ಮೈತ್ರಿಯಾ 'ಅಕ್ಷತೆ' ಗೆ ಕಲ್ಲು ಹಾಕಿದ ಕಾರ್ತಿಕ್ ಗೌಡ
ನಟಿ ಮೈತ್ರಿಯಾಗೌಡ ಹಾಗೂ ಕಾರ್ತಿಕ್ ಶೆಟ್ಟಿ ಅಭಿನಯದ 'ಅಕ್ಷತೆ' ಸೆಟ್ಟೇರಿ ಶೂಟಿಂಗ್ ಆರಂಭಕ್ಕೂ ಮುನ್ನ ವಿಘ್ನ ಎದುರಾಗಿದೆ. ಈ ಸಿನಿಮಾ ಚಿತ್ರೀಕರಣ ನಿಲ್ಲಿಸುವಂತೆ ನಿಷೇಧ ಹೇರಿ ಎಂದು ಕಾನೂನು ಸಚಿವ ಡಿವಿ ಸದಾನಂದಗೌಡ ಪುತ್ರ ಕಾರ್ತಿಕ್ ಗೌಡ ಅವರು ಮನವಿ ಮಾಡಿದ್ದಾರೆ.
ಅಕ್ಷತೆ ಚಿತ್ರದ ಕಥೆ ಐಎಎಸ್ ಅಧಿಕಾರಿ ಡಿಕೆ ರವಿ ಅವರ ಸಾವಿನ ಸುತ್ತಾ ಹೆಣೆದಿರುವ ಕಥಾ ವಸ್ತು ಹೊಂದಿದೆ ಎಂಬ ಕಾರಣಕ್ಕೆ ವಿವಾದಕ್ಕೆ ಕಾರಣವಾಗಿತ್ತು. ಇದಾದ ಬಳಿಕ ಇದು ಮೈತ್ರಿಯಾ ಅವರ ಜೀವನ ಕಥೆ ಹೊಂದಿದೆ. ಇದರಲ್ಲಿ ಕಾರ್ತಿಕ್ ಗೌಡ ನಡುವಿನ ಪ್ರೇಮ ಪ್ರಕರಣ ಎಳೆ ಎಳೆಯಾಗಿ ಬಿಚ್ಚಿಡಲಾಗುತ್ತದೆ ಎಂಬ ಸುದ್ದಿ ಗಾಂಧಿನಗರದ ಗಲ್ಲಿಗಲ್ಲಿಯಲ್ಲಿ ಗಿರಕಿ ಹೊಡೆಯ ತೊಡಗಿತು.[ಮೋದಿ ಸಭೆಯಲ್ಲಿ ಮೈತ್ರಿಯಾ ಗೌಡ: 5 ಪ್ರಶ್ನೆಗಳು]

ಸುದ್ದಿ ಹಾಗೂ ಹೀಗೂ ಕಾರ್ತಿಕ್ ಗೌಡ ಅವರ ಕಿವಿಗೂ ಬಿದ್ದಿದೆ. ತಕ್ಷಣವೇ ಫಿಲ್ಮ್ ಚೇಂಬರ್ ಗೆ ಪತ್ರ ಬರೆದು ಮನವಿ ಮಾಡಿಕೊಂಡಿರುವ ಕಾರ್ತಿಕ್ ಗೌಡ ಈ ಚಿತ್ರವನ್ನು ಇಲ್ಲಿಗೆ ನಿಲ್ಲಿಸುವಂತೆ ಸೂಚಿಸಿ, ಈ ಚಿತ್ರ ಬಿಡುಗಡೆಯಾದರೆ ನಮ್ಮ ಕುಟುಂಬದ ಮರ್ಯಾದೆ ಹಾಳಾಗುತ್ತದೆ ಎಂದಿದ್ದಾರೆ.[ಮೈತ್ರಿಯಾ ಗೌಡ- ಕಾರ್ತಿಕ್ ಮದುವೆ ಆಗಿಲ್ಲ: ಕೋರ್ಟ್]
ಸರಿಯಾದ ಕಾರಣವಿಲ್ಲದೆ ಸಿನಿಮಾ ನಿಷೇಧ ಅಸಾಧ್ಯ. ಈ ಬಗ್ಗೆ ಚಿತ್ರದ ನಿರ್ದೇಶಕ ರಾಜು ದೇವಸಂದ್ರ ಅವರನ್ನು ಕರೆಸಿಕೊಂಡು ಮಾತನಾಡುತ್ತೇವೆ ಎಂದು ವಾಣಿಜ್ಯ ಮಂಡಳಿ ಕಾರ್ಯದರ್ಶಿ ಭಾ.ಮಾ ಹರೀಶ್ ಸ್ಪಷ್ಟವಾಗಿ ಹೇಳಿದ್ದಾರೆ.
ವೆಂಕಟೇಶ್ ಹಾಗೂ ಸಂಜೀವ್ ಶೆಟ್ಟಿ ಅವರು ಹಣ ಹೂಡಿಕೆ ಮಾಡಿರುವ ವಿ ಮನೋಹರ್ ಸಂಗೀತ ಸಂಯೋಜನೆ, ಎಂ.ವಿ ನಂದಕುಮಾರ್ ಸಿನಿಮಾಟೋಗ್ರಾಫರ್ ಆಗಿರುವ ಅಕ್ಷತೆ ಚಿತ್ರದ ಕಥೆ ವ್ಯಥೆ ಮುಂದೆ ಓದಿ...

ನಿರ್ದೇಶಕ ರಾಜು ಪ್ರತಿಕ್ರಿಯೆ
ಅಕ್ಷತೆ ಚಿತ್ರದಲ್ಲಿ ನಾಯಕ ಐಎಎಸ್ ಅಧಿಕಾರಿಯಾಗಿರುತ್ತಾನೆ. ಆದರೆ, ಇದು ಡಿಕೆ ರವಿ ಅವರ ಕಥೆಯನ್ನು ಹೊಂದಿಲ್ಲ. ರವಿ ಅವರ ಸಾವಿನ ಪ್ರಕರಣಕ್ಕೂ ತುಂಬಾ ಮುಂಚೆ ಈ ಚಿತ್ರಕ್ಕೆ ಕಥೆ ಬರೆದಿದ್ದೇನೆ.
ಜೊತೆಗೆ ಇದು ಮೈತ್ರಿಯಾ ಗೌಡ ಹಾಗೂ ಕಾರ್ತಿಕ್ ಗೌಡ ಅವರ ಪ್ರೇಮ ಪ್ರಕರಣದ ಕಥೆಯೂ ಅಲ್ಲ. ನಮ್ಮ ಚಿತ್ರದಲ್ಲಿ ನಾಯಕ ಹಾಗೂ ನಾಯಕಿಗೆ ಆರಂಭದಿಂದಲೂ ಪರಿಚಯ ಇರುತ್ತದೆ.

ಕಾರ್ತಿಕ್ ಗೌಡ ಅವರು ಐಎಎಸ್ ಅಧಿಕಾರಿಯೇ?
ಕಾರ್ತಿಕ್ ಗೌಡ ಅವರು ಐಎಎಸ್ ಅಧಿಕಾರಿಯೇ? ನನ್ನ ಚಿತ್ರದ ಕಥೆಯನ್ನು ಪೂರ್ತಿ ಓದಿದ್ದಾರೆಯೇ? ಚಿತ್ರೀಕರಣ ಆರಂಭಕ್ಕೂ ಮುನ್ನ ಪೂರ್ವಾಗ್ರಹ ಪೀಡಿತರಾಗಿ ಚಿತ್ರಕ್ಕೆ ನಿಷೇಧ ಹೇರುವುದು ಎಷ್ಟು ಸರಿ? ಇಲ್ಲಿ ನಾಯಕ ಬಡತನದಿಂದ ಬೆಳೆದು ದುಷ್ಟ ಶಿಕ್ಷಣ ಕಾರ್ಯ ಕೈಗೊಳ್ಳುತ್ತಾನೆ. ಊಹಾ ಪೋಹ ಸುದ್ದಿಗಳಿಗೆ ಕಿವಿಗೊಟ್ಟು ನನ್ನ ಕನಸಿನ ಚಿತ್ರಕ್ಕೆ ಕೊಡಲಿ ಪೆಟ್ಟು ನೀಡಬೇಡಿ ಎಂದಿದ್ದಾರೆ.

ಮೈತ್ರಿಯಾ ಗೌಡ ಪ್ರತಿಕ್ರಿಯೆ
ಈ ಚಿತ್ರದಲ್ಲಿ ನಟಿಸುವ ಮುಂಚೆ ಸಾಕಷ್ಟು ಬಾರಿ ಆಲೋಚನೆ ಮಾಡಿದ್ದೇನೆ. ಕಥೆ ಕೇಳಿದ ನಂತರವೇ ನಾನು ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡೆ. ಈ ಚಿತ್ರದಲ್ಲಿ ನನ್ನ ಜೀವನಕ್ಕೆ ಹತ್ತಿರವಾದ ಅಂಶಗಳಿದ್ದರೂ ಪೂರ್ತಿ ಹೋಲಿಕೆಯಿಲ್ಲ. ಈ ಬಗ್ಗೆ ಹಬ್ಬಿರುವ ಸುದ್ದಿಗಳೆಲ್ಲವೂ ನಿಜವಲ್ಲ ಎಂದು ನಟಿ ಮೈತ್ರಿಯಾ ಗೌಡ ಪ್ರತಿಕ್ರಿಯಿಸಿದ್ದಾರೆ.

ಡ್ಯಾನ್ಸಿಂಗ್ ಸ್ಟಾರ್ ಆಗಲು ಹೊರಟ್ಟಿದ್ದ ಮೈತ್ರಿಯಾ
ಕಾರ್ತಿಕ್ ಗೌಡ ನನ್ನ ಗಂಡ ಎಂದು ಹೇಳಿ ಮೈತ್ರಿಯಾ ಗೌಡ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿತ್ತು. ಹೀಗಾಗಿ ಮೈತ್ರಿಯಾ ಹಾಗೂ ಕಾರ್ತಿಕ್ ಗೌಡ ಮದುವೆಯಾಗಿಲ್ಲ ಎಂಬುದು ಜಗತ್ತಿನ ಮುಂದೆ ಬಹಿರಂಗವಾದ ತೆಪ್ಪಗಾಗಿ, ಸಪ್ಪಗಾಗಿದ್ದ ಮೈತ್ರಿಯಾ ಡ್ಯಾನ್ಸಿಂಗ್ಸ್ ಸ್ಟಾರ್ ಆಗಲು ಯತ್ನಿಸಿ ನಂತರ ಹೊರ ಬಂದಿದ್ದರು. ಈಗ ಮತ್ತೊಮ್ಮೆ ಸಿನಿಮಾ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ. ಎಲ್ಲವೂ ಸರಿಯಾಗಿ ಜರುಗಿದರೆ ಕುಲು ಮನಾಲಿಗೆ ಹಾರಲಿದ್ದಾರೆ.


Click it and Unblock the Notifications











