ದರ್ಶನ್ ಕುತ್ತಿಗೆಗೆ ಕೈಹಾಕಿ ಆಚೆ ದಬ್ಬಿದವರು ಯಾರು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಇವತ್ತು 'ಸ್ಯಾಂಡಲ್ ವುಡ್ ಸುಲ್ತಾನ್'. ನಿರ್ಮಾಪಕರ ಡಾರ್ಲಿಂಗ್. ದರ್ಶನ್ ಸಿನಿಮಾ ಮಾಡಿದ್ರೆ ಹಾಕಿರುವ ಬಂಡವಾಳ ವಾಪಸ್ ಬರುವುದು ಖಚಿತ. ಲಾಭಕ್ಕಂತೂ ಮೋಸವೇ ಇಲ್ಲ.
ಇಂದು ಸ್ಯಾಂಡಲ್ ವುಡ್ ನ ಮೋಸ್ಟ್ ವಾಂಟೆಡ್ ನಟ ಆಗಿರುವ ದರ್ಶನ್ ಒಂದ್ಕಾಲದಲ್ಲಿ ಎಂತಹ ಅವಮಾನ ಎದುರಿಸಿದ್ದರು ಅನ್ನೋದು ನಿಮಗೆ ಗೊತ್ತಾ?
ದರ್ಶನ್ ಕಾಲ್ ಶೀಟ್ ಗಾಗಿ ಈಗ ನಿರ್ಮಾಪಕರು ಅವರ ಮನೆ ಮುಂದೆ ಕ್ಯೂ ನಿಲ್ತಾರೆ. ಅವರು ಕೇಳಿದ ಸಂಭಾವನೆಯನ್ನ ತುಟಿ ಎರಡು ಮಾಡದೆ ಕೊಡ್ತಾರೆ. [ಕನ್ನಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯೋ ನಟ ಯಾರು?]
ಆದ್ರೆ, ಇದೇ ದರ್ಶನ್ ಹಿಂದೊಮ್ಮೆ ನಿರ್ಮಾಪಕರ ಬಳಿ ದುಡ್ಡು ಕೇಳೋಕೆ ಹೋದಾಗ ಅವರನ್ನ ಕತ್ತು ಹಿಡಿದು ಆಚೆ ದಬ್ಬಲಾಗಿತ್ತು. ಅಂದು ತುಟಿ ಕಚ್ಚಿ ಅಳು ತಡೆದ ದರ್ಶನ್ ಇಂದು ಚಾಲೆಂಜಿಂಗ್ ಸ್ಟಾರ್ ಅಗಿ ಬೆಳೆದ ಕಥೆಯೇ ರೋಚಕ.
ಅಸಲಿಗೆ, ದರ್ಶನ್ ಗೆ ಅವಮಾನಿಸಿದ್ದು ಯಾರು? ದರ್ಶನ್ ಬದುಕಿನ ಈ ಕಹಿ ಅಧ್ಯಾಯದ ಕುರಿತು ಪ್ರಜಾ ಟಿವಿ ವರದಿ ಮಾಡಿದೆ. ಮುಂದೆ ಓದಿ....

ದರ್ಶನ್ ಜೀವನದ ಕಹಿ ಅಧ್ಯಾಯ
ದೊಡ್ಡ ನಟ ಆಗುವುದಕ್ಕೆ ದರ್ಶನ್ ಪಟ್ಟ ಕಷ್ಟ-ಸಂಕಷ್ಟ, ದುಗುಡು-ದುಮ್ಮಾನ, ಹಂತ ಹಂತವಾಗಿ ದರ್ಶನ್ ಬೆಳೆದ ಬಗೆ ಎಲ್ಲರಿಗೂ ಗೊತ್ತೇ ಇದೆ. ಆದ್ರೆ, ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ದರ್ಶನ್ ಎದುರಿಸಿದ ಅವಮಾನ ಮಾತ್ರ ಅಷ್ಟಾಗಿ ಯಾರಿಗೂ ಗೊತ್ತಿಲ್ಲ.

ಹೀರೋ ಆಗಿದ್ದು 'ಮೆಜೆಸ್ಟಿಕ್' ಚಿತ್ರದಿಂದ
ಅದಾಗಲೇ ವರ್ಷಗಳಿಂದ ಚಿತ್ರರಂಗದಲ್ಲಿ ದುಡಿಯುತ್ತಿದ್ದರೂ, ದರ್ಶನ್ ನಾಯಕ ನಟನಾಗಿ ಬೆಳ್ಳಿತೆರೆ ಮೇಲೆ ಮಿಂಚಿದ್ದು 'ಮೆಜೆಸ್ಟಿಕ್' ಚಿತ್ರದಿಂದ. ಹೀಗಿದ್ದರೂ, ದರ್ಶನ್ ಅದೃಷ್ಟ ಖುಲಾಯಿಸಲಿಲ್ಲ. 'ಮೆಜೆಸ್ಟಿಕ್' ಚಿತ್ರದಿಂದ ದರ್ಶನ್ ಅವರಿಗೆ ನಯಾ ಪೈಸೆ ಸಿಗಲಿಲ್ಲ. [ದರ್ಶನ್ ಎಷ್ಟು ಉದಾರಿ ಗೊತ್ತಾ? ಆದ್ರೆ ಕಂಡಿಷನ್ಸ್ ಅಪ್ಲೈ!]

ಕೈಯಲ್ಲಿ ನಾಲ್ಕು ಚಿತ್ರಗಳು
'ಮೆಜೆಸ್ಟಿಕ್' ಚಿತ್ರದ ಬಳಿಕ ದರ್ಶನ್ ನಾಲ್ಕು ಚಿತ್ರಗಳಿಗೆ ಸಹಿ ಹಾಕಿದರು. 'ಧ್ರುವ', 'ಕಿಟ್ಟಿ', 'ಕರಿಯಾ' ಮತ್ತು 'ನಿನಗೋಸ್ಕರ'. 'ಕರಿಯಾ' ಚಿತ್ರದಿಂದ ದರ್ಶನ್ ಅವರಿಗೆ 10 ಸಾವಿರ ರೂಪಾಯಿ ಅಡ್ವಾನ್ಸ್ ಸಿಕ್ಕಿತ್ತು. ಇನ್ನು 'ಧ್ರುವ' ಚಿತ್ರದಿಂದ ಅವರಿಗೆ 5 ಸಾವಿರ ರೂಪಾಯಿ ಮುಂಗಡ ಹಣ ಸಂದಾಯವಾಗಿತ್ತು.

ಮನೆ ಸಾಲ ಕಟ್ಟಬೇಕಿತ್ತು.!
ಮೈಸೂರಿನಿಂದ ಬೆಂಗಳೂರಿಗೆ ಬಂದು ಶೂಟಿಂಗ್ ಮಾಡುತ್ತಿದ್ದ ದರ್ಶನ್, ತಮ್ಮ ಮನೆಯ ಸಾಲ ತೀರಿಸುವ ಜವಾಬ್ದಾರಿ ಹೊತ್ತುಕೊಂಡಿದ್ದರು. ಅದೊಂದು ದಿನ ಅವರ ತಾಯಿ ಫೋನ್ ಮಾಡಿ, ಮನೆ ಸಾಲದ ಕಂತು ಕೊಡಬೇಕು 15 ಸಾವಿರ ಕಳುಹಿಸು ಅಂತ ಕಣ್ಣೀರು ಹಾಕಿದರು.

ದರ್ಶನ್ ಬಳಿ ದುಡ್ಡು ಇರಲಿಲ್ಲ.!
ಅಮ್ಮನ ದುಃಖ ಕಂಡು ದರ್ಶನ್ ಕರುಳು ಹಿಂಡಿದಂದಾಗಿತ್ತು. ಆದ್ರೆ, ಅವರ ಬಳಿ ದುಡ್ಡು ಇರಲಿಲ್ಲ. ಆಗ ದರ್ಶನ್ ಗೆ ನೆನಪಾಗಿದ್ದು 'ಕರಿಯಾ' ಮತ್ತು 'ಧ್ರುವ' ಚಿತ್ರದ ನಿರ್ಮಾಪಕರು. 'ಧ್ರುವ' ಚಿತ್ರ ರಿಲೀಸ್ ಗೆ ರೆಡಿಯಾಗಿತ್ತು. ಮಂಗಳೂರು ಭಾಗದಲ್ಲಿ ನಿರೀಕ್ಷೆಗೂ ಮೀರಿ ಸಿನಿಮಾ ಸೇಲ್ ಆಗಿತ್ತು. ಇದರಿಂದ ತಮ್ಮ ಬಾಕಿ ಹಣ ಬರಬಹುದು ಅನ್ನೋ ವಿಶ್ವಾಸದ ಮೇಲೆ ದರ್ಶನ್ 'ಧ್ರುವ' ನಿರ್ಮಾಪಕರ ಕಛೇರಿಗೆ ತೆರಳಿದರು.

ಏಯ್...ಕತ್ತು ಹಿಡಿದು ಆಚೆ ದೂಕ್ರೋ ಅವನನ್ನ.!
'ಧ್ರುವ' ಚಿತ್ರ ನಿರ್ಮಾಪಕರ ಕಛೇರಿಗೆ ಬಂದ ದರ್ಶನ್, ಅಲ್ಲಿ ಕಂತೆ ಕಂತೆ ದುಡ್ಡು ಎಣಿಸುವುದನ್ನ ಕಂಡರು. ನಂತ್ರ ತಮ್ಮ ಬಾಕಿ ಹಣ ಕೊಡುವಂತೆ ಕೇಳಿ ಕೊಂಡರು. ಆಗ್ಲೇ ನೋಡಿ ಅವಾಂತರ ಆಗಿದ್ದು. ''ನಿನಗೆ ಚಾನ್ಸ್ ಕೊಟ್ಟಿರುವುದೇ ಹೆಚ್ಚು. ಲಕ್ಷ ಲಕ್ಷ ಕೊಡ್ಬೇಕಾ ನಿಂಗೆ. ದೊಡ್ಡ ಸ್ಟಾರಾ ನೀನು? ಏಯ್...ಕತ್ತು ಹಿಡಿದು ಆಚೆ ದೂಕ್ರೋ ಅವನನ್ನ.'' ಅಂತ ಕಛೇರಿಯಲ್ಲಿದ್ದ ಮಹಾಶಯರೊಬ್ಬರು ಹೇಳಿದರಂತೆ. ಇದನ್ನ ಕೇಳಿ ಕಂಗಾಲಾದ ದರ್ಶನ್ ಅಂದು ಕಣ್ಣೀರಿಟ್ಟಿದ್ದರು.

ಸಂದರ್ಶನವೊಂದರಲ್ಲಿ ಬಾಯ್ಬಿಟ್ಟಿದ್ದ ದರ್ಶನ್
ಈ ಘಟನೆಯನ್ನ 2006, ಜನವರಿಯ 'ಚಿತ್ರ' ಸಿನಿ ಮಾಸಿಕಗೆ ಕೊಟ್ಟ ವಿಶೇಷ ಸಂದರ್ಶನದಲ್ಲಿ ದರ್ಶನ್ ಬಾಯ್ಬಿಟ್ಟಿದ್ದರು. 'ದರ್ಶನ್ ರಿಯಲ್ ಸ್ಟೋರಿ' ಅನ್ನೋ ಶೀರ್ಷಿಕೆ ಅಡಿ ದರ್ಶನ್ ಸಂದರ್ಶನ ಪ್ರಕಟವಾಗಿತ್ತು.

ಯಾರು ಅನ್ನೋ ಗುಟ್ಟು ಬಿಟ್ಟುಕೊಡದ ದರ್ಶನ್
ಘಟನೆ ಬಗ್ಗೆ ವಿವರ ನೀಡಿದ ದರ್ಶನ್, ಅವರಿಗೆ ಅವಮಾನ ಮಾಡಿದ್ದು ಯಾರು? ಅನ್ನೋದನ್ನ ಮಾತ್ರ ಸಂದರ್ಶನದಲ್ಲಿ ಹೇಳಿಲ್ಲ. ಅವರಿಗೆ ಹೊಡಿಯೋ ರೀತಿ ವರ್ತಿಸಿದ್ದು ಯಾರು ಅನ್ನೋ ಬಗ್ಗೆ ಎಲ್ಲೂ ಗುಟ್ಟು ಬಿಟ್ಟುಕೊಟ್ಟಿಲ್ಲ. 'ಧ್ರುವ' ನಿರ್ಮಾಪಕರು ಹೀಗೆ ಮಾಡಿದ್ದಾರಾ ಅಂದ್ರೆ, ಅದೇ ನಿರ್ಮಾಪಕರೊಂದಿಗೆ ದರ್ಶನ್, 'ಗಜ' ಮತ್ತು 'ಬೃಂದಾವನ' ಸಿನಿಮಾ ಮಾಡಿದ್ದಾರೆ. ಹೀಗಾಗಿ ದರ್ಶನ್ ಕುತ್ತಿಗೆಗೆ ಕೈಹಾಕಿದ್ದು ಯಾರು? ಅನ್ನೋ ಪ್ರಶ್ನೆ ಈಗಲೂ ಪ್ರಶ್ನೆಯಾಗೇ ಉಳಿದಿದೆ. [ದರ್ಶನ್ ಮಾರ್ಕೆಟ್ ಡೌನ್ ಅಂದೋರಿಗೆ ಇಲ್ಲಿದೆ ಉತ್ತರ]

ಎಲ್ಲವನ್ನ ಮೆಟ್ಟಿ ನಿಂತಿರುವ ದರ್ಶನ್
ಇಷ್ಟೆಲ್ಲಾ ಆದರೂ ದರ್ಶನ್, ಎಲ್ಲರಿಗೂ ಚಾಲೆಂಜ್ ಹಾಕಿ ಹಂತ ಹಂತವಾಗಿ ಬೆಳೆದು ಬಂದಿದ್ದಾರೆ. ಯಾರೊಂದಿಗೂ ದ್ವೇಷ ಸಾಧಿಸದ ದರ್ಶನ್ ಇಂದು ಅಭಿಮಾನಿಗಳ ಪ್ರೀತಿಯ 'ದಾಸ'.
ಮಾಹಿತಿ ಕೃಪೆ - ಮಹೇಶ್ ದೇವಶೆಟ್ಟಿ, ಪ್ರಜಾ ಟಿವಿ


Click it and Unblock the Notifications











