'ಕಾಂತಾರ' ನೋಡದ ಕರ್ನಾಟಕದ ನಾಲ್ವರು ನಟಿಯರು; ಅನುಷ್ಕಾಗಿಂತ ಸ್ಟಾರಾ ನೀವು? ಶಾನ್ವಿ ನೋಡಿ ಕಲಿಯಿರಿ!

ಕಾಂತಾರ.. ಸದ್ಯ ಭಾರತ ಚಿತ್ರರಂಗವನ್ನೇ ಅಲುಗಾಡಿಸುತ್ತಿರುವಂತಹ ಚಿತ್ರ. ಕರ್ನಾಟಕದ ಕರಾವಳಿ ಭಾಗದ ಜನರ ನಂಬುಗೆಯ ದೈವ ಆಚರಣೆ ಹಾಗೂ ಭೂತ ಕೋಲದ ಕಥೆಯನ್ನು ಹೊಂದಿರುವ ಕಾಂತಾರ ಚಿತ್ರವನ್ನು ಇಡೀ ದೇಶವೇ ಮನಸ್ಪೂರ್ತಿಯಾಗಿ ಒಪ್ಪಿಕೊಂಡಿದೆ.
ಮೊದಲಿಗೆ ಕನ್ನಡದಲ್ಲಿ ಬಿಡುಗಡೆಗೊಂಡು ದೊಡ್ಡ ಮಟ್ಟದ ಹಿಟ್ ಆದ ಕಾಂತಾರ ಚಿತ್ರ ಸದ್ಯ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಿಗೆ ಡಬ್ ಆಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ ಮತ್ತು ಇನ್ನೇನು ಕೆಲವೇ ದಿನಗಳಲ್ಲಿ ಮಲಯಾಳಂಗೂ ಸಹ ಡಬ್ ಆಗಿ ಬಿಡುಗಡೆಗೊಳ್ಳುತ್ತಿದೆ. ಕನ್ನಡ ಭಾಷೆಯಲ್ಲಿಯೇ ಗಲ್ಲಾಪೆಟ್ಟಿಗೆಯನ್ನು ಕೊಳ್ಳೆ ಹೊಡೆದಿದ್ದ ಕಾಂತಾರ ಚಿತ್ರ ಪ್ಯಾನ್ ಇಂಡಿಯಾ ಮಟ್ಟಕ್ಕೆ ಬೆಳೆದ ನಂತರ ಗಳಿಕೆಯಲ್ಲಿ ಮತ್ತಷ್ಟು ಏರಿಕೆಯನ್ನು ಕಂಡಿದೆ.
ಕೇವಲ ಹಣದ ವಿಚಾರದಲ್ಲಿ ಮಾತ್ರವಲ್ಲದೆ ವಿಮರ್ಶೆಯ ವಿಚಾರದಲ್ಲಿಯೂ ಕಾಂತಾರ ಕ್ಲಿಯರ್ ವಿನ್ನರ್. ದಕ್ಷಿಣ ಭಾರತದ ತಾರೆಗಳಾದ ಕಿಚ್ಚ ಸುದೀಪ್, ಧನುಷ್, ಕಾರ್ತಿ, ಅನುಷ್ಕಾ ಶೆಟ್ಟಿ, ರಕ್ಷಿತ್ ಶೆಟ್ಟಿ, ರಮ್ಯಾ ಸೇರಿದಂತೆ ಹಲವಾರು ಕಲಾವಿದರು ಕಾಂತಾರ ಚಿತ್ರವನ್ನು ನೋಡಿ ಚಿತ್ರತಂಡವನ್ನ ಹಾಡಿ ಹೊಗಳಿದ್ದಾರೆ. ಕೇವಲ ದಕ್ಷಿಣ ಭಾರತದ ಸೆಲೆಬ್ರಿಟಿಗಳು ಮಾತ್ರವಲ್ಲದೆ ಬಾಲಿವುಡ್ ಚಿತ್ರರಂಗದ ಹಲವಾರು ತಾರೆಯರು ಕಾಂತಾರ ಚಿತ್ರ ವೀಕ್ಷಿಸಿದ್ದಾರೆ. ಅದರಲ್ಲಿಯೂ ಕರ್ನಾಟಕದ ಮೂಲದ ನಟಿಯರಾದ ಅನುಷ್ಕಾ ಶೆಟ್ಟಿ ಮತ್ತು ಶಿಲ್ಪಾ ಶೆಟ್ಟಿ ಬೇರೆ ಚಿತ್ರರಂಗಗಳಲ್ಲಿ ನೆಲೆಸಿದ್ದರೂ ಸಹ ಕಾಂತಾರ ಚಿತ್ರವನ್ನು ವೀಕ್ಷಿಸಿ ಇಲ್ಲಿನ ಸಂಸ್ಕೃತಿ ಆಧಾರಿತ ಚಿತ್ರವನ್ನು ಬೆಂಬಲಿಸುವುದನ್ನು ಮರೆತಿಲ್ಲ. ಆದರೆ ಕರ್ನಾಟಕದ ಮಣ್ಣಿನಲ್ಲಿ ಜನಿಸಿದ ನಾಲ್ವರು ನಟಿಯರು ಮಾತ್ರ ಕಾಂತಾರ ಚಿತ್ರವನ್ನು ವೀಕ್ಷಿಸಿಲ್ಲ, ಅದರ ಬಗ್ಗೆ ಯಾವುದೇ ಪೋಸ್ಟ್ ಕೂಡ ಮಾಡಿಲ್ಲ.

ರಶ್ಮಿಕಾ, ಪೂಜಾ, ಕೃತಿ ಇದು ನಿಮ್ಮ ಮಣ್ಣಿನ ಕಥೆ ಅಲ್ವಾ?
ಮೂಲತಃ ವಿರಾಜಪೇಟೆಯ ರಶ್ಮಿಕಾ ಮಂದಣ್ಣ, ಕರಾವಳಿ ಬೆಡಗಿಯರು ಎನಿಸಿಕೊಂಡಿರುವ ಪೂಜಾ ಹೆಗ್ಡೆ ಹಾಗೂ ಕೃತಿ ಶೆಟ್ಟಿಗೆ ಕಾಂತಾರ ನೋಡಲು ಸಮಯ ಕೂಡಿ ಬಂದಿಲ್ಲ ಎನಿಸುತ್ತೆ. ಕರ್ನಾಟಕದ ನಟಿಯರಾಗಿ ಬೇರೆ ಚಿತ್ರಗಳಲ್ಲಿ ಈ ಮೂವರು ನಟಿಯರು ಸಹ ಕಾಣದಂತಹ ದೊಡ್ಡ ಮಟ್ಟದ ಯಶಸ್ಸನ್ನು ಕಂಡಿರುವ ಅನುಷ್ಕಾ ಶೆಟ್ಟಿ ಮತ್ತು ಶಿಲ್ಪಾ ಶೆಟ್ಟಿ ಕಾಂತಾರ ಚಿತ್ರವನ್ನು ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ. ಆದರೆ ಈ ಮೂವರು ಮಾತ್ರ ನಮ್ಮ ಮಣ್ಣಿನ ಕತೆ ಕಾಂತಾರ ವೀಕ್ಷಿಸಲು ಮುಂದಾಗದಿರುವುದು ಸದ್ಯ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಸಿನಿಮಾ ವೀಕ್ಷಿಸುವುದು ನಿಮಗೆ ಬಿಟ್ಟದ್ದು ಆದರೆ ಇದು ನಿಮ್ಮ ಕರ್ತವ್ಯ!
ಚಿತ್ರ ವೀಕ್ಷಿಸುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ ಎನ್ನಬಹುದು. ಆದರೆ ಈ ನಟಿಯರು ತಮ್ಮ ಬಾಲ್ಯದಿಂದ ತಮ್ಮ ಊರುಗಳಲ್ಲಿಯೇ ನೋಡಿಕೊಂಡು ಬೆಳೆದಂತಹ ಆಚರಣೆಯ ಆಧಾರಿತ ಚಿತ್ರ ಬಂದಾಗ ಅದನ್ನು ವೀಕ್ಷಿಸಿ, ಅದರ ಕುರಿತು ತಮ್ಮ ಅನುಯಾಯಿಗಳಿಗೆ ತಿಳಿಸಿ ಅವರನ್ನೂ ಸಹ ವೀಕ್ಷಿಸುವಂತೆ ಮಾಡುವುದು ಅವರ ಕರ್ತವ್ಯವಲ್ಲವೇ? ಅನುಷ್ಕಾ ಶೆಟ್ಟಿ ಮತ್ತು ಶಿಲ್ಪಾ ಶೆಟ್ಟಿ ಮಾಡಿದ್ದೂ ಕೂಡ ಇದನ್ನೇ ಅಲ್ಲವೇ?

ಬೇರೆಯದಕ್ಕೆಲ್ಲಾ ಸಮಯವಿದೆ!
ಇನ್ನು ಹೆಸರಿಗೆ ಮಾತ್ರ ಕರ್ನಾಟಕ ನಟಿಯರು ಎನಿಸಿಕೊಂಡಿರುವ ಈ ಮೂವರಿಗೆ ತಮ್ಮ ನಾಡಿನ ಹೆಮ್ಮೆಯ ಚಿತ್ರವನ್ನು ವೀಕ್ಷಿಸುವುದಿರಲಿ, ಅದರ ಕುರಿತು ಪೋಸ್ಟ್ ಮಾಡುವುದಕ್ಕೂ ಸಹ ಸಮಯವಿಲ್ಲ. ಆದರೆ ರಶ್ಮಿಕಾ ಮಂದಣ್ಣಗೆ ಇದೇ ಸಮಯದಲ್ಲಿ ಮಾಲ್ಡೀವ್ಸ್ ಪ್ರವಾಸ ಕೈಗೊಳ್ಳುವುದಕ್ಕೆ ಸಮಯವಿದೆ, ಇನ್ನು ಪೂಜಾ ಹೆಗ್ಡೆಯಂತೂ ಸಾಲುಸಾಲು ಫೋಟೋ ಶೂಟ್ ಮಾಡಿಸಿಕೊಳ್ಳುವುದರಲ್ಲಿ ಬ್ಯುಸಿ ಮತ್ತು ಬಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್ ಹುಟ್ಟುಹಬ್ಬದ ಸಿಡಿಪಿ ಬಿಡುಗಡೆ ಮಾಡುವ ಕೃತಿ ಶೆಟ್ಟಿಗೆ ಕಾಂತಾರ ಚಿತ್ರದ ಕುರಿತು ಪೋಸ್ಟ್ ಮಾಡುವುದಕ್ಕೆ ಸಮಯವಿಲ್ಲ.

ರಶ್ಮಿಕಾ ಕೃತಜ್ಞತೆಗಾದರೂ ಚಿತ್ರದ ಬಗ್ಗೆ ಬರೆದುಕೊಳ್ಳಬೇಕಿತ್ತು!
ಪೂಜಾ ಹೆಗ್ಡೆ ಮತ್ತು ಕೃತಿ ಶೆಟ್ಟಿಯನ್ನು ಬಿಡಿ, ಕಾಂತಾರ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದ ಕಿರಿಕ್ ಪಾರ್ಟಿ ಚಿತ್ರದಲ್ಲಿ ಅವಕಾಶ ಪಡೆದುಕೊಳ್ಳುವುದರ ಮೂಲಕ ಚಿತ್ರರಂಗವೇನು ಎಂಬುದನ್ನು ಕಂಡ ರಶ್ಮಿಕಾ ಮಂದಣ್ಣ ಚಿತ್ರದ ಕುರಿತಾಗಿ ಬರೆದುಕೊಳ್ಳಬೇಕಿತ್ತು.

ಶ್ರೀಲೀಲಾ ಕತೆಯೂ ಇಷ್ಟೇ
ಇನ್ನು ಕರಾವಳಿ ಭಾಗದ ಬೆಡಗಿಯರಾದ ಈ ಮೂವರು ಮಾತ್ರವಲ್ಲದೇ ಇತ್ತೀಚೆಗಷ್ಟೇ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಇನ್ನೂ ಸಹ ಹಿಟ್ ನೀಡಬೇಕಾಗಿರುವ ಶ್ರೀಲೀಲಾ ಕತೆಯೂ ಕೂಡ ಇದೇ. ಅಭಿಮಾನಿಗಳ ಜತೆ ಇನ್ ಸ್ಟಾಗ್ರಾಂ ಖಾತೆಯ ಸ್ಟೋರಿ ಮೂಲಕ ಚಿಟ್ ಚಾಟ್ ಮಾಡಲು ಸಮಯವಿರುವ ಶ್ರೀಲೀಲಾಗೆ ಕಾಂತಾರ ಚಿತ್ರದ ಬಗ್ಗೆ ಬರೆದುಕೊಳ್ಳಲು ಸಮಯವಿಲ್ಲ.

ಕರ್ನಾಟಕ ಬಿಟ್ಟವರಲ್ಲ ಕರ್ನಾಟಕದಲ್ಲಿ ಇರುವವರೂ ಸಹ ಕಾಂತಾರ ಬಗ್ಗೆ ಬರೆದುಕೊಂಡಿಲ್ಲ!
ಇನ್ನು ಪರಭಾಷಾ ಚಿತ್ರಗಳಲ್ಲಿ ಬ್ಯುಸಿಯಾಗಿರುವ ಈ ನಟಿಯರು ಮಾತ್ರವಲ್ಲ ಕರ್ನಾಟಕದ ಹಲವಾರು ತಾರೆಗಳೇ ಅಬ್ಬರಿಸುತ್ತಿರುವ ಕಾಂತಾರ ಚಿತ್ರದ ಕುರಿತು ತುಟಿ ಬಿಚ್ಚಿಲ್ಲ. ಬೇರೆ ಊರುಗಳಲ್ಲಿ ನಡೆಯುವ ಪ್ರೀ ರಿಲೀಸ್ ಕಾರ್ಯಕ್ರಮ, ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಮೈಲುಗಟ್ಟಲೆ ಹೋಗಿ ಹೆಜ್ಜೆ ಹಾಕಿ, ಹಾಡು ಹಾಡಿ ಬರುವ ತಾರೆಯರು ಕಾಂತಾರದ ಬಗ್ಗೆ ಮಾತನಾಡದಿರುವುದು ಪ್ರಶ್ನೆ ಮೂಡಿಸದೇ ಇರದು. ಚಿತ್ರತಂಡ ಇವರನ್ನು ಪ್ರಿ ರಿಲೀಸ್ ಕಾರ್ಯಕ್ರಮಕ್ಕೆ ಆಹ್ವಾನಿಸಿದರೆ ಮಾತ್ರ ಇವರು ಚಿತ್ರ ನೋಡುವುದಾ, ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುವುದಾ ಎಂಬ ಅನುಮಾನ ಮೂಡುತ್ತಿದೆ.

ಶಾನ್ವಿ ನೋಡಿ ಕಲಿಯಬೇಕಿದೆ
ಶಾನ್ವಿ ಶ್ರೀವಾಸ್ತವ.. ಮೂಲತಃ ವಾರಾಣಸಿಯವರಾದ ಈ ನಟಿ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇಂತಹ ನಟಿಯೇ ಕಾಂತಾರ ಚಿತ್ರವನ್ನು ವೀಕ್ಷಿಸಿ ಪ್ರಾದೇಶಿಕ ಭಾಷೆಯೊಂದರ ಚಿತ್ರ ಇಡೀ ದೇಶದಾದ್ಯಂತ ಸದ್ದು ಮಾಡುತ್ತಿರುವುದು ನಿಜಕ್ಕೂ ಖುಷಿಯ ವಿಚಾರ, ಕನ್ನಡ ಚಿತ್ರವೊಂದು ಇಂತಹ ಒಳ್ಳೆಯ ವಿಷಯವನ್ನಿಟ್ಟುಕೊಂಡು ಅಬ್ಬರಿಸುತ್ತಿರುವುದರ ಬಗ್ಗೆ ಸಂತೋಷವಿದೆ ಎಂದು ಶಾನ್ವಿ ಶ್ರೀವಾಸ್ತವ ಟ್ವೀಟ್ ಮಾಡಿದ್ದಾರೆ. ಉತ್ತರ ಭಾರತದ ನಟಿಗೆ ಕನ್ನಡ ಹಾಗೂ ಕನ್ನಡ ಚಿತ್ರದ ಮೇಲಿರುವ ಪ್ರೀತಿ ಹಾಗೂ ಅಭಿಮಾನ ನಮ್ಮ ಮಣ್ಣಿನ ನಟಿಯರಿಗೇಕಿಲ್ಲ?


Click it and Unblock the Notifications











