ಶ್ರೀದೇವಿ, ಬೋನಿ ಕಪೂರ್ ಗೆ ಪೂಜಾರಿ ಬೆದರಿಕೆ
ಬಾಲಿವುಡ್ ನ ಖ್ಯಾತ ಚಿತ್ರ ನಿರ್ಮಾಪಕ ಬೋನಿ ಕಪೂರ್ ಹಾಗೂ ಚಿರ ಯೌವ್ವನೆ ಶ್ರೀದೇವಿಅವರಿಗೆ ಭೂಗತ ಪಾತಕಿ ರವಿ ಪೂಜಾರಿ ಜೀವಬೆದರಿಕೆ ಹಾಕಿದ್ದಾನೆ. ಬೆದರಿಕೆ ಕರೆ ಬಂದಿರುವುದು ರವಿ ಪೂಜಾರಿ ಗ್ಯಾಂಗ್ ನಿಂದ ಎಂಬುದು ದೃಢಪಟ್ಟಿದೆ. ಆದರೆ, ಸ್ವತಃ ರವಿ ಪೂಜಾರಿಯೇ ಕರೆ ಮಾಡಿದ್ದನಾ? ಅಥವಾ ಅವನ ಗ್ಯಾಂಗ್ ನ ಸದಸ್ಯರು ಮಾಡಿದ್ದರಾ? ಇನ್ನೂ ಸ್ಪಷ್ಟವಾಗಬೇಕಿದೆ.
ನಿರ್ಮಾಪಕ ಬೋನಿ ಕಪೂರ್ ಅವರಿಗೆ ಅಂತಾರಾಷ್ಟ್ರೀಯ ಕರೆ ಮಾಡಿರುವ ರವಿ ಪೂಜಾರಿ ತನಗೆ ಹಣ ನೀಡುವಂತೆ ಒತ್ತಾಯ ಮಾಡಿದ್ದಾನೆ. ಒಂದು ವೇಳೆ ಹಣ ನೀಡದಿದ್ದರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದಾನೆ ಮೂಲಗಳು ತಿಳಿಸಿವೆ. ಸುಮಾರು ಮೂರು ನಿಮಿಷಕ್ಕೂ ಹೆಚ್ಚು ಕಾಲ ರವಿ ಪೂಜಾರಿ ಬೋನಿ ಕಪೂರ್ ಜತೆ ಮಾತನಾಡಿ, ಹಣ ಬೇಡಿಕೆ ಮುಂದಿಟ್ಟಿದ್ದಾನೆ.
ಹಣ ನೀಡಲು ಮೀನಾಮೇಷ ಎಣಿಸಿದರೆ ಪತಿ, ಶ್ರೀದೇವಿ ಮತ್ತು ಮಕ್ಕಳನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನಂತೆ. ಬೆದರಿಕೆ ಕರೆ ಮಾಡಿರುವ ವಿಷಯವನ್ನು ಪೊಲೀಸರಿಗೆ ತಿಳಿಸಿದರೆ ಇಡೀ ಕುಟುಂಬವೇ ನಿರ್ನಾಮವಾಗಲಿದೆ. ಮುಂಬೈನಲ್ಲಿರುವ ತಮ್ಮ ಸಹಚರರು ಯಾವುದೇ ವೇಳೆ ದಾಳಿ ನಡೆಸಲಿದ್ದಾರೆ ಎಂದು ಎಚ್ಚರಿಸಿದ್ದಾನೆ.

ಈ ಸಂಬಂಧ ಮುಂಬೈನ ಓಶಿವಾರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಭೂಗತ ಪಾತಕಿಗಳಿಂದ ಕೊಲೆ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಬೋನಿಕಪೂರ್ ಮತ್ತು ಅವರ ಕುಟುಂಬಕ್ಕೆ ಹೆಚ್ಚಿನ ರಕ್ಷಣೆ ಒದಗಿಸಲು ಪೊಲೀಸರು ತೀರ್ಮಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳುವ ಮುನ್ನ ಕರೆಯ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.
ಕಳೆದ ವರ್ಷ ಕಪೂರ್ ಮನೆಯಲ್ಲಿ 6 ಲಕ್ಷ ರು.ಗೂ ಅಧಿಕ ಮೌಲ್ಯದ ಬೆಲೆ ಬಾಳುವ ವಸ್ತುಗಳು ಕಳುವಾಗಿತ್ತು. ಈ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಈಗ ಕಳ್ಳರ ಕಡೆಯವರು ಭೂಗತ ಪಾತಕಿಗಳ ನೆರವು ಪಡೆದು ಬೆದರಿಕೆ ಕರೆ ಮಾಡಿರುವ ಶಂಕೆ ಕೂಡಾ ವ್ಯಕ್ತವಾಗಿದೆ. ಒಟ್ಟಾರೆ, ಬಾಲಿವುಡ್ ಗೂ ಭೂಗತ ಜಗತ್ತಿಗೂ ಇರುವ ಅನೈತಿಕ ಸಂಬಂಧ ಹಾಗೂ ಕಿತ್ತಾಟದ ಅಧ್ಯಾಯ ಮತ್ತೆ ಆರಂಭವಾದ ಹಾಗೆ ಕಾಣುತ್ತದೆ.


Click it and Unblock the Notifications











