'ಗ್ಲಾಮರ್ ಓಕೆ ಆದರೆ, ವಲ್ಗರ್ ಬಯಸುವುದೇಕೆ?' ಸಂಹಿತಾ ವಿನ್ಯಾ ಪ್ರಶ್ನೆ
ವಿಶ್ವಸುಂದರಿಯರನ್ನು ಕೊಟ್ಟ ನಮ್ಮ ರಾಜ್ಯದಲ್ಲಿ ಚೆಲುವು ಮತ್ತು ಚೆಲುವೆಯರಿಗೆ ಕೊರತೆಯಿಲ್ಲ. ಆದರೆ ಅವರನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವುದು ಅಪರೂಪ. ಮೊದಲೆಲ್ಲ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡ ಚೆಲುವೆಯರು ಸಿನಿಮಾಗಳಿಗೆ ಬೇಕಾದಲ್ಲಿ ಮುಂಬೈಯತ್ತ ಕಣ್ಣು ಹಾಯಿಸಬೇಕಿತ್ತು. ಆದರೆ ಇಂದು ಫ್ಯಾಷನ್ ಲೋಕ ಬೆಂಗಳೂರಿನಲ್ಲಿಯೇ ದೊಡ್ಡದಾಗಿ ಬೆಳೆದು ನಿಂತಿದೆ. ಅದರಲ್ಲಿ ನಮ್ಮ ಮಂದಿ ಹೆಸರನ್ನು ಪಡೆಯುತ್ತಿದ್ದಾರೆ. ಆ ಸಾಲಿನಲ್ಲಿ ಪ್ರಸ್ತುತ ಮುಂಚೂಣಿಯಲ್ಲಿ ಕೇಳಿ ಬರುವ ಹೆಸರು ಸಂಹಿತಾ ವಿನ್ಯಾರದ್ದು.
ಫ್ಯಾಷನ್ ಶೋಗಳಲ್ಲಿ ಶೋ ಸ್ಟಾಪರ್ ಆಗಿಯೇ ಹೆಜ್ಜೆಯಿಟ್ಟು ಅಲ್ಲಿಂದ ಚಿತ್ರರಂಗದಲ್ಲಿ ಕೂಡ ಹೆಸರು ಮಾಡಿರುವುದು ಕಾರಣ ಇರಬಹುದು. ಆದರೆ ಇಂದಿಗೂ ಕನ್ನಡದ ಸ್ಟಾರ್ ಚಿತ್ರಗಳ ನಾಯಕಿಯಾಗಲು ಸಾಧ್ಯವಾಗದಿರುವ ಬಗ್ಗೆ ಸಂಹಿತಾಗೆ ಕೊರಗಿದೆ. ಅವರ ಇದುವರೆಗಿನ ಪಯಣ, ಆಶೆ, ಆಕಾಂಕ್ಷೆಗಳ ಕುರಿತು ಫಿಲ್ಮೀಬೀಟ್ ಜತೆಗೆ ಅವರು ಮನಸು ತೆರೆದು ಮಾತನಾಡಿದ್ದಾರೆ.

ಪ್ರಸ್ತುತ ಸಿನಿಮಾದಲ್ಲಿ ನಿಮಗೆ ಅವಕಾಶಗಳು ಹೇಗಿವೆ?
ಅಮಿತ್ ರಾವ್ ಜತೆಗೆ ನಟಿಸುತ್ತಿರುವ ಗೌಡರ ದರ್ಬಾರ್' ಬಿಡುಗಡೆಗೆ ಸಿದ್ಧವಾಗ್ತಿದೆ. `ಸೀತಮ್ಮ ಬಂದಳು ಸಿರಿಮಲ್ಲೆ ತೊಟ್ಟು', `ಕರಾಬ್ ದುನಿಯಾ', ರಾಧಾ ರಮಣ ಧಾರಾವಾಹಿ ಖ್ಯಾತಿಯ `ಪ್ರೊಡಕ್ಷನ್ ನಂಬರ್ 3' ಚಿತ್ರಗಳು ತೆರೆಗೆ ಬರಲು ಸಿದ್ದವಾಗುತ್ತಿದೆ. ಇದೇ ವಾರ ಛಾಯಾಗ್ರಾಹಕ ದರ್ಶನ್ ಅವರೇ ನಿರ್ದೇಶಿಸುತ್ತಿರುವ `ಸಿಂಪಲ್ಲಾಗಿ ಮತ್ತೊಂದು ಲವ್ ಸ್ಟೋರಿ' ಚಿತ್ರೀಕರಣ ಶುರುವಾಗಲಿದೆ.

ಸಿನಿಮಾದ ನಡುವೆ ಮಾಡೆಲಿಂಗ್ ಕೂಡ ಹೇಗೆ ಸಾಗುತ್ತಿದೆ?
ನಿಜ ಹೇಳುವುದಾದರೆ ನಾನು ಇಂದಿಗೂ ಮಾಡೆಲಿಂಗ್ ನಡುವೆ ಸಿನಿಮಾಗಳನ್ನು ಮಾಡುತ್ತಿದ್ದೇನೆ. ಸಿನಿಮಾ ಅವಕಾಶಗಳೇನೋ ಧಾರಾಳವಾಗಿಯೇ ಬರುತ್ತಿದೆ. ಆದರೆ ಒಪ್ಪಿಕೊಳ್ಳುವಂಥ ಪಾತ್ರಗಳೇ ಸಿಗುತ್ತಿಲ್ಲ ಎನ್ನುವುದು ಬೇಸರದ ವಿಚಾರ. ಬಹುಶಃ ಮಾಡೆಲಿಂಗ್ ಇಂಡಸ್ಟ್ರಿಯಿಂದ ಬಂದರೆ ಎಷ್ಟೇ ಬಟ್ಟೆ ಬಿಚ್ಚುವುದಕ್ಕೂ ತಯಾರಿರುತ್ತಾರೆ ಎನ್ನುವ ತಪ್ಪು ಕಲ್ಪನೆ ಕೆಲವರಲ್ಲಿ ಇರಬೇಕು ಅನಿಸುತ್ತದೆ. ನನಗೆ ಗ್ಲಾಮರಸ್ಸಾಗಿ ನಟಿಸುವುದಕ್ಕೆ ವಿರೋಧವಿಲ್ಲ. ಆದರೆ ವಲ್ಗರಾಗಿ ಕಾಣಿಸಿಕೊಳ್ಳಲು ನನ್ನಿಂದ ಸಾಧ್ಯವಿಲ್ಲ.

ನಿಮ್ಮ ಪ್ರಕಾರ ಗ್ಲಾಮರ್ ಯಾವಾಗ ಓವರ್ ಅಥವಾ ವಲ್ಗರಾಗುತ್ತದೆ?
ಬಹುಶಃ ನನಗೆ ಮಾತ್ರವಲ್ಲ, ಎಲ್ಲರಿಗೂ ಗ್ಲಾಮರ್ ಎಂದರೆ ಅದರ ಪರಿಧಿ ಎಷ್ಟು ಎನ್ನುವ ಕಲ್ಪನೆ ಇರುತ್ತದೆ. ಒಂದು ವೇಳೆ ಪರಿಧಿ ದಾಟಿ ಮೈ ಪ್ರದರ್ಶನಕ್ಕಿಡುವಲ್ಲಿ ಆಯಾ ಮಾಡೆಲ್ ಅಥವಾ ನಟಿಯರು ಕಂಫರ್ಟೇಬಲ್ ಇದ್ದರೆ ಅಲ್ಲಿ ಸಮಸ್ಯೆ ಏನೂ ಇಲ್ಲ. ಯಾಕೆಂದರೆ ಅದನ್ನು ಕಂಫರ್ಟೇಬಲ್ ಅನಿಸುವವರು ಮಾತ್ರ ನೋಡಿದರೆ ಸಾಕಾಗುತ್ತದೆ. ಆದರೆ ಅವಕಾಶ ಬೇಕಿದ್ದರೆ ಇಂಥ ಬಟ್ಟೆ ಧರಿಸಲೇಬೇಕು ಎನ್ನುವ ಸಂದರ್ಭ ಬಂದಾಗ ನಿಜಕ್ಕೂ ಬೇಸರ ಮೂಡುತ್ತದೆ.

ಗ್ಲಾಮರಸ್ಸಾಗಲಾರೆ ಎನ್ನುವ ಕಾರಣದಿಂದ ನಿಮಗೆ ಪಾತ್ರಗಳನ್ನು ನಿರಾಕರಿಸಬೇಕಾಗಿ ಬಂದಿವೆಯೇ?
ಖಂಡಿತವಾಗಿ. ಆದರೆ ಅವು ಯಾವುದು ಕೂಡ ದೊಡ್ಡ ಪ್ರಾಜೆಕ್ಟ್ ಗಳೇನಲ್ಲ. ಆದರೆ ನಟಿಯರ ಗ್ಲಾಮರಸ್ ಸೈಡ್ ಮಾತ್ರ ತೋರಿಸಿ ಸಿನಿಮಾ ಮಾಡಿ ದುಡ್ಡು ಮಾಡಬೇಕು ಎನ್ನುವಂಥ ನಿರ್ಮಾಪಕರ ಬಗ್ಗೆ ನನಗೆ ಬೇಸರವಿದೆ. ಅದು ಬಿಟ್ಟು ಒಂದೊಳ್ಳೆಯ ಚಿತ್ರ, ಅದರಲ್ಲೊಂದು ಒಳ್ಳೆಯ ಪಾತ್ರ, ಸಂದರ್ಭಕ್ಕೆ ತಕ್ಕ ಹಾಗೆ ಊಟಕ್ಕೆ ಉಪ್ಪಿನ ಕಾಯಿ ಇದ್ದಂತೆ ಒಂದಿಷ್ಟು ಗ್ಲಾಮರ್ ಸನ್ನಿವೇಶಗಳು ಬಂದರೆ ನಾನು ಅದನ್ನು ನಿರಾಕರಿಸಲಾರೆ. ಅಂಥ ಚಿತ್ರಗಳು ನಮ್ಮ ಇಂಡಸ್ಟ್ರಿಯಲ್ಲಿ ಬೇಕಾದಷ್ಟು ಬರುತ್ತಿವೆ ಕೂಡ. ಆದರೆ ದುರದೃಷ್ಟವಶಾತ್ ನನ್ನ ಪಾಲಿಗೆ ಅಂಥ ಆಫರ್ ಗಳಿಗೆ ಬರವಿದೆ.

ಚಿತ್ರೋದ್ಯಮಲ್ಲಿ ಬೆಳೆಯಲು ಒಬ್ಬ ಗಾಡ್ ಫಾದರ್ ಅಗತ್ಯ ಎಂದು ಅನಿಸಿದೆಯೇ?
ನಿಜಕ್ಕೂ ಹೌದು. ಅದರಲ್ಲಿಯೂ ನನ್ನಂಥ ಸಕಲೇಶಪುರದ ಗ್ರಾಮೀಣ ಭಾಗದಿಂದ ಬಂದವಳು ಕೇವಲ ಆಸಕ್ತಿಯೊಂದನ್ನೇ ಬಂಡವಾಳವಾಗಿಸಿಕೊಂಡು ಚಿತ್ರೋದ್ಯಮಕ್ಕೆ ಕಾಲಿಟ್ಟಿದ್ದೇನೆ. ಅದಕ್ಕೂ ಮೊದಲು ಮಾಡೆಲಿಂಗ್ ಕ್ಷೇತ್ರದಲ್ಲಿ ನನಗೆ ಗಾಡ್ ಫಾದರ್ ಆಗಿ ಬಂದವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಡುಪುಗಳ ವಿನ್ಯಾಸಗಾರರಾಗಿ ಗುರುತಿಸಿಕೊಂಡಿರುವ ನವೀನ್ ಕುಮಾರ್. ಅವರ ಮೂಲಕವೇ ಇಂದು ನಾನು 35ರಷ್ಟು ಪ್ಯಾಷನ್ ಶೋಗಳಲ್ಲಿ ಪಾಲ್ಗೊಂಡಿದ್ದೇನೆ. ಅದೇ ರೀತಿ ಸಿನಿಮಾಗಳಲ್ಲಿ ಕೂಡ ಒಬ್ಬರು ಉತ್ತಮ ಪ್ರಾಜೆಕ್ಟ್ ಗಳಿಗೆ ನನ್ನನ್ನು ಸೂಚಿಸುವವರು ಬೇಕು ಎಂದುಕೊಳ್ಳುವುದು ತಪ್ಪಲ್ಲ ತಾನೇ?

ನಿಮ್ಮ ಇದುವರೆಗಿನ ಸಿನಿಮಾ ಪ್ರಾಜೆಕ್ಟ್ ಗಳ ಬಗ್ಗೆ ಹೇಳಿ
`ತಿಥಿ' ಸಿನಿಮಾ ಖ್ಯಾತಿಯ ಗಡ್ಡಪ್ಪ, ಸೆಂಚುರಿ ಗೌಡರು ನಟಿಸಿದ್ದ `ಹಾಲು ತುಪ್ಪ' ಚಿತ್ರದಲ್ಲಿ ನಟಿಸಿದ್ದೇನೆ. ನಾಯಕಿ ಪ್ರಧಾನ ಚಿತ್ರವಾದ `ಅಮೃತ ಘಳಿಗೆ'ಯಲ್ಲಿ ಹಿರಿಯ ನಟ ದತ್ತಣ್ಣನ ಜತೆಗೆ ನಟಿಸುವ ಅವಕಾಶ ದೊರಕಿದೆ. ಅವುಗಳೊಂದಿಗೆ ಗುರುರಾಜ್ ಜಗ್ಗೇಶ್ ಅವರೊಂದಿಗೆ ನಟಿಸಿದ `ವಿಷ್ಣು ಸರ್ಕಲ್' ಚಿತ್ರಗಳು ಬಿಡುಗಡೆಯಾಗಿವೆ. ಇದರ ನಡುವೆ ತಮಿಳಿನಲ್ಲಿ ಹೀರೋಯಿನ್ ಪ್ರಾಧಾನ್ಯತೆ ಇರುವ `ಕಾದಲ್ ವಾನಂ' ಚಿತ್ರದಲ್ಲಿ ನಟಿಸಿದ್ದೇನೆ. ಅದರ ಒಂದು ಶೆಡ್ಯೂಲ್ ಪೂರ್ತಿಯಾಗಿದೆ.

ನಿಮ್ಮ ಕನಸು ಏನು?
ಸದ್ಯಕ್ಕೆ ನಮ್ಮ ಕನ್ನಡದ ಸ್ಟಾರ್ ಗಳೆಲ್ಲ ಖ್ಯಾತಿಯಲ್ಲಿಯೂ ದೈಹಿಕವಾಗಿ ಎತ್ತರಕ್ಕೆ ಬೆಳೆದವರೇ ಇದ್ದಾರೆ. ದೈಹಿಕವಾಗಿ ಅವರ ಎತ್ತರಕ್ಕೆ ನಾನು ಹೊಂದುವಂಥ ನೀಳ ಕಾಯ ನನ್ನದೂ ಆಗಿರುವ ಕಾರಣ ಅಂಥ ಅವಕಾಶಗಳ ನಿರೀಕ್ಷೆ ಇದೆ. ಇನ್ನು ಪಾತ್ರಗಳ ವಿಚಾರಕ್ಕೆ ಬಂದರೆ ಎಲ್ಲ ರೀತಿಯ ಎಮೋಶನ್ ಗಳಿಗೂ ಭಾವ ತುಂಬುವ ನಟಿಯಾಗಿ ನನ್ನನ್ನು ಜನ ನೆನಪಿಸಿಕೊಳ್ಳುವಂತಾಗಬೇಕು ಎನ್ನುವ ಕನಸು ಇದೆ. ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ. ನಾಯಕಿಯಾಗಿ ನಟಿಸುವ ಕಾಲಾವಧಿ ಕಡಿಮೆ ಇರುವ ಕಾರಣ ಆದಷ್ಟು ಬೇಗ ಕನಸುಗಳು ಈಡೇರಲಿ ಎಂದು ಪ್ರಾರ್ಥಿಸುತ್ತೇನೆ.


Click it and Unblock the Notifications











