ಅಂಬರೀಶ್ ದಂಪತಿಯಿಂದ ಸುದೀಪ್ ಗೆ ಬುದ್ಧಿವಾದ
ನಟ ಕಿಚ್ಚ ಸುದೀಪ್ ಅವರಿಗೆ ಅಂಬರೀಶ್ ಹಾಗೂ ಪತ್ನಿ ಸುಮಲತಾ ಅವರು ಬುದ್ಧಿವಾದ ಹೇಳಿದ್ದಾರೆ. "ನೀವು ಬರೀ ಕೆಲಸ ಕೆಲಸ ಎಂದು ಮೂರೂ ಹೊತ್ತು ಚಿಂತಿಸುವ ಬದಲು, ನಿಮ್ಮ ಕುಟುಂಬದ ಬಗ್ಗೆಯೂ ಸ್ವಲ್ಪ ಗಮನ, ಪ್ರೀತಿ ಇರಲಿ" ಎಂದು ಉಪದೇಶ ನೀಡುತ್ತಾರೆ. ಆದರೆ ಇದು ನಿಜಜೀವನದಲ್ಲಿ ಅಲ್ಲ, ಸುದೀಪ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ 'ವರದನಾಯಕ' ಚಿತ್ರದ ದೃಶ್ಯವೊಂದರಲ್ಲಿ.
ಹೌದು, ವರದನಾಯಕ ಚಿತ್ರದ ನಾಯಕರು ಚಿರಂಜೀವಿ ಸರ್ಜಾ. ಆದರೆ ಅದರಲ್ಲಿ ಸುದೀಪ್, ಚಿರಂಜೀವಿ ಸರ್ಜಾರಿಗೆ ಅಣ್ಣನಾಗಿ, ಖಡಕ್ ಅಧಿಕಾರಿಯಾಗಿ ನಟಿಸಿದ್ದಾರೆ. ಸುದೀಪ್ ಜೋಡಿಯಾಗಿ ಖ್ಯಾತ ನಟಿ ಸಮೀರಾ ರೆಡ್ಡಿ ನಟಿಸಿದ್ದಾರೆ. ಹಾಗೇ, ಚಿರಂಜೀವಿಗೆ ಜೋಡಿಯಾಗಿ ನಿಕೇಶಾ ಪಟೇಲ್ ಇದ್ದಾರೆ. ಇದೀಗ, ಅಂಬರೀಶ್-ಸುಮಲತಾ ಜೋಡಿ ಸೇರ್ಪಡೆಯಾಗಿದೆ.
ಡ್ರಾಮಾ ಚಿತ್ರದ ನಂತರ, ಅಂಬರೀಶ್ ಬೇರಾವ ಚಿತ್ರದಲ್ಲಿ ನಟಿಸುತ್ತಿಲ್ಲ. ಅವರಿಗೆ ಈಗ ಅಷ್ಟಾಗಿ ನಟನೆಯ ಬಗ್ಗೆ ಒಲವೂ ಇಲ್ಲ ಎನ್ನಲಾಗುತ್ತಿದೆ. ಆದರೆ ಸುದೀಪ್ ತಂದೆ ಸರೋವರ್ ಸಂಜೀವ್ ಅಂಬರೀಶ್ ಅವರಿಗೆ ತೀರಾ ಆತ್ಮೀಯರು. ಚಿಕ್ಕಂದಿನಿಂದಲೂ ಅಂಬರೀಶ್ ಅವರನ್ನು ಸುದೀಪ್ 'ಮಾಮ' ಎಂದೇ ಕರೆಯುತ್ತಾರೆಂಬುದು ಅವರನ್ನು ಬಲ್ಲವರು ಹೇಳುವ ಮಾತು.
ಹೀಗಾಗಿ, ಸುದೀಪ್ ಮಾತಿಗೆ ಬೆಲೆಕೊಟ್ಟು ಹಿರಿಯ ನಟ ಅಂಬರೀಶ್ ಅವರು ವರದನಾಯಕ ಚಿತ್ರದಲ್ಲಿ ನಟಿಸಲು ಒಪ್ಪಿದ್ದಾರೆ ಎಂಬುದು ಸುದ್ದಿ ಮಾದ್ಯಮಗಳಿಂದ ಸಿಕ್ಕ ಮಾಹಿತಿ. ತಮ್ಮ ಪತಿ ರೆಬೆಲ್ ಸ್ಟಾರ್ ಅಂಬರೀಶ್ ಜೊತೆ ಸುಮಲತಾ ಕೂಡ ಇದರಲ್ಲಿ ನಟಿಸುತ್ತಿರುವುದು ವಿಶೇಷ. ಇನ್ನು, ಬುದ್ಧಿವಾದ ಹೇಳಿರುವುದಂತೂ ಸಿನಿಮಾದಲ್ಲಿರುವ ಡೈಲಾಗಿಗೆ ಸಂಬಂಧಿಸಿರುವುದು.
ಸುದೀಪ್ ಅವರಂತೂ ಇದೀಗ ಬಿಡುಗಡೆಯಾಗಿರುವ 'ಈಗ' ಚಿತ್ರದ ಮೂಲಕ ಭಾರತವನ್ನೂ ಮೀರಿ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ್ದಾರೆ. ವರದನಾಯಕ, ಚಿತ್ರೀಕರಣದ ಕೊನೆಯ ಹಂತದಲ್ಲಿದೆ. ಜೊತೆಗೆ ಸುದೀಪ್ ಬಚ್ಚನ್ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಈಗಂತೂ ಸುದೀಪ್ ಬಗ್ಗೆ ಎಲ್ಲೆಡೆ ಚರ್ಚೆಗಳಾಗುವ ಮಟ್ಟಿಗೆ ಈಗ ಚಿತ್ರದ ಅದ್ಭುತ ನಟನೆ ಸುದೀಪ್ ಬೆನ್ನಿಗಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











