ಸಂದರ್ಶನ : ತಮ್ಮ ಚುನಾವಣೆಯ ಕ್ಷೇತ್ರದ ಬಗ್ಗೆ ಉಪ್ಪಿ ಹೇಳೋದೇನು?
ಕರ್ನಾಟಕದಲ್ಲಿ ಮತ್ತೆ ಚುನಾವಣೆ ಬರುತ್ತಿದೆ. ಈಗಾಗಲೇ ಬಿ.ಜೆ.ಪಿ, ಕಾಂಗ್ರೆಸ್, ಜೆ.ಡಿ.ಎಸ್ ಸೇರಿದಂತೆ ಎಲ್ಲ ಪಕ್ಷದಲ್ಲಿ ಚುನಾವಣೆಗೆ ತಯಾರಿ ನಡೆಯುತ್ತಿದೆ. ಇದೀಗ ಉಪೇಂದ್ರ ಕೂಡ ತಮ್ಮ 'ಕೆ.ಪಿ.ಜೆ.ಪಿ' ಪಕ್ಷದ ಕೆಲಸಗಳನ್ನು ಶುರು ಮಾಡಿದ್ದಾರೆ.
ಇಂದು ಉಪೇಂದ್ರ ತಮ್ಮ ಪಕ್ಷದ ಪತ್ರಿಕಾಗೋಷ್ಠಿ ಕಾರ್ಯಕ್ರಮವನ್ನು ಮೈಸೂರಿನಲ್ಲಿ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ಮಾಡಿರುವ ಉಪ್ಪಿ ತಮ್ಮ ಪ್ರಜಾಕೀಯ ಕಲ್ಪನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ.
ಇದೇ ವೇಳೆ 'ಒನ್ ಇಂಡಿಯಾ' ಪ್ರತಿನಿಧಿಯೊಂದಿಗೆ ಉಪ್ಪಿ ಮಾತನಾಡಿದ್ದಾರೆ. ತಮ್ಮ ಪಕ್ಷದ ಮುಂದಿನ ಗುರಿ.. ತಮ್ಮ ಚುನಾವಣೆಯ ಕ್ಷೇತ್ರ.. ಮೈಸೂರಿನಲ್ಲಿಯೇ ಪತ್ರಿಕಾಗೋಷ್ಠಿ ಮಾಡಿದ ಕಾರಣ... ಈ ಎಲ್ಲ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅಂದಹಾಗೆ, ಉಪೇಂದ್ರ ಅವರು ನೀಡಿರುವ ಸಂದರ್ಶನದ ಆಯ್ದ ಭಾಗ ಇಲ್ಲಿದೆ ಓದಿ...
ಸಂದರ್ಶನ : ಯಶಸ್ವಿನಿ ಎಂ.ಕೆ

* ಪ್ರಜಾಕೀಯ ಎನ್ನುವ ಕಲ್ಪನೆ ಹುಟ್ಟಿದ ಬಗೆ ಹೇಗೆ.?
''ನನ್ನಲ್ಲಿ ಏನೋ ಒಂದು ಅಸಮಾಧಾನ ಕಾಡುತ್ತಲೇ ಇತ್ತು. ನನ್ನನ್ನು ಇಷ್ಟು ಮೇಲೆ ತಂದ ಜನರಿಗೆ ನಾನೇನಾದರೂ ಮಾಡಬೇಕೆಂಬ ಕಲ್ಪನೆ ಅದಾಗಿತ್ತು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳಾಗಬೇಕು. ಆದರೆ ನಮ್ಮ ನಡುವೆ ಅದೆಲ್ಲವೂ ಉಲ್ಟಾ ಹೊಡೆಯುತ್ತಿದೆ. ಈ ವ್ಯವಸ್ಥೆಯ ಬದಲಾವಣೆ ನಮ್ಮ ಪ್ರಜೆಗಳೆಂಬ ಪ್ರಭುಗಳಿಂದಾಗಬೇಕು ಹಾಗಾಗಿ ಪ್ರಜಾಕೀಯವೆಂಬ ಮಗು ಹುಟ್ಟಿದೆ'' - ಉಪೇಂದ್ರ

ಚುನಾವಣೆ 8 ತಿಂಗಳಿರಬೇಕಾದಾಗಲೇ ನಿಮ್ಮ ಪಕ್ಷದ ಉದಯ ಏಕೆ.?
''ಸದ್ಯ ಎಲ್ಲರಿಗೂ ಚುನಾವಣೆ ಎಂಬ ಐಡಿಯಾಸ್ ಹೊರಹೊಮ್ಮುತ್ತಿದೆ. ನನ್ನ ಟಾರ್ಗೆಟ್ ಚುನಾವಣೆ ಅಲ್ಲವೇ ಅಲ್ಲ. ನಮ್ಮ ಗುರಿ ಮಲೀನವಾಗಿದ್ದನ್ನು ಸರಿಪಡಿಸುವುದೇ ವಿನಃ ಸುಖಾಸುಮ್ಮನೇ ನಾವು ಗೆಲ್ಲಲೇಬೇಕೆಂಬ ಹಠ ಮಾಡಿ ಅಥವಾ ಎದುರಾಳಿಗಳನ್ನು ಸೋಲಿಸಿಯೇ ತೀರುತ್ತೇವೆ ಎಂಬ ಕಲ್ಪನೆಯುಳ್ಳದ್ದಲ್ಲ. ಚುನಾವಣೆಯಲ್ಲಿ ಕೆಲಸ ಮಾಡದವರಿಗೆ ಹಾಕುವ ಮತ ದಂಡವಾಗದೇ ಅದನ್ನು ನಮಗೆ ತಕ್ಕುದಾದ ವ್ಯಕ್ತಿಗೆ ಹಾಕಿ ಕೆಲಸ ಮಾಡಿಸಿಯೇ ತೀರಬೇಕೆಂಬ ಮನಃಸ್ಥಿತಿಯಲ್ಲಿ ಉದಯವಾಗಿರುವುದು ಕೆಪಿಜೆಪಿ'' - ಉಪೇಂದ್ರ

ನೀವೊಬ್ಬ ಆಶಾವಾದಿ ಎಂದು ಎಲ್ಲರಿಗೂ ಅನಿಸುತ್ತಿದೆ.. ಏಕೆ.?
''ಸಮಾಜದಲ್ಲಿ ಬದಲಾವಣೆಯಾಗಬೇಕು ಎಂದರೆ ಆಶಾವಾದಿತನ ತಪ್ಪಿಲ್ಲ. ನಮ್ಮದು ಬದಲಾವಣೆಯ ಪಕ್ಷವೇ ಹೊರೆತು ಸೆಡ್ಡು ಹೊಡೆಯುವ ನಾಯಕತ್ವದ ಅಥವಾ ಫ್ಯಾಮಿಲಿ ಪಾಲಿಟಿಕ್ಸ್ ನಮ್ಮದಲ್ಲ'' - ಉಪೇಂದ್ರ

ನಿಮ್ಮ ಪಕ್ಷದಿಂದ ಸ್ಫರ್ಧಿಸುವ ಅಭ್ಯರ್ಥಿಗೆ ಇರಬೇಕಾದ ಪ್ರಮುಖ ಗುಣವೇನು.?
''ಜನಗಳಿಂದ ನಾಯಕ ಹುಟ್ಟಬೇಕು ಅದಕ್ಕಾಗಿ ಅಭ್ಯರ್ಥಿಗಳಿಗಾಗಿ ಈ ಚೇರ್ ಖಾಲಿ ಬಿಟ್ಟಿದ್ದೇವೆ. ಪ್ರಜಾಕೀಯ ಪಕ್ಷಕ್ಕೆ ಬರುವವರಿಗೆ ವಿದ್ಯಾರ್ಹತೆ ಬೇಕಿಲ್ಲ. ಅವರು ನಿಷ್ಠಾವಂತರಾಗಿರಬೇಕು. ಇಂತಹ ಮನಃಸ್ಥಿತಿಯುಳ್ಳವರು ಮಾತ್ರ ನಮಗಿರಲಿ'' - ಉಪೇಂದ್ರ

ನಿಮ್ಮ ಸ್ಪರ್ಧೆ ಯಾವ ಕ್ಷೇತ್ರದಿಂದ ನಡೆಯಲಿದೆ ?
''ನಾನು ಇನ್ನು ಯಾವ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಬೇಕು ಎಂದು ನಿರ್ಧರಿಸಿಲ್ಲ. ರಾಜ್ಯಾದ್ಯಂತ ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕು ಎಂಬುವುದರ ಬಗ್ಗೆ ಸದ್ಯದಲ್ಲೇ ಚರ್ಚಿಸಿ ನಿರ್ಧರಿಸಲಾಗುವುದು'' - ಉಪೇಂದ್ರ

ಯಾವ ನಟರು ನಿಮಗೆ ಬೆಂಬಲಿಸಿದ್ದಾರೆ.?
''ಚುನಾವಣೆಯಲ್ಲಿ ಯಾರು ಬೇಕಾದರೂ ನಿಲ್ಲಬಹುದು. ಜನಸೇವೆ ಇಚ್ಛೆಯಿದ್ದವರು ನಮ್ಮ ಪಕ್ಷಕ್ಕೆ ಬರಬಹುದು. ದುಡ್ಡು, ನಾಯಕನ ಇಮೇಜ್ ಇಲ್ಲಿ ನಡೆಯುವುದಿಲ್ಲ. ಪ್ರಿಯಾಂಕ ಕೆಲಸ ಮಾಡುವುದಾದರೇ ಬರಲಿ. ಶಿವಣ್ಣ, ಯಶ್, ಸುದೀಪ್ ಮಾತಾಡಿ ಬೆಂಬಲ ಸೂಚಿಸಿದ್ದಾರೆ. ಇದುವರೆಗೂ ಯಾವ ನಟರು ನನ್ನ ಪಕ್ಷಕ್ಕೆ ಬರುವ ಬಗ್ಗೆ ಅವರು ಹೇಳಿಲ್ಲ, ನಾನು ಕೇಳಿಲ್ಲ'' - ಉಪೇಂದ್ರ

ಸಿದ್ಧರಾಮಯ್ಯರವರ ಕ್ಷೇತ್ರದಲ್ಲಿಯೇ ನಿಮ್ಮ ಪತ್ರಿಕಾಗೋಷ್ಠಿ ಏಕೆ.?
''ನಾನೆಂದಿಗೂ ಮೈಸೂರನ್ನು ಸಿಎಂ ಸಿದ್ಧರಾಮಯ್ಯ ಕ್ಷೇತ್ರವೆಂದುಕೊಂಡು ಬಂದಿಲ್ಲ. ಇಡೀ ರಾಜ್ಯವೇ ಕನ್ನಡಿಗರದ್ದು, ನಾನು ಕನ್ನಡಿಗ. ನಮ್ಮ ರಾಜ್ಯದಲ್ಲಿ ನಾವು ಓಡಾಡಲು ನಮಗೇಕೆ ಭಯ. ಇಲ್ಲಿರುವ ಪ್ರತೀ ಜಿಲ್ಲೆಯಲ್ಲೂ ನಾಯಕರು, ಸಾಧಕರು ಇದ್ದಾರೆ'' - ಉಪೇಂದ್ರ


Click it and Unblock the Notifications











