ರಾಧಿಕಾ ಪಂಡಿತ್ ಮೇಲೆ ಬೆಂಕೋಶ್ರೀ ಬೆಂಕಿ ಬಿರುಗಾಳಿ
ಬಾಕ್ಸ್ ಆಫೀಸ್ ವರದಿಯ ಪ್ರಕಾರ ಈ ಚಿತ್ರ ಸೋತಿಲ್ಲ. ತೀರಾ ಸೂಪರ್ ಹಿಟ್ ಕೂಡ ಅಲ್ಲ. ಆದರೆ ಬೆಂಕೋಶ್ರೀ ನಿರೀಕ್ಷೆ ಅದೆಷ್ಟಿತ್ತೋ ಏನೋ! "ಚಿತ್ರದ ನಾಯಕಿ ರಾಧಿಕಾ ಪಂಡಿತ್ ಪ್ರಚಾರಕ್ಕೆ ಸರಿಯಾಗಿ ಬರಲಿಲ್ಲ" ಎಂದು ಬೆಂಕೋಶ್ರೀ ಆಪಾದಿಸಿದ್ದಾರೆ. ಅಂದಹಾಗೆ, ಸಂತು ನಿರ್ದೇಶನದ ಈ ಚಿತ್ರದ ನಾಯಕರು ಲೂಸ್ ಮಾದ ಯೋಗೇಶ್.
"ರಾಧಿಕಾ ಪಂಡಿತ್ ಸರಿಯಾಗಿ ಪ್ರಚಾರಕ್ಕೆ ಬಂದಿದ್ದರೆ ಚಿತ್ರ ಇನ್ನೂ ಚೆನ್ನಾಗಿ ಓಡಿರುತ್ತಿತ್ತು. ಆದರೆ ರಾಧಿಕಾ ತಮ್ಮ ಚಿತ್ರವನ್ನು ಮೂಲೆಗುಂಪು ಮಾಡಿ ಯೋಗರಾಜ ಭಟ್ಟರ 'ಡ್ರಾಮಾ' ಕಡೆ ಹೆಚ್ಚು ಉತ್ಸುಕತೆ ತೋರಿಸಿ ನಮ್ಮ ಚಿತ್ರದ ಪ್ರಚಾರಕಾರ್ಯಕ್ಕೆ ತಾತ್ಸಾರ ತಾಳಿದರು" ಎಂದು ಅವರು ದೂರಿದ್ದಾರೆ.
ಆದರೆ ಅದಕ್ಕೆ ರಾಧಿಕಾ ಕೂಲ್ ಆಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. "ನಾನು ಪ್ರಚಾರಕ್ಕೆ ಹೋಗಿದ್ದೆ. ನಾನು ನಟಿಸಿದ ಎಲ್ಲಾ ಚಿತ್ರಗಳ ಪ್ರಚಾರಕ್ಕೂ ಹೋಗುತ್ತೇನೆ. ಮೊದಲು ಮಾತನಾಡಿದಂತೆ ಇಷ್ಟು ದಿನವೂ ನಡೆದುಕೊಂಡಿದ್ದೇನೆ. 'ಅಲೆಮಾರಿ'ಗೂ ಮಾತನಾಡಿದಂತೆ ತುಂಬಾ ದಿನ ಪ್ರಚಾರಕ್ಕೆ ಹೋಗಿದ್ದೇನೆ.
ಟಿವಿ ಚಾನೆಲ್ಲುಗಳಿಗೆ ಹೋಗಿ ಸಂದರ್ಶನ ಕೊಟ್ಟಿದ್ದೇನೆ. ತಡರಾತ್ರಿಯವರೆಗೂ ಚಿತ್ರದ ಪ್ರಮೋಶನ್ ಹಾಗೂ ಪ್ರಚಾರಕ್ಕೆ ಬಹಳಷ್ಟು ಕಷ್ಟಪಟ್ಟಿದ್ದೇನೆ. ಆದರೂ ನನ್ನ ಮೇಲೆ ಈ ಆರೋಪ ಯಾಕೆ. ಅಷ್ಟು ಸಾಲದು, ಇನ್ನೂ ಬೇಕು ಎಂದಿದ್ದರೆ ಆಗಲೇ ಹೇಳಿದ್ದರೆ ಆಗುತ್ತಿತ್ತು. ಈಗ ಹೇಳಿದರೆ ಮಾಡುವುದೇನು. ನನ್ನ ಮೇಲೆ ಬಂದಿರುವ ಆಪಾದನೆಗಳು ನಿಜವಲ್ಲ" ಎಂದಿದ್ದಾರೆ.
"ಯೋಗರಾಜ್ ಭಟ್ ನಿರ್ದೇಶನದ 'ಡ್ರಾಮಾ' ಚಿತ್ರದ ಚಿತ್ರೀಕರಣದಲ್ಲಿದ್ದರೂ ನಾನು ಅಲೆಮಾರಿಯ ಹೆಚ್ಚಿನ ಪ್ರಚಾರಕ್ಕೆ ಹೋಗಲು ಸಿದ್ಧಳಿದ್ದೆ. ಆದರೆ 'ಅಲೆಮಾರಿ' ಟೀಮ್ ನನ್ನನ್ನು ಕರೆಯಲಿಲ್ಲ. ನಾನು ನಿರ್ಮಾಪಕ ಶ್ರೀನಿವಾಸ್ ಅವರನ್ನು ದೂರುತ್ತಿಲ್ಲ.
ಅವರು ತುಂಬಾ ಒಳ್ಳೆಯ ನಿರ್ಮಾಪಕರು. ಅಂದುಕೊಂಡಂತೆ ಚಿತ್ರ ಮಾಡಿದ್ದಾರೆ. ಅವರಂತಹ ನಿರ್ಮಾಪಕರ ಚಿತ್ರಗಳಲ್ಲಿ ಇನ್ನು ಮುಂದಕ್ಕೂ ನಟಿಸಲು ನಾನು ಸಿದ್ಧ. ಆದರೆ ನಾನು ಕರೆದರೂ ಪ್ರಚಾರಕ್ಕೆ ಬರಲಿಲ್ಲ ಎಂಬುದು ಮಾತ್ರ ಶುದ್ಧ ಸುಳ್ಳು" ಎಂದು ಸ್ಪಷ್ಟನೆ ನೀಡುವ ಮೂಲಕ ತಮ್ಮ ಮೇಲಿನ ನಿರಾಧಾರ ಆರೋಪವನ್ನು ತಳ್ಳಿಹಾಕಿದ್ದಾರೆ.
ರಾಧಿಕಾ ಪಂಡಿತ್ ವಿವಾದಗಳಿಂದ ಯಾವಾಗಲೂ ಮಾರು ದೂರ. ಇದಕ್ಕೂ ಮೊದಲು ಕೆಲವೊಮ್ಮೆ ಅವರ ಹೆಚ್ಚಿನ ಸಂಭಾವನೆ ಕುರಿತು ಟೀಕಿಸಲಾಗುತ್ತಿತ್ತು. ತುಂಬಾ ಹೆಚ್ಚಿನ ಸಂಭಾವನೆ ಕೇಳುತ್ತಾರೆ ಎಂಬ ಆರೋಪ ಅವರನ್ನು ಸುತ್ತಿತ್ತು. ಆಗಲೂ ಅಷ್ಟೇ, ಅದೆಲ್ಲಾ ಸುಳ್ಳು, ನನ್ನ ನಟನೆಗೆ ತಕ್ಕ ಸಂಭಾವನೆ ನಾನು ಪಡೆಯುತ್ತಿದ್ದೇನೆ, ಹೆಚ್ಚೇನೂ ಕೇಳುತ್ತಿಲ್ಲ" ಎಂದಿದ್ದರು.
ಈಗಲೂ ಅಷ್ಟೇ, ನಿರ್ಮಾಪಕ ಬೆಂಕೋಶ್ರೀ ಹೇಳಿಕೆ ವಿರುದ್ಧ ಸಮರ ಸಾರದೇ, ಅವರನ್ನೂ ದೂರದೇ ತಮ್ಮ ಮೇಲಿನ ಆಪಾದನೆಗೆ ಮಾತ್ರ ಸ್ಪಷ್ಟೀಕರಣ ನೀಡುವ ಮೂಲಕ ತಮ್ಮ ಬುದ್ಧಿವಂತಿಕೆಯನ್ನು ಬಳಸಿ ಬಚಾವಾಗಿದ್ದಾರೆ ರಾಧಿಕಾ. "ನಾನು ಅಂಥವಳಲ್ಲ" ಎಂಬುದಷ್ಟೇ ಅವರ ಉತ್ತರದ ಸಾರ.
"ಪ್ರಚಾರಕ್ಕೆ ಬರುತ್ತಿಲ್ಲ ಎಂಬ ನನ್ನ ಮೇಲಿರುವ ಆಪಾದನೆ ಸುಳ್ಳು, ಅದನ್ನೆಲ್ಲಾ ನಂಬಿ ಮೋಸಹೋಗಬೇಡಿ..."ಎಂದು ರಾಧಿಕಾ ಪಂಡಿತ್ ತಮ್ಮ ಅಭಿಮಾನಿಗಳನ್ನು ಕೇಳಿಕೊಂಡಿದ್ದಾರೆ. ರಾಧಿಕಾ ಅಭಿಮಾನಿಗಳು ಅವರು ಹೇಳಿದ್ದನ್ನೇ ಕೇಳುವುದು ಖಂಡಿತ ತಾನೇ? ಹಾಗಾಗಿ ರಾಧಿಕಾ ಸೇಫ್ ಎನ್ನಬಹುದು. (ಒನ್ ಇಂಡಿಯಾ ಕನ್ನಡ)


Click it and Unblock the Notifications












