ಧ್ರುವ ಸರ್ಜಾ ಬೇಡಿಕೆಗೆ ನಿರ್ಮಾಪಕರು ಕಂಗಾಲು!
ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿ 50 ನೇ ದಿನದ ಕಡೆಗೆ ಸಾಗುತ್ತಿದೆ ಧ್ರುವ ಸರ್ಜಾ ನಟನೆಯ ಅದ್ದೂರಿ ಸಿನಿಮಾ. ಎಪಿ ಅರ್ಜುನ್ ನಿರ್ದೇಶನದ ಅದ್ದೂರಿ ಚಿತ್ರದಲ್ಲಿ ಧ್ರುವ ಸರ್ಜಾರಿಗೆ ರಾಧಿಕಾ ಪಂಡಿತ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಕನ್ನಡ ಸಿನಿಪ್ರೇಕ್ಷಕರು ಮೆಚ್ಚಿರುವ ಈ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಇದೆಲ್ಲಾ ಎಲ್ಲರಿಗೂ ತಿಳಿದಿರುವ ಸಂಗತಿ.
ಆದರೆ ಹೊಸ ಸುದ್ದಿಯೊಂದಿದೆ. ಅದು, 'ಅದ್ದೂರಿ ನಾಯಕ ಧ್ರುವ ಸರ್ಜಾ ಹೊಸ ಚಿತ್ರವೊಂದನ್ನು ಒಪ್ಪೊಕೊಳ್ಳಲು ಹೊಸ ನಟರ ಮಟ್ಟಿಗೆ ಭಾರೀ ಎನ್ನಬಹುದಾದ ರು. 50 ಲಕ್ಷ ಕೇಳುತ್ತಿದ್ದಾರೆ. ಅದು ಸಾಧ್ಯವಾಗದಿದ್ದರೆ ರು. 25 ಲಕ್ಷ ಹಾಗೂ ಶೇ.20ರ ಷೇರು.' ಈ ಮಾಹಿತಿ ಹೊತ್ತ ಭಾರೀ ಸುದ್ದಿಯೊಂದು ಗಾಂಧಿ ನಗರದಲ್ಲಿ ಸ್ಪೋಟವಾಗಿದೆ. ಧ್ರುವ ಸರ್ಜಾ ಮೇಲೆ ಕಣ್ಣಿಟ್ಟಿದ್ದ ನಿರ್ಮಾಪಕರು ಈಗ ಕಂಗಾಲಾಗಿ ಕೂತಿದ್ದಾರೆ.
ಧ್ರುವ ಸರ್ಜಾ ನಟನೆಯ ಚಿತ್ರ ಅದ್ದೂರಿ ಚಿತ್ರವೇನೂ 100 ದಿನ ಓಡಿ ಶತಕ ಭಾರಿಸಿಲ್ಲ. ಈಗಷ್ಟೇ 39 ನೇ ದಿನಕ್ಕೆ ಕಾಲಿಟ್ಟಿದೆ. ಮೊದಲ ಬಾರಿಗೆ ನಾಯಕನಟರಾಗಿ ಈ ಚಿತ್ರದಲ್ಲಿ ನಟಿಸಿರುವ ಧ್ರುವ ನಟನೆ ಪರವಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಫೈಟಿಂಗ್ ಹಾಗೂ ಡಾನ್ಸ್ ಸೂಪರ್ ಎನ್ನಲಾಗಿದ್ದರೂ ನಟನೆಯಲ್ಲಿ ಇನ್ನೂ ಪಳಗಬೇಕಿದೆ. ಹೀಗಿರುವಾಗ ಏಕಾಏಕಿ ರು. 50 ಲಕ್ಷ ಸಂಭಾವನೆ ಕೇಳಿದರೆ ಹೇಗೆ ಎಂಬುದು ಕೆಲವರ ಅಭಿಪ್ರಾಯ.
ಸುದ್ದಿ ಮೂಲಗಳ ಪ್ರಕಾರ, ಧ್ರುವ ಸರ್ಜಾ ಈಗ ಯಾರ ಮಾತನ್ನೂ ಕೇಳುತ್ತಿಲ್ಲ. ಹತ್ತಕ್ಕೂ ಹೆಚ್ಚು ನಿರ್ಮಾಪಕರು ತಮ್ಮ ಸ್ಕ್ರಿಪ್ಟ್ ಹಿಡಿದುಕೊಂಡು ಧ್ರುವ ಸರ್ಜಾರನ್ನು ಭೇಟಿಯಾಗಿದ್ದಾರೆ. ಆದರೆ ಮಾತುಕತೆಗಳೆಲ್ಲವೂ ಸಂಭಾವನೆ ವಿಚಾರದಲ್ಲಿ ಮುರಿದು ಬೀಳುತ್ತಿದೆ. ಭಾರೀ ಡಿಮ್ಯಾಂಡ್ ಕೇಳಿ ಬಂದ ದಾರಿಗೆ ಸುಂಕವಿಲ್ಲ ಎಂದು ನಿರ್ಮಾಪಕರು ಸುಸ್ತಾಗಿ ಮರಳಿ ಬರುತ್ತಿದ್ದಾರೆ.
ಆದರೆ ಆರೋಪಿ ಸ್ಥಾನದಲ್ಲಿರುವ ಧ್ರುವ ಸರ್ಜಾ ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಇದೆಲ್ಲಾ ಗಾಳಿಸುದ್ದಿಗಳಷ್ಟೇ. ಈ ಗಾಸಿಪ್ ಗಳು ಹೇಗೆ ಹಬ್ಬುತ್ತಿದೆಯೋ ಗೊತ್ತಿಲ್ಲ. "ನನ್ನ ಮುಂದಿನ ಚಿತ್ರ ಯಾವುದೆಂದೇ ಇನ್ನೂ ನಿರ್ಧಾರವಾಗಿಲ್ಲ. ಹೀಗಿರುವಾಗ ಸಂಭಾವನೆ ಅಷ್ಟು, ಇಷ್ಟು ಅಥವಾ ಎಷ್ಟು ಎನ್ನುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈ ಬಗ್ಗೆ ನಾವು ಯಾವುದೇ ಮಾತುಕತೆ ನಡೆಸಿಲ್ಲ. ಇನ್ನಷ್ಟೇ ನಿರ್ಧಾರ ತೆಗೆದುಕೊಳ್ಳಬೇಕಿದೆ.
ಈಗ ಹರಡಿರುವ ಗಾಳಿಸುದ್ದಿಗಳನ್ನು ನಂಬಬೇಡಿ. ಅಷ್ಟಕ್ಕೂ ನನ್ನ ಸಂಭಾವನೆಯನ್ನು ನಿರ್ಧರಿಸುವುದು ನಾನಲ್ಲ, ನನ್ನ ಅಂಕಲ್ ಅರ್ಜುನ್ ಸರ್ಜಾ. ನನ್ನ ಕೆಲಸ ನಟಿಸೋದು ಮಾತ್ರ, ಸಂಭಾವನೆ ಸೇರಿದಂತೆ ಉಳಿದೆಲ್ಲ ವಿಚಾರಗಳನ್ನು ಅಂಕಲ್ ನೋಡಿಕೊಳ್ಳುತ್ತಾರೆ. ಖಂಡಿತಾ ಒಳ್ಳೆಯ ಕಥೆ ಸಿಗದಿದ್ದರೆ ನಾನು ಯಾವ ಚಿತ್ರದಲ್ಲೂ ನಟಿಸುವುದಿಲ್ಲ. ನನಗೆ ಸಂಭಾವನೆಗಿಂತ ಕಥೆ ಮುಖ್ಯ" ಎಂದು ಸ್ಪಷ್ಟವಾಗಿ ಹೇಳಿ ತಿರುಗೇಟು ನೀಡಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications