'ಆದಿಪುರುಷ್' ಅವಘಡ: ದೇವರ ಮೊರೆ ಹೋದ ಚಿತ್ರತಂಡ!
ಪ್ರಭಾಸ್ ನಟಿಸುತ್ತಿರುವ ಭಾರತದ ಅತಿದೊಡ್ಡ ಬಿಗ್ ಬಜೆಟ್ ಸಿನಿಮಾ 'ಆದಿಪುರುಷ್'ಗೆ ಸತತ ಅವಘಡಗಳು ಎದುರಾಗುತ್ತಲೇ ಇವೆ.
ಮೊದಲಿಗೆ 'ಆದಿಪುರುಷ್' ಸಿನಿಮಾ ನಿಗದಿತ ಸಮಯಕ್ಕೆ ಪ್ರಾಂಭವಾಗಲಿಲ್ಲ. ಕೊರೊನಾ ಮೊದಲ ಅಲೆಯಿಂದಾಗಿ ಸಿನಿಮಾ ಅಂದುಕೊಂಡಿದ್ದಕ್ಕಿಂತಲೂ ಬಹಳ ತಡವಾಗಿ ಪ್ರಾರಂಭವಾಯ್ತು.
ಚಿತ್ರೀಕರಣ ಪ್ರಾರಂಭವಾದ ಕೆಲವೇ ದಿನಕ್ಕೆ ಕೋಟ್ಯಂತರ ಹಣ ಹೂಡಿ ಮುಂಬೈನಲ್ಲಿ ನಿರ್ಮಿಸಲಾಗಿದ್ದ ಸಿನಿಮಾದ ಸೆಟ್ ಪೂರ್ಣವಾಗಿ ಬೆಂಕಿಗೆ ಆಹುತಿಯಾಯಿತು. ಇದು ಚಿತ್ರತಂಡಕ್ಕೆ ಬಹಳ ದೊಡ್ಡ ಆಘಾತವನ್ನೇ ತಂದಿತು.
ಇದೀಗ ಬರುತ್ತಿರುವ ಸುದ್ದಿಯೆಂದರೆ ಪ್ರಭಾಸ್ ಹಾಗೂ 'ಆದಿಪುರುಷ್' ಸಿನಿಮಾ ನಿರ್ದೇಶಕ ಓಂ ರಾವತ್ ನಡುವೆ ಅಭಿಪ್ರಾಯ ಭೇದಗಳು ಉಂಟಾಗಿವೆಯಂತೆ. ಮುಂಬೈನಲ್ಲಿ ಸೆಟ್ ಸುಟ್ಟುಹೋದ ಬಳಿಕ ಅದೇ ಸೆಟ್ ಅನ್ನು ಹೈದರಾಬಾದ್ನಲ್ಲಿ ಹಾಕಬೇಕು ಎಂಬುದು ಪ್ರಭಾಸ್ ಒತ್ತಾಯ. ಆದರೆ ಇದಕ್ಕೆ ಓಂ ರಾವತ್ ಒಪ್ಪಿಲ್ಲ.

ಸೆಟ್ ಹಾಕುವ ವಿಷಯಕ್ಕೆ ಭಿನ್ನಾಭಿಪ್ರಾಯ
ಮುಂಬೈನಲ್ಲಿ ಸೆಟ್ ಹಾಕುವ ಮುನ್ನವೇ ಪ್ರಭಾಸ್ ಅವರು ಸೆಟ್ ಅನ್ನು ಹೈದರಾಬಾದ್ನಲ್ಲಿ ಹಾಕುವಂತೆ ಸೂಚಿಸಿದ್ದರು. ಆದರೆ 'ಆದಿಪುರುಷ್' ಸಿನಿಮಾದಲ್ಲಿ ನಟಿಸುತ್ತಿರುವ ಬಹುತೇಕ ಕಲಾವಿದರು, ತಂತ್ರಜ್ಞರು ಮುಂಬೈನವರೇ ಆಗಿರುವ ಕಾರಣ ಸೆಟ್ ಅನ್ನು ಮುಂಬೈನಲ್ಲಿಯೇ ಹಾಕಿಸಿದ್ದರು ಓಂ ರಾವತ್. ದುರಾದೃಷ್ಟವಶಾತ್ ಆ ಸೆಟ್ ಬೆಂಕಿಗೆ ಆಹುತಿಯಾಯಿತು. ಈಗ ಮತ್ತೆ ಅದೇ ಬೇಡಿಕೆಯನ್ನು ಮುಂದಿಟ್ಟಿದ್ದಾರೆ ಪ್ರಭಾಸ್, ಈ ಬಾರಿಯೂ ಓಮ್ ರಾವತ್ ಇದಕ್ಕೆ ಒಪ್ಪಿಲ್ಲ.

ಕೊರೊನಾ ಎರಡನೇ ಅಲೆ ಅಪ್ಪಳಿಸಿತು
ಬೆಂಕಿ ಅವಘಡದ ನಂತರವೂ ಚಿತ್ರೀಕರಣ ಸುಗಮವಾಗಿ ಮುಂದುವರೆಯಲಿಲ್ಲ. ಹೊಸ ಸೆಟ್ ಹಾಕುವ ವೇಳೆಗಾಗಲೆ ಕೊರೊನಾ ಎರಡನೇ ಅಲೆ ಅಪ್ಪಳಿಸಿತು. ಚಿತ್ರೀಕರಣ ಮತ್ತೆ ಅನಿರ್ದಿಷ್ಟಾವದಿಗೆ ಮುಂದೂಡಲಾಯಿತು. ಇದು ಸಹ ಚಿತ್ರತಂಡಕ್ಕೆ ದೊಡ್ಡ ಹಿನ್ನಡೆ.

ಜೋತಿಷಿ ಸಲಹೆ ಪಡೆದಿರುವ ಭೂಷಣ್ ಕುಮಾರ್?
ರಾಮಾಯಣದ ಕತೆ ಆಧರಿಸಿ ಮಾಡಲಾಗುತ್ತಿರುವ ಸಿನಿಮಾ 'ಆದಿಪುರುಷ್' ಆದ್ದರಿಂದ ಈ ರೀತಿಯ ಅವಘಡಗಳನ್ನು ಚಿತ್ರತಂಡ, ವಿಶೇಷವಾಗಿ ನಿರ್ಮಾಪಕ ಭೂಷಣ್ ಕುಮಾರ್ ಅವರು ಗಂಭೀರವಾಗಿ ಪರಿಗಣಿಸಿದ್ದು ದೇವರ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ಜ್ಯೋತಿಷಿ ಒಬ್ಬರ ಸಲಹೆ ಪಡೆದಿರುವ ಭೂಷಣ್ ಕುಮಾರ್, ಚಿತ್ರದ ಭಾಗವಾಗಿರುವ ಪ್ರಮುಖರನ್ನು ಸೇರಿಸಿ ಹೋಮ ಮಾಡಿಸಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.

'ಸಲಾರ್' ಸೆಟ್ನಲ್ಲಿಯೂ ಅವಘಡ
'ಆದಿಪುರುಷ್' ಸಿನಿಮಾದ ಸೆಟ್ನಲ್ಲಿ ಬೆಂಕಿ ಅವಘಡ ಸಂಭವಿಸಿದ ಮಾರನೇಯ ದಿನವೇ ಪ್ರಭಾಸ್ ನಟಿಸುತ್ತಿರುವ ತೆಲುಗು ಸಿನಿಮಾ 'ಸಲಾರ್'ನ ಸೆಟ್ನಲ್ಲಿಯೂ ಅವಘಡವೊಂದು ಸಂಭವಿಸಿತು. ಚಿತ್ರೀಕರಣ ಮುಗಿಸಿ ಹೋಟೆಲ್ಗೆ ವಾಪಸ್ಸಾಗುತ್ತಿದ್ದ ಕಲಾವಿದ, ತಂತ್ರಜ್ಞರಿದ್ದ ವಾಹನ ಅಪಘಾತಕ್ಕೆ ಈಡಾಗಿ ಹಲವರು ಗಾಯಗೊಂಡರು.

ಒಟ್ಟಿಗೆ ಎರಡು ಸಿನಿಮಾದಲ್ಲಿ ನಟಿಸುತ್ತಿರುವ ಪ್ರಭಾಸ್
ಈ ವೇಳೆಗಾಗಲೆ ಬಿಡುಗಡೆ ಆಗಿರಬೇಕಿದ್ದ ಪ್ರಭಾಸ್ ನಟನೆಯ 'ರಾಧೆ-ಶ್ಯಾಮ್' ಸಿನಿಮಾ ಕೊರೊನಾ ಕಾರಣಕ್ಕೆ ಮುಂದಕ್ಕೆ ಹೋಗಿದೆ. ರಾಮಾಯಣ ಕತೆ ಆಧರಿತ 'ಆದಿಪುರುಷ್' ಸಿನಿಮಾದಲ್ಲಿ ನಟಿಸುತ್ತಿರುವ ಪ್ರಭಾಸ್ ಅದರ ಜೊತೆಗೆ ಕನ್ನಡಿಗ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಈ ಸಿನಿಮಾಕ್ಕೆ ಶ್ರುತಿ ಹಾಸನ್ ನಾಯಕಿ. ಈ ಸಿನಿಮಾದ ಬಳಿಕ ನಾಗ್ ಅಶ್ವಿನ್ ನಿರ್ದೇಶನದ ಸಿನಿಮಾದಲ್ಲಿ ಪ್ರಭಾಸ್ ನಟಿಸಲಿದ್ದಾರೆ. ಆ ಸಿನಿಮಾಕ್ಕೆ ದೀಪಿಕಾ ಪಡುಕೋಣೆ ನಾಯಕಿ.


Click it and Unblock the Notifications











