ಮತ್ತೊಂದು ಕ್ರೇಜಿ ಪ್ರಾಜೆಕ್ಟ್ನಿಂದ ಹೊರಬಂದ ಪೂಜಾ ಹೆಗ್ಡೆ? ಅಭಿಮಾನಿಗಳಿಗೆ ಬೇಸರ!
ಮುಂಬೈ ಬೆಡಗಿ ಪೂಜಾ ಹೆಗ್ಡೆ ನಸೀಬೇ ಚೆನ್ನಾಗಿಲ್ಲ ಅನ್ನಿಸ್ತಿದೆ. ಚಿತ್ರರಂಗಕ್ಕೆ ಬಂದ ಆರಂಭದಲ್ಲೇ ಐರೆನ್ ಲೆಗ್ ಎನ್ನುವ ಹಣೆಪಟ್ಟಿ ಸಿಕ್ಕಿತ್ತು. ಇದ್ದಕ್ಕಿಂತಕ್ಕೆ ಹಿಟ್ ಸಿನಿಮಾಗಳನ್ನು ಕೊಟ್ಟು ಆ ಹಣೆಪಟ್ಟಿ ಕಳಚಿದ್ದರು. ಮತ್ತೆ ಪೂಜಾಗೆ ಸಾಲು ಸಾಲು ಸೋಲು ಎದುರಾಗುತ್ತಿದೆ.
ಪೂಜಾ ಹೆಗ್ಡೆ ನಟನೆಯ 'ರಾಧೆಶ್ಯಾಮ್', 'ಬೀಸ್ಟ್' ಹಾಗೂ 'ಆಚಾರ್ಯ' ಸಿನಿಮಾ ಬಾಕ್ಸಾಫೀಸ್ನಲ್ಲಿ ಮುಗ್ಗರಿಸಿವೆ. ವಿಜಯ್ ದೇವರಕೊಂಡ ನಟನೆಯ 'ಜನ ಗಣ ಮನ' ಚಿತ್ರಕ್ಕೆ ಪೂಜಾ ನಾಯಕಿಯಾಗಿ ಆಯ್ಕೆ ಆಗಿದ್ದರು. ಆದರೆ ಈ ಸಿನಿಮಾ ಸಿದ್ಧವಾಗೋದೇ ಅನುಮಾನ ಎನ್ನುವಂತಾಗಿದೆ. ಇದೇ ಸಮಯದಲ್ಲಿ ಪವನ್ ಕಲ್ಯಾಣ್ ನಟನೆಯ 'ಉಸ್ತಾದ್ ಭಗತ್ ಸಿಂಗ್' ಚಿತ್ರದಿಂದಲೂ ಪೂಜಾ ಹೊರಬಂದಿದ್ದಾರೆ ಎನ್ನಲಾಗ್ತಿದೆ.
ಇತ್ತೀಚೆಗೆ ಹೈದರಾಬಾದ್ನಲ್ಲಿ 'ಉಸ್ತಾದ್ ಭಗತ್ ಸಿಂಗ್' ಚಿತ್ರಕ್ಕೆ ಮುಹೂರ್ತ ನೆರವೇರಿಸಿ, ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿತ್ತು. ಹರೀಶ್ ಶಂಕರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಾಮಾನಾಯ್ಡು ಸ್ಟುಡಿಯೋದಲ್ಲಿ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗುತ್ತಿದೆ. ಇನ್ನು 1 ವಾರ ಚಿತ್ರೀಕರಣ ಮುಂದುವರೆಯಲಿದೆ. ಆದರೆ ಈ ಚಿತ್ರದಲ್ಲಿ ಪೂಜಾ ಹೆಗ್ಡೆ ನಟಿಸುತ್ತಿಲ್ಲ ಎನ್ನುವ ಗುಸುಗುಸು ಶುರುವಾಗಿದೆ. ಬಹಳ ಹಿಂದೆಯೇ 'ಭವದೀಯುಡು ಭಗತ್ ಸಿಂಗ್' ಹೆಸರಿನಲ್ಲಿ ಈ ಸಿನಿಮಾ ಘೋಷಣೆ ಆಗಿತ್ತು. ಆದರೆ ಕಾರಣಾಂತರಗಳಿಂದ ಸೆಟ್ಟೇರುವುದು ತಡವಾಗಿತ್ತು.

ಸಿನಿಮಾ ಘೋಷಣೆ ಆದ ಸಮಯದಲ್ಲೇ ಪೂಜಾ ಹೆಗ್ಡೆ ನಾಯಕಿ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಈ ಸಿನಿಮಾ ಸೆಟ್ಟೇರಿದ ಮೇಲೆ ಆಕೆ ಚಿತ್ರದಲ್ಲಿ ನಟಿಸೋದು ಗ್ಯಾರೆಂಟಿ ಇಲ್ಲ ಎನ್ನಲಾಗ್ತಿದೆ. ಬೇರೆ ಸಿನಿಮಾಗಳಲ್ಲಿ ಬ್ಯುಸಿ ಇರುವುದರಿಂದ ಪೂಜಾ ಈ ಚಿತ್ರದಲ್ಲಿ ನಟಿಸೋಕೆ ಸಾಧ್ಯವಾಗುತ್ತಿಲ್ಲವಂತೆ. ಸದ್ಯ ಈಕೆ ನಟಿಸಿರುವ 'ಸರ್ಕಸ್' ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ಸಲ್ಮಾನ್ ಖಾನ್ ಜೋಡಿಯಾಗಿ 'ಕಿಸಿ ಕಾ ಭಾಯ್ ಕಿಸಿ ಕಾ ಜಾನ್' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
ಮಹೇಶ್ ಬಾಬು, ತ್ರಿವಿಕ್ರಮ್ ಸಿನಿಮಾದಲ್ಲೂ ಪೂಜಾ ನಟಿಸ್ತಿದ್ದಾರೆ. ಆದರೆ 'ಉಸ್ತಾದ್ ಭಗತ್ ಸಿಂಗ್' ಚಿತ್ರದಲ್ಲಿ ನಟಿಸೋದು ಕನ್ಫರ್ಮ್ ಇಲ್ಲ ಎನ್ನುವ ಗುಸುಗುಸು ಶುರುವಾಗಿದೆ. ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಮಾಹಿತಿ ಸಿಗಲಿದೆ. ಅಂದ ಹಾಗೆ 'ಉಸ್ತಾದ್ ಭಗತ್ ಸಿಂಗ್' ತಮಿಳಿನ 'ತೆರಿ' ರೀಮೆಕ್ ಎನ್ನಲಾಗುತ್ತಿದೆ.


Click it and Unblock the Notifications











