Don't Miss!
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- News ಲೋಕಸಭಾ ಚುನಾವಣೆ 2ನೇ ಹಂತದ ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ; ಮನೆ ಮನೆ ಪ್ರಚಾರಕ್ಕೆ ಅವಕಾಶ
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮುಂಬೈನಿಂದ ಬಂದಿದ್ದಾಳೆ ಕನ್ನಡತಿ ಕಾಜಲ್..!
ಕಾಜಲ್ ಕುಂದರ್ ಎನ್ನುವ ಹೆಸರಿನಲ್ಲೇ ಎರಡು ಸಂಸ್ಕೃತಿಗಳ ಸಂಗಮವಿದೆ. ಅದಕ್ಕೆ ಕಾರಣ ಈಕೆ ಕರ್ನಾಟಕದ ಹುಡುಗಿಯಾದರೂ ಜನಿಸಿದ್ದು ಮುಂಬೈನಲ್ಲಿ. ಹಾಗಾಗಿ ಕಾಜಲ್ ಎನ್ನುವ ಹೆಸರಿಟ್ಟಿದ್ದಾರೆ. ಆದರೆ ಮೂಲತಃ ಮಂಗಳೂರು ಕರಾವಳಿಯವರು. ಆ ಕಾರಣದಿಂದ ಕುಂದರ್ ಎನ್ನುವ ಅಂತ್ಯನಾಮವೂ ಜತೆಗಿದೆ! ಮನೆ ಭಾಷೆ ತುಳು. ವಿದ್ಯಾಭ್ಯಾಸ ನಡೆಸಿದ್ದು ಆಂಗ್ಲದಲ್ಲಿ.
Recommended Video
ಆಕೆ ಇರುವ ರಾಜ್ಯದ ಭಾಷೆ ಮರಾಠಿ. ಹೀಗಾಗಿ ಕನ್ನಡ, ತುಳು, ಮರಾಠಿಯ ಜತೆಗೆ ಹಿಂದಿ, ಇಂಗ್ಲಿಷ್ ಕೂಡ ಮಾತನಾಡಬಲ್ಲರು. ಗಣೇಶ್ ಮತ್ತು ಶಾರದಾ ಕುಂದರ್ ದಂಪತಿಯ ಮಗಳು ಈಕೆ. ಸಹೋದರಿ ಪಾಯಲ್ ಕುಂದರ್ ಖಾಸಗಿ ಸಂಸ್ಥೆಯಲ್ಲಿ ವೃತ್ತಿ ನಿರತೆ. ಆದರೆ ಇವರಲ್ಲಿ ಯಾರಿಗೂ ಇರದಂಥ ಕಲಾ ಸಂಬಂಧ ಸೃಷ್ಟಿಯಾಗಿದ್ದು ಮಾತ್ರ ಕಾಜಲ್ ಕುಂದರ್ ಅವರಲ್ಲಿ.
ಈಗಾಗಲೇ 'ಹರಹರ ಮಹಾದೇವ' ಧಾರಾವಾಹಿಯಲ್ಲಿ ಸತಿಯ ತಂಗಿಯ ಪಾತ್ರದಿಂದ ಕನ್ನಡಿಗರಿಗೆ ಸುಪರಿಚಿತೆಯಾಗಿರುವ ಇವರು ನಾಯಕಿಯಾಗಿ ನಟಿಸಿರುವ ಮಾಯ ಕನ್ನಡಿ' ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಅವರ ಜತೆಗೆ ಫಿಲ್ಮೀಬೀಟ್ ನಡೆಸಿರುವ ಮಾತುಕತೆ ಇದು.
ನಿಮ್ಮ ಕಲಾ ಜೀವನ ಆರಂಭವಾಗಿದ್ದು ಹೇಗೆ?
ಶಾಲಾ ದಿನಗಳಲ್ಲೇ ಡ್ಯಾನ್ಸ್ ಅಂದರೆ ನನಗೆ ಇಷ್ಟವಿತ್ತು. ಆದರೆ ನಟನೆಯ ವಿಚಾರಕ್ಕೆ ಬಂದರೆ ರಂಗಭೂಮಿ ನಾಟಕಗಳ ಮೂಲಕ ಆರಂಭ. ಎಸ್ ಎಸ್ ಎಲ್ ಸಿ ಆದೊಡನೇ ನಾಟಕದಲ್ಲಿ ಅವಕಾಶ ದೊರೆಯಿತು. ಅದರೊಂದಿಗೆ ನಾನು ವಿದ್ಯಾಭ್ಯಾಸವನ್ನು ಕೂಡ ಮುಂದುವರಿಸಿದೆ. ಮುಂಬೈನ ಎಸ್ ಐ ಇ ಎಸ್ ಕಾಲೇಜ್ ನಲ್ಲಿ ಮಾಸ್ ಕಮ್ಯುನಿಕೇಶನ್ ವಿಭಾಗದಲ್ಲಿಅಧ್ಯಯನ ಮಾಡಿದೆ. ಕಾಲೇಜ್ ನಲ್ಲಿ ಇದ್ದಾಗಲೇ ಒಂದು ಮರಾಠಿ ಸಿನಿಮಾದಲ್ಲಿ ನಟಿಸಿದ್ದೆ. ಚಿತ್ರದ ಹೆಸರು ಶುಭಸ್ಯ ಶೀಘ್ರಂ. ಆದರೆ ಅದು ಬಿಡುಗಡೆಯಾಗುವ ಶುಭಘಳಿಗೆ ಇದುವರೆಗೆ ಬರಲೇ ಇಲ್ಲ!
ಕನ್ನಡ ಚಿತ್ರರಂಗಕ್ಕೆ ನಿಮ್ಮ ಪ್ರವೇಶವಾಗಿದ್ದು ಯಾವಾಗ?
ಕನ್ನಡದಲ್ಲಿ ನಾನು ಮೊದಲು ನಟಿಸಿದ್ದು ಕಿರುತೆರೆ ಧಾರಾವಾಹಿಯಲ್ಲಿ. ಅದು ಸ್ಟಾರ್ ಸುವರ್ಣ ವಾಹಿನಿಯ ‘ಹರಹರ ಮಹಾದೇವ' ಧಾರಾವಾಹಿ. ಅದರಲ್ಲಿ ಸತೀದೇವಿಯ ತಂಗಿಯ ಪಾತ್ರವನ್ನು ನಿರ್ವಹಿಸಿದ್ದೆ. ಅದಕ್ಕೆ ಮೊದಲೇ ಹಿಂದಿ ಧಾರಾವಾಹಿಗಳಾದ ಡಿಡಿ ಕಿಸಾನ್ ನಲ್ಲಿ ಸಲಾಮ್ ಇಂಡಿಯಾ, ಸ್ಟಾರ್ ಭಾರತ್ ನಲ್ಲಿ ಚಂದ್ರಶೇಖರ ಆಜಾದ್, ಸೋನಿಯಲ್ಲಿ ಕ್ರೈಮ್ ಪೆಟ್ರೋಲ್, ಬಿಗ್ ಮ್ಯಾಜಿಕ್ ವಾಹಿನಿಯಲ್ಲಿ ತೇರಿ ಮೇರಿ ಫ್ಯಾಮಿಲಿ, ಧಾರಾವಾಹಿಗಳಲ್ಲಿ, ಇತ್ತೀಚೆಗೆ ವೆಬ್ ಸೀರೀಸ್ ಗಳಲ್ಲಿಯೂ ನಟಿಸಿದ್ದೇನೆ. ಚಂದ್ರಶೇಖರ್ ಆಜಾದ್ ಮತ್ತು ಕ್ರೈಮ್ ಪೆಟ್ರೋಲ್ ನಲ್ಲಿ ನೆಗೆಟಿವ್ ಪಾತ್ರವಿತ್ತು. ಇದೀಗ ನಾನು ನಾಯಕಿಯಾಗಿ ನಟಿಸಿರುವ `ಮಾಯ ಕನ್ನಡಿ' ಎನ್ನುವ ಕನ್ನಡ ಚಿತ್ರದ ಶೂಟಿಂಗ್ ಪೂರ್ತಿಯಾಗಿದೆ. ಈ ವರ್ಷವೇ ತೆರೆ ಕಾಣುವ ನಿರೀಕ್ಷೆ ಇದೆ.
ಕನ್ನಡವಲ್ಲದೆ ಬೇರೆ ಯಾವ ಭಾಷೆಗಳಲ್ಲಿ ನಟಿಸಿದ್ದೀರಿ?
ಆಗಲೇ ಹೇಳಿದಂತೆ ಮೂರು ವರ್ಷಗಳ ಹಿಂದೆ ನಾನು ಮೊದಲ ಬಾರಿ ನಟಿಸಿದ ಚಿತ್ರ ಮರಾಠಿಯದ್ದಾಗಿದ್ದು, ಇನ್ನೂ ತೆರೆಕಂಡಿಲ್ಲ. ಅದರ ಬಳಿಕ ತುಳು ಭಾಷೆಯ ಸಿನಿಮಾದೊಂದಿಗೆ ಕರ್ನಾಟಕಕ್ಕೆ ಕಾಲಿಟ್ಟೆ. `ಪತ್ತನಾಜೆ' ಎನ್ನುವ ಆ ಸಿನಿಮಾ ಸಾಧ್ಯವಾಗಿದ್ದು ಮುಂಬೈನ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಂಥ ನಿರ್ದೇಶಕ ತೋನ್ಸೆ ವಿಜಯ ಕುಮಾರ್ ಶೆಟ್ಟಿಯವರ ಮೂಲಕ. ಅದರಲ್ಲಿ ಸೆಕೆಂಡ್ ಲೀಡ್ ಕ್ಯಾರೆಕ್ಟರ್ ಮಾಡಿದ್ದೆ. ಬಳಿಕ `ದೇಯಿ ಬೈದಿತಿ'ಯಲ್ಲಿ ನಾಯಕಿಯ ಬಾಲ್ಯದ ಪಾತ್ರವನ್ನು ಅಭಿನಯಿಸಿದೆ. ಚಿತ್ರ ಮತ್ತು ಪಾತ್ರದ ಬಗ್ಗೆ ವ್ಯಾಪಕ ಪ್ರಶಂಸೆಗಳು ಲಭಿಸಿತು. ಬಳಿಕ ಹಿಂದಿಯಲ್ಲಿ ನಟಿಸಿದ `ಲೊಹರ್ ದಗ' ಎನ್ನುವ ಕಲಾತ್ಮಕ ಚಿತ್ರ ಕಾನ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಆಯ್ಕೆಯಾಗಿದೆ. ಚಿತ್ರವು ರಾಂಚಿಯ ನಕ್ಸಲೈಟ್ ಏರಿಯಾ ಆಗಿರುವ ಲೊಹರ್ ದಗ ಪ್ರದೇಶವನ್ನು ಆಧಾರಿಸಿರುವ ಕತೆ ಹೊಂದಿದೆ.
ನಿಮ್ಮ ನೃತ್ಯ ಮತ್ತು ರಂಗಭೂಮಿ ಅಭಿರುಚಿಯ ಬಗ್ಗೆ ಹೇಳಿ
ನೃತ್ಯದ ಮೂಲಕ ವೃತ್ತಿ ಬದುಕು ಆರಂಭಿಸಿದ್ದೆ. ಭರತನಾಟ್ಯದಲ್ಲಿಆರು ವರ್ಷಗಳ ಕೋರ್ಸ್ ಮಾಡಿದ್ದೆ. `ಖಾರ್ಘರ್ ಕರ್ನಾಟಕ ಸಂಘ' ತಂಡದ ಮೂಲಕ ಹೋಗಿ ನೃತ್ಯ ಪ್ರದರ್ಶನ ನೀಡುತ್ತಿದ್ದೆ. ಕೊರಿಯಾಗ್ರಫಿ ಕೂಡ ಮಾಡಿದ್ದೇನೆ. ಸ್ಥಳೀಯವಾಗಿ `ನಾಟ್ಯ ಮಯೂರಿ' ಮೊದಲಾದ ಬಿರುದುಗಳು ಲಭಿಸಿವೆ. ನಮ್ಮ ತಂಡ ಸೋನಿ ವಾಹಿನಿಯ ಜನಪ್ರಿಯ ನೃತ್ಯ ಸ್ಫರ್ಧೆ `ಬೂಗಿವೂಗಿ'ಯಲ್ಲಿ ಆಯ್ಕೆಯಾಗಿ ಅಂತಿಮ ಸುತ್ತಿನ ತನಕ ಪಾಲ್ಗೊಂಡಿತ್ತು. ಮುಂಬೈಯ ಸ್ಥಳೀಯ ವಾಹಿನಿಗಳ ನೃತ್ಯ ಸ್ಪರ್ಧೆಗಳಾದ `ಫುಳ್ಟು ಧಮಾಲ್' ಮತ್ತು `ಧಮ್ ಧಮಾಧಮ್' ಶೋಗಳಲ್ಲಿಯೂ ಪಾಲ್ಗೊಂಡಿದ್ದೆ. `ಧಮ್ ಧಮಾ ಧಮ್'ನಲ್ಲಿ ಟೈಟಲ್ ವಿನ್ನರಾದಂಥ ಅನುಭವವೂ ಇದೆ. ಮುಂಬೈನಲ್ಲಿ `ಅಭಿನಯ ಮಂಟಪ', `ರಂಗಭೂಮಿ ಫೈನಾರ್ಟ್ಸ್', `ನಿರೆಕೆರೆ ಕಲಾವಿದೆರ್' ಮತ್ತು `ನವೋದಯ ಕಲಾವೃಂದ'ದ ಜತೆಗೆ ಸೇರಿ ಸುಮಾರು ಹದಿನೈದು ನಾಟಕಗಳ ನೂರಾರು ಶೋಗಳಲ್ಲಿ ಅಭಿನಯಿಸಿದ್ದೇನೆ.
ಚಿತ್ರರಂಗದಲ್ಲಿ ನಿಮ್ಮ ಕನಸು ಏನು?
ನನಗೆ ಕನ್ನಡದಲ್ಲಿ ಒಳ್ಳೆಯ ನಿರ್ದೇಶಕರ ಜತೆ ಕೆಲಸ ಮಾಡಬೇಕು ಎನ್ನುವ ಆಸೆ ಇದೆ. ಖಳನಾಯಕಿಯಾದರೂ ಸರಿ, ಅಭಿನಯಕ್ಕೆ ಪ್ರಾಧಾನ್ಯತೆ ಇರುವ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ಆಕಾಂಕ್ಷೆ ಇದೆ. ಪ್ರಸ್ತುತ ಕನ್ನಡ ಮತ್ತು ತಮಿಳಲ್ಲಿ ತಯಾರಾಗುತ್ತಿರುವ ಚಿತ್ರವೊಂದರಲ್ಲಿ ನಟಿಸುತ್ತಿದ್ದೇನೆ. ಅದರ ಚಿತ್ರೀಕರಣ ನಡೆದಿದೆ. ತುಳುವಲ್ಲಿ `ಮಾಜಿ ಮುಖ್ಯಮಂತ್ರಿ' ಎನ್ನುವ ಚಿತ್ರ ಅಂತಿಮ ಹಂತ ತಲುಪಿದೆ.ಬಹುಶಃ ಅದು ಅಥವಾ `ಮಾಯ ಕನ್ನಡಿ' ಬಿಡುಗಡೆಯ ಬಳಿಕವಷ್ಟೇ ನನಗೆ ಅವಕಾಶಗಳು ದೊರಕೀತು. ಅಲ್ಲದೆ ಮುಂಬೈನಲ್ಲಿ ವಾಸವಾಗಿರುವ ಕಾರಣ ಗಾಂಧಿನಗರದ ಜತೆಗೆ ಸಂಪರ್ಕ ಇಲ್ಲ. ಅಲ್ಲಿ ಇಂದಿಗೂ ರಂಗಭೂಮಿಯ ಅವಕಾಶಗಳನ್ನು ಬಳಸಿಕೊಳ್ಳುತ್ತಿದ್ದೇನೆ. ಸಿನಿಮಾಗಳಿಗೆ ನೃತ್ಯ ನಿರ್ದೇಶಿಸುವ ಕನಸು ಕೂಡ ಇದೆ. ಕನ್ನಡದಲ್ಲಿ ಉತ್ತಮ ಅವಕಾಶಕ್ಕಾಗಿ ಎದುರು ನೋಡುತ್ತಿದ್ದೇನೆ.