'ಐರಾವತ' ಎಪಿ ಅರ್ಜುನ್ ಗೂಸಾ ತಿಂದದ್ದು ನಿಜಾನಾ?
ಸದ್ಯಕ್ಕೆ ಎಪಿ ಅರ್ಜುನ್ ಆಕ್ಷನ್ ಕಟ್ ಹೇಳಿರುವ 'ರಾಟೆ' ಚಿತ್ರ ನರ್ತಕಿ ಚಿತ್ರಮಂದಿರದಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಇನ್ನೊಂದು ಕಡೆ ಇದೇ ನಿರ್ದೇಶಕರಿಗೆ ನಿರ್ಮಾಪಕ ಸಂದೇಶ್ ನಾಗರಾಜ್ ಗೂಸಾ ಕೊಟ್ಟಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.
ಇದಕ್ಕೆ ಕಾರಣವಾಗಿರುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯಭೂಮಿಕೆಯಲ್ಲಿರುವ 'ಐರಾವತ' ಚಿತ್ರವನ್ನು ಬೇಗನೆ ಮುಗಿಸದೆ ಇರುವುದಂತೆ. ಈ ಚಿತ್ರಕ್ಕಾಗಿ ದರ್ಶನ್ ಅವರಿಂದ 130 ದಿನಗಳ ಕಾಲ್ ಶೀಟ್ ಪಡೆದಿದ್ದಾರೆ ಎಪಿ ಅರ್ಜುನ್.
ಆದರೆ ಶೂಟಿಂಗ್ ಮಾತ್ರ ಆಮೆ ವೇಗದಲ್ಲಿ ಸಾಗುತ್ತಿದ್ದು 'ಐರಾವತ' ಚಿತ್ರದ ನಿರ್ಮಾಪಕರಾದ ಸಂದೇಶ್ ನಾಗರಾಜ್ ತಾಳ್ಮೆ ಕಳೆದುಕೊಂಡು ಅರ್ಜುನ್ ಮೇಲೆ ಕೈಮಾಡಿದ್ದಾರೆ ಎಂಬ ಸುದ್ದಿ ಗಾಂಧಿನಗರಲ್ಲಿ ರಾಟೆ ತರಹ ಸುತ್ತುತ್ತಿದೆ. [ಎ.ಪಿ.ಅರ್ಜುನ್ ವಿರುದ್ಧ ತಿರುಗಿಬಿದ್ದ ದರ್ಶನ್ ಕಂಪನಿ]

ಚಿತ್ರ ತಡವಾಗುತ್ತಿರುವ ಬಗ್ಗೆ ಸ್ವತಃ ದರ್ಶನ್ ಸಹ ಅರ್ಜುನ್ ಗೆ ಎಚ್ಚರಿಸಿದ್ದರಂತೆ. ಇದ್ಯಾವುದನ್ನೂ ಕಿವಿಗೆ ಹಾಕಿಕೊಳ್ಳದೆ ದರ್ಶನ್ ಅವರ ಮೇಲೆ ಕಂಪ್ಲೇಂಟ್ ಮಾಡಿದ್ದರಂತೆ. ಇದರಿಂದ ಕುಪಿತಗೊಂಡ ಏನು ಮಾಡಬೇಕು ಎಂದು ತೋಚದ ನಿರ್ಮಾಪಕರು ಅರ್ಜುನ್ ಕೆನ್ನೆ ಬೆಚ್ಚಗೆ ಮಾಡಿದ್ದಾರೆ ಎನ್ನುತ್ತವೆ ಮೂಲಗಳು.
ಆದರೆ ಅರ್ಜುನ್ ಅವರು ಮಾತ್ರ ಈ ಮಾತನ್ನು ಸುತಾರಾಂ ಒಪ್ಪುತ್ತಿಲ್ಲ. "ನನ್ನ ಮೇಲೆ ಯಾರೂ ಕೈಮಾಡಿಲ್ಲ. ಆದರೂ ಈ ರೀತಿಯ ಗಾಸಿಪ್ ಗಳು ಯಾಕೆ ಹಬ್ಬುತ್ತಿವೆಯೋ ಗೊತ್ತಿಲ್ಲ ಎಂದಿದ್ದಾರೆ. ದರ್ಶನ್ ರಿಂದ 130 ದಿನಗಳ ಕಾಲ್ ಶೀಟ್ ಪಡೆದಿರುವುದು ನಿಜ. ಈಗಾಗಲೆ 95 ದಿನಗಳ ಶೂಟಿಂಗ್ ಮುಗಿದಿದೆ. ಇನ್ನು ಆರು ದಿನಗಳಲ್ಲಿ ಶೂಟಿಂಗ್ ಮುಗಿಸುತ್ತಿದ್ದೇವೆ" ಎಂದಿದ್ದಾರೆ.

ಶೆಡ್ಯೂಲ್ ಪ್ರಕಾರವೇ ಚಿತ್ರೀಕರಣ ಮುಗಿಸಿದ್ದೇವೆ. ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದೆ. ದರ್ಶನ್ ಹಾಗೂ ನಿರ್ಮಾಪಕರ ನಡುವೆ ನನಗೆ ಯಾವುದೇ ತಕರಾರು ಇಲ್ಲ. ನಿರ್ಮಾಪಕರು ಮತ್ತು ನನ್ನ ನಡುವೆ ಸಣ್ಣ ಪುಟ್ಟ ಮಾತಿನ ಚಕಮಕಿ ನಡೆದಿದೆ ಎಂಬುದನ್ನು ಬಿಟ್ಟರೆ ಅವರು ಹೊಡೆದದ್ದಾಗಲಿ, ನಾನು ಏಟು ತಿಂದದ್ದಾಗಲಿ ನಡೆದಿಲ್ಲ ಎಂದಿರುವ ಅರ್ಜುನ್, ಈ ರೀತಿಯ ಗಾಸಿಪ್ ಗಳಿಂದ ಕಂಗಾಲಾಗಿದ್ದಾರೆ.
ಇನ್ನು ನಿರ್ಮಾಪಕರಾದ ಸಂದೇಶ್ ನಾಗರಾಜ್ ಅವರು ಈ ಬಗ್ಗೆ ಹೇಳುವುದೇನೆಂದರೆ. ಅರ್ಜುನ್ ಆಗಲಿ ಬೇರೆ ಯಾರೇ ಆಗಲಿ ಅವರನ್ನು ಹೊಡೆಯಲು ನಾನ್ಯಾರು. ಅರ್ಜುನ್ ಹಗಲು ರಾತ್ರಿ ತುಂಬ ಷ್ಟಪಟ್ಟು ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಮೇ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರಲು ಪ್ಲಾನ್ ಮಾಡಿದ್ದೇವೆ. ನಮ್ಮನಮ್ಮ ನಡುವೆ ಯಾವುದೇ ಜಗಳವಾಗಲಿ ಭಿನ್ನಾಭಿಪ್ರಾಯಗಳಾಗಲಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


Click it and Unblock the Notifications











