ಕಾಳಿ ಬಳಿಕ ಈಗ ಶಿವ-ಪಾರ್ವತಿ ಧೂಮಪಾನ ಮಾಡುತ್ತಿರುವ ಚಿತ್ರ ಹಂಚಿಕೊಂಡ ನಿರ್ದೇಶಕಿ
ದೇವತೆ ಕಾಳಿ ಧೂಮಪಾನ ಮಾಡುತ್ತಿರುವಂಥೆ ಪೋಸ್ಟರ್ ಹಂಚಿಕೊಂಡು ವಿವಾದ ಎಬ್ಬಿಸಿದ್ದ ನಿರ್ದೇಶಕಿ ಲೀನಾ ಮಣಿಮೇಕಳೈ ಈಗ ಶಿವ ಪಾರ್ವತಿ ವೇಷಧಾರಿಗಳು ಧೂಮಪಾನ ಮಾಡುತ್ತಿರುವ ಚಿತ್ರ ಹಂಚಿಕೊಂಡಿದ್ದಾರೆ.
ಲೀನಾ 'ಕಾಳಿ' ಹೆಸರಿನ ಸಿನಿಮಾ ಮಾಡುತ್ತಿದ್ದು, ತಾವೇ ಕಾಳಿ ರೂಪದಲ್ಲಿ ಮೇಕಪ್ ಮಾಡಿಕೊಂಡು ಕೈಯಲ್ಲಿ ಎಲ್ಜಿಬಿಟಿಕ್ಯು ಸಮುದಾಯದ ಭಾವುಟ ಹಿಡಿದು ಸಿಗರೇಟು ಸೇದುತ್ತಿರುವ ಪೋಸ್ಟರ್ ಅನ್ನು ಕೆಲವು ದಿನಗಳ ಹಿಂದೆ ಹಂಚಿಕೊಂಡಿದ್ದರು.
ಈಗ ಶಿವ-ಪಾರ್ವತಿ ವೇಷಧಾರಿಗಳು ಧೂಮಪಾನ ಮಾಡುತ್ತಿರುವ ಚಿತ್ರವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ ಲೀನಾ. ನಿರ್ದೇಶಕಿ ಲೀನಾ ಹಂಚಿಕೊಂಡಿರುವ ಈ ಚಿತ್ರಕ್ಕೆ ಸಾವಿರಾರು ಕಮೆಂಟ್ಗಳು ಬಂದಿದ್ದು, ಬಹುಪಾಲು ಮಂದಿ ಲೀನಾ ಅನ್ನು ನಿಂದಿಸಿದ್ದಾರೆ.

ಶಿವ-ಪಾರ್ವತಿಯ ಚಿತ್ರ ಹಂಚಿಕೊಂಡಿರುವ ಲೀನಾ
ಶಿವ ಪಾರ್ವತಿ ವೇಷಧಾರಿಗಳು ಧೂಮಪಾನ ಮಾಡುತ್ತಿರುವ ಚಿತ್ರ ಹಂಚಿಕೊಂಡಿರುವ ಲೀನಾ, ''ಬಿಜೆಪಿಯ ಟ್ರೋಲ್ 'ಸಿಬ್ಬಂದಿ'ಗೆ ಗ್ರಾಮೀಣ ಭಾರತದ ಕಲಾವಿದರು ತಮ್ಮ ಪ್ರದರ್ಶನದ ನಡುವೆ ಹೇಗೆ ತಮ್ಮ ಒತ್ತಡ ಕಡಿಮೆ ಮಾಡಿಕೊಳ್ಳುತ್ತಾರೆ, ಹೇಗೆ ಬದುಕುತ್ತಾರೆ ಎಂಬ ಬಗ್ಗೆ ಮಾಹಿತಿಯೇ ಇಲ್ಲ. ಇಲ್ಲಿ ಹಂಚಿಕೊಂಡಿರುವ ಚಿತ್ರ ನನ್ನ ಸಿನಿಮಾದ್ದಲ್ಲ, ಭಾರತದ ಯಾವುದೋ ಹಳ್ಳಿಯಲ್ಲಿ ತೆಗೆದ ಚಿತ್ರ. ಈ ರೀತಿಯ ದೃಶ್ಯಗಳು ಭಾರತದ ಗ್ರಾಮೀಣ ಭಾಗಗಳಲ್ಲಿ ಪ್ರತಿದಿನ ನೋಡಲು ಸಿಗುತ್ತವೆ. ಆದರೆ ಈ ಸಂಘ ಪರಿವಾರದವರು ತಮ್ಮ ನಿರಂತರ ದ್ವೇಷ ಧಾರ್ಮಿಕ ಅಂಧತ್ವದ ಮೂಲಕ ಗ್ರಾಮ್ಯ ಭಾರತದ ಸುಂದರತೆಯನ್ನು ಒಡೆಯಲು ನೋಡುತ್ತಿದ್ದಾರೆ. 'ಹಿಂದುತ್ವ' ಎಂದೂ ಭಾರತ ಆಗಲಾರದು'' ಎಂದಿದ್ದಾರೆ.

''ಟ್ರೋಲ್ಗಳಿಗೆ ಧಕ್ಕೆ ಆಗಬಹುದಾದಷ್ಟು ಧಾರ್ಮಿಕತೆ, ಸೂಕ್ಷ್ಮತೆಯೇ ಇಲ್ಲ''
''ಬೆಟ್ಟದಷ್ಟು ದ್ವೇಷ ಹಾಗೂ ಕೆಟ್ಟ ನಿಂದನೆಗಳನ್ನು ನಾನು ನೋಡುತ್ತಿದ್ದೇನೆ. ಈ ದ್ವೇಷ ಹಂಚುವ ಟ್ರೋಲ್ಗಳಿಗೆ ಧಕ್ಕೆ ಆಗಬಹುದಾದ ಧಾರ್ಮಿಕತೆಯಾಗಲಿ ಸೂಕ್ಷ್ಮತೆಯಾಗಲಿ ಇಲ್ಲವೇ ಇಲ್ಲ. ನನ್ನ ಕಾಳಿ ಭಾರತದ ಮೂಲ ನಿವಾಸಿಗಳ, ಜನಪದರ ಕಾಳಿಯಾಗಿದ್ದಾಳೆ. ತೆಲುಗು ರಾಜ್ಯಗಳು, ತಮಿಳುನಾಡುಗಳಲ್ಲಿ ಪೂಜಿಸಲಾಗುವ ಕಾಳಿ ನನ್ನ ಸಿನಿಮಾಕ್ಕೆ ಸ್ಪೂರ್ತಿ'' ಎಂದಿದ್ದಾರೆ ಲೀನಾ.

''ಗ್ರಾಮೀಣ ಪ್ರದೇಶದ ಕಾಳಿ, ಕುಡಿಯುತ್ತಾಳೆ, ಗಾಂಜಾ ಸೇದುತ್ತಾಳೆ''
''ತೆಲುಗು ರಾಜ್ಯಗಳು, ತಮಿಳುನಾಡುಗಳಲ್ಲಿ ಕಾಳಿ ಜನಪದರ ದೇವರು, ಆಕೆ ಊರಿನ ಜನರ ಮೈಮೇಲೆ ಆವಾಹಿಸುತ್ತಾಳೆ, ಆಕೆ ಮಾಂಸ ತಿನ್ನುತ್ತಾಳೆ, ಗಾಂಜಾ ಸೇದುತ್ತಾಳೆ, ಕಳ್ಳು ಸಾರಾಯಿ ಕುಡಿಯುತ್ತಾಳೆ, ಊರ ಮಧ್ಯೆ ಮೂತ್ರ ಮಾಡುತ್ತಾಳೆ, ಮನಬಂದಂತೆ ನರ್ತಿಸುತ್ತಾಳೆ. ಅಂಥಹಾ ಕಾಳಿ ನನ್ನ ಸಿನಿಮಾಕ್ಕೆ ಸ್ಪೂರ್ತಿ. ಅಲ್ಲದೆ, ಕಾಳಿ ಯಾರ ಸ್ವತ್ತೂ ಅಲ್ಲ, ಆಕೆ ಮರಣದ ದೇವತೆ, ಆಕೆಯನ್ನು ಯಾರೂ ಸ್ವಾಧೀನಪಡಿಸಿಕೊಳ್ಳಲಾರರು'' ಎಂದಿದ್ದಾರೆ ಲೀನಾ.

ಎರಡು ಲಕ್ಷ ಟ್ವೀಟ್ಗಳನ್ನು ಯಾವಾಗ ಡಿಲೀಟ್ ಮಾಡುತ್ತೀರಿ?
ಧೂಮಪಾನ ಮಾಡುತ್ತಿರುವ ಕಾಳಿಯ ಚಿತ್ರವುಳ್ಳ ಲೀನಾರ ಟ್ವೀಟ್ ಅನ್ನು ಟ್ವಿಟ್ಟರ್ ಡಿಲೀಟ್ ಮಾಡಿದೆ. ಲೀನಾ ವಿರುದ್ಧ ದೆಹಲಿ ಸೇರಿದಂತೆ ಹಲವು ಕಡೆ ದೂರುಗಳು ದಾಖಲಾಗಿವೆ. ಕೆನಡಾದ ರಾಯಭಾರಿ ಕಚೇರಿಗೆ ಸಹ ಈ ಬಗ್ಗೆ ದೂರು ನೀಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಲೀನಾ, ನನಗೆ ಎಲ್ಲೂ ಸುರಕ್ಷಿತ ಭಾವ ಮೂಡುತ್ತಿಲ್ಲ, ನನ್ನ ಕುಟುಂಬದವರಿಗೂ ಜೀವ ಬೆದರಿಕೆ ಹಾಕಲಾಗಿದೆ ಎಂದಿದ್ದಾರೆ. ಅಲ್ಲದೆ, ತಮ್ಮ ಟ್ವೀಟ್ ಅನ್ನು ಡಿಲೀಟ್ ಮಾಡಿರುವ ಬಗ್ಗೆ ಟ್ವಿಟ್ಟರ್ ಇಂಡಿಯಾವನ್ನು ಪ್ರಶ್ನಿಸಿರುವ ಲೀನಾ, ನನಗೆ ಅವಾಚ್ಯವಾಗಿ ಟ್ವೀಟ್ ಮಾಡಿದ ಎರಡು ಲಕ್ಷ ಟ್ವೀಟ್ಗಳನ್ನು ಯಾವಾಗ ಡಿಲೀಟ್ ಮಾಡುವಿರಿ? ಎಂದು ಪ್ರಶ್ನಿಸಿದ್ದಾರೆ.


Click it and Unblock the Notifications











