ರಾಮನಗರದಲ್ಲಿಯೇ ನಿಖಿಲ್ ಮದುವೆ?: ಎಚ್ಡಿಕೆ ಆಸೆಯಂತೆ ಕರ್ಮಭೂಮಿಯಲ್ಲಿ ಸಮಾರಂಭ
ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಅವರ ಮಗ, ನಟ ನಿಖಿಲ್ ಕುಮಾರ್ ಮತ್ತು ರೇವತಿ ಮದುವೆಗೆ ಇನ್ನು ಎರಡೇ ದಿನ ಬಾಕಿ ಇವೆ. ಮದುವೆ ಯಾವ ಸ್ಥಳದಲಲ್ಇ ನಡೆಯಲಿದೆ ಎಂಬ ಗುಟ್ಟನ್ನು ಎಚ್ಡಿಕೆ ಕುಟುಂಬ ಬಹಿರಂಗಪಡಿಸಿಲ್ಲ. ಮಗನ ಮದುವೆಯನ್ನು ಅದ್ಧೂರಿಯಾಗಿ ನಡೆಸಬೇಕೆಂಬ ಅವರ ಆಸೆಗೆ ಕೊರೊನಾ ವೈರಸ್ ಲಾಕ್ಡೌನ್ ತಣ್ಣೀರೆರಚಿದೆ.
Recommended Video
ನಿಗದಿಯಾದ ದಿನ ಮುಹೂರ್ತ ಚೆನ್ನಾಗಿರುವುದರಿಂದ ಮದುವೆ ಮುಂದೂಡಲು ಕುಮಾರಸ್ವಾಮಿ ಅವರ ಕುಟುಂಬ ಮುಂದಾಗಿಲ್ಲ. ಬದಲಾಗಿ ನಿಗದಿಯಾದ ಮುಹೂರ್ತದಲ್ಲಿಯೇ ಮದುವೆ ಸಮಾರಂಭ ನಡೆಸಲು ತೀರ್ಮಾನಿಸಿದೆ. ಲಾಕ್ಡೌನ್ ಕಾರಣದಿಂದ ಮದುವೆಯನ್ನು ರಾಮನಗರದಿಂದ ಬೆಂಗಳೂರಿಗೆ ಸ್ಥಳಾಂತರಿಸಲಾಗಿತ್ತು. ಕುಮಾರಸ್ವಾಮಿ ಅಥವಾ ರೇವತಿ ಅವರ ಮನೆಯಲ್ಲಿ ಮದುವೆ ಮುಗಿಸಲು ಉದ್ದೇಶಿಸಲಾಗಿತ್ತು. ಆದರೆ ಕುಮಾರಸ್ವಾಮಿ ತಮ್ಮ ರಾಮನಗರ ಸೆಂಟಿಮೆಂಟ್ನಿಂದ ಹೊರಬರಲು ಒಪ್ಪಿಕೊಂಡಿಲ್ಲ ಎನ್ನಲಾಗಿದೆ. ಮುಂದೆ ಓದಿ.

ಅದ್ಧೂರಿ ತಯಾರಿ ನಡೆಸಲಾಗಿತ್ತು
ಕುಮಾರಸ್ವಾಮಿ ಆಸೆಯಂತೆ ಕರ್ಮಭೂಮಿ ರಾಮನಗರದಲ್ಲೇ ಅವರ ಮಗ ನಿಖಿಲ್ ವಿವಾಹ ನಡೆಸಲು ತೀರ್ಮಾನಿಸಿದ್ದಾರೆ. ಈ ಹಿಂದೆ ರಾಮನಗರದ ಜಾನಪದಲೋಕದ ಬಳಿ ಕಲ್ಯಾಣಕ್ಕೆ ಅದ್ಧೂರಿ ಸಿದ್ಧತೆಗಳು ನಡೆದಿದ್ದವು. ಅದಕ್ಕಾಗಿ ಸಪ್ತಪದಿ ಮಂಟಪವನ್ನು ಸಿದ್ಧಪಡಿಸಲಾಗುತ್ತಿತ್ತು. ಆದರೆ ಕೊರೊನಾ ವೈರಸ್ ಕಾರಣದಿಂದ ಮದುವೆ ಸ್ಥಳಾಂತರವಾಗಿತ್ತು. ಆದರೆ ಸ್ಥಳ ನಿಗದಿಯಾಗಿರಲಿಲ್ಲ.

ಆಪ್ತ ಸಂಬಂಧಿಕರಿಗೆ ಮಾತ್ರ ಆಹ್ವಾನ
ಈ ಮೊದಲು ಹರದನಹಳ್ಳಿಯ ದೇವಾಲಯದಲ್ಲಿ ಮದುವೆ ಮಾಡಲು ನಿಶ್ಚಯಿಸಲಾಗಿತ್ತು. ನಂತರ ವಧು ರೇವತಿಯವರ ಮನೆಯಲ್ಲಿಯೇ ವಿವಾಹವೆಂದು ಹೇಳಲಾಗಿತ್ತು. ಲಾಕ್ಡೌನ್ ಕಾರಣದಿಂದ ನಿಖಿಲ್ ಮದುವೆಗೆ ಕೆಲವೇ ಆಪ್ತ ಸಂಬಂಧಿಕರಿಗೆ ಮಾತ್ರವೇ ಮದುವೆ ಸೀಮಿತಗೊಳಿಸಲಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದರು.

ರಾಮನಗರದಲ್ಲಿಯೇ ಮದುವೆ?
ಆದರೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ರಾಜಕೀಯ ಕರ್ಮಭೂಮಿ ರಾಮನಗರದೊಂದಿಗಿನ ಸೆಂಟಿಮೆಂಟ್ ಬಿಡಲು ಸಿದ್ಧರಾಗಿಲ್ಲ. ಹೀಗಾಗಿ ರಾಮನಗರದ ಪುಣ್ಯಭೂಮಿಯಲ್ಲೇ ಮದುವೆ ಎಂದು ನಿಶ್ಚಯಿಸಿದ್ದಾರೆ.
ರಾಮನಗರದಲ್ಲಿ ಸರಿ, ಆದರೆ ಮದುವೆ ನಡೆಯುವ ಕಲ್ಯಾಣ ಮಂಟಪ ಯಾವುದು? ಅದನ್ನೂ ಎಚ್ಡಿಕೆ ಗೋಪ್ಯವಾಗಿ ಇಟ್ಟಿದ್ದಾರೆ.

ತೋಟದ ಮನೆಯಲ್ಲಿ ಮದುವೆ
ಮೂಲಗಳ ಪ್ರಕಾರ, ನಿಖಿಲ್ ಮದುವೆಯನ್ನ ತಮ್ಮ ಅದೃಷ್ಟದ ತೋಟ ಎಂದೇ ಪರಿಗಣಿಸಿರುವ ಬಿಡದಿಯ ಕೇತಿಗನಹಳ್ಳಿ ತೋಟದ ಮನೆಯಲ್ಲಿಯೇ ಸರಳವಾಗಿ ನೆರವೇರಿಸಲು ಕುಮಾರಸ್ವಾಮಿ ತೀರ್ಮಾನಿಸಿದ್ದಾರೆ. ಮದುವೆ ಕೇತಿಗನಹಳ್ಳಿ ತೋಟದಲ್ಲಿ ನಡೆಯೋದು ವಿಷಯ ಬಹಿರಂಗವಾದರೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು, ಮುಖಂಡರು ಬರುತ್ತಾರೆಂಬ ಕಾರಣಕ್ಕೆ ಅವರು ಈ ಬಗ್ಗೆ ರಹಸ್ಯ ಕಾಯ್ದುಕೊಂಡಿದ್ದಾರೆ.

ಎರಡೂ ಕುಟುಂಬದ 60 ಮಂದಿ ಭಾಗಿ
ಕೊರೊನಾ ವೈರಸ್ ಲಾಕ್ಡೌನ್ ಇರುವುದರಿಂದ ನಿಖಿಲ್ ಕಲ್ಯಾಣಕ್ಕೆ ಕೆಲವೇ ಆಪ್ತ ಸಂಬಂಧಿಕರನ್ನ ಹೊರತುಪಡಿಸಿ ಬೇರೆಯವರಿಗೆ ಕಡ್ಡಾಯವಾಗಿ ಪ್ರವೇಶವಿಲ್ಲ ಎಂದು ತಿಳಿದುಬಂದಿದೆ. ಮದುವೆಗೆ ಹೆಚ್ಡಿಕೆ ಕುಟುಂಬದ 30 ಮಂದಿ ಮತ್ತು ರೇವತಿ ಕುಟುಂಬದಿಂದ 30 ಮಂದಿಗೆ ಮಾತ್ರ ಅವಕಾಶವಿದೆ.

ಶುಕ್ರವಾರ ಬೆಳಿಗ್ಗೆ ಮುಹೂರ್ತ
ಅರಿಶಿನದ ಶಾಸ್ತ್ರ ವಧು-ವರರ ಮನೆಯಲ್ಲಿ ಗುರುವಾರ ನಡೆಯಲಿದೆ. ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಆರಂಭವಾಗುವ ಸಮಾರಂಭದಲ್ಲಿ ಖ್ಯಾತ ಆಗಮಿಕರ ನೇತೃತ್ವದಲ್ಲಿ ನಿಖಿಲ್-ರೇವತಿ ಸಪ್ತಪದಿ ತುಳಿಯಲಿದ್ದಾರೆ. ಮದುವೆಯ ಶಾಸ್ತ್ರ ಸಂಪ್ರದಾಯಗಳು ಮುಗಿದ ನಂತರ ಸೊಸೆ ರೇವತಿಯನ್ನ ಶುಭಶುಕ್ರವಾರವೇ ಕುಮಾರಸ್ವಾಮಿ ದಂಪತಿ ಮನೆಗೆ ತುಂಬಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಪೊಲೀಸ್ ಇಲಾಖೆಗೆ ಮಾಹಿತಿ
ಮದುವೆಗೆ ಕುಮಾರಸ್ವಾಮಿ ಅವರ ಅತಿ ಆಪ್ತ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಕೂಡ ಆಹ್ವಾನ ನೀಡಲಾಗಿಲ್ಲ. ಪೊಲೀಸ್ ಇಲಾಖೆಗೂ ಈಗಾಗಲೇ ಮಾಹಿತಿಯನ್ನ ಹೆಚ್ಡಿಕೆ ನೀಡಿದ್ದಾರೆಂದು ತಿಳಿದುಬಂದಿದೆ. ಮದುವೆ ಸ್ಥಳಕ್ಕೆ ಬಾರದಂತೆ ಅಭಿಮಾನಿಗಳು, ಕಾರ್ಯಕರ್ತರು, ಮುಖಂಡರು, ಮಾಧ್ಯಮದವರಿಗೆ ಈಗಾಗಲೇ ಹೆಚ್ಡಿಕೆ ಮನವಿ ಮಾಡಿದ್ದಾರೆ. ನಿಖಿಲ್ ಮದುವೆಯ ಫೋಟೋ ಮತ್ತು ವಿಡಿಯೋಗಳನ್ನ ಮಾಧ್ಯಮಗಳಿಗೆ ತಲುಪಿಸಲಾಗುವುದು ಎಂದು ಹೇಳಲಾಗಿದೆ.


Click it and Unblock the Notifications











