Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಶೇಷ ವರದಿ: ನ್ಯೂಸ್ ಚಾನೆಲ್ ವರದಿಗಾರರ ಗೋಳು ಕೇಳೋರು ಯಾರು.?
ಸ್ಟೈಲ್ ಆಗಿ ರೆಡಿ ಆಗಿ, ಕೈಯಲ್ಲಿ ಸುದ್ದಿ ವಾಹಿನಿ ಲೋಗೋ ಹಿಡಿದುಕೊಂಡು, ಯಾವುದಾದರೂ ಸುದ್ದಿ ವರದಿ ಮಾಡೋಕೆ ಅಂತ ಹೋದರೆ, ಮಾಧ್ಯಮ ವರದಿಗಾರರಿಗೆ ಸಿಗುವ ಮರ್ಯಾದೆ ಅಷ್ಟರಲ್ಲೇ.! ಬೇಕಾದ್ರೆ, ನಿನ್ನೆ ಆದ ಒಂದು ಘಟನೆ ಬಗ್ಗೆ ಡೀಟೇಲ್ ಆಗಿ ಹೇಳ್ತೀವಿ, ಕೇಳಿ.....
ನಿನ್ನೆ (ಮೇ 30) ರಂದು ಬೆಂಗಳೂರಿನ ಮೆಜೆಸ್ಟಿಕ್ ಬಳಿ ಇರುವ ಗಾಂಧಿನಗರದ ಭೂಮಿಕಾ ಚಿತ್ರಮಂದಿರದಲ್ಲಿ 'ನಾಗರಹಾವು' ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಇತ್ತು. [ಬುಸುಗುಡುವ 'ನಾಗರಹಾವು' ಟೀಸರ್ ಸೂಪರ್ರೋ ಸೂಪರ್.!]
ಹೇಳಿ ಕೇಳಿ, ಗ್ರಾಫಿಕ್ಸ್ ಬಳಕೆ ಮೂಲಕ ಸಾಹಸಸಿಂಹ ಡಾ.ವಿಷ್ಣುವರ್ಧನ್ ಮಿಂಚಲಿರುವ 201ನೇ ಸಿನಿಮಾ ಅದು. ಅದರಲ್ಲೂ, ಲಕ್ಕಿ ಸ್ಟಾರ್ ರಮ್ಯಾ 'ನಾಗಿಣಿ' ಅವತಾರದಲ್ಲಿ ಕಾಣಿಸಿಕೊಳ್ಳುವ ಚಿತ್ರ ಅಂತ 'ನಾಗರಹಾವು' ಟೀಸರ್ ಲಾಂಚ್ ಕಾರ್ಯಕ್ರಮ ಕವರ್ ಮಾಡೋಕೆ ಎಲ್ಲಾ ದಿನಪತ್ರಿಕೆಗಳ, ಸುದ್ದಿ ವಾಹಿನಿಗಳ ವರದಿಗಾರರು ಹಾಗೂ ಆನ್ ಲೈನ್ ಪತ್ರಕರ್ತರು ಭೂಮಿಕಾ ಚಿತ್ರಮಂದಿರಕ್ಕೆ ಧಾವಿಸಿದ್ರು.
ಭೂಮಿಕಾ ಥಿಯೇಟರ್ ನಲ್ಲಿ ವಿಷ್ಣು ಅಭಿಮಾನಿಗಳು ತುಂಬಿ ತುಳುಕುತ್ತಿದ್ರು. ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಕೆಲ ಕಾಲ ಟ್ರಾಫಿಕ್ ಜಾಮ್ ಆಗಿತ್ತು ಅಂದ್ರೆ ನೀವೇ ಊಹಿಸಿಕೊಳ್ಳಿ ಜನರ ಸಂಖ್ಯೆ ಎಷ್ಟಿರಬಹುದು ಅಂತ.!
ಜನರ ಕಿರುಚಾಟ, ಘೋಷವಾಕ್ಯ, ಜೈಕಾರದ ನಡುವೆ 'ನಾಗರಹಾವು' ಟೀಸರ್ ಬಿಡುಗಡೆ ಆಯ್ತು. ಕಾರ್ಯಕ್ರಮಕ್ಕೆ ನಟಿ ಹಾಗೂ ಮಾಜಿ ಸಂಸದೆ ರಮ್ಯಾ, ಸಂಗೀತ ನಿರ್ದೇಶಕ ಗುರುಕಿರಣ್, ನಿರ್ದೇಶಕ ಕೋಡಿ ರಾಮಕೃಷ್ಣ ಬಂದಿದ್ರು.
ಟೀಸರ್ ನೋಡಿದ ರಮ್ಯಾ 'ನಾಗರಹಾವು' ಚಿತ್ರದ ಬಗ್ಗೆ, ತಮ್ಮ ಪಾತ್ರದ ಬಗ್ಗೆ ಏನು ಹೇಳ್ತಾರೆ ಕೇಳೋಣ ಅಂತ ಮಾಧ್ಯಮ ಪ್ರತಿನಿಧಿಗಳೆಲ್ಲಾ ಎಕ್ಸಿಟ್ ಕಡೆ ಕರೆದುಕೊಂಡು ಬಂದ್ರು (ಒಳಗಡೆ ಜನರ ಗದ್ದಲದ ನಡುವೆ ರಮ್ಯಾ ಮಾತನಾಡುವುದು ಕೇಳಿಸುತ್ತಿರಲಿಲ್ಲ).
ಹೊರಗಡೆ ಬರುತ್ತಿದ್ದಂತೆ, ಕೆಲವರು ರಮ್ಯಾ ಮೇಲೆ ಬೀಳಲು ಶುರು ಮಾಡಿದರು. ಅಂಥವರನ್ನು ಪಕ್ಕಕ್ಕೆ ತಳ್ಳಿದ ಮೀಡಿಯಾ ಕ್ಯಾಮರಾಮೆನ್ ಫ್ರೇಮ್ ಫಿಕ್ಸ್ ಮಾಡಿದ್ರು. ರಮ್ಯಾ ಮಾತನಾಡಲು ಶುರು ಮಾಡುತ್ತಿದ್ದಂತೆ, ಸಿಕ್ಕಿದ್ದೇ ಚಾನ್ಸ್ ಅಂತ ಕಿಡಿಗೇಡಿಗಳು (ಅಂಥವರನ್ನ ವಿಷ್ಣು ಅಭಿಮಾನಿಗಳು ಅನ್ಬೇಕಾ?) ತಮ್ಮ ಕೈಚಳಕ ತೋರಿಸಿದರು.!
ಪ್ರಜಾ ಟಿವಿ ಸಿನಿಮಾ ವರದಿಗಾರರ ಜೇಬಿಗೆ ಕತ್ತರಿ ಬಿತ್ತು. ಸಮಯ ಟಿವಿ ಲೋಗೋ ಅಬೇಸ್ ಆಯ್ತು. ಸುವರ್ಣ ಸುದ್ದಿ ವಾಹಿನಿ ಕ್ಯಾಮರಾ ಟ್ರೈಪಾಡ್ ಮುರಿದು ಬಿತ್ತು. ಎಲ್ಲದಕ್ಕಿಂತ ದುರಂತ ಅಂದ್ರೆ, ಇದನ್ನೆಲ್ಲಾ ಕಣ್ಣಾರೆ ನೋಡುತ್ತಿದ್ದ 'ನಾಗರಹಾವು' ಚಿತ್ರತಂಡ ನಿಯೋಜಿಸಿದ್ದ ಬೌನ್ಸರ್ಸ್ ''ಬೋ**ಕ್ಕ* ಮೀಡಿಯಾದವರಿಂದ ಎಲ್ಲಾ ಹಾಳಾಯ್ತು'' ಅಂದಿದ್ದು.
ಅಲ್ಲ ಸ್ವಾಮಿ, ಮೀಡಿಯಾ/ಪತ್ರಿಕಾ ವರದಿಗಾರರಿಂದ ಹಾಳಾಗಿದ್ದಾದರೂ ಏನು? ಫಸ್ಟ್ ಆಫ್ ಆಲ್, ಇಡೀ ಕಾರ್ಯಕ್ರಮದ ಆಯೋಜನೆಯೇ ನೆಟ್ಟಗಿರಲಿಲ್ಲ. ಪ್ರೆಸ್ ಹಾಗೂ ಅಭಿಮಾನಿಗಳನ್ನ ಮಿಕ್ಸ್ ಮಾಡಲು ಹೋಗಿ ಎಡವಟ್ಟು ಮಾಡಿದ್ದು ನಿಮ್ಮ ಚಿತ್ರತಂಡ.
ಅಭಿಮಾನಿಗಳನ್ನ ನಿಭಾಯಿಸುವ ತಾಕತ್ತು ಇದ್ರೆ, ಇಂತಹ ಕಾರ್ಯಕ್ರಮ ಮಾಡಿ. ಇಲ್ಲ ಅಂದ್ರೆ ಮೀಡಿಯಾದವರ ಮೇಲೆ ಗೂಬೆ ಯಾಕೆ ಕೂರಿಸ್ತೀರಾ? ಅಷ್ಟಕ್ಕೂ, ನಿಮ್ಮ ಟೀಸರ್ ಲಾಂಚ್ ಕಾರ್ಯಕ್ರಮಕ್ಕೆ ಬಂದ ಎಷ್ಟು ಜನ ಮೀಡಿಯಾದವರಿಗೆ ಕೂರಲು ಕುರ್ಚಿ ಖಾಲಿ ಇತ್ತು? ನಿಮ್ಮ ಸಿನಿಮಾದ ಈವೆಂಟ್ ಕವರ್ ಮಾಡೋಕೆ ಬಂದ ಸುದ್ದಿ ವಾಹಿನಿಯವರಿಗೆ ಕ್ಯಾಮರಾ ಫ್ರೇಮ್ ಫಿಕ್ಸ್ ಮಾಡಲು ಜಾಗ ಎಲ್ಲಿ ಮೀಸಲು ಇಟ್ಟಿದ್ರಿ.? ಜನ ಜಂಗುಳಿ ಮಧ್ಯೆ ಎಲ್ಲಾ ಕ್ಯಾಮರಾಮೆನ್ ಗಳು ಸರ್ಕಸ್ ಮಾಡ್ಬೇಕಾಯ್ತು.
ಹೋಗಲಿ, ರಮ್ಯಾ ಬೈಟ್ ಗಾಗಿ ನಿಮ್ಮ ಚಿತ್ರತಂಡದವರೇ ಅರೇಂಜ್ ಮಾಡಬಹುದಿತ್ತಲ್ವಾ.? ನಿಮ್ಮ ಕಡೆಯಿಂದ ಯಾಕೆ ಯಾರೂ ಮುಂದೆ ಬರ್ಲಿಲ್ಲ.? ನಿಮ್ಮ ಚಿತ್ರಕ್ಕೆ ಪ್ರಚಾರ ಕೊಡಲು ಬಂದ ಪತ್ರಕರ್ತರಿಗೆ ಕೊಡುವ ಮರ್ಯಾದೆ ಇದೇನಾ.?
'ನಾಗರಹಾವು' ಚಿತ್ರತಂಡ ನಿಯೋಜಿಸಿದ್ದ ಬೌನ್ಸರ್ಸ್ ನಡವಳಿಕೆಯಿಂದ ಮೀಡಿಯಾದವರಿಗೆ ರೋಷ ಉಕ್ಕಿ ಬಂದಿದ್ದು ಒಂದ್ಕಡೆ ಆದ್ರೆ, ಇನ್ನೊಂದ್ಕಡೆ ಆಫೀಸ್ ನಲ್ಲಿ ಏನಾಗುತ್ತೋ ಎಂಬ ಭೀತಿ ಬೇರೆ.
''ಏನೇ ಆದರೂ, ನಮ್ದ್ರಲ್ಲೇ ಎಕ್ಸ್ ಕ್ಲೂಸಿವ್ ಬರ್ಬೇಕು'' ಎಂಬ ಒತ್ತಡ ಎಲ್ಲಾ ವರದಿಗಾರರ ಮೇಲೆ.! ಅಂಥದ್ರಲ್ಲಿ, ಲೋಗೋ ಮಿಸ್ ಮಾಡಿ, ಟ್ರೈಪಾಡ್ ಮುರಿದುಕೊಂಡು ಹೋದ್ರೆ, ಆಫೀಸ್ ನಲ್ಲಿ ಕಾರಣ ಕೇಳೋರು ಯಾರು? ಮುಲಾಜಿಲ್ದೆ, ಕ್ಯಾಮರಾಮೆನ್ ಹಾಗೂ ರಿಪೋರ್ಟರ್ ಗೆ ಸಂಬಳದಲ್ಲಿ ಕತ್ರಿ ಖಾತ್ರಿ.
ಮೊದಲೇ ಮಾಧ್ಯಮ ವರದಿಗಾರರಿಗೆ ಸಿಗುವ ಸಂಬಳ ಅಷ್ಟರಲ್ಲೇ ಬಿಡಿ. ಅದರಲ್ಲೂ ಕತ್ರಿ ಅಂದ್ರೆ, ತಿಂಗಳು ತೂಗುವುದು ಹೇಗೆ.? ಅವರನ್ನೇ ನಂಬಿರುವ ಕುಟುಂಬದ ಗತಿ ಏನು.? ನಿಮ್ಮ ಚಿತ್ರತಂಡ ಅದನ್ನ ಭರಿಸಿಕೊಡುತ್ತಾ.? ಇಲ್ಲ, ಮಾಡಬೇಕಿರುವ ಕೆಲಸ ಮರೆತು ದೌಲತ್ತಿನ ಮಾತಾಡಿದ ಆ ಬೌನ್ಸರ್ ನಷ್ಟ ಭರಿಸುತ್ತಾರಾ.?
ಇದಕ್ಕೆಲ್ಲಾ ಉತ್ತರ ಕೊಡೋಕೆ ಅಲ್ಲಿ ಯಾರೂ ಇರ್ಲಿಲ್ಲ..! ಪ್ರಶ್ನೆಯನ್ನ ಪ್ರಶ್ನೆಯಾಗೇ ಇಟ್ಕೊಂಡು, ಸಪ್ಪೆ ಮೋರೆ ಹಾಕೊಂಡು ಎಲ್ಲಾ ಸುದ್ದಿ ವಾಹಿನಿ ವರದಿಗಾರರು ವಾಪಸ್ ತೆರಳಿದರು. ಚಾನೆಲ್ ಗಳ ಟಿ.ಆರ್.ಪಿ ಗುದ್ದಾಟದಲ್ಲಿ, ವರದಿಗಾರರೂ ಈಗ ಬೀದಿಯಲ್ಲಿ ಬಡಿದಾಡುವ ಪರಿಸ್ಥಿತಿ ಬಂದುಬಿಟ್ಟಿದೆ. ಪಾಪ....ಅವರ ಗೋಳು ಯಾರಿಗ್ಹೇಳೋಣ.?
'ಕಿಡಿಗೇಡಿ'ಗಳಿಗೆ ಕೊನೆಯದಾಗಿ ಒಂದು ಮಾತು: ವಿಷ್ಣು ಅಭಿಮಾನಿಗಳು ಅಂತ ಹೇಳ್ಕೊಂಡು ಪಿಕ್ ಪಾಕೆಟ್ ಮಾಡಿ, ಕಲಾವಿದರ ಹೆಸರಿಗೆ, ಮತ್ತವರ ಅಭಿಮಾನಿಗಳ ಮುಖಕ್ಕೆ ಮಸಿ ಬಳಿಯಬೇಡಿ.