ಸಂಗೊಳ್ಳಿ ರಾಯಣ್ಣ ರಿಲೀಸ್ ವಿಘ್ನಕ್ಕೆ ಕಾರಣರಾರು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕತ್ವದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರಕ್ಕೆ ವಿಘ್ನ ಎದುರಾಗಿದ್ದು ನೇರವಾಗಿ 'ಅನಿಮಲ್ ವೆಲ್ಫೇರ್ ಬೋರ್ಡ್ ಆಫ್ ಇಂಡಿಯಾ'ದಿಂದ ಅಲ್ಲ, ಬದಲಿಗೆ ಕನ್ನಡದ ನಿರ್ಮಾಪಕರೊಬ್ಬರಿಂದಲೇ ಎಂಬ ಗುಟ್ಟೀಗ ರಟ್ಟಾಗಿ ಗಾಂಧಿನಗರದ ತುಂಬಾ ಹರಿದಾಡುತ್ತಿದೆ. ದರ್ಶನ್ ಚಿತ್ರವನ್ನು ಸೋಲಿಸಲು ಸಂಚು ನಡೆಸಲಾಗುತ್ತಿದೆ ಎಂಬ ಆರೋಪವೀಗ ದರ್ಶನ್ ಅಭಿಮಾನಿಗಳ ಬಾಯಿಂದ ಬರುತ್ತಿದೆ.
ಅಷ್ಟಕ್ಕೂ ದಸರಾ ಹಬ್ಬದ ವೇಳೆಗಾಗಲೇ ದರ್ಶನ್ ಚಿತ್ರ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ತೆರೆಗೆ ಬರಬೇಕಿತ್ತು. ಚಿತ್ರದ ಬಿಡುಗಡೆಯನ್ನೂ ಘೋಷಿಸಲಾಗಿತ್ತು. ಆದರೆ 'ಚಿತ್ರಕ್ಕೆ ಶೂಟಿಂಗ್ ಮಾಡುವ ವೇಳೆ ಆನೆಯೊಂದು ಸತ್ತಿದೆ ಎಂದು ಕನ್ನಡದ ನಿರ್ಮಾಪಕರೊಬ್ಬರು 'ಅನಿಮಲ್ ವೆಲ್ಫೇರ್ ಬೋರ್ಡ್ ಆಫ್ ಇಂಡಿಯಾ'ಕ್ಕೆ ದೂರು ನೀಡಿದ್ದರಂತೆ. ಹೀಗಾಗಿ ಬಿಡುಗಡೆಯಾಗಬೇಕಿದ್ದ ಚಿತ್ರಕ್ಕೆ ಆ ಬೋರ್ಡ್ ಅಧಿಕಾರಿಗಳು ತಡೆ ನೀಡಿದ್ದರು.
ಅನಿಮಲ್ ವೆಲ್ಫೇರ್ ಬೋರ್ಡ್ ಅಧಿಕಾರಿಗಳು ಆರೋಪಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿರುವುದರಿಂದ ಚಿತ್ರ ಬಿಡುಗಡೆ ಮಾಡುವಂತಿರಲಿಲ್ಲ. ಹೀಗಾಗಿ ನವೆಂಬರ್ 01, 2012ಕ್ಕೆ 'ಸಂಗೊಳ್ಳಿ ರಾಯಣ್ಣ' ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ. ಸದ್ಯದಲ್ಲಿ ಚಿತ್ರದ ಪರಿಸ್ಥಿತಿ ಹೇಗಿದೆ ಎಂದರೆ, ಅಲ್ಲಿನ ಅಧಿಕಾರಿಗಳು ಅನುಮತಿ ನೀಡಿದರೆ ಮಾತ್ರ ನವೆಂಬರ್ 01ರ ರಾಜ್ಯೋತ್ಸವದ ದಿನ ಚಿತ್ರ ಬಿಡುಗಡೆಯಾಗಲಿದೆ, ಇಲ್ಲದಿದ್ದರೆ ಇಲ್ಲ.
ಬರೋಬ್ಬರಿ ರು. 32 ಕೋಟಿ ಖರ್ಚು ಮಾಡಿ ಅದ್ದೂರಿಯಾಗಿ 'ಸಂಗೊಳ್ಳಿ ರಾಯಣ್ಣ' ನಿರ್ಮಿಸಿರುವ ನಿರ್ಮಾಪಕ ಆನಂದ್ ಅಪ್ಪುಗೋಳ್ ಅವರಿಗೆ ಈ ಕಾರಣದಿಂದ ಈಗಾಗಲೇ ನಷ್ಟವಾದಂತಾಗಿದೆ. ಕಾರಣ, ದಸರಾ ಹೊತ್ತಿಗೆ ಚಿತ್ರ ಬಿಡುಗಡೆಯಾಗಿದ್ದರೆ ರಜಾದಲ್ಲಿರುವ ಸಿನಿಅಭಿಮಾನಿಗಳು ಥಿಯೇಟರ್ ಕಡೆ ಹೆಜ್ಜೆ ಹಾಕುತ್ತಿದ್ದರು. ಆದರೆ ಈ ಅವಕಾಶ ಕನ್ನಡದ ನಿರ್ಮಾಪಕರೊಬ್ಬರಿಂದ ನಿರ್ಮಾಪಕರಿಗೆ ಮಿಸ್ ಆಗಿದೆ. ಅಪರೂಪಕ್ಕೆ ಬರುತ್ತಿರುವ ಐತಿಹಾಸಿಕ ಚಿತ್ರವೊಂದರ ವಿರುದ್ಧ ಪಿತೂರಿ ನಡೆಸಲಾಗುತ್ತಿದೆಯೇ? (ಒನ್ ಇಂಡಿಯಾ ಕನ್ನಡ)


Click it and Unblock the Notifications











