30 ಲಕ್ಷ ರೂ.ಗೆ ಖರೀದಿಸಿದ್ದ ಆಸ್ತಿಯನ್ನು 70 ಕೋಟಿ ರೂ.ಗೆ ಮಾರಿದ ಚಿರು: ಕಾರಣ ಏನು?
150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಮೆಗಾಸ್ಟಾರ್ ಪಟ್ಟಕ್ಕೇರಿದ ನಟ ಚಿರಂಜೀವಿ. ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಚಿರು ಕೋಟ್ಯಾಂತರ ಮೌಲ್ಯದ ಆಸ್ತಿ ಸಂಪಾದಿಸಿದ್ದಾರೆ. ಇದೀಗ ಹೈದರಾಬಾದ್ನಲ್ಲಿರೋ 3 ಸಾವಿರ ಚದರ ಗಜಗಳ ಜಮೀನನ್ನು ಭಾರೀ ಮೊತ್ತಕ್ಕೆ ಮೆಗಾಸ್ಟಾರ್ ಮಾರಾಟ ಮಾಡಿದ್ದಾರೆ ಎಂದು ವರದಿಯಾಗಿದೆ.
ಪೊಲೀಸ್ ಕಾನ್ಸ್ಟೇಬಲ್ ಮಗನಾದ ಚಿರಂಜೀವಿ ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೇ ಬಂದು ಗೆದ್ದವರು. ಸ್ವಂತ ಪರಿಶ್ರಮದಿಂದ ಸಿನಿಮಾಗಳಲ್ಲಿ ನಟಿಸುತ್ತಾ ಒಂದೊಂದೇ ಮೆಟ್ಟಿಲು ಏರಿದವರು. ಚಿರು ಹಾದಿಯಲ್ಲೇ ಪವನ್ ಕಲ್ಯಾಣ್, ಅಲ್ಲು ಅರ್ಜುನ್, ರಾಮ್ಚರಣ್ ಬಣ್ಣದಲೋಕದಲ್ಲಿ ಸ್ಟಾರ್ಗಳಾಗಿ ದರ್ಬಾರ್ ನಡೆಸುತ್ತಿದ್ದಾರೆ. 90ರ ದಶಕದಲ್ಲೇ ಕೋಟಿ ರೂ. ಸಂಭಾವನೆ ಪಡೆದು ಚಿರು ಬಾಲಿವುಡ್ ಮಂದಿಗೂ ಶಾಕ್ ಕೊಟ್ಟಿದ್ದರು. ಇವತ್ತಿಗೂ ಚಿತ್ರವೊಂದಕ್ಕೆ ಹತ್ತಾರು ಕೋಟಿ ರೂ. ಸಂಭಾವನೆ ಪಡೆಯುವ ಟಾಲಿವುಡ್ ಗ್ಯಾಂಗ್ ಲೀಡರ್ ಮಾಡಿಟ್ಟಿರುವ ಆಸ್ತಿಗೆ ಲೆಕ್ಕವಿಲ್ಲ.
ಹೈದರಾಬಾದ್ನಲ್ಲಿ ಚಿರಂಜೀವಿ ಬಹಳ ಆಸ್ತಿ ಮಾಡಿಟ್ಟಿದ್ದಾರೆ. ಮನೆ, ಜಮೀನು ಖರೀದಿಸಿದ್ದಾರೆ. ಇತ್ತೀಚೆಗಷ್ಟೇ ಅರಮನೆಯಂತಹ ಐಷಾರಾಮಿ ಮನೆಯನ್ನು ಕಟ್ಟಿಸಿದ್ದರು. 30-40 ವರ್ಷಗಳ ಹಿಂದೆ ಲಕ್ಷಗಳಲ್ಲಿ ಮೆಗಾಸ್ಟಾರ್ ಖರೀದಿಸಿದ್ದ ಆಸ್ತಿ ಈಗ ಕೋಟಿ ಕೋಟಿ ಬೆಲೆ ಬಾಳುತ್ತಿದೆ. ಇದೆಲ್ಲದರ ನಡುವೆ ಇತ್ತೀಚೆಗೆ ಬೆಲೆಬಾಳುವ ಜಮೀನನ್ನು ಚಿರು ಮಾರಾಟ ಮಾಡಿದ್ದಾರೆ ಅನ್ನುವ ಮಾತುಗಳು ಕೇಳಿಬರುತ್ತಿದೆ. ಇದ್ದಕ್ಕಿದ್ದಂತೆ ಚಿರುಗೆ ಅಂತಹ ಅವಶ್ಯಕತೆ ಏನಿತ್ತು ಅನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ.

3 ಸಾವಿರ ಚದರ ಗಜಗಳ ಜಮೀನು ಮಾರಾಟ
ಹೈದರಾಬಾದ್ ಫಿಲ್ಮ್ ನಗರ್ ಮುಖ್ಯರಸ್ತೆಯಲ್ಲಿ ಚಿರಂಜೀವಿ ಒಡೆತನದ 3 ಸಾವಿರ ಚದರ ಗಜಗಳ ಜಮೀನು ಇದೆ. 90ರ ದಶಕದಲ್ಲಿ ಇದನ್ನು ಕೇವಲ 30 ಲಕ್ಷ ರೂ.ಗೆ ಚಿರು ಖರೀಸಿದಿದ್ದರಂತೆ. ಈಗ ಇದನ್ನು ಬರೋಬ್ಬರಿ 70 ಕೋಟಿ ರೂ.ಗೆ ಮಾರಾಟ ಮಾಡಿದ್ದಾರಂತೆ. ಈಗಾಗಲೇ ಈ ಬಗ್ಗೆ ಮಾತುಕತೆ ನಡೆದಿದ್ದು ಟೋಕನ್ ಅಡ್ವಾನ್ಸ್ ಕೂಡ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಆ ಸ್ಥಳದಲ್ಲಿ ಚದರಡಿ ಬೆಲೆ 2 ಲಕ್ಷ ರೂ. ಇದೆಯಂತೆ. ಅದಕ್ಕಿಂತ ಹೆಚ್ಚು ಮೊತ್ತಕ್ಕೆ ಡೀಲ್ ಕುದುರಿಸಲಾಗಿದೆಯಂತೆ.

ಚಿರು ಜಮೀನು ಮಾರಾಟ ಮಾಡಿದ್ಯಾಕೆ?
ಚಿತ್ರವೊಂದಕ್ಕೆ 20ರಿಂದ 30 ಕೋಟಿ ರೂ. ಸಂಭಾವನೆ ಪಡೆಯುವ ಚಿರಂಜೀವಿ ಏಕಾಏಕಿ ಯಾಕೆ ಜಮೀನು ಮಾರಾಟ ಮಾಡಿದರು ಅನ್ನುವ ಚರ್ಚೆ ಟಾಲಿವುಡ್ನಲ್ಲಿ ಶುರುವಾಗಿದೆ. ಪ್ರಮುಖ ದಿನಪತ್ರಿಕೆಯೊಂದರ ಮಾಲೀಕರು ಬಹಳ ದಿನಗಳಿಂದ ಆ ಜಮೀನು ಖರೀದಿಸುವ ಮನಸ್ಸು ಮಾಡಿದ್ದರಂತೆ. ದೊಡ್ಡ ಕಟ್ಟಡ ಕಟ್ಟಿ ಆಫೀಸ್ ಪ್ರಾರಂಭಿಸಲು ಅದು ಸೂಕ್ತವಾದ ಸ್ಥಳ ಎಂದು ದುಂಬಾಲುಬಿದ್ದು ಜಮೀನು ಸ್ವಂತ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಹೀನಾಯವಾಗಿ ಸೋಲುಂಡ 'ಆಚಾರ್ಯ'
ಏಪ್ರಿಲ್ 29ಕ್ಕೆ ಬಿಡುಗಡೆಯಾಗಿದ್ದ 'ಆಚಾರ್ಯ' ಸಿನಿಮಾ ಬಾಕ್ಸಾಫೀಸ್ನಲ್ಲಿ ಮುಗ್ಗರಿಸಿತ್ತು. ಕೊರಟಾಲ ಶಿವ ನಿರ್ದೇಶನದ ಈ ಆಕ್ಷನ್ ಎಂಟರ್ಟೈನರ್ನಲ್ಲಿ ಪುತ್ರ ರಾಮ್ಚರಣ್ ಕೂಡ ನಟಿಸಿದ್ದರು. ತಂದೆ - ಮಗ ನಟಿಸಿರುವ ಸಿನಿಮಾ ಅನ್ನುವ ಕಾರಣಕ್ಕೆ 'ಆಚಾರ್ಯ' ಭಾರೀ ನಿರೀಕ್ಷೆ ಮೂಡಿಸಿದ್ದು ಸುಳ್ಳಲ್ಲ. ಸ್ವತ: ರಾಮ್ಚರಣ್ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಆದರೆ ಚಿತ್ರ ಭಾರೀ ನಷ್ಟ ಅನುಭವಿಸಿತು.

3 ಸಿನಿಮಾಗಳಲ್ಲಿ ಚಿರಂಜೀವಿ ನಟನೆ
ರಾಜಕೀಯರಂಗದಿಂದ ದೂರಾದ ಮೇಲೆ ಚಿರಂಜೀವಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ ದೊಡ್ಡಮಟ್ಟದಲ್ಲಿ ಸಕ್ಸಸ್ ಮಾತ್ರ ಸಿಗುತ್ತಿಲ್ಲ. ಸದ್ಯ ಚಿರು 'ಗಾಡ್ಫಾದರ್' ಆಗಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. ಇದು ಮಳಯಾಳಂನ 'ಲೂಸಿಫರ್' ಸಿನಿಮಾ ರೀಮೇಕ್ ಆಗಿದ್ದು ಸಲ್ಮಾನ್ ಖಾನ್ ಕೂಡ ಚಿರು ಜೊತೆ ತೆರೆ ಹಂಚಿಕೊಂಡಿದ್ದಾರೆ. ಇನ್ನು 'ವಾಲ್ತೇರು ವೀರಯ್ಯ' ಹಾಗೂ 'ಭೋಳಾ ಶಂಕರ್' ಅನ್ನುವ ಮತ್ತೆರಡು ಸಿನಿಮಾಗಳಲ್ಲಿ ಚಿರು ನಟಿಸುವುದು ಪಕ್ಕಾ ಆಗಿದೆ.


Click it and Unblock the Notifications










