ಅಬ್ ಕಿ ಬಾರ್ ರಿಷಬ್ ಹೈ ಸ್ಟಾರ್! ಯಶಸ್ವಿ ನಿರ್ದೇಶಕ, ನಟ ರಿಷಬ್ ಶೆಟ್ಟಿ ಸಂದರ್ಶನ
ರಿಷಬ್ ಶೆಟ್ಟಿ ಫುಲ್ ಖುಷಿಯಲ್ಲಿದ್ದಾರೆ. ಅದಕ್ಕೆ 'ಬೆಲ್ ಬಾಟಂ' ಚಿತ್ರ ಯಶಸ್ವಿಯಾಗಿ 50 ದಿನಗಳನ್ನು ದಾಟಿ ಮುಂದುವರಿದಿರುವುದು ಮಾತ್ರವಲ್ಲ, ವೈಯಕ್ತಿಕವಾಗಿ ರಿಷಬ್ ಶೆಟ್ಟಿಯ ಸಂತಸದ ಬುಟ್ಟಿಯಲ್ಲಿ ಹೂವಂಥ ಕಂದಮ್ಮನ ಆಗಮನದ ಖುಷಿಯೂ ಸೇರಿಕೊಂಡಿದೆ. ಈ ಎಲ್ಲ ಸಂಭ್ರಮದ ನಡುವೆ ಮಾತಿಗೆ ಸಿಕ್ಕಂಥ ರಿಷಬ್ ಜೊತೆಗೆ ಹೊಸ, ಹಳೆಯ ಎಲ್ಲ ವಿಚಾರಗಳನ್ನು ಸೇರಿಸಿ ಫಿಲ್ಮಿಬೀಟ್ ನಡೆಸಿರುವ ವಿಶೇಷ ಮಾತುಕತೆ ಇದು.

ಮೊದಲನೆಯದಾಗಿ ಅಭಿನಂದನೆಗಳು. ತಂದೆಯಾಗಿ ಒಂದೆರಡು ದಿನಗಳಾಗಿವೆ. ನಿಮ್ಮ ನಿತ್ಯ ಜೀವನದಲ್ಲಾದ ಪ್ರಮುಖ ಬದಲಾವಣೆ ಏನು?
''ನಿಮ್ಮ ಹಾರೈಕೆಗೆ ವಂದನೆಗಳು. ಸಹಜವಾಗಿ ತುಂಬ ಖುಷಿಯಲ್ಲಿದ್ದೇನೆ. ಇನ್ನೂ ಡಿಸ್ಚಾರ್ಜ್ ಮಾಡಿಲ್ಲದ ಕಾರಣ, ಸದ್ಯಕ್ಕೆ 24 ಗಂಟೆಯೂ ಆಸ್ಪತ್ರೆಯಲ್ಲೇ ಉಳಿದುಕೊಂಡಿದ್ದೇನೆ. ಪ್ರಸ್ತುತ ಅದುವೇ ದೊಡ್ಡ ಬದಲಾವಣೆ.''

ಸಾಮಾಜಿಕ ಜಾಲತಾಣದಲ್ಲಿ "ಇಟ್ಸ್ ಎ ಹೀರೋ" ಎಂದು ಬರೆದುಕೊಂಡಿದ್ದಿರಿ. ಗಂಡುಮಗುವೇ ನಿಮ್ಮ ಕನಸಾಗಿತ್ತೇ?
''ಅಲ್ಲ. ಆದರೆ ನನ್ನ ಪತ್ನಿಯ ಕನಸಾಗಿತ್ತು. ನನಗೆ ಹೆಣ್ಣು ಮಗುವೇ ಹೆಮ್ಮೆ. "ಹೀರೋ" ಎಂದು ಬರೆಯಲು ಕಾರಣ, ನಾನು ಸಿನಿಮಾ ಸಂದರ್ಶನಗಳಿಗೆ ಹೇಗೆ ಸಿನಿಮಾದವನಾಗಿ ಉತ್ತರಿಸಿ ಅಭ್ಯಾಸಗೊಂಡಿರುತ್ತೇನೆಯೋ, ಅದೇ ಫ್ಲೋನಲ್ಲಿ ಬರೆದುಕೊಂಡಂಥ ಸಂದೇಶ ಅದು! ಬಂಟರ ಸಮಾಜಕ್ಕೆ ಸಂಬಂಧಿಸಿದ ಹಾಗೆ ನಾವು ಹೆಣ್ಣು ಮಕ್ಕಳಿಗೆ ಹೆಚ್ಚು ಪ್ರಾಶಸ್ತ್ಯವನ್ನು ನೀಡುತ್ತೇವೆ. ಯಾಕೆಂದರೆ ನಮ್ಮಲ್ಲಿರುವುದು ಅಳಿಯ ಸಂತಾನ ಸಂಪ್ರದಾಯ. ಹಾಗಾಗಿ ನಮ್ಮ ಕುಟುಂಬವನ್ನು ಮುಂದುವರಿಸಿಕೊಂಡು ಹೋಗುವುದು ಏನಿದ್ದರೂ ಹೆಣ್ಣುಮಕ್ಕಳೇ. ಆದರೆ ನನ್ನ ಪತ್ನಿ ಪ್ರಗತಿ ತಂದೆ ತಾಯಿಯ ಒಬ್ಬಳೇ ಮಗಳು. ಹಾಗಾಗಿ ಆಕೆಗೆ ಗಂಡುಮಗು ಬೇಕು ಎನ್ನುವ ಆಕಾಂಕ್ಷೆ ಇತ್ತು. ಒಟ್ಟಿನಲ್ಲಿ ಖುಷಿಯಲ್ಲಿ ವ್ಯತ್ಯಾಸ ಏನಿಲ್ಲ.''

'ಬೆಲ್ ಬಾಟಂ' ಚಿತ್ರದ ಯಶಸ್ಸು ಸೇರಿದಂತೆ ರಿಷಬ್ ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತಿರುವ ಬಗ್ಗೆ ಏನು ಹೇಳುತ್ತೀರಿ?
''ಬೆಲ್ ಬಾಟಂ ಯಶಸ್ಸಿನಲ್ಲಿ ಒಂದು ತಂಡದ ಪರಿಶ್ರಮ ಇದೆ. ಚಿತ್ರ ನೀವು ಹೇಳಿದಂತೆ ಯಶಸ್ವಿಯಾಗಿ 50 ದಿನಗಳನ್ನು ದಾಟಿ ಪ್ರದರ್ಶನ ಕಾಣುತ್ತಿದೆ. ಚಿತ್ರದ ರಿಮೇಕ್ ಹಕ್ಕುಗಳು ಹಿಂದಿ, ತಮಿಳಿಗೆ ಮಾರಾಟವಾಗಿವೆ. ನಾವು 'ಬೆಲ್ ಬಾಟಂ'ನ ಎರಡನೇ ಭಾಗ ತರಲು ತಯಾರಿ ನಡೆಸಿದ್ದೇವೆ. ನಾನು ಮುಟ್ಟಿದ್ದೆಲ್ಲ ಚಿನ್ನ ಎಂದು ಹೇಳುವುದಕ್ಕಿಂತ, ದೇವರ ದಯದಿಂದ ನನ್ನ ಪರಿಶ್ರಮಗಳಿಗೆ ಸರಿಯಾದ ಯಶಸ್ಸು ಸಿಗುತ್ತಿದೆ ಎನ್ನಬಹುದು.''

ನೀವು ನಟನಾಗಿ ಸಿನಿಮಾಗಳನ್ನು ಆಯ್ಕೆಮಾಡಿಕೊಳ್ಳುವುದು ಹೇಗೆ?
''ಚಿತ್ರಕತೆ ಇಷ್ಟವಾದರೆ ನಾನು ನಟಿಸಲು ಸಿದ್ಧನಾಗುತ್ತೇನೆ. ಸದ್ಯಕ್ಕೆ ಬೆಲ್ ಬಾಟಂಗಷ್ಟೇ ನಾಯಕನಾಗಿದ್ದೇನೆ! ತುಂಬ ಚಿತ್ರಗಳು ಬಂದಾಗ ಯಾವುದು ಬೆಟರ್ ಎಂದು ಯೋಚಿಸಬಹುದೇನೋ.''

ಸರ್ಕಾರಿ ಹಿ.ಪ್ರಾ. ಶಾಲೆ ಕಾಸರಗೋಡು ಚಿತ್ರದ ಬಳಿಕ ನಿಮ್ಮ ನಿರ್ದೇಶನದ ಬಗ್ಗೆ ನಿರೀಕ್ಷೆಗಳು ಹೆಚ್ಚಿವೆ. ನಿರ್ದೇಶನದ ಪ್ರಯತ್ನ ನಡೆದಿದೆಯಾ?
''ಕತೆ ಮಾಡುತ್ತಿದ್ದೇನೆ. ಅದರ ಹೆಸರು ಮತ್ತು ನಾಯಕ ಮತ್ತಿತರ ತಂಡದ ಬಗ್ಗೆ ಹೇಳಲು ಇನ್ನೂ ಸಮಯವಾಗಿಲ್ಲ. ಆದರೆ ಅದಕ್ಕೂ ಮೊದಲು ‘ಕಥಾ ಸಂಗಮ' ಬಿಡುಗಡೆಯಾಗಲಿದೆ. ಅದರ ಶೂಟಿಂಗ್ ಎಲ್ಲ ಪೂರ್ತಿಯಾಗಿದೆ. ನಿಮಗೆ ತಿಳಿದಿರುವ ಹಾಗೆ ಚಿತ್ರದಲ್ಲಿ ಏಳು ಕತೆಗಳಿರುತ್ತವೆ. ನಾನು ಸೇರಿದಂತೆ ಎಂಟು ಮಂದಿ ನಿರ್ದೇಶಕರಿರುತ್ತೇವೆ.''

ಗಂಭೀರ ವಿಚಾರಗಳನ್ನು ತಮಾಷೆಯಾಗಿ ಪ್ರಸ್ತುತ ಪಡಿಸುವ ಶೈಲಿಯೇ ನಿಮಗೆ ಇಷ್ಟವೇ? ಅದನ್ನು ಹಾಗೆಯೇ ಮುಂದುವರಿಸುತ್ತೀರಾ?
''ಹಾಗೇನಿಲ್ಲ. ಅದು ಕತೆ ಯಾವ ಟ್ರೀಟ್ಮೆಂಟ್ ಬೇಡುತ್ತದೆ ಎನ್ನುವ ಆಧಾರದಲ್ಲಿ ನಿರ್ದೇಶಿಸಬೇಕು. ಉದಾಹರಣೆಗೆ ನನ್ನ ಮೊದಲ ‘ರಿಕ್ಕಿ' ಚಿತ್ರ ಗಂಭೀರವಾಗಿಯೇ ಇತ್ತು. ಅದರಲ್ಲಿ ಕತೆಯ ಸಂಬಂಧವಿಲ್ಲದಿದ್ದರೂ ಹಾಸ್ಯವನ್ನು ಸೇರಿಸುವಂತೆ ನಿರ್ಮಾಪಕರ ಕಡೆಯಿಂದ ಒತ್ತಡವಿದ್ದ ಕಾರಣ ಹಾಗೆ ಮಾಡಬೇಕಾಯಿತು. ಆಗ ಚಿತ್ರೋದ್ಯಮದಲ್ಲಿ ನಾನು ಇನ್ನೂ ಹೆಸರು ಮಾಡಿರದ ಕಾರಣ ನನ್ನ ನಿರ್ಧಾರಗಳಿಗೆ ಶಕ್ತಿಯಿರಲಿಲ್ಲ. ಈಗ ನನ್ನ ದೃಷ್ಟಿಕೋನಕ್ಕೆ ಬೇಕಾದ ಹಾಗೆ ಚಿತ್ರೀಕರಿಸುವ ಶಕ್ತಿ ಬಂದಿದೆ.''

ಆದರೆ ಕಾಸರಗೋಡು ಶಾಲೆಗಳ ಪರಿಸ್ಥಿತಿಯನ್ನು, ಕನ್ನಡಿಗರ ಹೋರಾಟವನ್ನು ಚಿತ್ರದಲ್ಲಿ ತೋರಿಸಿರುವ ರೀತಿಗೆ ನೋವಿಗಿಂತ ತಮಾಷೆಯ ಭಾವ ಬರುವ ಹಾಗಿತ್ತಲ್ಲ?
''ಪರ್ಸೆಪ್ಷನ್ ಎನ್ನುವುದು ಪ್ರತಿಯೊಬ್ಬರಿಗೂ ಡಿಫರೆಂಟ್. ಅದನ್ನು ನಾನು ಕೂಡ ಪ್ರಶ್ನಿಸುವ ಹಾಗಿಲ್ಲ. ಶಾಲೆ ಮುಚ್ಚುವ ವಿಷಯ ಎಂದ ಮಾತ್ರಕ್ಕೆ ಅದನ್ನು ಗಂಭೀರವಾಗಿ ಹೇಳಬೇಕು ಎಂದೇನೂ ಇಲ್ಲವಲ್ಲ? ಆ ವಿಷಯ ಜನತೆಗೆ ತಲುಪುವುದು ಮುಖ್ಯ. ಚಿತ್ರ ಬಂದ ಬಳಿಕ ಅದೊಂದು ಚರ್ಚಾವಿಷಯ ಆಯಿತು ಎನ್ನುವುದು ನಿಮಗೂ ಗೊತ್ತು. ಪ್ರಾಬ್ಲಮ್ ಏನೆಂದರೆ ಇದು ಕನ್ನಡಿಗರ ಹೋರಾಟದ ಚಿತ್ರ ಅಲ್ಲ, ಶಾಲೆ ಮುಚ್ಚುವುದರ ಬಗ್ಗೆ ಮಕ್ಕಳ ಹೋರಾಟ ಎನ್ನುವುದಷ್ಟೇ ಕತೆ. ಹಾಗಾಗಿ ಅದನ್ನು ಮಕ್ಕಳಾಟವಾಗಿಯೇ ಪರಿಗಣಿಸಬೇಕು. ಇದೇ ಟಾಪಿಕ್ನಲ್ಲಿ ಗಂಭೀರವಾದ ಚಿತ್ರ ಮಾಡಿದ್ದರೆ ಪ್ರಶಸ್ತಿಗಳು ಬರುತ್ತಿತ್ತು. ಆದರೆ ಈಗ ಆಗಿರುವಷ್ಟು ಕೂಡ ಇಂಪ್ಯಾಕ್ಟ್ ಮೂಡಿಸುತ್ತಿರಲಿಲ್ಲ.''

ಕರಾವಳಿಯಲ್ಲಿ ಯಕ್ಷಗಾನಕ್ಕಿರುವ ಮರ್ಯಾದೆ ನಿಮಗೆ ಗೊತ್ತು. ಆದರೂ ವೇಷಧಾರಿ ಅದೇ ವೇಷದಲ್ಲಿ ವಾಹನವೇರಿ, ಅವಾಚ್ಯ ಶಬ್ದದಲ್ಲಿ ಬಯ್ಯುವ ದೃಶ್ಯಗಳನ್ನು ಬಳಸಿದ್ದೇಕೆ?
''ನಾನು ಯಕ್ಷಗಾನ ನೋಡಿದವನು ಮಾತ್ರವಲ್ಲ, ಯಕ್ಷಗಾನದ ವೇಷ ಹಾಕಿದವನು ಕೂಡ. ಹಾಗಾಗಿ ಕಲೆಗೆ ಅವಮರ್ಯಾದೆ ಮಾಡುವ ಪ್ರಶ್ನೆಯೇ ಇಲ್ಲ. ಚಿತ್ರದಲ್ಲಿನ ಕಲಾವಿದ ಮನೆಯಲ್ಲಿಯೇ ಯಕ್ಷಗಾನ ಕಲಿಸುವವರು. ಯಕ್ಷಗಾನದಲ್ಲಿ ಮನೆಯಲ್ಲಿಯೇ ಮೇಳ ಇರಿಸಿರುವವರು ಪ್ರಸಂಗ ಮುಗಿಯುವ ಹೊತ್ತಿಗೆ ಬೆಳಗ್ಗಿನ ಜಾವವಾದರೆ ವೇಷದೊಂದಿಗೆ ಮನೆಗೆ ಬರುವುದು ಸಾಮಾನ್ಯ ವಿಚಾರ. ಆದರೆ ಬಂದೊಡನೆ ನಡೆದ ಅನ್ಯಾಯದ ಬಗ್ಗೆ ಅರಿತಾಗ ವೇಷವನ್ನು ಮರೆತು ಆತ ತನ್ನ ಒರಿಜಿನಲ್ ವ್ಯಕ್ತಿತ್ವದಲ್ಲಿ ಕೋಪಗೊಳ್ಳುತ್ತಾನೆ. ಇದನ್ನು ಅವಮಾನ ಎನ್ನುವುದಾದರೆ ಇಂದು ಯಕ್ಷಗಾನದಲ್ಲಿ ಸಿನಿಮಾ ಕಲಾವಿದರನ್ನು ಬಳಸುತ್ತಿದ್ದಾರೆ. ಸಿನಿಮಾ ಹಾಡುಗಳನ್ನು ಯಕ್ಷಗಾನದೊಳಗೆ ತುರುಕುತ್ತಿದ್ದಾರೆ. ನೃತ್ಯ ಸ್ಪರ್ಧೆಗಳಲ್ಲಿ ಸಿನಿಮಾದ ಹಾಡಿಗೆ ಯಕ್ಷಗಾನದ ವೇಷ ಹಾಕಿ ಕುಣಿಸುತ್ತಾರೆ. ದಸರಾ ಸಂದರ್ಭದಲ್ಲಿ ಯಕ್ಷಗಾನದ ವೇಷಧಾರಣೆ ಮಾಡಿ ಭಿಕ್ಷೆ ಎತ್ತುವವರಿದ್ದಾರೆ. ಅದೆಲ್ಲ ಅವಮಾನ ಅಲ್ಲವೇ..? ನಾನು ಅಂಥದ್ದೇನೂ ಮಾಡಿಲ್ಲವಲ್ಲ.''

ನೀವು ಆ ಚಿತ್ರವನ್ನು ಕರ್ನಾಟಕದ ಕೈರಂಗಳ ಶಾಲೆಯಲ್ಲಿ ಚಿತ್ರೀಕರಿಸಿದ್ದಿರಿ. ಅದೇ ಶಾಲೆಯನ್ನೇ ದತ್ತು ತೆಗೆದುಕೊಂಡಿರಾ?
''ಹೌದು. ಆದರೆ ಕೈರಂಗಳ ಕರ್ನಾಟಕದ ಗಡಿಭಾಗದಲ್ಲಿದೆ. ಅದೊಂದು ಸರಕಾರಿ ಅನುದಾನಿತ ಶಾಲೆಯಾಗಿತ್ತು. ಚಿತ್ರೀಕರಣದ ಸಮಯದಲ್ಲಿ ತುಂಬ ಕಡಿಮೆ ವಿದ್ಯಾರ್ಥಿಗಳಿದ್ದರು. ಮುಚ್ಚಿಹೋಗಬಾರದು ಎನ್ನುವ ಕಾರಣಕ್ಕೆ ನಾವು ಅಡಾಪ್ಟ್ ಮಾಡಿದ್ದೇವೆ. ಅಲ್ಲಿ ರಿಪೇರಿ ಕೆಲಸಗಳು ನಡೆದಿವೆ. ಟೀಚರ್ಗಳ ಕೊರತೆ ಇದೆ. ಅವರ ನೇಮಕದ ಬಗ್ಗೆ ಗಮನ ಹರಿಸಿದ್ದೇವೆ.''

ಇನ್ನುಮುಂದೆ ನಿಮ್ಮ ಮತ್ತು ರಕ್ಷಿತ್ ಜೋಡಿಯ ಚಿತ್ರವನ್ನು ಯಾವಾಗ ನೋಡಬಹುದು?
''ಖಂಡಿತವಾಗಿ ನೋಡಬಹುದು. ಆಲ್ರೆಡಿ ಸಬ್ಜೆಕ್ಟ್ಗಳು ತಯಾರಾಗಿವೆ. ಆದರೆ ರಕ್ಷಿತ್ ಮತ್ತು ನಾನು ಬೇರೆ ಬೇರೆ ಕಡೆಗಳಲ್ಲಿ ಮೂರು ಮೂರು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದೇವೆ! ಅವುಗಳು ಮುಗಿಸಲೇಬೇಕಾದ ಕಾರಣ ಸದ್ಯದ ಮಟ್ಟಿಗೆ ನಮ್ಮಿಬ್ಬರ ಕೂಡುವಿಕೆಯ ಚಿತ್ರ ಸಾಧ್ಯವಾಗುತ್ತಿಲ್ಲ. ಆದರೆ ಪರಸ್ಪರರ ಚಿತ್ರಗಳಲ್ಲಿ ಅಭಿಪ್ರಾಯ ಹೇಳುತ್ತಾ ತೆರೆಯ ಹಿಂದೆ ನಿರಂತರ ಸಂಪರ್ಕದಲ್ಲಿ ಇದ್ದೇವೆ.''


Click it and Unblock the Notifications











