ರಾಜಾಜಿನಗರ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರಾ ಸಾ.ರಾ.ಗೋವಿಂದು.?
ಕರ್ನಾಟಕ ವಿಧಾನ ಸಭಾ ಚುನಾವಣೆ ಇನ್ನೇನು ಹತ್ತಿರ ಬಂತು. ಕರ್ನಾಟಕದಲ್ಲಿ ಚುನಾವಣಾ ಕಣ ರಂಗೇರುತ್ತಿರುವಾಗಲೇ, ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ರಾಜಕೀಯದತ್ತ ಮುಖ ಮಾಡುತ್ತಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ ಕನ್ನಡ ಪರ ಹೋರಾಟಗಾರರಾಗಿ ಗುರುತಿಸಿಕೊಂಡಿರುವ ಸಾ.ರಾ.ಗೋವಿಂದು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಮನಸ್ಸು ಮಾಡಿದ್ದಾರೆ ಎಂಬ ಸುದ್ದಿ ಸದ್ಯ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಮೂಲಗಳ ಪ್ರಕಾರ, ರಾಜಾಜಿನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಒಲವು ಸಾ.ರಾ.ಗೋವಿಂದು ರವರಿಗಿದೆ.
ಹಾಗಾದ್ರೆ, ಯಾವ ಪಕ್ಷದಿಂದ ಸಾ.ರಾ.ಗೋವಿಂದು ಚುನಾವಣೆಗೆ ನಿಲ್ತಾರೆ.? ಈ ಬಗ್ಗೆ ಖಚಿತ ಮಾಹಿತಿ ಹೊರ ಬಿದ್ದಿಲ್ಲ. ಆದ್ರೆ, ಚುನಾವಣೆ ಅಭ್ಯರ್ಥಿ ಆಗಲು ಎರಡು ಪಕ್ಷಗಳಿಂದ ಸಾ.ರಾ.ಗೋವಿಂದು ಅವರಿಗೆ ಆಫರ್ ಬಂದಿದ್ಯಂತೆ. ಎರಡು ಪಕ್ಷಗಳ ಪೈಕಿ ಸಾ.ರಾ.ಗೋವಿಂದು ಯಾವ ಪಕ್ಷವನ್ನ ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದು ಇನ್ನೂ ನಿಗೂಢ.

ಅಖಿಲ ಕರ್ನಾಟಕ ಡಾ.ರಾಜ್ ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷರಾಗಿರುವ ಸಾ.ರಾ.ಗೋವಿಂದು, ಚಿತ್ರ ನಿರ್ಮಾಪಕ ಕೂಡ ಹೌದು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿರುವ ಸಾ.ರಾ.ಗೋವಿಂದು, ನಾಡು-ನುಡಿ ವಿಷಯ ಬಂದಾಗ ಕೆಚ್ಚೆದೆಯಿಂದ ಬೀದಿಗಿಳಿದು ಹೋರಾಟ ನಡೆಸಿದವರು. ಕನ್ನಡ ಪರ ಅನೇಕ ಪ್ರತಿಭಟನೆಗಳ ನೇತೃತ್ವ ವಹಿಸಿದ್ದ ಸಾ.ರಾ.ಗೋವಿಂದು ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹ ಅಭ್ಯರ್ಥಿ ಎಂಬುದು ಹಲವರ ಅಭಿಪ್ರಾಯ.
ಹಾಗಾದ್ರೆ, ಈ ಬಾರಿ ಚುನಾವಣೆಯಲ್ಲಿ ಸಾ.ರಾ.ಗೋವಿಂದು ಸ್ಪರ್ಧಿಸುವುದು ಖಾತ್ರಿನಾ.? ಈ ಪ್ರಶ್ನೆಗೆ ಅವರೇ ಉತ್ತರ ಕೊಡಬೇಕು.


Click it and Unblock the Notifications











