ನೂರಕ್ಕೂ ಹೆಚ್ಚು ಆಡಿಷನ್ ಆದ ಮೇಲೆ ಸೀರಿಯಲ್ ಸ್ಟಾರ್ ಆದ ಮಂಡ್ಯದ ಹುಡುಗ
Recommended Video

'ಟ್ರೈ ಅಗೈನ್.. ಟ್ರೈ ಅಗೈನ್.. ಟ್ರೈ ಅಗೈನ್..' ಎನ್ನುವ ಮಾತು ಸಾಧನೆ ಮಾಡುವವರಿಗೆ ಬಹಳ ಮುಖ್ಯ. ಎಷ್ಟೇ ಬಾರಿ ಬಿದ್ದರೂ ಎದ್ದು ನಿಂತು ಮೈ ಕೊಡವಿ ಓಡಬೇಕು ಆಗಲೇ ಅಂದುಕೊಂಡ ಗುರಿ ಮುಟ್ಟಲು ಸಾಧ್ಯ. ಈಗ ಇದೇ ರೀತಿ ಒಬ್ಬ ಕಿರುತೆರೆಯ ನಟ ಅನೇಕ ಅಡೆತಡೆಗಳ ನಂತರ ತನ್ನ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯ 'ಕಿನ್ನರಿ' ಧಾರಾವಾಹಿಯಲ್ಲಿ ನಟಿಸುತ್ತಿರುವ ನಟ ಸಾಗರ್ ಬಿಳಿಗೌಡ ಈಗ ತಮ್ಮ ನಟನೆ ಮೂಲಕ ಹೆಸರು ಮಾಡಿದ್ದಾರೆ. ಇನ್ನೊಂದು ಕಡೆ ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಪಟ್ಟಿಯಲ್ಲಿ ಸಹ ಸ್ಥಾನ ಪಡೆದಿದ್ದಾರೆ. ವಿದೇಶದಲ್ಲಿ ಓದಿದ ಮೇಲೆ ಸುಖವಾದ ಕೆಲಸ ಮಾಡುವ ಬದಲು ತಮ್ಮ ನಟನೆಯ ಕನಸನ್ನು ಪೂರ್ಣ ಮಾಡಲು ಹೊರಟಿದ್ದಾರೆ.
ಅಂದಹಾಗೆ, ತಮ್ಮ ಕಿರುತೆರೆ ಪಯಣ ಮತ್ತು ತಮ್ಮ ಮುಂದಿನ ಯೋಜನೆಗಳ ಬಗ್ಗೆ ಇದೀಗ ನಟ ಸಾಗರ್ ಮಾತನಾಡಿದ್ದಾರೆ. ಮುಂದೆ ಓದಿ..

ಲಂಡನ್ ನಲ್ಲಿ ಎಂಬಿಎ ಓದಿದೆ
''ನಾನು ಹುಟ್ಟಿದ್ದು ಬೆಳೆದದ್ದು ಬೆಂಗಳೂರಿನಲ್ಲಿಯೇ. ಆದರೆ ನಮ್ಮ ತಂದೆ ಮಂಡ್ಯದವರು. ಕಾಲೇಜಿನಲ್ಲಿ ಮಾಡಲಿಂಗ್ ಮಾಡುತ್ತಿದೆ. ನಂತರ ಲಂಡನ್ ನಲ್ಲಿ ಎಂ ಬಿ ಎ ಓದಿದೆ. ಮೊದಲಿನಿಂದ ಆಕ್ಟಿಂಗ್ ಬಗ್ಗೆ ಆಸಕ್ತಿ ಇತ್ತು. ಆದರೆ ಮನೆಯಲ್ಲಿ ನಾನು ಚೆನ್ನಾಗಿ ಓದಬೇಕು ಎನ್ನುವ ಆಸೆ ಇತ್ತು. ಅದೇ ಕಾರಣಕ್ಕೆ ಎರಡು ಮಾಸ್ಟರ್ ಡಿಗ್ರಿ ಮಾಡಿದೆ. ಆ ಬಳಿಕ ನಟನೆ ಮಾಡುವ ಕನಸನ್ನು ಪೂರೈಸಿಕೊಳ್ಳುವುದಕ್ಕೆ ವಾಪಸ್ ಬಂದೆ. ಆಡಿಷನ್ ಮೂಲಕ 'ಕಿನ್ನರಿ' ಧಾರಾವಾಹಿಗೆ ಆಯ್ಕೆ ಆದೆ.''

'ತುಳಸಿದಳ'ಕ್ಕೆ ಆಡಿಷನ್ ಕೊಟ್ಟೆ 'ಕಿನ್ನರಿ'ಗೆ ಆಯ್ಕೆ ಆದೆ
''ಒಮ್ಮೆ 'ತುಳಸಿದಳ' ಎಂಬ ಧಾರಾವಾಹಿಗೆ ಆಡಿಷನ್ ನಡೆಯುತ್ತಿತ್ತು. ನಾನು ಹೋಗಿ ಅದರಲ್ಲಿ ಭಾಗವಹಿಸಿ ಫೈನಲ್ ಹಂತಕ್ಕೆ ಹೋದೆ. 'ಕಿನ್ನರಿ' ಸೀರಿಯಲ್ ನಿರ್ಮಾಪಕರು ಮತ್ತು 'ತುಳಸಿದಳ' ಧಾರಾವಾಹಿಯ ನಿರ್ಮಾಪಕರು ಒಬ್ಬರೆ ಆಗಿದ್ದರು. 'ತುಳಸಿದಳ' ಧಾರಾವಾಹಿ ಶುರು ಆಗುವುದು ಸ್ವಲ್ಪ ತಡ ಆಗಬಹುದು. ನಿಮ್ಮ ನಟನೆ, ಲುಕ್ 'ಕಿನ್ನರಿ' ಧಾರಾವಾಹಿಯ ಪಾತ್ರಕ್ಕೆ ಸೂಟ್ ಆಗುತ್ತದೆ ಎಂದು ಹೇಳಿ ನಿರ್ಮಾಪಕ ರಾಜ್ ಶೆಟ್ಟಿ ಆಫರ್ ನೀಡಿದರು.''

130 ಆಡಿಷನ್ ಗಳಲ್ಲಿ ಭಾಗಿಯಾಗಿದ್ದೆ
''130 ಆಡಿಷನ್ ಗಳಿಗೆ ಹೋಗಿ ಬಂದಿದ್ದೇನೆ. ಆಡಿಷನ್ ನೀಡಿದಾಗ ಆಯ್ಕೆ ಆಗಿಲ್ಲ ಎಂದು ಯಾವತ್ತು ಬೇಸರ ಮಾಡಿಕೊಳ್ಳುತಿರಲಿಲ್ಲ. ಅದು ನನಗೆ ದಿನನಿತ್ಯದ ಕೆಲಸ ಆಗಿ ಬಿಟ್ಟಿತ್ತು. ಒಂದು ದಿನಕ್ಕೆ ನಾಲ್ಕು ಆಡಿಷನ್ ಗಳನ್ನು ಮಾಡುತ್ತಿದೆ. 'ಕಿನ್ನರಿ' ಧಾರಾವಾಹಿಗೆ ಐದು ಬಾರಿ ಆಡಿಷನ್ ಕೊಟ್ಟಿದ್ದೇನೆ.''

ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್
''ಕಿರುತೆರೆಯ ನಟರ ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಪಟ್ಟಿಯಲ್ಲಿ ನಾನು ಒಂಬತ್ತನೇ ಸ್ಥಾನ ಪಡೆದೆ. ಆ ಪಟ್ಟಿ ಬಂದಾಗ ಅದರಲ್ಲಿ ನನ್ನ ಹೆಸರಿದೆ ಎಂಬುದು ನನಗೆ ಗೊತ್ತಿರಲಿಲ್ಲ. ಬೆಳ್ಳಗೆ 7.30ಕ್ಕೆ ನನ್ನ ಸ್ನೇಹಿತ ಫೋನ್ ಮಾಡಿ ಹೇಳಿದ, ಆದರೆ ನಾನು ಆ ವೇಳೆ ನಿದ್ದೆ ಕಣ್ಣಲ್ಲಿ ಏನ್ ಮಾತಾಡಿದೆನೊ ಗೊತ್ತಿಲ್ಲ. ಆಮೇಲೆ ಎಲ್ಲರೂ ಮೆಸೇಜ್ ಮಾಡಿದ್ದರು. ನನಗೆ ಇದು ಕನಸು ಇರಬೇಕು ಅಂತ ಫೀಲ್ ಆಗಿತ್ತು.''

ವಿಷ್ಣುವರ್ಧನ್ ನನಗೆ ಸ್ಫೂರ್ತಿ
''ನನಗೆ ನಟನೆ ಅಂದರೆ ತುಂಬ ಇಷ್ಟ. ಅದು ಧಾರಾವಾಹಿ ಆಗಿರಬಹುದು, ಸಿನಿಮಾ ಆಗಿರಬಹುದು. ನನಗೆ ಒಳ್ಳೆಯ ಪಾತ್ರಗಳನ್ನು ಮಾಡಬೇಕು ಅಂತ ಇಷ್ಟ ಇದೆ. ನನಗೆ ನಟನೆಗೆ ಸ್ಪೂರ್ತಿ ವಿಷ್ಣುವರ್ಧನ್ ಅವರು. ನನ್ನ ರೀತಿಯ ಅನೇಕರಿಗೆ ಅವರು ಆದರ್ಶ. ಇನ್ನು ಹಾಲಿವುಡ್ ನಲ್ಲಿಯೂ ತುಂಬ ನಟರು ನನ್ನ ಮೇಲೆ ಪ್ರಭಾವ ಬೀರಿದ್ದಾರೆ. 'ಕಿನ್ನರಿ' ಜೊತೆಗೆ ಇನ್ನು ಎರಡು ಪ್ರಾಜೆಕ್ಟ್ ನಲ್ಲಿ ಕೈ ಇವೆ. ಸದ್ಯದಲ್ಲಿಯೇ ಅವು ಶುರು ಆಗುತ್ತಿವೆ''


Click it and Unblock the Notifications











