ಟಾಲಿವುಡ್ ಹೀರೋಯಿನ್ ಅಂಜಲಿ ಮಿಸ್ಸಿಂಗ್
ಇತ್ತೀಚೆಗೆ ತೆರೆಕಂಡು ಯಶಸ್ವಿ ಪ್ರದರ್ಶನ ಕಂಡ ತೆಲುಗಿನ 'ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು' ಹೀರೋಯಿನ್ ಅಂಜಲಿ ಕಾಣೆಯಾಗಿದ್ದಾರೆ. ತನ್ನ ಮಲತಾಯಿ ಭಾರತಿದೇವಿ ಹಾಗೂ ನಿರ್ದೇಶಕ ಕಲಾಂಜಿಯಂ ಎಂಬುವವರು ತಮ್ಮನ್ನು ಮಾನಸಿಕವಾಗಿ ಹಿಂಸಿಸುತ್ತಿದ್ದಾರೆ ಎಂದು ಅಂಜಲಿ ಆರೋಪಿಸಿದ್ದರು.
ತನ್ನ ಮಲತಾಯಿ ಭಾರತಿದೇವಿ ಅವರು ತಮ್ಮನ್ನು ಎಟಿಎಂ ಮೆಷಿನ್ ನಂತೆ ಬಳಸಿಕೊಳ್ಳುತ್ತಿದ್ದಾರೆ. ಓವರ್ ಟೈಮ್ ಕೆಲಸ ಮಾಡುವಂತೆ ತನ್ನ ಮೇಲೆ ಒತ್ತಡ ತರುತ್ತಿದ್ದಾರೆ. ತಾನು ಸಂಪಾದಿಸಿದ ದುಡ್ಡಿನಲ್ಲಿ ಆಕೆ ಲಗ್ಜುರಿ ಜೀವನ ಸಾಗಿಸುತ್ತಿದ್ದಾರೆ ಎಂಬ ಆರೋಪಗಳನ್ನು ಅಂಜಲಿ ಮಾಡಿದ್ದರು.
ಇನ್ನು ನಿರ್ದೇಶಕ ಕಲಾಂಜಿಯಂ ಹಾಗೂ ಮಲತಾಯಿ ಇಬ್ಬರೂ ಸೇರಿ ನನ್ನ ಸ್ವಂತ ಅಕ್ಕ, ಅಣ್ಣನೊಂದಿಗೂ ಮಾತನಾಡಲು ಬಿಡುತ್ತಿಲ್ಲ ಎಂದಿದ್ದರು. ಈ ಎಲ್ಲಾ ಆರೋಪಗಳ ಬಳಿಕ ಅಂಜಲಿ ಈಗ ಕಾಣೆಯಾಗಿದ್ದಾರೆ ಎನ್ನಲಾಗಿದೆ. ಆಕೆ ಕಾಣೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.ಸದ್ಯಕ್ಕೆ ಈಕೆ 'ಬೋಲ್ ಬಚ್ಚನ್' ತೆಲುಗು ರೀಮೇಕ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದೆ. ಆದರೆ ಅಂಜಲಿ ಮಾತ್ರ ಚಿತ್ರೀಕರಣಕ್ಕೂ ಬಂದಿಲ್ಲ. ಆಕೆಯ ಫೋನ್ ಸಹ ಸ್ವಿಚ್ ಆಫ್ ಆಗಿದೆ ಎನ್ನುತ್ತವೆ ಟಾಲಿವುಡ್ ಮೂಲಗಳು.
ಇನ್ನೊಂದು ಕಡೆ ತಮ್ಮ ವಿರುದ್ಧ ಅಂಜಲಿ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾರೆ ಎಂದು ನಿರ್ದೇಶಕ ಕಲಾಂಜಿಯಂ ಚೆನ್ನೈ ಪೊಲೀಸರಿಗೆ ದೂರು ನೀಡಿದ್ದಾರೆ. ಪೋಲಿಸರು ಆಕೆಯ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ.
ತೆಲುಗು ನಟ ವಿಕ್ಟರಿ ವೆಂಕಟೇಶ್ ಜೊತೆ 'ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು' ಚಿತ್ರದ ಬಳಿಕ ಅಂಜಲಿ ಪ್ರವರ್ಧಮಾನಕ್ಕೆ ಬಂದಿದ್ದರು. ಒಂದೇ ಚಿತ್ರದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದರು ಅಂಜಲಿ. ಈಗ ಆಕೆ ಕಾಣೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.


Click it and Unblock the Notifications












