ಹಾಲಿವುಡ್ಗೆ ಲಗ್ಗೆಯಿಟ್ಟ ಪ್ರಭಾಸ್: ಹಾರರ್ ಸಿನಿಮಾದಲ್ಲಿ ನಟನೆ?
ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಶೀಘ್ರದಲ್ಲೇ ಹಾಲಿವುಡ್ ಪ್ರವೇಶಿಸುತ್ತಿದ್ದಾರೆ ಎಂಬ ಸುದ್ದಿ ಸದ್ದು ಮಾಡ್ತಿದೆ. ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ ಹೆಚ್ಚು ಬ್ಯುಸಿಯಿರುವ ನಟ ಹಾಲಿವುಡ್ ನಿರ್ಮಾಣ ಸಂಸ್ಥೆಯೊಂದರ ಜೊತೆ ಮಾತುಕತೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ಬಾಲಿವುಡ್ ಲೈಫ್ ವೆಬ್ಸೈಟ್ ವರದಿ ಮಾಡಿದೆ.
ಬಾಹುಬಲಿ ನಂತರ ರಾಷ್ಟ್ರಮಟ್ಟದಲ್ಲಿ ಅಭಿಮಾನಿಗಳನ್ನು ಸಂಪಾದಿಸಿರುವ ನಟ ಈಗ ಅಂತಾರಾಷ್ಟ್ರೀಯ ಚಿತ್ರೋಧ್ಯಮಕ್ಕೆ ಪರಿಚಯ ಆಗುವ ಮಾರ್ಗದಲ್ಲಿದ್ದಾರೆ. ಹಾಲಿವುಡ್ ನಿರ್ಮಾಪಕರು ಪ್ರಭಾಸ್ ಜೊತೆ ಸಿನಿಮಾ ಮಾಡಲು ಆಸಕ್ತಿ ತೋರಿದ್ದು, ಸ್ಕ್ರಿಪ್ಟ್ ಹೇಳಲು ಸಮಯ ಕೇಳಿದ್ದಾರಂತೆ.
ಸದ್ಯದ ವರದಿ ಪ್ರಕಾರ, ಇದೊಂದು ಹಾರರ್ ಸಿನಿಮಾ ಎನ್ನಲಾಗಿದೆ. ಈ ಹಿಂದೆ ಸಂದರ್ಶನದಲ್ಲಿ ಮಾತನಾಡಿದ್ದ ಪ್ರಭಾಸ್ ಹಾರರ್ ಸಿನಿಮಾ ಅಂದ್ರೆ ನನಗೆ ಭಯ ಎಂದಿದ್ದರು. ಈಗ ಹಾರರ್ ಚಿತ್ರಕ್ಕಾಗಿ ಆಫರ್ ಬಂದಿದೆ. ಈ ಪ್ರಾಜೆಕ್ಟ್ ಓಕೆ ಆಗುತ್ತಾ ಗೊತ್ತಿಲ್ಲ. ಆದರೆ, ಹಾಲಿವುಡ್ ಅಂಗಳಕ್ಕೆ ಪ್ರಭಾಸ್ ಅವರನ್ನು ಕರೆದುಕೊಂಡು ಹೋಗಲು ನಿರ್ಮಾಪಕರು ಮುಂದಾಗಿರುವುದು ಮಾತ್ರ ಡಾರ್ಲಿಂಗ್ ಅಭಿಮಾನಿಗಳು ಸಂತಸದ ಸುದ್ದಿ.
ಸದ್ಯಕ್ಕೆ ಆ ಸಂಸ್ಥೆ ಯಾವುದು, ಆ ನಿರ್ಮಾಪಕ ಯಾರು ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಅದರೆ, ಒಟಿಟಿ ವೇದಿಕೆಯಲ್ಲಿ ಹಾಗೂ ಭಾರತೀಯ ಕಿರುತೆರೆಯಲ್ಲೂ ಈ ಪ್ರೊಡಕ್ಷನ್ ಸಂಸ್ಥೆ ಹೆಚ್ಚು ಖ್ಯಾತಿ ಪಡೆದುಕೊಂಡಿದೆಯಂತೆ. ಮುಂದೆ ಓದಿ...

ಕಥೆ ಓಕೆ ಆದರೆ ಮುಂದಿನ ಚರ್ಚೆ
ಹಾರರ್ ಸಿನಿಮಾದ ಸ್ಕ್ರಿಪ್ಟ್ ಕಳುಹಿಸಲಾಗಿದೆಯಂತೆ. ಈ ಸ್ಕ್ರಿಪ್ಟ್ ಓದಿದ ಮೇಲೆ ಇಷ್ಟವಾದರೂ ಮುಂದಿನ ವಿಚಾರಗಳನ್ನು ಚರ್ಚಿಸೋಣ ಎಂದು ತಿಳಿಸಿದೆಯಂತೆ. ಕಥೆ ಇಷ್ಟವಾದರೆ ಸಂಭಾವನೆ, ಶೂಟಿಂಗ್ ಪ್ಲಾನ್, ಒಪ್ಪಂದ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಮಾತನಾಡೋಣ ಎಂದು ಹೇಳಿದ್ದಾರಂತೆ. ಹಾರರ್ ಸಿನಿಮಾಗಳ ಭಯ ವ್ಯಕ್ತಪಡಿಸಿರುವ ಪ್ರಭಾಸ್ ಈ ಚಿತ್ರವನ್ನು ಮಾಡ್ತಾರೆ ಎನ್ನುವ ನಂಬಿಕೆ ಇಲ್ಲ ಅಂತಿದ್ದಾರೆ ನೆಟ್ಟಿಗರು. ಇನ್ನು ಪ್ರಭಾಸ್ ಅವರ ಮುಂಬೈ ಮನೆ ಸದ್ಯಕ್ಕೆ ಹಾಲಿವುಡ್ ಏಜೆಂಟ್ಗಳಿಂದ ತುಂಬಿದೆ ಎನ್ನುವ ಮಾತು ಸಹ ಕೇಳಿ ಬರ್ತಿದೆ.

ರಾಧೆಶ್ಯಾಮ್ ಮರು ಚಿತ್ರೀಕರಣ
ಪ್ರಭಾಸ್ ಮತ್ತು ಪೂಜಾ ಹೆಗ್ಡೆ ನಟನೆಯ 'ರಾಧೆಶ್ಯಾಮ್' ಸಿನಿಮಾ ಸಂಕ್ರಾಂತಿ ಹಬ್ಬದ ವಿಶೇಷವಾಗಿ ತೆರೆಗೆ ಬರ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದ್ದು, ಅಂತಿಮ ಹಂತದ ಚಿತ್ರೀಕರಣದಲ್ಲಿ ತೊಡಗಿಕೊಂಡಿದೆ. ವರದಿಗಳ ಪ್ರಕಾರ, ಸಿನಿಮಾ ಶೂಟಿಂಗ್ ಬಹುತೇಕ ಮುಗಿದಿತ್ತು. ಅದರೆ, ಕೊನೆ ಕ್ಷಣದಲ್ಲಿ ಕೆಲವು ದೃಶ್ಯಗಳ ಮರು ಚಿತ್ರೀಕರಣ ಮಾಡಲು ಚಿತ್ರತಂಡ ತೀರ್ಮಾನಿಸಿದೆಯಂತೆ. ಯೂರೋಪ್ನಲ್ಲಿ ಬಹುಪಾಲು ಚಿತ್ರೀಕರಣ ನಡೆದಿದ್ದು, ರಾಧಕೃಷ್ಣ ನಿರ್ದೇಶಿಸಿದ್ದಾರೆ.

ಮುಂದಕ್ಕೆ ಹೋದ ಸಲಾರ್
ಕೆಜಿಎಫ್ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಪ್ರಭಾಸ್ ಸಲಾರ್ ಸಿನಿಮಾ ಮಾಡ್ತಿದ್ದು, ಎರಡು ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. 2022ರ ಏಪ್ರಿಲ್ ತಿಂಗಳಲ್ಲಿ ಸಿನಿಮಾ ರಿಲೀಸ್ ಮಾಡುವುದಾಗಿ ಪ್ರಕಟಿಸಿದ್ದರು. ಆದ್ರೀಗ, ಕೊರೊನಾದಿಂದ ಆದ ಬೆಳವಣಿಗೆಯಿಂದಾಗಿ ಸಲಾರ್ ಹೇಳಿದ್ದ ದಿನಕ್ಕೆ ಕೆಜಿಎಫ್ ಬರ್ತಿದೆ. ಹಾಗಾಗಿ, ಕೆಜಿಎಫ್ ಚಿತ್ರಕ್ಕಾಗಿ ಸಲಾರ್ ಮುಂದೂಡಿಕೆಯಾಗಿದೆ. ಹೊಂಬಾಳೆ ಫಿಲಂಸ್ ಈ ಚಿತ್ರ ನಿರ್ಮಿಸಿದ್ದು, ಶ್ರುತಿ ಹಾಸನ್ ನಾಯಕಿಯಾಗಿದ್ದಾರೆ. ತೆಲುಗು ನಟ ಜಗಪತಿಬಾಬು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಆದಿಪುರುಷ್ ಚಿತ್ರೀಕರಣ
ಓಂ ರಾವತ್ ನಿರ್ದೇಶನದಲ್ಲಿ ಆದಿಪುರುಷ್ ಸಿನಿಮಾವೂ ಶುರುವಾಗಿದೆ. ಮುಂಬೈನಲ್ಲಿ ಅತಿ ದೊಡ್ಡ ಸೆಟ್ ಹಾಕಲಾಗಿದ್ದು, ಭರ್ಜರಿಯಾಗಿ ಶೂಟಿಂಗ್ ಮಾಡಲಾಗುತ್ತಿದೆ. ಸಲಾರ್ ಚಿತ್ರೀಕರಣ ಮುಗಿಸಿರುವ ಪ್ರಭಾಸ್, ಮುಂಬೈಗೆ ಬಂದು ಆದಿಪುರುಷ್ ಆರಂಭಿಸಿದ್ದಾರೆ. ಈ ಚಿತ್ರದಲ್ಲಿ ಪ್ರಭಾಸ್ ಶ್ರೀರಾಮನ ಪಾತ್ರದಲ್ಲಿ ನಟಿಸುತ್ತಿದ್ದು, ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸೀತೆಯಾಗಿ ಕೃತಿ ಸನೂನ್ ಬಣ್ಣ ಹಚ್ಚಿದ್ದಾರೆ.


Click it and Unblock the Notifications











