆ ವಿವಾದದ ಬಿರುಗಾಳಿಯನ್ನೂ ಹುಟ್ಟುಹಾಕಿದೆ.
ಪರಾರಿ ಚಿತ್ರದ ಮೊದಲ ಹಾಡಿನ ವಿಡಿಯೋವನ್ನು ಯುಟ್ಯೂಬಲ್ಲಿ ಬಿಡುಗಡೆ ಮಾಡಿರುವ ಚೈತನ್ಯ, 'ಇಲ್ಲಿ ಬರುತ್ತಿದೆ ನೋಡಿ ಬೀಜ ಬೀಜ. ನಾಗೇಂದ್ರ ಪ್ರಸಾದ್ ಬರೆದಿರುವ, ಸಂಗೀತ ಸಂಯೋಜನೆ ಅನುಪ್ ಸಿಳೀನ್ ಮಾಡಿರುವ, ಹರ್ಷ ನೃತ್ಯಸಂಯೋಜನೆ ಮಾಡಿರುವ, ಮೇಘನಾ ನಾಯ್ಡು ಕುಣಿದಿರುವ ಹಾಡನ್ನು ಶೇರ್ ಮಾಡಿಕೊಳ್ಳಿ' ಎಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಸೂಪರ್ ಹಿಟ್ ಆಗುತ್ತೆ ಎಂದು ನಂಬಿರುವ ಚೈತನ್ಯ ಅವರು ಚೈತನ್ಯದ ಬುಗ್ಗೆಯಾಗಿದ್ದರೆ, ಪ್ರಾದೇಶಿಕ ಸೆನ್ಸಾರ್ ಬೋರ್ಡ್ ಕೇಳಬೇಕಲ್ಲ? ಹಾಡಿನಲ್ಲಿರುವ ಕೆಲಸ ಆಕ್ಷೇಪಾರ್ಹ ಪದಗಳ ಬಗ್ಗೆ ತಗಾದೆಯೆತ್ತಿದ್ದು, ಬೋಲ್ಡ್ ಅಂಡ್ ಬ್ಯೂಟಿಫುಲ್ ಮೇಘನಾ ನಾಯ್ಡು ಹಾಕಿರುವ ಪ್ರಚೋದನಾತ್ಮಕ ಉಡುಪಿನ ಬಗ್ಗೆಯೂ ಆಕ್ಷೇಪವೆತ್ತಿದೆ. ಹಾಡಿನಲ್ಲಿ ಭಗವಾನ್ ಶಿವನ ಹೆಸರು ಬಳಸಿರುವುದು ಮತ್ತು ಮೇಘನಾಗೆ ಕೇಸರಿ ಬಣ್ಣದ ದಿರಿಸು ಹಾಕಿರುವುದು ಸೆನ್ಸಾರ್ ಬೋರ್ಡ್ನವರ ಕಣ್ಣು ಕೆಂಪಾಗಿಸಿದೆ.
ಪಡ್ಡೆಗಳಿಗಾಗಿಯೇ ಸೃಷ್ಟಿಸಿರುವ ಹಾಡು ಮತ್ತು ಪ್ರಚೋದನಾತ್ಮಕ ಹಾಡಿನಲ್ಲಿ ದೇವರ ಹೆಸರು ಬಳಸುವುದು ನಿಯಮಕ್ಕೆ ಬಾಹಿರವಾಗಿರುತ್ತದೆ ಎಂದು ಚೈತನ್ಯ ಅವರಿಗೆ ಸೆನ್ಸಾರ್ ಬೋರ್ಡ್ ನೋಟೀಸ್ ನೀಡಿದೆ. ಜೊತೆಗೆ ಭಂಗಿ ಎಂಬ ಪದವನ್ನೂ ಬಳಸಲಾಗಿದ್ದು, ಅದು ಮರಿಜುವಾನಾ ಮಾದಕವಸ್ತುವಿಗೆ ಸಮ ಎಂದು ಬೋರ್ಡ್ ಹುಬ್ಬು ಗಂಟುಹಾಕಿದೆ.
ಇದಕ್ಕೆ ನಿರ್ದೇಶಕ ಚೈತನ್ಯ ಏನು ಹೇಳುತ್ತಾರೆ, ಅವರ ಸಮಜಾಯಿಷಿ ಏನು, ಹಾಡಿನಲ್ಲಿ ಏನೇನು ಬದಲಾವಣೆ ಮಾಡಿಕೊಂಡಿದ್ದಾರೆ ಎಂಬುದನ್ನು ಮುಂದಿನ ಭಾಗಗಳಲ್ಲಿ ಓದಿರಿ. [ಪರಾರಿ ಗ್ಯಾಲರಿ ನೋಡಿರಿ]

ಬೋರ್ಡ್ ಆಕ್ಷೇಪಕ್ಕೆ ಚೈತನ್ಯ ಸಿಡಿಮಿಡಿ
ನಿರ್ದೇಶಕ ಚೈತನ್ಯ ಅವರು ಸೆನ್ಸಾರ್ ಬೋರ್ಡ್ ಆಕ್ಷೇಪಕ್ಕೆ ಸಿಡಿಮಿಡಿ ವ್ಯಕ್ತಪಡಿಸಿದ್ದಾರೆ. ಹಾಡುಗಳಲ್ಲಿ ದೇವರ ಹೆಸರು ಬಳಸುವುದು ಹೊಸದೇನಲ್ಲ. ಅಲ್ಲದೆ, ಶಿವನ ಹೆಸರು ಪ್ರಸ್ತಾಪವಾಗಿರುವುದು ಯಾವುದೇ ಧಾರ್ಮಿಕ ಭಾವನೆಯನ್ನು ಕೆಣಕುವುದಿಲ್ಲ ಎಂದಿದ್ದಾರೆ.

ತಮ್ಮನ್ನೇ ಏಕೆ ಟಾರ್ಗೆಟ್ ಮಾಡಿಕೊಂಡಿರುವುದು?
ಶಿವನ ಹೆಸರು ಬಳಸಿರುವ ಅನೇಕ ಹಾಡುಗಳಿವೆ. ಆದರೆ, ತಮ್ಮನ್ನೇ ಏಕೆ ಟಾರ್ಗೆಟ್ ಮಾಡಿಕೊಂಡಿರುವುದು ಎಂದು ಚೈತನ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವರ ಹೆಸರನ್ನೇನೋ ಬಳಸುತ್ತಾರೆ, ಆದರೆ, ಇಂಥ ಪ್ರಚೋದನಾತ್ಮಕ ಹಾಡುಗಳಲ್ಲಿ ಬಳಸಲಾಗಿದೆಯಾ? ಎಂಬುದು ಪ್ರಶ್ನೆ.

ಸೆನ್ಸಾರ್ಗೆ ಬಗ್ಗಿದ ಚೈತನ್ಯ
ಸೆನ್ಸಾರ್ ಮಂಡಳಿಯ ಆಕ್ಷೇಪಕ್ಕೆ ಸ್ವಲ್ಪ ತಗ್ಗಿರುವ ಚೈತನ್ಯ, ಹಾಡಿನಲ್ಲಿ ಬಳಸಲಾಗಿದ್ದ ಶಿವ ಪದದ ಬದಲಾಗಿ ಜೀವ ಎಂಬ ಪದ ಬಳಸಲು ನಿರ್ಧರಿಸಿದ್ದಾರಂತೆ. ಆದರೆ, 'ಶಂಭೋ ಶಿವ ಶಿವ, ಬಂಬಂ ಭಂಗಿ ಶಿವ' ಎಂಬ ಲೈನಿನಲ್ಲಿ ಶಿವ ಬದಲಾಗಿ ಜೀವ ಬಳಸಿದರೆ ಅರ್ಥ ಬರುತ್ತಂತಾ? ಶಂಭೋ ಶಂಕರನೇ ಹೇಳಬೇಕು.

ಜನವರಿಯಲ್ಲಿ ತೆರೆಯ ಮೇಲೆ ಪರಾರಿ
ವಿವಾದವೇನೇ ಇರಲಿ ಸದ್ಯದಲ್ಲೇ ಶುಭಾ ಮುದ್ಗಲ್ ಹಾಡಿರುವ ಈ ಮಾದಕ ಹಾಡನ್ನು ದೂರದರ್ಶನಗಳಿಗೂ ಬಿಡುಗಡೆ ಮಾಡಲು ಚೈತನ್ಯ ಸಿದ್ಧತೆ ನಡೆಸಿದ್ದಾರೆ. ಕಾಮಿಡಿ ವಿತ್ ಥ್ರಿಲ್ಲರ್ ಚಿತ್ರ ಜನವರಿ ಕೊನೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಅಂದ ಹಾಗೆ, ಅದ್ಭುತವಾದ ಸುಶ್ರಾವ್ಯವಾದ ಗೀತೆಗಳನ್ನು ನೀಡಿರುವ ನಾಗೇಂದ್ರ ಪ್ರಸಾದ್ ಇಂಥ ಹಾಡೇಕೆ ಬರೆದರು?

ಯುವ ಹೃದಯಗಳಿಗೆ ಮಾತ್ರ
ಶಕ್ತಿ ಮೂವೀಸ್ ವಲ್ಡ್ವೈಡ್ ನಿರ್ಮಿಸುತ್ತಿರುವ ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಶುಭಾ ಪೂಂಜಾ, ಜಾಹ್ನವಿ ಕಾಮತ್, ಶ್ರವಂತ್ ರಾವ್, ಬುಲೆಟ್ ಪ್ರಕಾಶ್, ಸಾಧು ಕೋಕಿಲಾ ಮುಂತಾದವರಿದ್ದಾರೆ. ಚಿತ್ರವನ್ನು ಚೈತನ್ಯ ನಿರ್ದೇಶಿಸಿದ್ದಾರೆ. ಈ ಚಿತ್ರ ಯುವ ಹೃದಯಗಳಿಗೆ ಮಾತ್ರ ಎಂದು ಅವರು ಹೇಳಿದ್ದಾರೆ.

ಪರಾರಿ ಚಿತ್ರದ ಕಥೆಯೇನು?
ಜೀವನ ಎಂಜಾಯ್ ಮಾಡಬೇಕು ಯೌವನಕ್ಕೆ ಕಾಲಿಟ್ಟು ಮೂವರು ಹುಡುಗರು, ಯೌವನವನ್ನು ಪರೀಕ್ಷೆಗೆ ಒಡ್ಡುವ ಹುಮ್ಮಸ್ಸಿನಲ್ಲಿ, ಲವ್ವಲ್ಲಿ ಬಿದ್ದು, ಕುಮಾರತ್ವ ಕಳೆದುಕೊಳ್ಳಬೇಕೆಂಬ ಧಾವಂತದಲ್ಲಿ ತೊಂದರೆಗೆ ಸಿಲುಕಿಕೊಳ್ಳುವುದೇ ಚಿತ್ರದ ಕಥಾನಕ. ಅದು ತೆರೆಯ ಮೇಲೆ ಹೇಗೆ ಬರುತ್ತದೆ ಎಂಬುದನ್ನು ಕಾದುನೋಡಬೇಕು.


Click it and Unblock the Notifications











