'ರಮ್ಯಾ ನನ್ನ ಪತ್ನಿ' ಎಂದ ಹುಚ್ಚ ವೆಂಕಟ ಬಂಧನ
ಮೋಹಕ ತಾರೆ ರಮ್ಯಾ ಅವರನ್ನು ನಾನು ಮದುವೆಯಾಗಿದ್ದೇನೆ ಎಂದು ಕನ್ನಡ ಸುದ್ದಿ ವಾಹಿನಿಗಳಲ್ಲಿ ಹೇಳಿಕೊಂಡಿದ್ದ 'ಹುಚ್ಚ ವೆಂಕಟ' ಚಿತ್ರದ ಸಕಲವೂ ಆಗಿರುವ ವೆಂಕಟೇಶ್ ಅವರನ್ನು ಬೆಂಗಳೂರು ಪೊಲೀಸರು ಶುಕ್ರವಾರ ಮಧ್ಯಾಹ್ನ ಬಂಧಿಸಿದ್ದಾರೆ.
ಹುಚ್ಚ ವೆಂಕಟ್ ಎಂಬ ಚಿತ್ರದ ನಿರ್ದೇಶಕ, ನಿರ್ಮಾಪಕ ಹಾಗೂ ನಾಯಕ ನಟ, ಗೀತೆ ರಚನೆಕಾರ ಹೀಗೆ ಹಲವು ವಿಭಾಗದಲ್ಲಿ ದುಡಿದಿದ್ದೇನೆ ಎಂದು ಪೋಸ್ಟರ್ ಹಾಕಿಕೊಂಡಿದ್ದ ವೆಂಕಟ್ ಖಾಸಗಿ ಸುದ್ದಿ ವಾಹಿನಿಯಲ್ಲಿ ಚರ್ಚೆ ಮಾಡಲು ಕುಳಿತ್ತಿರುವಾಗಲೇ ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ಗುರುವಾರದಂದು ಸುವರ್ಣ 24 X7, ಟಿವಿ 9, ಪಬ್ಲಿಕ್ ಸುದ್ದಿ ವಾಹಿನಿಗೆ ಬಂದು ರಮ್ಯಾ ನನ್ನ ಹೆಂಡತಿ ಎಂದು ವೆಂಕಟ್ ಹೇಳಿಕೊಂಡಿದ್ದ. ಇಂದು ಸಮಯ ಸುದ್ದಿ ವಾಹಿನಿಯಲ್ಲಿ ಇದೇ ಮಾತನ್ನು ಹೇಳಲು ಬಂದಿದ್ದಾಗ ಪೊಲೀಸರು ಬಂಧಿಸಿದ್ದಾರೆ.
ವೆಂಕಟ್ ಹೇಳುವುದೇನು?: ರಮ್ಯಾ ಅವರ ರಾಜಕೀಯ ಪ್ರವೇಶವನ್ನೂ ನಾನು ವಿರೋಧಿಸುತ್ತೇನೆ. ಮುಂಬರುವ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಅವರಿಗೆ ಟಿಕೆಟ್ ನೀಡಬಾರದು ಎಂದು ಸೋನಿಯಾ ಗಾಂಧಿ ಅವರಿಗೂ ಕೇಳಿಕೊಂಡಿದ್ದೇನೆ.ಅವರನ್ನು ನಾನು ಬನಶಂಕರಿ ದೇವಸ್ಥಾನದಲ್ಲಿ ವರ್ಷದ ಹಿಂದೆ ಮದುವೆಯಾಗಿದ್ದೆ. ಮದುವೆಯಾದ ಮೇಲೆ ಅವರು ನಟಿಸುವುದು ನನಗೆ ಇಷ್ಟವಿರಲಿಲ್ಲ. ಹೀಗಾಗಿ ಸಿನಿಮಾದಲ್ಲಿ ನಟಿಸಬೇಡ ಎಂದೆ. ಮದುವೆಯಾದ ಮೇಲೆ ನಾನು ಅವರು ಬೇರೆ ಬೇರೆ ವಾಸಿಸಲು ಇದೇ ಕಾರಣವಾಯಿತು.

'ನನ್ನ ಚಿತ್ರದ ನಾಯಕಿ ಹೆಸರು ಕೂಡಾ ರಮ್ಯಾ. ಇದು ನನ್ನ ಜೀವನದ ಕಥೆ ಎಂದು ಹೇಳಲಾರೆ. ಎಲ್ಲವನ್ನು ಹೇಳಿಬಿಟ್ಟರೆ ಸಿನಿಮಾ ಯಾರು ನೋಡುತ್ತಾರೆ. ರಮ್ಯಾ ಅವರು ಬಂದು ನಾನು ಅವರ ಪತಿ ಅಲ್ಲ ಎಂದು ಹೇಳಲಿ ಅಲ್ಲಿ ತನಕ ನಾನು ಹೀಗೆ ಹೇಳುತ್ತೇನೆ. ಯಾರದು ರಫೇಲ್, ರಮ್ಯಾ ಅವರಿಗೆ ಯಾರೂ ಆ ಹೆಸರಿನ ಬಾಯ್ ಫ್ರೆಂಡ್ ಇರಲಿಲ್ಲ' ಎಂದು ವೆಂಕಟ್ ಹೇಳಿಕೊಂಡಿದ್ದರು.
ವೆಂಕಟೇಶ್ ಗೆ ಗಿಮಿಕ್ ಹೊಸದಲ್ಲ: ಖ್ಯಾತ ನಟಿಯೊಬ್ಬರನ್ನು ಮದುವೆಯಾಗುವುದಾಗಿ ಹುಚ್ಚ ವೆಂಕಟ್ ಚಿತ್ರದ ವೆಂಕಟ್ ಅವರು ಮಾಧ್ಯಮಗಳಿಗೆ ಆಹ್ವಾನ ನೀಡಿದ್ದಾರೆ ಎಂಬ ಸುದ್ದಿ ಕಳೆದ ಸೋಮವಾರ ಹಬ್ಬಿತ್ತು. ಆದರೆ, ಆ ಬಗ್ಗೆ ಹೆಚ್ಚಿನ ಮಾಹಿತಿ ಹೊರಬಿದ್ದಿರಲಿಲ್ಲ. ನಂತರ ವೆಂಕಟ್ ಸ್ವತಃ ಈ ಬಗ್ಗೆ ಸ್ಪಷ್ಟನೆ ನೀಡಲು ಟಿವಿ ಸ್ಟುಡಿಯೋಗಳಿಗೆ ಸರಣಿಯಾಗಿ ಎಂಟ್ರಿ ಕೊಟ್ಟರು.
ಈ ಘಟನೆಗೂ ಮುನ್ನ ಇತ್ತೀಚೆಗೆ ಉಪ್ಪಾರಪೇಟೆ ಸಮೀಪದ ಲಾಡ್ಜ್ ನಲ್ಲಿ ವೆಂಕಟ್ ಗಲಾಟೆ ಮಾಡಿಕೊಂಡಿದ್ದರು. ಹೋಟೆಲ್ ರೂಮ್ ಬಾಯ್ ರೂಮ್ ಕ್ಲೀನ್ ಮಾಡಿಲ್ಲ ಎಂದು ಹಿಗ್ಗಾ ಮುಗ್ಗಾ ಥಳಿಸಿ ಪೊಲೀಸರ ಅತಿಥಿಯಾಗಿ ಹೊರ ಬಂದಿದ್ದರು. ಸದ್ಯ ಕಬ್ಬನ್ ಪಾರ್ಕ್ ಠಾಣೆಯಲ್ಲಿ ವೆಂಕಟ್ ವಿಚಾರಣೆ ಜಾರಿಯಲ್ಲಿದೆ. ಅಂದ ಹಾಗೆ ಸಂಸತ್ತಿನ ಕಲಾಪದಲ್ಲಿ ಪ್ರಪ್ರಥಮ ಬಾರಿಗೆ ಭಾಷಣ ಮಾಡಿರುವ ಮಂಡ್ಯ ಸಂಸದೆ ರಮ್ಯಾ ಅವರು ಹುಚ್ಚ ವೆಂಕಟ್ ವಿರುದ್ಧ ಕಬ್ಬನ ಪಾರ್ಕ್ ಠಾಣೆಯಲ್ಲಿ ದೂರು ದಾಖಲಿಸಿದ್ದು ತನ್ನ ಆಪ್ತ ಕಾರ್ಯದರ್ಶಿ ಮೂಲಕ ಎಂದು ತಿಳಿದು ಬಂದಿದೆ.
2010ರಲ್ಲೇ ಈ ರೀತಿ ಗಿಮಿಕ್ ಮಾಡಿ ಖ್ಯಾತ ನಟಿ ಜತೆ ನಿಶ್ಚಿತಾರ್ಥ ಆಗಿದೆ ಎಂದು ಹೇಳಿಕೊಂಡಿದ್ದರು. ಸ್ವತಂತ್ರಪಾಳ್ಯ ಎಂಬ ಚಿತ್ರ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ವೆಂಕಟೇಶ್ ತನ್ನ ಹುಚ್ಚಾಟಗಳಿಂದ ಹುಚ್ಚ ವೆಂಕಟ್ ಆಗಿಬಿಟ್ಟ.


Click it and Unblock the Notifications











