'ಡಬ್ಬಿಂಗ್' ಪ್ರತಿಭಟನೆ ಮರೆತುಬಿಟ್ರಾ ವಾಟಾಳ್ ನಾಗರಾಜ್?
ಕನ್ನಡ ಚಿತ್ರರಂಗದಲ್ಲಿ ಮತ್ತೆ ಡಬ್ಬಿಂಗ್ ವಿವಾದ ಭುಗಿಲೆದ್ದಿದೆ. ಸದ್ದಿಲ್ಲದೇ ಪರಭಾಷೆಯಿಂದ ಕನ್ನಡಕ್ಕೆ ಡಬ್ ಆದ ಹಾಡುಗಳು ಕರ್ನಾಟಕದಲ್ಲಿ ಸದ್ದು ಮಾಡುತ್ತಿವೆ.
'ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಸಂಸ್ಕೃತಿಗೆ ಅವಕಾಶ ಇಲ್ಲ' ಅಂತ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಗುಡುಗಿದರು. ಕರ್ನಾಟಕದಲ್ಲಿ ಡಬ್ಬಿಂಗ್ ವಾಣಿಜ್ಯ ಮಂಡಳಿ ಕೂಡ ಸ್ಥಾಪನೆ ಆಗಿದ್ದನ್ನ ನೋಡಿ ಇದೇ ತಿಂಗಳ 8ನೇ ತಾರೀಖು ಬೆಂಗಳೂರಿನ ವುಡ್ ಲ್ಯಾಂಡ್ಸ್ ಹೊಟೇಲ್ ನಲ್ಲಿ ವಾಟಾಳ್ ನಾಗರಾಜ್ ಸಭೆ ನಡೆಸಿದರು.

ಸಭೆಯಲ್ಲಿ ಸಾ.ರಾ.ಗೋವಿಂದು, ಶೃತಿ, ಹಿರಿಯ ನಟರಾದ ಶಿವರಾಂ, ಶ್ರೀನಿವಾಸ್ ಮೂರ್ತಿ, ನಟರಾದ ಪ್ರೇಮ್, ನಿರ್ದೇಶಕ ಎಂ.ಎಸ್.ರಮೇಶ್ ಸೇರಿದಂತೆ ಚಿತ್ರರಂಗದ ಹಲವರು ಪಾಲ್ಗೊಂಡಿದ್ದರು. [ಗಂಡಸುತನವಿದ್ದರೆ ಡಬ್ಬಿಂಗ್ ಮಾಡಲಿ : ವಾಟಾಳ್ ವಾರ್ನಿಂಗ್!]
ಡಬ್ಬಿಂಗ್ ವಿರೋಧಿಸಿ ಆಗಸ್ಟ್ 26 ರಂದು ಬೆಂಗಳೂರಿನ ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ಕನ್ನಡ ಚಿತ್ರರಂಗದ ದಿಗ್ಗಜರೊಂದಿಗೆ ಬೃಹತ್ ರ್ಯಾಲಿ ನಡೆಸಿ, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವುದಾಗಿ ವಾಟಾಳ್ ನಾಗರಾಜ್ ಹೇಳಿದ್ದರು.
ಇವತ್ತು ಆಗಸ್ಟ್ 26, ಇಂದು ಡಬ್ಬಿಂಗ್ ವಿರುದ್ಧ ಯಾವುದೇ ಪ್ರತಿಭಟನೆ ನಡೆದಿಲ್ಲ. ಸಾ.ರಾ.ಗೋವಿಂದು ಆರೋಗ್ಯ ಸ್ಥಿತಿ ಸರಿಯಿಲ್ಲ. ಶಿವರಾಜ್ ಕುಮಾರ್ ತಮ್ಮ ಮಗಳ ಮದುವೆಯಲ್ಲಿ ಬಿಜಿಯಾಗಿದ್ದಾರೆ. ಹೀಗಾಗಿ ರ್ಯಾಲಿ ಮುಂದೂಡಲಾಗಿದೆ ಅಂತ ಮೂಲಗಳು ತಿಳಿಸಿವೆ.
ದಿನದಿಂದ ದಿನಕ್ಕೆ ಡಬ್ಬಿಂಗ್ ಪಾರುಪತ್ಯ ಕನ್ನಡ ಚಿತ್ರರಂಗದಲ್ಲಿ ಹೆಚ್ಚಾಗುತ್ತಿದೆ. ಇಷ್ಟು ದಿನ ಪ್ರತಿಭಟಿಸುತ್ತಿದ್ದವರು ಈಗ ಮೌನಕ್ಕೆ ಶರಣಾಗಿದ್ದಾರಾ ಅನ್ನುವ ಅನುಮಾನ ಕೆಲವರಲ್ಲಿ ಮೂಡಿದೆ.


Click it and Unblock the Notifications











