ಎಫ್ಟಿಐಐ ಮುಖ್ಯಸ್ಥ ನೇಮಕ ವಿವಾದ: 'ಧರ್ಮರಾಯ'ನಿಗೆ ಸಂಕಟ
ಜನಪ್ರಿಯ ಟಿವಿ ಧಾರಾವಾಹಿ 'ಮಹಾಭಾರತ್' ನಲ್ಲಿ ಧರ್ಮರಾಯನ ಪಾತ್ರ ನಿರ್ವಹಿಸಿದ್ದ ಗಜೇಂದ್ರ ಚೌಹಾಣ್ ಗೆ ಈಗ ಸಂಕಟ ಎದುರಾಗಿದೆ. ಪುಣೆಯ ಪ್ರತಿಷ್ಠಿತ ಫಿಲಂ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಗೆ ಚೌಹಣ್ ರನ್ನು ಮುಖ್ಯಸ್ಥರಾಗಿ ನೇಮಿಸಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ.
ಸಾಹಿತಿ ಗುಲ್ಜಾರ್ ಅವರನ್ನು ಬಿಟ್ಟು ಬಿಜೆಪಿ ಸದಸ್ಯ ಗಜೇಂದ್ರ ಚೌಹಾಣ್ ಗೆ ಮಣೆ ಹಾಕಲಾಗಿದೆ. ಜೂ.9ರಿಂದ ಜಾರಿಗೆ ಬರುವಂತೆ ಚೌಹಾಣ್ ನೇಮಕ ಮಾಡಲಾಗಿದೆ.
ಈ ಹಿಂದೆ ಎಫ್ ಟಿಐಐ ಮುಖ್ಯಸ್ಥರಾಗಿ ಗಿರೀಶ್ ಕಾಸರವಳ್ಳಿ, ಗಿರೀಶ್ ಕಾರ್ನಾಡ್, ಯು.ಆರ್ ಅನಂತಮೂರ್ತಿ, ಮುಖೇಶ್ ಖನ್ನ, ಸಯೀದ್ ಅಖ್ತರ್ ಮಿರ್ಜಾ ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಗಜೇಂದ್ರ ಅವರ ಅರ್ಹತೆಯನ್ನು ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ.

'ಭಾಗಬನ್', 'ತುಮಕೋ ನ ಭೂಲ್ ಪಾಯೆಂಗೆ' ಮುಂತಾದ ಹಿಂದಿ ಚಿತ್ರಗಳಲ್ಲಿ ಚೌಹಾಣ್ ಕಾಣಿಸಿಕೊಂಡರೂ ಬಿ.ಆರ್ ಛೋಪ್ರಾ ನಿರ್ಮಾಣದ ಮಹಾಭಾರತ್ ಧಾರಾವಾಹಿಯಲ್ಲಿ ಯುಧಿಷ್ಠಿರನ ಪಾತ್ರಧಾರಿಯಾಗಿ ಈಗಲೂ ಗುರುತಿಸಲ್ಪಡುತ್ತಾರೆ.
ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಸೂಚನೆ ಮೇರೆಗೆ ನನಗೆ ಈ ಹುದ್ದೆ ಸಿಕ್ಕಿದೆ. ವಿದ್ಯಾರ್ಥಿಗಳ ಪ್ರತಿಭಟನೆ ನನಗೆ ಆಶ್ಚರ್ಯ ತಂದಿದೆ. ಪ್ರತಿಭಟನಾಕಾರರು ನನ್ನ ಜೊತೆ ಮಾತನಾಡಿದರೆ ಸಮಸ್ಯೆ ಏನು ಎಂಬುದು ಸ್ಪಷ್ಟವಾಗುತ್ತದೆ ಎಂದು ಚೌಹಾಣ್ ಅವರು ಪ್ರತಿಕ್ರಿಯಿಸಿದ್ದಾರೆ.
ಅದರೆ, ಯಾವುದಕ್ಕೂ ಜಗ್ಗದ ವಿದ್ಯಾರ್ಥಿಗಳು ಥಿಯರಿ, ಪ್ರಾಕ್ಟಿಕಲ್ಸ್ ಹಾಗೂ ಡಿಪ್ಲೋಮಾ ಫಿಲಂ ವರ್ಕ್ ತರಗತಿಗಳನ್ನು ತೊರೆದು ಪ್ರತಿಭಟನೆ ನಡೆಸುತ್ತಿದ್ದಾರೆ.


Click it and Unblock the Notifications











