'ಶಿವಾನಂದ ವೃತ್ತ'ದಲ್ಲಿ 'ಕಾಪಿಕಟ್ಟೆ' ಕಂಡಿರುವ ನಿರ್ದೇಶಕ ಕಪಿಲ್!
ಗಾಂಧಿನಗರದ ಬಗ್ಗೆ ತಿಳಿದಿರುವ ಬೆಂಗಳೂರು ವಾಸಿಗಳಿಗೆ ಶಿವಾನಂದ ವೃತ್ತದ ಬಗ್ಗೆಯೂ ಗೊತ್ತಿರುತ್ತದೆ. ಅಂಥದೊಂದು ಜನಪ್ರಿಯ ಪ್ರದೇಶದಲ್ಲಿ ನಡೆಯುವ ಕಾಲ್ಪನಿಕ ಕತೆಯನ್ನು ಚಿತ್ರಮಾಡುತ್ತಿದ್ದಾರೆ ನಿರ್ದೇಶಕ ಕಪಿಲ್. ಅವರು ನೃತ್ಯ ನಿರ್ದೇಶಕರಾಗಿಯೂ ಗುರುತಿಸಿಕೊಂಡವರು. ಆರಡಿ ಎತ್ತರ, ಆಕರ್ಷಕ ಮೈಕಟ್ಟು ವಿನಯವಂತಿಕೆಯೇ ಇವರ ಒಳ್ಳೆಯತನದ ಒಳಗುಟ್ಟು.
ಶ್ರೀ ರೇಣುಕಾದೇವಿ ಮಹಿಮೆ, ವಾಯುಪುತ್ರ, ರಾಗಿಣಿ ಐಪಿಎಸ್, ರಣಚಂಡಿ, ಮಳೆಬಿಲ್ಲು ಮೊದಲಾದ ಚಿತ್ರಗಳು ಸೇರಿದಂತೆ ಇದುವರೆಗೆ 107 ಚಿತ್ರಗಳಿಗೆ ನೃತ್ಯನಿರ್ದೇಶನ ಮಾಡಿದ್ದಾರೆ. ಒಳ್ಳೆಯ ವಿಷಯವನ್ನು ಹೊಂದಿರುವ ಐದು ಚಿತ್ರಗಳ ನಿರ್ದೇಶಕರಾಗಿಯೂ ಗುರುತಿಸಿಕೊಳ್ಳುತ್ತಿದ್ದಾರೆ.
ಇವರ ಮೊದಲ ಚಿತ್ರ 'ಹಳ್ಳಿ ಸೊಗಡು'. ಬಳಿಕ 'ಹಸಿವು ಮತ್ತು ಅರಿವು, ಕಾಪಿ ಕಟ್ಟೆ, ಮತ್ತು ಇದೀಗ 'ಶಿವಾನಂದ ಸರ್ಕಲ್' ಮೊದಲಾದ ಚಿತ್ರಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಕಪಿಲ್ ಅವರೊಂದಿಗೆ ಫಿಲ್ಮೀಬೀಟ್ ನಡೆಸಿರುವ ವಿಶೇಷ ಮಾತುಕತೆ ಇಲ್ಲಿದೆ.

ಶಿವಾನಂದ ವೃತ್ತ ಮತ್ತು ಕಾಪಿಕಟ್ಟೆಯ ವಿಶೇಷಗಳೇನು?
ಕಾಪಿಕಟ್ಟೆ ಚಿತ್ರದಲ್ಲಿ 35 ಮಂದಿ ಕನ್ನಡದ ಹಿರಿಯ ಹಾಸ್ಯ ಕಲಾವಿದರಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಶಿವಾನಂದ ವೃತ್ತದ ಚಿತ್ರೀಕರಣ ಈಗಷ್ಟೇ ಆರಂಭವಾಗಿದೆ.

ಶಿವಾನಂದ ವೃತ್ತದ ಮೂಲಕ ನೀವು ಏನು ಹೇಳಲು ಹೊರಟಿದ್ದೀರಿ?
ನಮ್ಮ ಸಮಾಜದಲ್ಲಿ ಕೆಲವರು ಕುಟುಂಬವನ್ನು ಚೆನ್ನಾಗಿಟ್ಟಿರುವುದಿಲ್ಲ. ಮೋಜು ಮಸ್ತಿಯಲ್ಲಿ ಮುಳುಗಿ ಮನೆಮಂದಿಯನ್ನು ಮರೆತಿರುತ್ತಾರೆ. ಆದರೆ ಅವರನ್ನು ಸರಿಪಡಿಸಲು ಒಬ್ಬ ಸ್ನೇಹಿತ ಬರುತ್ತಾನೆ. ಆದರೆ ಬಂದಾತ ಹಣ ಸಾಲ ಕೇಳುತ್ತಾನೆ. ಆಗ ಅವರೊಳಗೆ ಇದ್ದ ಒಬ್ಬ ಬಡ್ಡಿ ವ್ಯಾಪಾರಿಯೊಬ್ಬ ಸಾಲ ಕೊಡಬಲ್ಲೆ. ಆದರೆ ತನ್ನ ಮದ್ಯದ ಅಂಗಡಿಯಲ್ಲೇ ಕುಡಿಯುತ್ತಿರಬೇಕು ಎಂದು ಷರತ್ತು ಹಾಕುತ್ತಾನೆ. ಆದರೆ ಸ್ನೇಹಿತ ತಾನು ನಿತ್ಯ ಕುಡಿದರೆ ಮನೆಯವರನ್ನು ಯಾರು ನೋಡಿಕೊಳ್ಳುತ್ತಾರೆ ಎಂದು ಕೇಳುತ್ತಾನೆ. ಆದರೆ ಆತನ ಮಾತನ್ನು ಅವರು ತಕ್ಷಣಕ್ಕೆ ಒಪ್ಪುವುದಿಲ್ಲ. ಆದರೆ ಅವರ ಮನ ಪರಿವರ್ತನೆಯಾಗುವಂಥ ಘಟನೆಯೊಂದು ನಡೆಯುತ್ತದೆ. ಅದೇನು ಎನ್ನುವುದೇ ಚಿತ್ರದ ಕತೆ.

ಚಿತ್ರದಲ್ಲಿ ಅಭಿನಯಿಸುತ್ತಿರುವ ಕಲಾವಿದರ ಬಗ್ಗೆ ಹೇಳಿ
ಚಿತ್ರದಲ್ಲಿ ನಾಯಕ ಎಂದು ಯಾರೂ ಇಲ್ಲ. ಆದರೆ ಶಿವಪ್ಪ ಕೂಡ್ಲೂರು, ರಂಗಸ್ವಾಮಿ, ಶಿವಕುಮಾರ್ ಜೇವರ್ಗಿ, ಕೆ.ಸಿ ಮುನಿರಾಜು, ಪದ್ಮನಾಭನ್, ಆನಂದ ರೆಡ್ಡಿ ಮೊದಲಾದವರು ನಟಿಸಿದ್ದಾರೆ. ಪೋಷಕ ನಟರಾಗಿ ಶಂಕರ ಭಟ್, ಉಮೇಶ್ ಭಟ್, ಕೃಷ್ಣಮೂರ್ತಿ, ಪ್ರಣಯಮೂರ್ತಿ ಮತ್ತು ಶಂಖನಾದ ಅರವಿಂದ್ ಸೇರಿದಂತೆ ಬಹಳಷ್ಟು ಮಂದಿ ಕಲಾವಿದರು ಚಿತ್ರದಲ್ಲಿದ್ದಾರೆ. ಎಲ್ಲರು ಹಿರಿಯ ಕಲಾವಿದರು.

ಚಿತ್ರದ ಮೂಲಕ ಗಾಯಕ ರಮೇಶ್ಚಂದ್ರ ಅವರು ವಾಪಾಸಾಗುತ್ತಿದ್ದಾರಂತೆ?
ಹೌದು. ಓ ಮಲ್ಲಿಗೆಯಂಥ ಯಶಸ್ವಿ ಹಾಡನ್ನು ನೀಡಿದ ಬಳಿಕ ಒಂದಷ್ಟು ಕಾಲದಿಂದ ಸದ್ದಿಲ್ಲದೇ ಹೋಗಿರುವ ಗಡಿನಾಡ ಗಾಯಕ ರಮೇಶ್ಚಂದ್ರನ್ ಅವರು ಈ ಚಿತ್ರದ ಮೂಲಕ ಮತ್ತೊಂದು ಹಾಡಿಗೆ ಗಾಯಕರಾಗಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಚಿತ್ರಕತೆ, ಸಂಭಾಷಣೆಯ ಜತೆಗೆ ಒಂದೆರಡು ಹಾಡುಗಳನ್ನು ರಚಿಸಿದ ಕೀರ್ತಿ ಸಿನಿ ಸುದರ್ಶನ್ ಅವರಿಗೆ ಸಲ್ಲುತ್ತದೆ. ಉಳಿದ ಗೀತೆಗಳಿಗೆ ಶಿವಪ್ಪ ಕೂಡ್ಲೂರು ಮತ್ತು ಉದಯ ಲೇಖ ಸಾಹಿತ್ಯ ನೀಡಿದ್ದಾರೆ. ನನ್ನ ತಮ್ಮ ಗೋಪಿ ಕಲಾಕಾರ್ ಸಂಗೀತ ನೀಡಿದ್ದಾರೆ. ಒಂದೇ ಶೆಡ್ಯೂಲ್ ನಲ್ಲಿ ಚಿತ್ರೀಕರಣ ಪೂರ್ತಿ ಮಾಡಲಿದ್ದೇವೆ. ರಮೇಶ್ಚಂದ್ರನ್ ಅವರ ಜತೆಗೆ ಶಿವಪ್ಪ ಕೂಡ್ಲೂರು ಮತ್ತು ಪದ್ಮನಾಭನ್ ಹಾಡಿದ್ದಾರೆ.

ತೆರೆಗೆ ಸಿದ್ಧವಾಗುತ್ತಿರುವ 'ಕಾಪಿಕಟ್ಟೆ'ಯ ಬಗ್ಗೆ ಹೇಳಿ
ಕಾಪಿಕಟ್ಟೆ ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ಅದು ವಾಯು ವಿಹಾರ ನಡೆಸುವ ಐದು ಮಂದಿ ಹಿರಿಯ ಜೀವಗಳ ಕತೆ. ಆ ಐವರು ಕೂಡ ಮನೆಮಂದಿಯ ಪ್ರೀತಿಯ ಕೊರತೆಯಿಂದ ಬಳಲುತ್ತಿರುತ್ತಾರೆ. ಹಾಗಾಗಿ ಅವರವರೇ ಆತ್ಮೀಯರಾಗುತ್ತಾರೆ. ಅವರ ಮನೆಯ ನೋವುಗಳನ್ನು ಪರಸ್ಪರ ಹಂಚಿಕೊಳ್ಳುತ್ತಾರೆ. ಹಾಗೆ ಅವರೆಲ್ಲ ಸೇರಿಕೊಳ್ಳುವ ಜಾಗವೇ ಕಾಪಿಕಟ್ಟೆ. ಎಂ ಎಸ್ ಉಮೇಶ್, ಡಿಂಗ್ರಿ ನಾಗರಾಜ್, ಬೆಂಗಳೂರು ನಾಗೇಶ್, ರಮೇಶ್ ಭಟ್, ಮನದೀಪ್ ರಾಯ್, ಹೊನ್ನವಳ್ಳಿ ಕೃಷ್ಣ, ರೇಖಾ ದಾಸ್, ಬೀರಾದಾರ್ ಹೀಗೆ ಸುಮಾರು 35 ಮಂದಿ ಹಾಸ್ಯ ಕಲಾವಿದರೇ ಇದ್ದಾರೆ.


Click it and Unblock the Notifications











