ಶಿವಣ್ಣ, ವಿಜಿ ಜೊತೆ ನಾರಾಯಣ್ ಚಂಡೆ-ಮದ್ದಳೆ
ಚಿತ್ರರಂಗಕ್ಕೆ ನಿವೃತ್ತಿ ಘೋಷಿಸಿ ಕೆಲದಿನಗಳ ಹಿಂದಷ್ಟೇ ವಾಪಸ್ಸಾಗಿದ್ದ ನಿರ್ದೇಶಕ ಎಸ್ ನಾರಾಯಣ್, ತಮ್ಮ ನಿರ್ದೇಶನದ ಅಪ್ಪಯ್ಯ ಚಿತ್ರದ ನಂತರ ಮಲ್ಟಿ ಸ್ಟಾರ್ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಆ ಚಿತ್ರಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ದುನಿಯಾ ವಿಜಯ್ ನಾಯಕರಾಗಲಿದ್ದಾರೆ ಎಂಬುದು ಬಂದ ಇತ್ತೀಚಿನ ವರ್ತಮಾನ.
ಸತತ ಸೋಲುಗಳಿಂದ ಕಂಗೆಟ್ಟು ಚಿತ್ರ ನಿರ್ದೇಶನಕ್ಕೆ ಗುಡ್ ಬೈ ಹೇಳಿದ್ದ ನಾರಾಯಣ್, ಕನ್ನಡದ ಬಹಳಷ್ಟು ನಾಯಕರ ವರ್ತನೆಯಿಂದ ಕೂಡ ರೋಸಿ ಹೋಗಿದ್ದರು. ಈ ಬಗ್ಗೆ ಹಲವು ಕಡೆ ಸಾಕಷ್ಟು ಮಾತನಾಡಿದ್ದ ಎಸ್ ನಾರಾಯಣ್, ನಿರ್ದೇಶನದಿಂದಲೇ ಹಿಂದಕ್ಕೆ ಸರಿದಿದ್ದರು. ನಂತರ ಹಿರಿಯ ನಟ ಅಂಬರೀಷ್ ಮಾತಿಗೆ ಬೆಲೆಕೊಟ್ಟು ನಿವೃತ್ತಿ ಹಿಂದಕ್ಕೆ ಪಡೆದಿದ್ದಾರೆ.
ನಂತರ ಮತ್ತೆ ತಮ್ಮ ಎಂದಿನ ಕ್ರಿಯೆಟಿವಿಟಿ ಪ್ರಾರಂಭಿಸಿರುವ ನಾರಾಯಣ್, ತಮ್ಮ ನಿರ್ದೇಶನದ ಅಪ್ಪಯ್ಯ ಚಿತ್ರದ ಬಿಡುಗಡೆಯನ್ನೇ ಕಾಯುತ್ತಿದ್ದಾರೆ. ಏಕೆಂದರೆ ನಿವೃತ್ತಿಯ ನಂತರ ಹೊಸದೇನನ್ನೋ ಮಾಡಲು ಅವರು ಕಾಯುತ್ತಿದ್ದಾರೆ. ಏನನ್ನೋ ಎನ್ನುವುದಕ್ಕಿಂತ ಅವರು ಶಿವಣ್ಣ ಹಾಗೂ ದುನಿಯಾ ವಿಜಯ್ ನಾಯಕತ್ವದಲ್ಲಿ ಮಲ್ಟಿ ಸ್ಟಾರ್ ಚಿತ್ರಕ್ಕೆ ಸ್ಕೆಚ್ ಹಾಕಿದ್ದಾರೆ. ಈ ಬಗ್ಗೆ ಮಾಹಿತಿಯನ್ನೂ ಹೊರಹಾಕಿದ್ದಾರೆ.
ಆದರೆ, ಸಂಪೂರ್ಣ ಮಾಹಿತಿಯನ್ನು ನಾರಾಯಣ್ ಬಹಿರಂಗಪಡಿಸಿಲ್ಲ. ಶಿವಣ್ಣ ಈ ಹಿಂದೆ ಸಾಕಷ್ಟು ಮಲ್ಟಿ ಸ್ಟಾರ್ ಚಿತ್ರಗಳಲ್ಲಿ ನಟಿಸಿದ್ದಾರೆ. ರವಿಚಂದ್ರನ್, ಜಗ್ಗೇಶ್, ಉಪೇಂದ್ರ, ವಿಜಯ ರಾಘವೇಂದ್ರ ಮುಂತಾದವರ ಜತೆ ಈಗಾಗಲೇ ಹಲವು ಚಿತ್ರಗಳಲ್ಲಿ ನಟಿಸಿರುವ ಶಿವಣ್ಣ ಈ ಚಿತ್ರ ಒಪ್ಪಿದರೆ ಆಶ್ಚರ್ಯವಿಲ್ಲ. ಆದರೆ ದುನಿಯಾ ವಿಜಯ್ ಇನ್ನೂ ಮಲ್ಟಿ ಸ್ಟಾರ್ ಚಿತ್ರದಲ್ಲಿ ನಟಿಸಿಲ್ಲ ಎನ್ನುವುದು ಗಮನಿಸತಕ್ಕ ಅಂಶ.
ಈ ಹಿಂದೆ ಚಂಡ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದ ಎಸ್ ನಾರಾಯಣ್ ಹಾಗೂ ದುನಿಯಾ ವಿಜಯ್ ಜಗಳ ಮಾಡಿಕೊಂಡಿದ್ದರು. ನಂತರ ಅವರಿಬ್ಬರ ಸಂಬಂಧ ಮತ್ತೆ ಮೊದಲಿನಂತೆ ಆಗಿದೆ ಎಂಬ ಸುದ್ದಿಯಿದೆ. ಇನ್ನು ಶಿವಣ್ಣ ಹಾಗೂ ನಾರಾಯಣ್ ಸಂಬಂಧ ಚೆನ್ನಾಗಿಯೇ ಇದೆ. ಹೀಗಾಗಿ ಈ ಚಿತ್ರ ತೆರೆಗೆ ಬರುವುದರಲ್ಲಿ ಸಂಶಯವಿಲ್ಲ ಎಂಬುದು ಸದ್ಯಕ್ಕೆ ಗಾಂಧಿನಗರದಲ್ಲಿ ಕೇಳಿಬರುತ್ತಿರುವ ಮಾತು. (ಒನ್ ಇಂಡಿಯಾ ಕನ್ನಡ)


Click it and Unblock the Notifications











