Don't Miss!
- Automobiles Bullet Train: ಭಾರತದಲ್ಲಿ ಮೊದಲ ಬಾರಿಗೆ ನವೀನ ರೀತಿಯ ಹಳಿ ಬಳಕೆ.. 320 ಕಿ.ಮೀ ವೇಗದಲ್ಲಿ ಓಡುತ್ತೆ ರೈಲು!
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಶ್ವರೂಪಂಗೂ ಮುನ್ನ ಬ್ಯಾನ್ ಆದವರ 'ಚಿತ್ರ'ಕಥೆ
ಇತ್ತೀಚಿನ ದಿನಗಳಲ್ಲಿ ವಿವಾದಕ್ಕೆ ಸಿಲುಕಿದ ಚಿತ್ರ ಕಮಲ್ ಹಾಸನ್ರ ಬಹುಭಾಷಾ ಚಿತ್ರ 'ವಿಶ್ವರೂಪಂ' ಕೊನೆಗೂ ತಮಿಳುನಾಡಿನ ಬೆಳ್ಳಿತೆರೆಗೆ ಅಪ್ಪಳಿಸುವ ಸುದ್ದಿ ಸಿಕ್ಕಿದೆ. ಎಲ್ಲವೂ ಸರಿ ಹೋದರೆ ಫೆ. ಶುಕ್ರವಾರ ತಮಿಳುನಾಡಿನೆಲ್ಲೆಡೆ ವಿಶ್ವರೂಪಂ ಪ್ರದರ್ಶನಗೊಳ್ಳಲಿದೆ.
ಮುಸ್ಲಿಂ ವಿರೋಧಿ ದೃಶ್ಯಗಳಿವೆ ಎಂಬ ಕಾರಣ ನೀಡಿ ತಮಿಳುನಾಡು ಸರ್ಕಾರ ಚಿತ್ರಕ್ಕೆ ನಿಷೇಧ ಹೇರಿತ್ತು. ನಂತರ ಬ್ರಾಹ್ಮಣ, ಕ್ರೈಸ್ತ ಸಮುದಾಯದವರು ಕೂಡಾ ಚಿತ್ರದ ಕೆಲ ದೃಶ್ಯಗಳ ಬಗ್ಗೆ ತಗಾದೆ ತೆಗೆದಿದ್ದರು. ಆದರೆ, ತಮಿಳುನಾಡು ಮಿಕ್ಕಂತೆ ಕರ್ನಾಟಕ, ಆಂಧ್ರಪ್ರದೇಶ, ಅಮೆರಿಕ, ಉತ್ತರ ಭಾರತದ ಅನೇಕ ಕಡೆ ವಿಶ್ವರೂಪಂಗೆ ಪ್ರೇಕ್ಷಕರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ. ವಿಮರ್ಶಕರು ವಿಶ್ವಂರೂಪಂಗೆ ಉತ್ತಮ ಅಂಕಗಳನ್ನು ನೀಡಿರುವುದು ಕಮಲ್ ಗೆ ಆನೆಬಲ ಬಂದಂತಿದೆ.
ವಿಶ್ವರೂಪಂಗೂ ಮೊದಲು ಕಮಲ್ ರ ಹೇ ರಾಮ್, ದಶಾವತಾರಂ ಬಗ್ಗೆ ಅಪಸ್ವರ ಕೇಳಿ ಬಂದಿತ್ತು. ಆದರೆ, ಚಿತ್ರ ನಿಷೇಧಕ್ಕೆ ಒಳಗಾಗಿರಲಿಲ್ಲ. ಭಾರತದಲ್ಲಿ ಅನೇಕಾನೇಕ ಕಾರಣಕ್ಕೆ ಚಿತ್ರಗಳು ನಿಷೇಧಕ್ಕೆ ಒಳಗಾಗುತ್ತಲೇ ಬರುತ್ತಿದೆ.
ನಿಷೇಧಕ್ಕೆ ಭಾಷೆಯ ಹಂಗೂ ಇರುವುದಿಲ್ಲ. ಡಾ ವಿಂಚಿ ಕೋಡ್ ಕೂಡಾ ಹಲವೆಡೆ ನಿಷೇಧಕ್ಕೆ ಒಳಗಾಗಿತ್ತು. ಈ ರೀತಿ ಚಿತ್ರಗಳ ನಿಷೇಧಕ್ಕೆ ಕಾರಣ ಸಾರ್ವಜನಿಕರ ಅಥವಾ ಕೆಲ ಸಮುದಾದಯಗಳ ಭಾವನೆಗಳೇ ಕಾರಣ ಎನ್ನಬಹುದಾದರೂ ನಿಷೇಧ ಹಿಂದಿನ ರಾಜಕೀಯ ಜನರಿಗೂ ತಿಳಿಯುವಷ್ಟರಲ್ಲಿ ಚಿತ್ರ ಮರೆಯಾಗಿರುತ್ತದೆ.
ನಿಷೇಧಕ್ಕೆ ಒಳಗಾಗಿದ್ದ, ವಿವಾದಕ್ಕೆ ಕಾರಣವಾಗಿದ್ದ ಕೆಲ ಪ್ರಮುಖ ಚಿತ್ರಗಳ ಸ್ಥೂಲ ಪಟ್ಟಿ ಇಲ್ಲಿದೆ.. ಭಾರತದಲ್ಲಿ ನಿಷೇಧಕ್ಕೆ ಒಳಗಾದ ಇತರೆ ಚಿತ್ರಗಳ ಪಟ್ಟಿ... 1959ರಲ್ಲಿ ಚೀನಾ ಕಾರ್ಮಿಕರ ಬಗ್ಗೆ ಬಂದ 'ನೀಲ್ ಅಕ್ಷರ್ ನೀಚೆ' ಎಂಬ ಬೆಂಗಾಳಿ ಚಿತ್ರ 2 ವರ್ಷ ನಿಷೇಧಕ್ಕೆ ಒಳಗಾಗಿತ್ತು. 1991 ರಲ್ಲಿ Kutrapathirikkai ಎಂಬ ಚಿತ್ರ 15 ವರ್ಷ ಬ್ಯಾನ್ ಆದ ಚಿತ್ರ, ರಾಜೀವ್ ಗಾಂಧಿ ಹತ್ಯೆ ಚಿತ್ರ ಎಲ್ ಟಿಟಿಐ ಪರ ಇದೆ ಎನ್ನಲಾಗಿತ್ತು. ಇದು ದೀರ್ಘಕಾಲ ಬ್ಯಾನ್ ಆದ ಚಿತ್ರ ಎನ್ನಬಹುದು.
ವಿಶ್ವರೂಪಂ
ಮುಸ್ಲಿಂ ವಿರೋಧಿ ದೃಶ್ಯಗಳಿವೆ ಎಂಬ ಕಾರಣಕ್ಕಾಗಿ ವಿಶ್ವರೂಪಂ(2013) ಚಿತ್ರ ತಮಿಳುನಾಡು, ಆಂಧ್ರ ಸೇರಿದಂತೆ ಹಲವೆಡೆ ನಿಷೇಧಕ್ಕೊಳಗಾಗಿದೆ. ಇದಕ್ಕೂ ಮುನ್ನ ಮೊದಲು ಡಿಟಿಹೆಚ್ನಲ್ಲಿ ನಂತರ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಗೊಳಿಸುವ ಹಾಸನ್ ನಿರ್ಧಾರ ವಿರೋಧಿಸಿ ಚಿತ್ರಮಂದಿರಗಳ ಮಾಲಿಕರು ಧರಣಿ ನಡೆಸಿದ್ದರು.
ಚಕ್ರವ್ಯೂಹ
ನಕ್ಸಲ್ ವಾದ ಕಥೆಯುಳ್ಳ ಚಕ್ರವ್ಯೂಹ (2012) ಚಿತ್ರದ ಮೆಹೆಂಗೈ ಹಾಡಿನಲ್ಲಿ ಟಾಟಾ, ಬಿರ್ಲಾ ಹಾಗೂ ಬಾಟಾ ಹೆಸರು ಬಳಕೆಯಾಗಿತ್ತು.
ಇದರಿಂದ ಜನರ ಭಾವನೆಗಳಿಗೆ ಧಕ್ಕೆಯಾಗುತ್ತದೆಂದು ಬಾಟಾ ಕಂಪನಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿತ್ತು. ನಂತರ ಈ ಹೆಸರುಗಳನ್ನು ಸಾಂಕೇತಿಕವಾಗಿ ಬಳಸಿಕೊಳ್ಳಲಾಗಿದೆ ಎಂಬ ವಿವರ ನೀಡಿದ ಮೇಲೆ ಚಿತ್ರ ಬಿಡುಗಡೆಯಾಯಿತು.
ಆರಕ್ಷಣ್
ಆರಕ್ಷಣ್ (2011) ಚಿತ್ರದಲ್ಲಿ ದಲಿತ ವಿರೋಧಿ ಸಂಭಾಷಣೆಗಳಿವೆ ಎಂಬ ಕಾರಣವೊಡ್ಡಿ ಕೆಲ ಸಂಘಟನೆಗಳು ಚಿತ್ರ ಬಿಡುಗಡೆಗೆ ತಡೆಯೊಡ್ಡಿದ್ದವು. ಆಂಧ್ರ ಪ್ರದೇಶ, ಉತ್ತರ ಪ್ರದೇಶ ಹಾಗೂ ಪಂಜಾಬ್ನಲ್ಲಿ ನಿಷೇಧಕ್ಕೊಳಗಾಗಿದ್ದ ಚಿತ್ರ ನಂತರ ತೆರೆ ಕಂಡಿತ್ತು. ಶಿಕ್ಷಣದಲ್ಲಿ ಮೀಸಲಾತಿ ವಿರೋಧಿಸುವ ಈ ಚಿತ್ರ ಭಾರಿ ಚರ್ಚೆಗೆ ಈಡಾಗಿತ್ತು.
ಮೈ ನೇಮ್ ಈಸ್ ಖಾನ್
ಶಾರೂಖ್ ಖಾನ್ ಅಭಿನಯದ 'ಮೈ ನೇಮ್ ಈಸ್ ಖಾನ್' (2010) ಚಿತ್ರ ಬಿಡುಗಡೆ ವೇಳೆ ಮಹಾರಾಷ್ಟ್ರದಲ್ಲಿ ಭಾರೀ ಪ್ರತಿಭಟನೆ ನಡೆಯಿತು. ಅಲ್ಲದೆ ಶಾರೂಖ್ಗೆ ಬೆದರಿಕೆ ಕರೆಗಳು ಸಹ ಬಂದಿದ್ದವು.
2010ರ ಐಪಿಎಲ್ನಲ್ಲಿ ಭಾಗವಹಿಸುತ್ತಿರುವ ತಂಡಗಳು ಪಾಕ್ ಕ್ರಿಕೆಟರ್ಗಳನ್ನು ಕರೆತಂದಿಲ್ಲ ಎಂಬ ಹೇಳಿಕೆಗಳು ಕೇಳಿಬಂದಿದ್ದವು. ಕೋಲ್ಕತ್ತಾ ನೈಟ್ ರೈಡರ್ಸ್ ಕ್ರಿಕೆಟ್ ತಂಡದ ಪಾಲುದಾರನಾಗಿದ್ದ ಶಾರೂಖ್ ಇದನ್ನು ಖಂಡಿಸಿ ಮಾತನಾಡಿದ್ದರು. ಇದರಿಂದಾಗಿ ಶಿವಸೇನಾ ಕಾರ್ಯಕರ್ತರು ಶಾರೂಖ್ ವಿರುದ್ಧ ಪ್ರತಿಭಟಿಸಿದ್ದರು.
ಫಿರಾಕ್
2002ರಲ್ಲಿ ಗುಜರಾತ್ ನಲ್ಲಿ ಸಂಭವಿಸಿದ ಜನಾಂಗೀಯ ಗಲಭೆಯಿಂದಾದ ಕೆಟ್ಟ ಪರಿಣಾಮ ಅನುಭವಿಸುವ ಕೌಟುಂಬಿಕ ಕಥೆಯುಳ್ಳ ಫಿರಾಕ್(2008) ಚಿತ್ರಕ್ಕೆ ಗುಜರಾತ್ನಲ್ಲಿ ನಿಷೇಧ ಹೇರಲಾಗಿತ್ತು. ಆದರೆ, ನಂದಿತಾ ದಾಸ್ ನಿರ್ದೇಶನದ ಈ ಚಿತ್ರ ಎರಡು ರಾಷ್ಟ್ರೀಯ ಪ್ರಶಸ್ತಿ ಗಳಿಸಿತು.
ಗುಜರಾತ್ ಗಲಭೆಯ ಕಥಾಹಂದರ ಹೊಂದಿದ್ದ ಮತ್ತೊಂದು ಚಿತ್ರ ಪರ್ಜಾನಿಯಾ (2007) ಸಹ ನಿಷೇಧಕ್ಕೊಳಗಾಗಿತ್ತು.
1993ರ ಬಾಂಬೆ ಸರಣಿ ಬಾಂಬ್ ಸ್ಫೋಟದ ಘಟನೆ ಕುರಿತ ಚಿತ್ರ ಬ್ಲ್ಯಾಕ್ ಫ್ರಾಯ್ಡೇ ಚಿತ್ರ ಸಹ 3 ವರ್ಷ ನಿಷೇಧಕ್ಕೊಳಗಾಗಿತ್ತು. ಚಿತ್ರದಲ್ಲಿ ಹೆಸರಿಸಲಾಗಿದ್ದ ಕೆಲವು ವ್ಯಕ್ತಿಗಳು 2004 ರಲ್ಲಿ ಚಿತ್ರಕ್ಕೆ ತಡೆಯಾಜ್ಞೆ ತಂದಿದ್ದರು. ನಂತರ ನ್ಯಾಯಾಲಯದಲ್ಲಿ ವಿಚಾರಣೆ ಪೂರ್ಣಗೊಂಡು 2007ರಲ್ಲಿ ಚಿತ್ರ ತೆರೆಕಂಡಿತ್ತು.
ಫನಾ
ನರ್ಮದಾ ಅಣೆಕಟ್ಟು ವಿರುದ್ಧವಾಗಿ ನಟ ಅಮಿರ್ಖಾನ್ ಹೇಳಿಕೆ ನೀಡಿದ್ದ ಕಾರಣ ಫನಾ(2006) ಚಿತ್ರ ಗುಜರಾತ್ನಲ್ಲಿ ನಿಷೇಧಕ್ಕೊಳಗಾಗಿತ್ತು. ಇನ್ನೂ ಹಲವು ಚಿತ್ರಗಳು ವಿವಿಧ ಕಾರಣಕ್ಕಾಗಿ ನಿಷೇಧಕ್ಕೊಳಪಟ್ಟ ಉದಾಹರಣೆಗಳಿವೆ.
ಬ್ಯಾಂಡಿಟ್ ಕ್ವೀನ್
ಎ ಸರ್ಟೀಫಿಕೇಟ್ ಕೊಟ್ಟರೂ ಜನ ಸಾಮಾನ್ಯರು ಮುಕ್ತವಾಗಿ ಚಿತ್ರ ನೋಡಲು ಸಾಧ್ಯವಿಲ್ಲ ಎಂದು ನಿಷೇಧ ಹೇರಲಾಗಿತ್ತು. ಚಂಬಲ್ ಕಣಿವೆ ದರೋಡೆಕೋರರ ಕಥೆಯುಳ್ಳ ಈ ಚಿತ್ರ ಫೂಲನ್ ದೇವಿ ಜೀವನ ಕಥೆ ಆಧರಿಸಿದೆ.
ಪಾಂಚ್
2003ರಲ್ಲಿ ತೆರೆ ಕಂಡ ಚಿತ್ರದಲ್ಲಿನ ಕಾಮದೃಶ್ಯಗಳು, ಹಿಂಸೆ, ಪ್ರಚೋದನಕಾರಿ ಸಂಭಾಷಣೆಗಳು ಸಮಾಜಕ್ಕೆ ಹಾನಿ ಉಂಟು ಮಾಡುತ್ತದೆ ಎಂದು ನಿಷೇಧಿಸಲಾಗಿತ್ತು.
ಫೈರ್
ಮೀರಾ ನಾಯರ್ ನಿರ್ದೇಶನದ 1996ರಲ್ಲಿ ತೆರೆಕ್ ಕಂಡ ಫೈರ್ ಚಿತ್ರಸಲಿಂಗ ಕಾಮ ಅದರಲ್ಲೂ ನಂದಿತಾ ದಾಸ್ ಹಾಗೂ ಶಬನಾ ಆಜ್ಮಿ ಲೆಸ್ಬಿಯನ್ ಕಾಮ ದೃಶ್ಯಗಳ ವಿರುದ್ಧ ಹಿಂದೂ ಸಂಘಟನೆಗಳು ಕಿಡಿಕಾರಿದ್ದವು.
ಇಂಡಿಯಾನಾ ಜೋನ್ಸ್
ಹ್ಯಾರಿಸನ್ ಫೋರ್ಡ್ ಅಭಿನಯದ 1984ರಲ್ಲಿ ತೆರೆಕಂಡ ಈ ಇಂಗ್ಲೀಷ್ ಚಿತ್ರದಲ್ಲಿ ಭಾರತೀಯ ಮೇಲೆ ಜನಾಂಗೀಯ ನಿಂದನೆ ಮಾಡಿದ ಆರೋಪವುಳ್ಳ ದೃಶ್ಯಗಳಿದೆ ಎಂದು ಬ್ಯಾನ್ ಮಾಡಲಾಗಿತ್ತು.
ಕಾಮಸೂತ್ರ : A Tale of Love
ಪುರಾತನ ಕಥೆಯನ್ನು ಆಧರಿಸಿದ 1996ರಲ್ಲಿ ಬಿಡುಗಡೆಗೊಂಡ ಚಿತ್ರವನ್ನು ಮೀರಾ ನಾಯರ್ ನಿರ್ದೇಶಿಸಿದ್ದರು. ಮುಕ್ತ ಹಾಗೂ ವಿವಿಧ ಕಾಮ ಭಂಗಿಗಳನ್ನು ಪ್ರದರ್ಶಿಸುವ ಮೂಲಕ ಪ್ರೇಕ್ಷಕರಿಗೆ ಹಾನಿ ಉಂಟು ಮಾಡಲಿದೆ ಎಂದು ನಿಷೇಧಿಸಲಾಗಿತ್ತು. ನಂತರ ಅನೇಕ ದೃಶ್ಯಗಳಿಗೆ ಕತ್ತರಿ ಹಾಕಿ ಬಿಡುಗಡೆ ಮಾಡಲಾಯಿತು.
ವಾಟರ್
ಹಿಂದೂ ವಿಧವೆಯರು, ಗಂಗಾ ನದಿ ಬದುಕಿನ ಚಿತ್ರಣ ಇರುವ ಈ ಚಿತ್ರಕ್ಕೆ ವಾರಣಸಿಯಲ್ಲಿ ಭಾರಿ ಪ್ರತಿಭಟನೆ ವ್ಯಕ್ತವಾಗಿತ್ತು. ನಿರ್ದೇಶಕಿ ಮೀರಾ ನಾಯರ್ ಅವರು ಶ್ರೀಲಂಕಾದಲ್ಲಿ ಚಿತ್ರೀಕರಣ ನಡೆಸಿ, 2007ರಲ್ಲಿ ಬಿಡುಗಡೆಗೊಳಿಸಿದ್ದರು. ಆದರೆ, ಮಹಿಳೆಯರ ಶೋಷಣೆ, ಭಾವನೆಯ ದನಿಯಾಗಬೇಕಿದ್ದ ಚಿತ್ರ ಆಸ್ಕರ್ ಎಂಟ್ರಿ ಇಂದಲೂ ನಿಷೇಧಕ್ಕೊಳಗಾಯಿತು.
ಈ ಆಂಗ್ಲ ಚಿತ್ರದಲ್ಲಿರುವ ಅತ್ಯಾಚಾರ, ಪ್ರಣಯ ದೃಶ್ಯ ಜನ ಸಾಮಾನ್ಯರು ಮುಕ್ತವಾಗಿ ಚಿತ್ರ ನೋಡಲು ಸಾಧ್ಯವಿಲ್ಲ ಎಂದು ನಿಷೇಧ ಹೇರಲಾಗಿತ್ತು.
ಡಾ ವಿಂಚಿ ಕೋಡ್ ಹಾಗೂ ಇತರೆ
* ಮಹಾತ್ಮಾ ಗಾಂಧೀಜಿ ಹತ್ಯೆ ಕುರಿತ 1963ರ ಚಿತ್ರ ನೈನ್ ಹವರ್ಸ್ ಟು ರಾಮಾ, 1970ರಲ್ಲಿ ರಾಜಕೀಯ ಪ್ರೇರಿತ ಚಿತ್ರ ಕಿಸ್ಸಾ ಕುರ್ಸಿ ಕಾ, 1971 ರಲ್ಲಿ ಸಿಕ್ಕಿಂ ರಾಜ್ಯ ವಿಮೋಚನೆ ಕುರಿತ 'ಸಿಕ್ಕಿಂ' ಹೆಸರಿನ ಚಿತ್ರ
ಉಳಿದಂತೆ ಡಾ ವಿಂಚಿ ಕೋಡ್, ಡ್ಯಾಮ್ 999, ಒರೇ ಒರು ಗ್ರಾಮತ್ತಿಲೇ ಹಾಗೂ ಪಶ್ಚಿಮ ಬೆಂಗಾಳದಲ್ಲಿ ಸಿಟಿ ಆಫ್ ಜಾಯ್ ಚಿತ್ರಗಳು ನಿಷೇಧಕ್ಕೆ ಒಳಪಟ್ಟಿದ್ದವು.