ಚೇತನ್ ಜಾಗಕ್ಕೆ ಬಂದ್ರು ಹೊಸ ಡೈರೆಕ್ಟರ್, ನಿಖಿಲ್ 2ನೇ ಚಿತ್ರ ಶುರು.!
ನಿಖಿಲ್ ಕುಮಾರ್ ಅಭಿನಯದ 2ನೇ ಚಿತ್ರದಿಂದ ನಿರ್ದೇಶಕ ಚೇತನ್ ಕುಮಾರ್ ಹೊರ ಬಂದಿದ್ದರು. ಅದಾದ ನಂತರ ಆ ಜಾಗಕ್ಕೆ ಬೇರೆ ಯಾವ ಡೈರೆಕ್ಟರ್ ಬರ್ತಾರೆ ಎಂಬ ಕುತೂಹಲ ಚಿತ್ರವಲಯದಲ್ಲಿ ಹೆಚ್ಚಾಗಿತ್ತು. ಈಗ ಈ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ.
ಹೌದು, ನಿಖಿಲ್ ಎರಡನೇ ಚಿತ್ರಕ್ಕೆ ಹೊಸ ಡೈರೆಕ್ಟರ್ ಸಿಕ್ಕಿದ್ದಾರಂತೆ. ಇದೇ ಸಂತಸದಲ್ಲಿ ನಾಯಕ ಹಾಗೂ ನಾಯಕಿಯ ಭರ್ಜರಿ ಫೋಟೋಶೂಟ್ ಕೂಡ ನೆರವೇರಿದ್ದು, ಫಸ್ಟ್ ಲುಕ್ ಹೊರಬಿದ್ದಿದೆ. ಇನ್ನು ಅಧಿಕೃತವಾಗಿ ಸೆಟ್ಟೇರದ ನಿಖಿಲ್ ಚಿತ್ರದ ಬಗ್ಗೆ ಈಗಾಗಲೇ ಗಾಂಧಿನಗರದಲ್ಲಿ ಬಿಸಿಬಿಸಿ ಟಾಕ್ ಶುರುವಾಗಿದ್ದು, ಹೊಸ ಟ್ರೆಂಡ್ ಸೃಷ್ಟಿಸುತ್ತೆ ಎಂಬ ಲೆಕ್ಕಾಚಾರ ನಡೆಯುತ್ತಿದೆ.
ಅಷ್ಟಕ್ಕೂ, ನಿಖಿಲ್ ಎರಡನೇ ಚಿತ್ರಕ್ಕೆ ಬಂದ ಹೊಸ ಡೈರೆಕ್ಟರ್ ಯಾರು? ಮುಂದೆ ಓದಿ.....

ಚೇತನ್ ಜಾಗಕ್ಕೆ ಹೊಸ ನಿರ್ದೇಶಕ
'ಬಹುದ್ದೂರ್' ಚೇತನ್ ಕುಮಾರ್ ಅವರ ಜಾಗಕ್ಕೆ ಈಗ ಕನ್ನಡದ ಮತ್ತೊರ್ವ ಕನ್ನಡದ ನಿರ್ದೇಶಕ ಎಂಟ್ರಿ ಕೊಟ್ಟಿದ್ದಾರೆ. ಮೂಲಗಳ ಪ್ರಕಾರ ನಿಖಿಲ್ ಕುಮಾರ್ ಅವರ ಎರಡನೇ ಚಿತ್ರಕ್ಕೆ ಮಹೇಶ್ ರಾವ್ ಆಕ್ಷನ್ ಕಟ್ ಹೇಳಲಿದ್ದಾರಂತೆ.

ಯಾರು ಈ ಮಹೇಶ್ ರಾವ್?
ಅಂದ್ಹಾಗೆ, ಮಹೇಶ್ ರಾವ್ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಸಂತು ಸ್ಟ್ರೈಟ್ ಫಾರ್ವಾಡ್' ಚಿತ್ರದ ನಿರ್ದೇಶಕ. ಅದಕ್ಕೂ ಮುಂಚೆ, 'ಧೀಮಾಕು', 'ಮುರುಳಿ ಮೀಟ್ಸ್ ಮೀರಾ', 'ಭದ್ರ', 'ಎಂದೆಂದೂ ನಿನಗಾಗಿ', 'ಕ್ವಾಟ್ಲೇ ಸತೀಶ', 'ಪ್ರಚಂಡ' ಅಂತಹ ಚಿತ್ರಗಳನ್ನ ನಿರ್ದೇಶನ ಮಾಡಿದ್ದಾರೆ.

ಕಲರ್ ಫುಲ್ ಫೋಟೋಶೂಟ್
ಇನ್ನು ನಿಖಿಲ್ ಕುಮಾರ್ ಅವರ ಎರಡನೇ ಚಿತ್ರದ ಫೋಟೋಶೂಟ್ ಸಖತ್ ಕಲರ್ ಫುಲ್ ಆಗಿ ನೆರವೇರಿದ್ದು, ಮೊದಲ ನೋಟ ಹೊರ ಬಿದ್ದಿದೆ. ನಾಯಕ ಹಾಗೂ ನಾಯಕಿ ಇಬ್ಬರು ಆಕರ್ಷಕವಾದ ಕಾಸ್ಟ್ಯೂಮ್ ಧರಿಸಿ ಮಿಂಚಿದ್ದಾರೆ.

ಕಥೆ-ಚಿತ್ರಕಥೆ ಚೇತನ್
ನಿಖಿಲ್ ಎರಡನೇ ಚಿತ್ರಕ್ಕೆ ಚೇತನ್ ಕುಮಾರ್ ಅವರ ಕಥೆ ಮತ್ತು ಚಿತ್ರಕಥೆಯನ್ನೇ ಉಳಿಸಿಕೊಳ್ಳಲಾಗಿದೆಯಂತೆ. ಯಾಕಂದ್ರೆ, ಈ ಕಥೆ ಕುಮಾರಸ್ವಾಮಿ ಅವರಿಗೆ ತುಂಬಾ ಇಷ್ಟವಾಗಿತ್ತಂತೆ. ಹೀಗಾಗಿ, ನಿರ್ದೇಶನ ಮಾತ್ರ ಮಹೇಶ್ ರಾವ್ ಮಾಡಲಿದ್ದಾರಂತೆ.

ಚೇತನ್ ಹೊರಹೋಗಲು ಕಾರಣ
ಧ್ರುವ ಸರ್ಜಾ, ರಚಿತಾ ರಾಮ್ ಅಭಿನಯದ 'ಭರ್ಜರಿ' ಚಿತ್ರದ ಕೊನೆಯ ಹಂತದ ಕೆಲಸಗಳಲ್ಲಿ ಚೇತನ್ ಕುಮಾರ್ ಬ್ಯುಸಿ ಇದ್ದಾರೆ. ಆದಷ್ಟೂ ಬೇಗ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ಈ ವರ್ಷದಲ್ಲಿ ಬಿಡುಗಡೆ ಮಾಡುವ ಯೋಚನೆಯಲ್ಲಿದ್ದಾರೆ. ಹೀಗಾಗಿ, 'ಭರ್ಜರಿ'ಯಲ್ಲಿ ಬ್ಯುಸಿ ಇರುವುದರಿಂದ ನಿಖಿಲ್ ಚಿತ್ರದಿಂದ ಹಿಂದೆ ಸರಿದಿದ್ದಾರೆ.

ಚಿತ್ರತಂಡ ಹೇಗಿದೆ?
ನಿಖಿಲ್ ಕುಮಾರ್ ಗೆ ನಾಯಕಿಯಾಗಿ ಬೆಳಗಾವಿ ಮೂಲದ ಸುಂದರಿ ಹಾಗೂ ರೂಪದರ್ಶಿ ರಿಯಾ ನಲವಾಡೆ ಅಭಿನಯಿಸಲಿದ್ದಾರೆ. ರಿಯಾ 2017 ರ ಮಾರ್ಚ್ ನಲ್ಲಿ ನಡೆದ, 'ಟ್ಯಾಲೆಂಟ್ ಹಂಟ್ ನ್ಯಾಷನಲ್ ಫ್ರೆಶ್ ಫೇಸ್' ಸ್ಪರ್ಧೆಯ ಫಿನಾಲೆಯಲ್ಲಿ ಬೆಂಗಳೂರನ್ನು ಪ್ರತಿನಿಧಿಸಿ ವಿಜೇತರಾಗಿದ್ದರು. ಉಳಿದಂತೆ ಶೋಭ್ ರಾಜ್ ಹಾಗೂ ಸಾಧುಕೋಕಿಲಾ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಲಿದ್ದಾರೆ. ಚಿತ್ರಕ್ಕೆ ವಿ.ಹರಿಕೃಷ್ಣ ಅವರ ಸಂಗೀತವಿರಲಿದ್ದು, ಈ ಚಿತ್ರವನ್ನ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರೇ ನಿರ್ಮಾಣ ಮಾಡುತ್ತಿದ್ದಾರೆ.


Click it and Unblock the Notifications











