Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Exclusive Interview : ಆಕರ್ಷಕ ಸಂಗತಿಗಳೊಂದಿಗೆ ಆರಕ್ಷಕ ಪಾತ್ರಧಾರಿ ರಕ್ಷಿತ್ ಶೆಟ್ಟಿ
ಅದು ಅಭಿಮಾನ್ ಸ್ಟುಡಿಯೋ. ಒಳಗೆ ಜನಜಂಗುಳಿ. ಅಲ್ಲಿ ವಿಷ್ಣುವರ್ಧನ್ ಅವರ ಜನ್ಮದಿನ ಬಿಟ್ಟರೆ ಈ ಮಟ್ಟದಲ್ಲಿ ಜನ ತುಂಬಿರುವುದನ್ನು ಕಾಣವುದು ಅಸಾಧ್ಯ. ಒಳಗೆ ಹೋಗಿ ನೋಡಿದರೆ ಸಾಹಸ ಸಿಂಹನ ಸಮಾಧಿಯ ಪಕ್ಕದಲ್ಲೇ ಮತ್ತೊಂದು ಗುಂಡಿ ತೋಡಿ ಇಡಲಾಗಿತ್ತು. ಗುಂಡಿಯೊಳಗೆ ಪೊಲೀಸ್ ಅಧಿಕಾರಿಯೊಬ್ಬರು ಇಳಿಯುತ್ತಿರುವಂತೆ ಕಂಡಿತು. ಏನೋ ಅನಾಹುತ ಆಗಿದೆ ಎಂದು ಹೋಗಿ ನೋಡಿದರೆ ಕಂಡಿದ್ದೇನು? ಆ ಪೊಲೀಸ್ ಸಮವಸ್ತ್ರದಲ್ಲಿದ್ದಿದ್ದು ಬೇರೆ ಯಾರೂ ಅಲ್ಲ; ನಟ ರಕ್ಷಿತ್ ಶೆಟ್ಟಿ! ಅವರು ಗುಂಡಿಯೊಳಗಿದ್ದಾರೆ.
ಎದುರಿಗೆ ಕ್ಯಾಮೆರಾ ಕೂಡ ಇತ್ತು. ಸಚಿನ್ ನಿರ್ದೇಶನದ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಕೊನೆಯ ಹಂತದ ಚಿತ್ರೀಕರಣ ಅಲ್ಲಿ ನಡೆದಿತ್ತು. ನೂರಾರು ಜ್ಯೂನಿಯರ್ ಆರ್ಟಿಸ್ಟ್ ಗಳ ಸಮೂಹ ಅಲ್ಲಿತ್ತು. ಜತೆಗೆ ಚಿತ್ರದ ನಾಯಕಿ ಸಾನ್ವಿ ಶ್ರೀವತ್ಸ ಕೇಸರಿ ಸೀರೆಯಲ್ಲಿ ಸೀತಾಮಾತೆಯಂತೆ ಕಂಗೊಳಿಸುತ್ತಿದ್ದರು! ನಿರ್ಮಾಪಕ ಪುಷ್ಕರ ಮಲ್ಲಿಕಾರ್ಜುನಯ್ಯ ಸೇರಿದಂತೆ ಕಲಾವಿದರಾದ ರಘು ಪಾಂಡೇಶ್ವರ, ಗೋಪಿ ದೇಶಪಾಂಡೆ, ಪ್ರಮೋದ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ರಕ್ಷಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸಿಕ್ತು ಭರ್ಜರಿ ಗಿಫ್ಟ್
ಸಂಭ್ರಮದಲ್ಲಿ ಪಾಲ್ಗೊಳ್ಳಲು ಸ್ವತಃ ರಿಷಬ್ ಶೆಟ್ಟಿ ಕೂಡ ಅಲ್ಲಿದ್ದರು. ಕ್ಲೈಮ್ಯಾಕ್ಸ್ ದೃಶ್ಯದ ಚಿತ್ರೀಕರಣಕ್ಕೂ ಮುನ್ನ ಚಿತ್ರದ ನಾಯಕನೊಂದಿಗೆ ಮಾತನಾಡ ಬಯಸಿದ 'ಫಿಲ್ಮ್ ಬೀಟ್' ತಂಡವನ್ನು ರಕ್ಷಿತ್ ತಮ್ಮ ಕ್ಯಾರವಾನ್ ಒಳಗೆ ಕರೆದೊಯ್ದರು. ಅಲ್ಲಿ ನಡೆದ ಪುಟ್ಟದಾದ ವಿಶೇಷ ಮಾತುಕತೆಯ ಸಂಪೂರ್ಣ ವಿವರ ಇಲ್ಲಿ ನೀಡಲಾಗಿದೆ.
'ಅವನೇ ಶ್ರೀಮನ್ನಾರಾಯಣ' ಚಿತ್ರೀಕರಣ ಕೊನೆಗೊಂಡ ಸಂಭ್ರಮಕ್ಕೆ ಶುಭಾಶಯಗಳು. ಹೇಗಿತ್ತು ಈ ಅನುಭವ?
''ಥ್ಯಾಂಕ್ಯು. ಇದೊಂದು ಒಳ್ಳೆಯ ಅನುಭವ. ಪ್ರತಿಯೊಂದು ವಿಷಯದಲ್ಲಿ ಕೂಡ ಕಲಿಯಲು ಸಿಕ್ಕಿತು. ಅದು ಬರವಣಿಗೆಯಿಂದ ಆರಂಭಿಸಿ ಪ್ರೊಡಕ್ಷನ್ ತನಕ ಎಲ್ಲದರಲ್ಲಿಯೂ ಹೊಸದಾದ ಎಕ್ಸ್ಪೀರಿಯನ್ಸ್ ದೊರೆಯಿತು. ನಾವು ಚಿತ್ರೀಕರಣ ನಡೆಸಿರುವ ಇದುವರೆಗಿನ ಸಿನಿಮಾಗಳಿಗೆ ಹೋಲಿಸಿದರೆ ತುಂಬ ಕಾಂಪ್ಲಿಕೇಟೆಡಾಗಿ ಇರುವಂಥ ಸ್ಕ್ರಿಪ್ಟ್ ಮತ್ತು ಶೂಟಿಂಗ್ ಪ್ಯಾಟರ್ನ್ ಇದು ಎನ್ನಬಹುದು.''
ಚಿತ್ರಕ್ಕಾಗಿ ಬಹಳಷ್ಟು ಸೆಟ್ ಹಾಕಲಾಗಿತ್ತು ಎಂದು ಸುದ್ದಿಯಿದೆ?
''ಹೌದು. ಅಂದಾಜು ಈ ಚಿತ್ರಕ್ಕೆ 25ರಷ್ಟು ಸೆಟ್ ಹಾಕಿದ್ದೇವೆ. ಪ್ರತಿಯೊಂದು ಸೆಟ್ ನಲ್ಲಿ ಪ್ರತಿ ದೃಶ್ಯದಲ್ಲಿ ಇನ್ನೂರರಿಂದ ಮುನ್ನೂರಷ್ಟು ಮಂದಿ ಕಲಾವಿದರು ಇದ್ದರು. ಖಂಡಿತವಾಗಿ ಅವರನ್ನೆಲ್ಲ ನಿಭಾಯಿಸಿಕೊಂಡು ಚಿತ್ರ ಮಾಡಿರುವುದು ಒಂದು ಸಾಹಸವೆಂದೇ ಹೇಳಬಹುದು.''
ಮತ್ತೆ ಸಾಮಾಜಿಕ ಜಾಲತಾಣಕ್ಕೆ ಬರ್ತಿದ್ದಾರೆ ರಕ್ಷಿತ್ ಶೆಟ್ಟಿ
ಅದೇ ಕಾರಣದಿಂದಲೇ ಚಿತ್ರೀಕರಣಕ್ಕೆ ಹೆಚ್ಚು ದಿನಗಳು ಬೇಕಾದವು ಎನ್ನಬಹುದೆ?
''ನಾನು ಹೇಳಿದ್ದು ಜ್ಯೂನಿಯರ್ ಆರ್ಟಿಸ್ಟ್ ಗಳ ಬಗ್ಗೆ. ಆದರೆ ಅವರು ಮಾತ್ರವಲ್ಲ, ಸಾಕಷ್ಟು ಜನಪ್ರಿಯ ನಟರು ಕೂಡ ಚಿತ್ರದಲ್ಲಿ ಇರುವುದರಿಂದ ಪ್ರತಿ ಬಾರಿ ಅವರೆಲ್ಲರ ಕಾಂಬಿನೇಶನ್ ದೃಶ್ಯಗಳಿಗಾಗಿ ಡೇಟ್ ಹೊಂದಿಸುವುದು ಕೂಡ ಛಾಲೆಂಜಿಂಗ್ ಆಗಿರುತ್ತಿತ್ತು. ಹಾಗಾಗಿಯೇ ಸ್ವಲ್ಪ ಹೆಚ್ಚೇ ಟೈಮ್ ತೆಗೆದುಕೊಂಡೆವು ಎಂದು ಹೇಳಬಹುದು.''
ಹಾಗಾದರೆ ಚಿತ್ರ ಪರದೆಯ ಮೇಲೆ ತರಲು ಇನ್ನಷ್ಟು ಕಾಲಾವಧಿಯ ಅಗತ್ಯವಿದೆ ಎಂದಾಯಿತು?
ಹಾಗೇನಿಲ್ಲ. ಯಾಕೆಂದರೆ ಶೂಟಿಂಗ್ ಜೊತೆಯಲ್ಲಿಯೇ ಪೋಸ್ಟ್ ಪ್ರೊಡಕ್ಷನ್ ವರ್ಕ್ ಕೂಡ ನಡೆಯುತ್ತಿತ್ತು. ಆದುದರಿಂದ ಈಗಾಗಲೇ ಒಂದು ಹಂತದ ಎಡಿಟಿಂಗ್ ಮುಗಿಸಿದ್ದೇವೆ. ಡಬ್ಬಿಂಗ್ ಕೂಡ ಮುಗಿದಿದೆ. ಬ್ಯಾಕ್ ಗ್ರೌಂಡ್ ಸ್ಕೋರ್ ಕೆಲಸ ಮುಗಿದರೆ ಚಿತ್ರ ತೆರೆಗೆ ಸಿದ್ಧವಾದಂತೆ.
ಸಿನಿಮಾದಲ್ಲಿ ನೀವು ನಾಲ್ಕು ಗೆಟಪ್ ನಲ್ಲಿ ಕಾಣಿಸಲಿದ್ದೀರಿ ಎನ್ನುವ ಬಗ್ಗೆ ಏನು ಹೇಳುತ್ತೀರಿ?
''ನಾಲ್ಕು ಗೆಟಪ್ ಅಂತ ಏನೂ ಇಲ್ಲ. ಆದರೆ, ಶ್ರೀಮನ್ನಾರಾಯಣನಿಗೆ ಎರಡು ಮುಖಗಳಿವೆ. ಅದನ್ನು ಶೇಡ್ಸ್ ಎಂದು ಹೇಳಬಹುದು. ಆ ಮತ್ತೊಂದು ಮುಖವನ್ನೇ ಬರ್ತ್ ಡೇ ಟೀಸರ್ ಮೂಲಕ ಅನಾವರಣಗೊಳಿಸಲಿದ್ದೇವೆ. ಅದು ಬಿಟ್ಟು ಚಿತ್ರಕ್ಕಾಗಿ ನಾನು ಸಿಕ್ಸ್ ಪ್ಯಾಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎನ್ನುವುದೆಲ್ಲ ಸುಳ್ಳು. ಪೊಲೀಸ್ ಪಾತ್ರ ಇರುವುದರಿಂದ ಬಾಡಿ ಫಿಟ್ ಆಗಿರಬೇಕೆಂದು ತಯಾರಿ ಮಾಡಿಕೊಂಡಿದ್ದೇನೆ ಆಷ್ಟೇ.''
ಕತೆ ಬಹಳಷ್ಟು ವಿಚಾರಗಳನ್ನು ಹೇಳುವ ಕಾರಣ ಸಿನಿಮಾದ ಕಾಲಾವಧಿ ಕೂಡ ಹೆಚ್ಚೇ ಇರುತ್ತದೆಯೇ?
ನಿಜ. ನಾವು ಚಿತ್ರೀಕರಣ ಮಾಡುತ್ತಾ ಸ್ಕ್ರಿಪ್ಟ್ ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡೆವು. ಚಿತ್ರದ ಕಂಟೆಂಟ್ ಅಷ್ಟು ಇರುವುದರಿಂದ ಚಿತ್ರದ ಡ್ಯುರೇಶನ್ ಕೂಡ ಸಾಮಾನ್ಯ ಸಿನಿಮಾಗಿಂತ ದೊಡ್ಡದಾಗಿಯೇ ಇದೆ. ಹಾಗಂತ ಅದು ಬೋರ್ ಉಂಟು ಮಾಡಲ್ಲ. ಕತೆ ಎಲ್ಲಿಯೂ ಕತೆ ನಿಲ್ಲದೆ ಆಸಕ್ತಿಯುತವಾಗಿ ಸಾಗುತ್ತಲೇ ಇರುತ್ತದೆ.
ನನಗೆ ಆಶ್ವರ್ಯ ಆಗುತ್ತಿದೆ
ಸೆಟ್ ಗಮನಿಸಿದರೆ ದೇವಲೋಕದ ಹಾಗೆ ಕಾಣಿಸುತ್ತದೆ. ಸ್ವರ್ಗ, ನರಕ ಸೇರಿದ ಹಾಗೆ ಬ್ರಹ್ಮ, ಯಮನ ಪಾತ್ರಗಳು ಇಲ್ಲಿವೆ. ನಿಮ್ಮದು ಜನ್ಮ ಜನ್ಮಾಂತರದ ಕತೆಯೇ?
''ಖಂಡಿತವಾಗಿ ಇಲ್ಲ! ನೀವು ಇಲ್ಲಿ ನೋಡಿದಂಥ ಈ ದೃಶ್ಯ ಚಿತ್ರದಲ್ಲಿ ಕೇವಲ ಒಂದೆರಡು ನಿಮಿಷಗಳ ಕಾಲ ಮಾತ್ರ ಬಂದು ಹೋಗುತ್ತದೆ. ಕತೆ, ಸನ್ನಿವೇಶಗಳು ನಿಮಗಷ್ಟೇ ಅಲ್ಲ ನಾವು ಕೂಡ ಅಚ್ಚರಿಗೊಳ್ಳುವ ರೀತಿಯಲ್ಲಿ ಸೆಟ್ ನಲ್ಲೇ ಬದಲಾವಣೆ ಮಾಡಿಕೊಂಡಿದ್ದೇವೆ. ಹಾಗಾಗಿಯೇ ಪ್ರತಿ ದಿನವೂ ಮೆಮೊರೆಬಲ್ ಆಗಿದೆ. ಯಾಕೆಂದರೆ ಶೂಟಿಂಗ್ ಶುರುವಾದ ಮೇಲೆ ಕೂಡ ನಾವು ಸ್ಕ್ರಿಪ್ಟ್ ಬದಲಿಸುತ್ತಾ ಇದ್ವಿ.
ಪ್ರತಿ ಸ್ಕೆಡ್ಯೂಲ್ ಆರಂಭಗೊಳ್ಳುವಾಗಲೂ ಒಂದು ಭಯ ಇತ್ತು. ಈ ರೀತಿ ಯಾವತ್ತೂ ನಾವು ಟ್ರೈ ಮಾಡಿರಲಿಲ್ಲ. ಇದನ್ನು ಹೇಗೆ ಶೂಟ್ ಮಾಡೋದು ನಮ್ಮ ಕೈಯ್ಯಲ್ಲಿ ಆಗುತ್ತ ಎನ್ನುವ ಆತಂಕದೊಂದಿಗೇ ಚಿತ್ರೀಕರಣ ಮಾಡುತ್ತಿದ್ದೆವು. ಇನ್ನೇನು ಇವತ್ತು ಕುಂಬಳಕಾಯಿ ಒಡೆಯುತ್ತಿದ್ದೇವೆ ಎಂದರೆ ನನಗೆ ಆಶ್ವರ್ಯ ಆಗುತ್ತಿದೆ. ನನ್ನಿಂದ ನಂಬೋಕೆ ಆಗುತ್ತಿಲ್ಲ.''
ಬರ್ತ್ ಡೇ ಬಂದಿದೆ. ಈಗ ನಿಮ್ಮ ಮನದಲ್ಲಿ ಮೂಡುತ್ತಿರುವ ವಿಚಾರ ಏನು?
''ಬರ್ತ್ ಡೇ ಪ್ರಯುಕ್ತ ಬಿಡುಗಡೆಯಾಗಲಿರುವ ಟೀಸರ್ ಪ್ರೇಕ್ಷಕರಿಗೆ ಇಷ್ಟವಾಗುವ ನಿರೀಕ್ಷೆ ಇದೆ. ಚಿತ್ರವನ್ನು ನಾನು ಈಗಾಗಲೇ ನೋಡಿರುವುದರಿಂದ ಸಿನಿಮಾ ಕೂಡ ಎಲ್ಲರಿಗೆ ಇಷ್ಟವಾದೀತು ಎಂಬ ಭರವಸೆ ಇದೆ. ಮಾತ್ರವಲ್ಲ, ಇಂಥದೊಂದು ಸಿನಿಮಾ ಮಾಡಿದ್ಮೇಲೆ ಇನ್ನು ಯಾವ ರೀತಿಯ ಚಿತ್ರ ಕೂಡ ಮಾಡಬಹುದು ಎನ್ನುವ ನಂಬಿಕೆ ಬಂದಿದೆ! ಇನ್ನು ನನ್ನನ್ನು ಸೋಶಿಯಲ್ ಮೀಡಿಯಾದಲ್ಲಿ ಬಯಸುವವರಿಗಾಗಿ ನಾನು ಈಗಾಗಲೇ ಹೇಳಿಕೊಂಡಿರುವಂತೆ ಟೀಮ್ ರಕ್ಷಿತ್ ಹೆಸರಲ್ಲಿ ವಾಪಾಸಾಗಲಿದ್ದೇನೆ. ನಿಮ್ಮೆಲ್ಲರ ಹಾರೈಕೆಗಳಿರಲಿ. ನಮಸ್ಕಾರ.''