'2.0', 'ಕಾಲ' ನಂತರ ರಜನಿಕಾಂತ್ ಕೊನೆಯ ಚಿತ್ರ ಘೋಷಣೆ
ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶದ ಕುರಿತು ಅಧಿಕೃತ ಘೋಷಣೆ ಮಾಡುತ್ತಿದ್ದಂತೆ ತಲೈವಾ ಅವರ ಕೊನೆ ಸಿನಿಮಾದ ಬಗ್ಗೆ ದೊಡ್ಡ ಚರ್ಚೆಯಾಗುತ್ತಿದೆ. ಶಂಕರ್ ನಿರ್ದೇಶನ ಮಾಡುತ್ತಿರುವ '2.0' ಚಿತ್ರದ ನಂತರ ಪಾ ರಂಜಿತ್ ಆಕ್ಷನ್ ಕಟ್ ಹೇಳುತ್ತಿರುವ 'ಕಾಲ ಕರಿಕಾಳನ್' ಸಿನಿಮಾ ತೆರೆಕಾಣಲಿದೆ. ಈ ಚಿತ್ರ ರಜನಿಕಾಂತ್ ಅವರ ಕೊನೆಯ ಚಿತ್ರವೆಂದು ಹೇಳಲಾಗುತ್ತಿದೆ.
ಆದ್ರೆ, ರಜನಿಕಾಂತ್ ಎಲ್ಲರಿಗೂ ಶಾಕ್ ನೀಡಿದ್ದಾರೆ. ತಮಿಳುನಾಡಿನ ಮುಂಬರುವ ಚುನಾವಣೆಯಲ್ಲಿ ತಮ್ಮ ಹೊಸ ಪಕ್ಷದಿಂದ ಸ್ಪರ್ಧಿಸಿಲಿರುವ ರಜನಿ, ಜೊತೆಗೆ ಹೊಸ ಸಿನಿಮಾವನ್ನ ಮಾಡ್ತಾರೆ ಎಂಬ ಸುದ್ದಿ ಈಗ ಹೊರಬಿದ್ದಿದೆ.
'ರೋಬೋ-2', ಮತ್ತು 'ಕಾಲ' ಚಿತ್ರಗಳ ನಂತರ ರಜನಿಕಾಂತ್ ಹೊಸ ಸಿನಿಮಾ ಮಾಡಲಿದ್ದು, ಆ ಚಿತ್ರದ ಪೂರ್ವ ಕೆಲಸಗಳು ಆರಂಭವಾಗಿದೆಯಂತೆ. ಹಾಗಿದ್ರೆ, ಸೂಪರ್ ಅಭಿನಯಿಸಿಲಿರುವ ಹೊಸ ಚಿತ್ರ ಯಾವುದು? ಈ ಚಿತ್ರದ ವಿಶೇಷತೆ ಏನು? ಈ ಚಿತ್ರಕ್ಕೆ ಡೈರೆಕ್ಟರ್ ಯಾರು ಎಂಬ ಕುತೂಹಲಕ್ಕೆ ಉತ್ತರ ಮುಂದಿದೆ.

ರಾಜಕೀಯ ಕುರಿತು ಸಿನಿಮಾ
ಸದ್ಯ, ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವ ರಜನಿಕಾಂತ್ ಈಗ ರಾಜಕೀಯ ಕುರಿತು ಹೊಸ ಸಿನಿಮಾ ಮಾಡಲಿದ್ದಾರೆ. ಇದು ತಮ್ಮ ರಾಜಕೀಯ ಬದುಕಿಗೂ ಸಹಾಕಾರಿಯಾಗಬಹುದು ಎಂಬ ಕಾರಣದಿಂದ ಈ ಚಿತ್ರವನ್ನ ಕೈಗೆತ್ತಿಕೊಂಡಿದ್ದಾರೆ ಎನ್ನಲಾಗಿದೆ. ಅಂದುಕೊಂಡಂತೆ ಆದ್ರೆ, ಈ ವರ್ಷವೇ ಹೊಸ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.

ಪಾ ರಂಜಿತ್ ನಿರ್ದೇಶನ
'ಕಬಾಲಿ' ಚಿತ್ರವನ್ನ ನಿರ್ದೇಶನ ಮಾಡಿದ್ದ ಪಾ ರಂಜಿತ್ ಈಗ ರಜನಿಕಾಂತ್ ಅಭಿನಯದ 'ಕಾಲ ಕರಿಕಾಳನ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿಶೇಷ ಅಂದ್ರೆ, ರಾಜಕೀಯ ಕುರಿತ ಸಿನಿಮಾಗೆ ಪಾ ರಂಜಿತ್ ಆಕ್ಷನ್ ಕಟ್ ಹೇಳಲಿದ್ದು, ಮೂರನೇ ಬಾರಿಗೆ ರಜನಿಕಾಂತ್ ಅವರಿಗೆ ನಿರ್ದೇಶನ ಮಾಡುವ ಅವಕಾಶ ಪಡೆದುಕೊಳ್ಳಲಿದ್ದಾರೆ.

ಕಥೆ ಕೇಳಿ ಆಗಿದೆಯಂತೆ
ಈಗಾಗಲೇ ಹೊಸ ಚಿತ್ರದ ಕತೆ ಕೇಳಿದ್ದು, ಅದರ ಮೇಲೆ ಕೆಲಸ ಮಾಡಲಾಗುತ್ತಿದೆಯಂತೆ. ಈ ಮೊದಲೇ ಅಂದುಕೊಂಡಂತೆ 'ಕಾಲ' ಚಿತ್ರ ರಜನಿಯ ಕೊನೆ ಸಿನಿಮಾವಾಗಬೇಕಿತ್ತಂತೆ. ಆದ್ರೆ, ರಜನಿಕಾಂತ್ ಅವರ ಕೊನೆಯ ಸಿನಿಮಾ ಪ್ರೇಕ್ಷಕರ ಮೇಲೆ ವಿಶೇಷವಾದ ಪ್ರಭಾವ ಬೀರಬೇಕು ಎನ್ನುವ ಉದ್ದೇಶದಿಂದ ಹೊಸ ಪ್ರಯತ್ನಕ್ಕೆ ಕೈಯಿಟ್ಟಿದ್ದಾರೆ ಎನ್ನಲಾಗಿದೆ. ರಜನಿಯ ರಾಜಕೀಯ ಸಿದ್ಧಾಂತಗಳನ್ನೊಳಗೊಂಡ ಸಿನಿಮಾ ಮಾಡುವ ಗುರಿ ಹೊಂದಿದ್ದಾರಂತೆ.

ಇದು ಕೊನೆಯ ಸಿನಿಮಾ
ಮೂಲಗಳ ಪ್ರಕಾರ ಈ ಸಿನಿಮಾ ರಜನಿಕಾಂತ್ ಅವರ ಕೊನೆಯ ಸಿನಿಮಾವಾಗಲಿದೆ. ತಮ್ಮ ರಾಜಕೀಯ ಬದುಕಿಗೆ ವೇದಿಕೆ ಮಾಡಿಕೊಳ್ಳಲಿರುವ ಈ ಚಿತ್ರದ ಮೂಲಕ ತಲೈವಾ ತಮ್ಮ ಬಣ್ಣದ ಬದುಕಿಗೆ ವಿದಾಯ ಹೇಳಲು ಚಿಂತಿಸಿದ್ದಾರಂತೆ. ಚಿತ್ರದ ಕಲಾವಿದರ ಆಯ್ಕೆಯಲ್ಲಿ ಪಾ ರಂಜಿತ್ ಮತ್ತು ರಜನಿಕಾಂತ್ ಇಬ್ಬರು ಕೆಲಸ ಮಾಡಲಿದ್ದಾರಂತೆ.

'ಕಾಲ' ಗ್ಯಾಂಗ್ ಸ್ಟರ್ ಸಿನಿಮಾ
ಶಂಕರ್ ನಿರ್ದೇಶನದ '2.0 'ಸಿನಿಮಾ ಏಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗುತ್ತೆ. ಇದು ರೋಬೋ ಚಿತ್ರದ ಮುಂದುವರೆದ ಭಾಗ. ಅದಾದ ಎರಡು ತಿಂಗಳ ಬಳಿಕ 'ಕಾಲ ಕರಿಕಾಳನ್' ಚಿತ್ರ ತೆರೆಕಾಣಲಿದೆ. ಇದು ಗ್ಯಾಂಗ್ ಸ್ಟರ್ ಸಿನಿಮಾ. ಮುಂಬೈನಲ್ಲಿ ತಮಿಳಿಗರ ಮೇಲೆ ನಡೆದ ದೌರ್ಜನ್ಯವನ್ನ ಎದುರಿಸಿ ತಮಿಳರನ್ನ ರಕ್ಷಿಸಿದ 'ಕಾಲ'ನ ಕುರಿತು ಸಿನಿಮಾ.


Click it and Unblock the Notifications











