ರಮ್ಯಾ ಪ್ಲೇಟ್ ನಲ್ಲಿ ನೀರೂರಿಸುವ 'ನೀರ್ ದೋಸೆ'!
ಅಚ್ಚರಿಯ ಸುದ್ದಿಯೊಂದು ಸ್ಪೋಟಗೊಂಡಿದೆ. 'ಗೋಲ್ಡನ್ ಗರ್ಲ್ ರಮ್ಯಾ ಹಾಗೂ ನವರಸನಾಯಕ ಜಗ್ಗೇಶ್ ಒಂದಾಗಿ 'ನೀರ್ ದೋಸೆ' ಹೆಸರಿನ ಚಿತ್ರದಲ್ಲಿ ನಟಿಸಲಿದ್ದಾರೆ. 'ಸಿದ್ಲಿಂಗು' ಚಿತ್ರದ ನಿರ್ದೇಶಕ ವಿಜಯಪ್ರಸಾದ್ ಒಂಬತ್ತು ತಿಂಗಳ ನಂತರ ಈ ಹೊಸ 'ನೀರ್ ದೋಸೆ' ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಹೆಚ್ಚು ಕಡಿಮೆ, 'ಸಿದ್ಲಿಂಗು' ಟೀಮ್ ಈ ಚಿತ್ರದಲ್ಲೂ ಮುಂದುವರಿಯಲಿದೆ' ಎಂಬುದು ಬಂದಿರುವ ಸುದ್ದಿ. ಆದರೆ ನಿರ್ದೇಶಕ ವಿಜಯಪ್ರಕಾಶ್ ಈ ಸುದ್ದಿಯನ್ನು ಇನ್ನೂ ದೃಢಪಡಿಸಿಲ್ಲ.
ಈ ಮೊದಲು ವಿಜಯಪ್ರಕಾಶ್ ನಿರ್ದೇಶನದ 'ಸಿದ್ಲಿಂಗು' ಚಿತ್ರದಲ್ಲಿ ನಟಿಸಿದ್ದ ರಮ್ಯಾ, ಪ್ರೆಸ್ ಮೀಟ್ ನಲ್ಲಿ 'ನಿಮ್ಮ ಮುಂದಿನ ಚಿತ್ರದಲ್ಲೂ ನನಗೆ ಅವಕಾಶ ಕೊಡಿ" ಎಂದು ವಿಜಯಪ್ರಕಾಶ್ ಅವರನ್ನು ಕೋರಿದ್ದರು. ಈಗ ಬಂದಿರುವ ಸುದ್ದಿಗೂ, ರಮ್ಯಾರ ಆ ಮಾತಿಗೂ ತಾಳ-ಮೇಳ ಕೂಡಿದೆ. ಆದರೆ, ರಮ್ಯಾ ಇನ್ನೂ ಈ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿಲ್ಲ ಎಂಬ ನಿರ್ದೇಶಕರ ಮಾತು ಇಲ್ಲಿ ಗಮನಿಸಬೇಕಾದ ಸಂಗತಿ.
ದಿಗಂತ್ ನಾಯಕತ್ವ ಹಾಗೂ ಕೋಡಿ ರಾಮಕೃಷ್ಣ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದ ಚಿತ್ರೀಕರಣವನ್ನು ಇತ್ತೀಚಿಗಷ್ಟೇ ಮುಗಿಸಿರುವ ರಮ್ಯಾ, ಬೇರೆ ಯಾವುದೇ ಹೊಸ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸುದ್ದಿಯಲ್ಲ. ಪ್ರಜ್ವಲ್ ದೇವರಾಜ್ ಜೊತೆ ನಟಿಸುತ್ತಿರುವ 'ದಿಲ್ ಕಾ ರಾಜಾ' ಚಿತ್ರ ಬಿಟ್ಟರೆ, ರಮ್ಯಾ ಅಭಿನಯದ ಚಿತ್ರಗಳು ಇತ್ತೀಚಿಗೆ ಅಪರೂಪವಾಗುತ್ತಿವೆ. ಅಂದರೆ ರಮ್ಯಾ ಸಿಕ್ಕಾಪಟ್ಟೆ ಚೂಸಿ ಆಗಿದ್ದಾರೆ ಎನ್ನಬಹುದು. ಈಗ ರಮ್ಯಾ ಪ್ಲೇಟ್ ನಲ್ಲಿ ನೀರೂರಿಸುವ 'ನೀರ್ ದೋಸೆ' ಇದೆ, ಆದ್ರೆ ತಿಂತಾರಾ ಅನ್ನೋದೇ ಪ್ರಶ್ನೆ!
ಅದಿರಲಿ, ವಿಜಯಪ್ರಸಾದ್ ನಿರ್ದೇಶನದ ಈ ಹೊಸ 'ನೀರ್ ದೋಸೆ' ಚಿತ್ರದಲ್ಲಿ ಜಗ್ಗೇಶ್ ನಟಿಸುವುದು ಪಕ್ಕಾ ಆಗಿದೆ. ಆದರೆ ಜಗ್ಗೇಶ್ ಜೋಡಿಯಾಗಿ ರಮ್ಯಾ ನಟಿಸುವುದು ಇನ್ನಷ್ಟೇ ಪಕ್ಕಾ ಆಗಬೇಕಿದೆ. ಉಳಿದಂತೆ, 'ಸಿದ್ಲಿಂಗು' ಚಿತ್ರಕ್ಕೆ ಸಂಗೀತ ನೀಡಿದ್ದ ಅನೂಪ್ ಸೀಳಿನ್ ಈ ಚಿತ್ರಕ್ಕೂ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಅದೇ ಜ್ಞಾನಮೂರ್ತಿ ಈ 'ನೀರ್ ದೋಸೆ' ಚಿತ್ರಕ್ಕೂ ಛಾಯಾಗ್ರಹಕರು. ಆದರೆ ಸಂಕಲನಕಾರ ನಾಗೇಂದ್ರ ಅರಸ್, ಹೊಸ ಸೇರ್ಪಡೆಯಂತೆ. ಒಟ್ಟಿನಲ್ಲಿ ರಮ್ಯಾ ನಟಿಸುತ್ತಾರಾ ಎಂಬುದೊಂದೇ ಉಳಿದಿರುವ ಪ್ರಶ್ನೆ! (ಒನ್ ಇಂಡಿಯಾ ಕನ್ನಡ)


Click it and Unblock the Notifications











