ಧ್ರುವ ಸರ್ಜಾ-ಪ್ರೇಮ್ ಜೋಡಿಯ 'ಕೆಡಿ'ಗೆ ಭಾರಿ ಬೇಡಿಕೆ
ಕನ್ನಡ ಚಿತ್ರರಂಗಕ್ಕಿದು ಪರ್ವಕಾಲ. 'ಕೆಜಿಎಫ್ 2', '777 ಚಾರ್ಲಿ', 'ಗರುಡ ಗಮನ ವೃಷಭ ವಾಹನ', 'ವಿಕ್ರಾಂತ್ ರೋಣ' ಈಗ 'ಕಂತಾರ' ಸಿನಿಮಾಗಳು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿವೆ.
'ಕೆಜಿಎಫ್' ಬಳಿಕ ಪ್ರತಿಯೊಬ್ಬ ಸಿನಿಮಾ ಕರ್ಮಿಯೂ ದೊಡ್ಡದಾಗಿಯೇ ಸಿನಿಮಾ ಮಾಡಲು ಯತ್ನಿಸುತ್ತಿದ್ದು, ಬಹುತೇಕರು ಗೆಲುವು ಸಾಧಿಸುತ್ತಿದ್ದಾರೆ.
ಇದೀಗ ನಟ, ನಿರ್ದೇಶಕ ಪ್ರೇಮ್ ಸಹ ತಮ್ಮ ಹೊಸ ಸಿನಿಮಾವನ್ನು ಭಾರಿ ದೊಡ್ಡ ಮಟ್ಟದಲ್ಲಿ ನಿರ್ದೇಶನ ಹಾಗೂ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಧ್ರುವ ಸರ್ಜಾ ನಾಯಕರಾಗಿರುವ ಈ ಸಿನಿಮಾಕ್ಕೆ 'ಕೆಡಿ' ಎಂದು ಹೆಸರಿಡಲಾಗಿದ್ದು, ವಿವಿಧ ಭಾಷೆಯ ಆರು ಮಂದಿ ಸ್ಟಾರ್ ನಟರು ಸಿನಿಮಾದಲ್ಲಿದ್ದಾರೆ. ಈ ಸಿನಿಮಾಕ್ಕೆ ಈಗಲೇ ಭಾರಿ ಬೇಡಿಕೆ ಶುರುವಾಗಿದೆ.

ಸಂಜಯ್ ದತ್ ಆಗಮಿಸಿ ಹರಸಿದ್ದರು
'ಕೆಡಿ' ಸಿನಿಮಾದ ಫೋಟೊಶೂಟ್ ಅಷ್ಟೆ ಆಗಿದೆ, ಇನ್ನೂ ಚಿತ್ರೀಕರಣ ಪ್ರಾರಂಭವಾಗಿಲ್ಲ. ಆದರೆ ಸಿನಿಮಾವನ್ನು ಭಾರಿ ದೊಡ್ಡ ಲೆವೆಲ್ನಲ್ಲಿ ಮಾಡುವುದಾಗಿ ನಿರ್ದೇಶಕ ಪ್ರೇಮ್ ಇದಾಗಲೇ ಹೇಳಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಬೆಂಗಳೂರಿನಲ್ಲಿ ನಡೆದ ಸಿನಿಮಾದ ಹೆಸರು ಬಿಡುಗಡೆ ಕಾರ್ಯಕ್ರಮಕ್ಕೆ ಬಾಲಿವುಡ್ ನಟ ಸಂಜಯ್ ದತ್ ಅವರನ್ನು ಕರೆಸಿ ಗಮನ ಸೆಳೆದಿದ್ದರು ಪ್ರೇಮ್. ನಟ ಸಂಜಯ್ ದತ್, 'ಕೆಡಿ' ಸಿನಿಮಾ ಮೂಲಕ ಎರಡನೇ ಬಾರಿ ಕನ್ನಡ ಚಿತ್ರರಂಗಕ್ಕೆ ಬರುತ್ತಿದ್ದಾರೆ.

ವಿತರಣೆ ಹಕ್ಕಿಗೆ ಬೇಡಿಕೆ
'ಕೆಡಿ' ಸಿನಿಮಾವನ್ನು ಕೆವಿಎನ್ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿದ್ದು, ಈ ಸಿನಿಮಾದ ವಿತರಣೆ ಹಕ್ಕಿಗೆ ಈಗಾಗಲೇ ಬೇಡಿಕೆ ಶುರುವಾಗಿದೆಯಂತೆ. ಕರ್ನಾಟಕದಲ್ಲಿ ಕೆವಿಎನ್ ಅವರೇ ಸಿನಿಮಾದ ವಿತರಣೆ ಮಾಡಲಿದ್ದಾರೆ. ಆಂಧ್ರ-ತೆಲಂಗಾಣಗಳಲ್ಲಿ ಈ ಸಿನಿಮಾವನ್ನು ವರಾಹಿ ಸಂಸ್ಥೆ ಹಾಗೂ ತಮಿಳಿನಲ್ಲಿ ಸಿಎಂ ಪುತ್ರ ಉದಯ್ನಿಧಿ ಸ್ಟಾಲಿನ್ರ ಸಂಸ್ಥೆ ವಿತರಣೆ ಮಾಡಲಿದೆ ಎನ್ನಲಾಗುತ್ತಿದೆ. ಈ ವಿತರಣೆ ಸಂಸ್ಥೆಗಳು ಈಗಲೇ ಮುಂಗಡವಾಗಿ ಹಕ್ಕುಗಳನ್ನು ಕಾಯ್ದಿರಿಸಿಕೊಳ್ಳಲು ಮುಂದಾಗಿವೆಯಂತೆ!

ಆರು ಮಂದಿ ನಟರು ಪಾತ್ರ
'ಕೆಡಿ' ಸಿನಿಮಾವು ಕೆಲವು ದಶಕ ಹಿಂದಿನ ಕತೆಯನ್ನು ಹೊಂದಿರಲಿದ್ದು, ಇದೊಂದು ರೌಡಿಸಂ ವಿಷಯ ಒಳಗೊಂಡ ಸಿನಿಮಾ ಆಗಿರಲಿದೆ. ಸಿನಿಮಾದಲ್ಲಿ ಬಾಲಿವುಡ್ನ ಸಂಜಯ್ ದತ್, ಮಲಯಾಳಂನ ಮೋಹನ್ಲಾಲ್, ಪೃಥ್ವಿರಾಜ್ ಸುಕುಮಾರನ್, ತಮಿಳಿನ ವಿಜಯ್ ಸೇತುಪತಿ ಕನ್ನಡದ ಧ್ರುವ ಸರ್ಜಾ ಹಾಗೂ ಅತಿಥಿ ಪಾತ್ರದಲ್ಲಿ ಶಿವರಾಜ್ ಕುಮಾರ್ ನಟಿಸಲಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಇನ್ನಷ್ಟೆ ಆರಂಭವಾಗಬೇಕಿದ್ದು, ಸಿನಿಮಾದ ನಾಯಕಿಯೂ ಇನ್ನೂ ಅಂತಿಮವಾಗಿಲ್ಲ.

ಚಿತ್ರೀಕರಣ ತಡವಾಗಿದೆ
ಇದೇ ವರ್ಷ ಏಪ್ರಿಲ್ ತಿಂಗಳಿನಲ್ಲಿ ಸಿನಿಮಾದ ಮುಹೂರ್ತ ಚಾಮುಂಡಿ ಬೆಟ್ಟದಲ್ಲಿ ನಡೆದಿತ್ತು. ಶೀಘ್ರವೇ ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನಲಾಗಿತ್ತು. ಆದರೆ ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾದ ಚಿತ್ರೀಕರಣ ತಡವಾದ ಕಾರಣ ಈ ಸಿನಿಮಾದ ಚಿತ್ರೀಕರಣ ಇನ್ನೂ ಆರಂಭವಾಗಿಲ್ಲ. ಸಿನಿಮಾವನ್ನು ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಬಿಡುಗಡೆ ಮಾಡುವುದಾಗಿ ಪ್ರೇಮ್ ಇದಾಗಲೇ ಹೇಳಿದ್ದಾರೆ. ಧ್ರುವ ಸರ್ಜಾ ಸಹ ಈ ಸಿನಿಮಾದ ಚಿತ್ರೀಕರಣಕ್ಕಾಗಿ ಎದುರು ನೋಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.


Click it and Unblock the Notifications











