ನಿಖಿತಾ, ಮಂಜು ಇವರಲ್ಲಿ ಸುಳ್ಳು ಹೇಳಿದ್ದು ಯಾರು?
ಇದೀಗ ಬಂದ ವರ್ತಮಾನದ ಪ್ರಕಾರ, ನಿಖಿತಾಗೆ ನಿರ್ಮಾಪಕರಿಂದ ಬಂದಿರುವ ಸಂಭಾವನೆ ಚುಕ್ತಾ ಆಗಿದೆ. ಇದನ್ನು ಗೌರಿಪುತ್ರ ಚಿತ್ರದಲ್ಲಿ ನಾಯಕರಾಗಿ ನಟಿಸಿರುವ ಅಕ್ಷಯ್ (ನಿರ್ಮಾಪಕರ ಪುತ್ರ) ಮಾಧ್ಯಮಕ್ಕೆ ಸ್ಪಷ್ಟಪಡಿಸಿದ್ದಾರೆ. ಅಷ್ಟಕ್ಕೂ ಸಂಭಾವನೆ ಕೊಡಬೇಕಾಗಿದ್ದವರು ನಿರ್ದೇಶಕ ಮಂಜು ಮಸ್ಕಲ್ ಮಟ್ಟಿ ಅಲ್ಲವಲ್ಲ! ಆದರೂ ನಿಖಿತಾ ಸುಳ್ಳೇಕೆ ಹೇಳಿದರು ಎಂಬುದೀಗ ಎಲ್ಲರ ಪ್ರಶ್ನೆ!
ಅಕ್ಷಯ್ ಹೇಳುವುದು ಹೀಗೆ "ಚಿತ್ರಕ್ಕೆ ನಿಖಿತಾರಿಗೆ ಕೊಡಬೇಕಾದ ಸಂಭಾವನೆಯಲ್ಲಿ ಬಾಕಿ ಉಳಿಸಿಕೊಂಡಿಲ್ಲ. ನನ್ನ ಕಣ್ಣ ಮುಂದೆಯೇ ಚುಕ್ತಾ ಆಗಿದೆ." ಹಾಗಾದರೆ ನಿಖಿತಾ ಯಾಕೆ ಸುಳ್ಳು ಹೇಳಿ ಮಾಧ್ಯಮದ ಮುಂದೆ ಕಣ್ಣೀರು ಹಾಕಿದ್ದಾರೆ ಎಂಬ ಪ್ರಶ್ನೆಗೆ ಅಕ್ಷಯ್ "ಕೊಟ್ಟಾಗಿದೆ, ಅವರು ಯಾಕೆ ಸುಳ್ಳು ಹೇಳಿದ್ದಾರೆ ಎಂಬುದನ್ನು ಅವರನ್ನೇ ಕೇಳಬೇಕು" ಎಂದಿದ್ದಾರೆ. ಆದರೆ ಅದಕ್ಕುತ್ತರವನ್ನು ನಿರ್ದೇಶಕ ಮಂಜು ಮಸ್ಕಲ್ ಮಟ್ಟಿ ನೀಡಿದ್ದಾರೆ.
"ನಿರ್ಮಾಪಕರಿಂದ ನಿಖಿತಾಗೆ ಪೂರ್ತಿ ಸಂಭಾವನೆ ಸಂದಿದೆ. ಆದರೆ ಅದನ್ನು ಅಗ್ರಿಮೆಂಟ್ ನಲ್ಲಿ ನಮೂದಿಸಿಲ್ಲ. ಅಷ್ಟೇ ಅಲ್ಲ, ಈ ಸಂಬಂಧ ಯಾವುದೇ ಪೇಪರ್ ನಲ್ಲಿ ಸಹಿ ಹಾಕಿಸಿಕೊಂಡಿಲ್ಲ. ಇದನ್ನೇ ನಿಖಿತಾ ದುರುಪಯೋಗ ಪಡಿಸಿಕೊಂಡಿದ್ದಾರೆ. ಸಂಭಾವನೆ ಕೊಟ್ಟಿಲ್ಲ ಎಂದು ವಾದ ಮಾಡಿ ಎಲ್ಲರ ಅನುಕಂಪ ಗಿಟ್ಟಿಸಿದ್ದಾರೆ. ಈ ರೀತಿ ಹೇಳಿಕೊಂಡಿದ್ದಷ್ಟೇ ಅಲ್ಲ, ಪ್ರಚಾರಕ್ಕೂ ಬರದೇ ಚಿತ್ರಕ್ಕೆ ಅನ್ಯಾಯ ಮಾಡಿದ್ದಾರೆ" ಎಂದಿದ್ದಾರೆ ಮಂಜು ಮಸ್ಕಲ್ ಮಟ್ಟಿ.
ಈ ಬಗ್ಗೆ ನಿಖಿತಾರನ್ನು ಮತ್ತೆ ಪ್ರಶ್ನಿಸಿದರೆ, "ನನಗೆ ಪೂರ್ಣ ಸಂಭಾವನೆ ಚುಕ್ತಾ ಆಗಿಲ್ಲ, ಭರವಸೆ ನೀಡಿದಷ್ಟು ಕೊಡದೇ ಅರ್ಧ ಸಂಭಾವನೆ ನೀಡಿದ್ದಾರೆ. ನಿಮಗೆ ಇನ್ನೂ ನಂಬಿಕೆ ಬರದಿದ್ದರೆ ರಾಕ್ಲೈನ್ ವೆಂಕಟೇಶ್ ಅವರನ್ನು ಕೇಳಿ ಕನ್ಫರ್ಮ್ ಮಾಡ್ಕೊಳ್ಳಿ. ನಾನು ಹಾಗೆಲ್ಲಾ ಸುಳ್ಳು ಹೇಳುವವಳಲ್ಲ. ನನ್ನ ಚಿತ್ರದ ನಿರ್ಮಾಪಕರಿಗೆ ನಾನು ಅನ್ಯಾಯ ಮಾಡುವುದಿಲ್ಲ" ಎಂದಿದ್ದಾರೆ. ಯಾರದು ಸುಳ್ಳು, ಯಾರದು ಸತ್ಯ! (ಒನ್ ಇಂಡಿಯಾ ಕನ್ನಡ)


Click it and Unblock the Notifications












