ಒಂದೇ ಚಿತ್ರದಲ್ಲಿ ರಾಮ್ಚರಣ್- ಯಶ್? ನರ್ತನ್ ಆಕ್ಷನ್ ಕಟ್?
ಮೆಗಾ ಪವರ್ ಸ್ಟಾರ್ ರಾಮ್ಚರಣ್ ತೇಜಾಗೆ ಕನ್ನಡ ನಿರ್ದೇಶಕ ನರ್ತನ್ ಆಕ್ಷನ್ ಕಟ್ ಹೇಳ್ತಾರೆ ಎನ್ನುವು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಮತ್ತೆ ಕೆಲವರು ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಕೂಡ ನಟಿಸ್ತಾರೆ ಅನ್ನುವ ಸುದ್ದಿಯನ್ನು ತೇಲಿ ಬಿಟ್ಟಿದ್ದಾರೆ. ಈಗಾಗಲೇ ರಾಮ್ಚರಣ್ಗೆ ನರ್ತನ್ ಕಥೆ ಕೂಡ ಹೇಳಿದ್ದಾರಂತೆ. ಟಾಲಿವುಡ್ನಲ್ಲೀಗ ಈ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಿದೆ.
5 ವರ್ಷಗಳ ಹಿಂದೆ ನರ್ತನ್ ನಿರ್ದೇಶನದ 'ಮಫ್ತಿ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಹಾಗೂ ರೋರಿಂಗ್ ಸ್ಟಾರ್ ಶ್ರೀಮುರಳಿನ ಬಹಳ ವಿಭಿನ್ನವಾಗಿ ತೋರಿಸಿ ಗೆದ್ದಿದ್ದರು. ಇಂತದ್ದೆ ಮತ್ತೊಂದು ಹೈವೋಲ್ಟೇಜ್ ಆಕ್ಷನ್ ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಯಶ್ ಮುಂದಿನ ಚಿತ್ರಕ್ಕೆ ನರ್ತನ್ ಆಕ್ಷನ್ ಕಟ್ ಹೇಳ್ತಾರೆ ಅನ್ನುವ ಸುದ್ದಿ ಕೇಳಿ ಬಂದಿತ್ತು. ಆದರೆ ಯಾಕೊ ಅದು ಕೈಗೂಡಿದಂತೆ ಕಾಣುತ್ತಿದೆ. ಇದೀಗ ರಾಮ್ಚರಣ್ ಜೊತೆ 'ಮಫ್ತಿ' ಸಾರಥಿ ಕೈಜೋಡಿಸ್ತಾರೆ ಅನ್ನುವ ಗುಸುಗುಸು ಶುರುವಾಗಿದೆ.

'RRR' ಸಕ್ಸಸ್ ನಂತರ ರಾಮ್ಚರಣ್, ಶಂಕರ್ ನಿರ್ದೇಶನದ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಈ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣವಾಗ್ತಿದೆ. ಈ ಸಿನಿಮಾ ನಂತರ ಚೆರ್ರಿ ಯಾವ ಚಿತ್ರದಲ್ಲಿ ನಟಿಸ್ತಾರೆ ಅನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಇಂತಹ ಹೊತ್ತಲ್ಲೇ ನರ್ತನ್ ಕಥೆ ಹೇಳಿದ್ದಾರೆ, ಚರಣ್ ಇಂಪ್ರೆಸ್ ಆಗಿದ್ದಾರೆ ಅನ್ನುವ ಚರ್ಚೆ ಶುರುವಾಗಿದೆ. ಮೆಗಾ ಪವರ್ ಸ್ಟಾರ್ ಅಭಿಮಾನಿಗಳು ನರ್ತನ್ ಯಾರು ಎಂದು ಗೂಗಲ್ ಮಾಡಿ ಚೆಕ್ ಮಾಡ್ತಿದ್ದಾರೆ.
ಈಗಾಗಲೇ ಮೆಗಾ ಪವರ್ ಸ್ಟಾರ್ಗೆ ನರ್ತನ್ ಒನ್ ಲೈನ್ ಸ್ಟೋರಿ ಹೇಳಿದ್ದಾರೆ. ಅದನ್ನು ಕೇಳಿ ಮೆಚ್ಚಿಕೊಂಡಿರುವ ಚರಣ್, ಮುಂದಿನ ವಾರ ಬಂದು ಕಥೆ ಹೇಳಲು ಹೇಳಿದ್ದಾರಂತೆ. ಈ ಕಥೆಯನ್ನು ನರ್ತನ್, ಯಶ್ಗಾಗಿ ಮಾಡಿದ್ದರಂತೆ. ನೇವಿ ಹಿನ್ನೆಲೆಯ ಕಥೆ ಅಂತೆ ಹೀಗೆ ಸೋಶಿಯಲ್ ಮೀಡಿಯಾ ಅಂತೆಕಂತೆಗಳ ಸಂತೆಯಾಗಿದೆ. ರಾಮ್ಚರಣ್ ಜೊತೆ ಯಶ್ ಕೂಡ ನಟಿಸ್ತಾರೆ ಅಂತೆಲ್ಲಾ ಸುದ್ದಿಯನ್ನು ಹರಿಬಿಟ್ಟಿದ್ದಾರೆ. ಇದು ಎಷ್ಟು ನಿಜ, ಎಷ್ಟು ಸುಳ್ಳು ಅನ್ನುವುದು ಇನ್ನಷ್ಟೆ ಗೊತ್ತಾಗಬೇಕಿದೆ.


Click it and Unblock the Notifications











