ಆಟದ ಜತೆ ಲೆಕ್ಕಕ್ಕೂ ಸಿದ್ಧವಾಗಿದ್ದಾರೆ ಸಂಚಾರಿ ವಿಜಯ್
ಸಂಚಾರಿ ವಿಜಯ್ ಎಂದೊಡನೆ ರಾಷ್ಟ್ರ ಪ್ರಶಸ್ತಿ ವಿಜೇತ ನಟನ ಮುದ್ದಾದ ಮುಖ ನಮ್ಮ ಮನದಲ್ಲಿ ಮೂಡುತ್ತದೆ. ಆದರೆ ಅವರು ಇತ್ತೀಚೆಗೆ ಎಲ್ಲ ರೀತಿಯ ವೈವಿಧ್ಯತೆಯನ್ನು ಹೊಂದಿರುವ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಈ ವರ್ಷ ಬಿಡುಗಡೆಯಾಗಲಿರುವ ಚಿತ್ರಗಳೆಲ್ಲವೂ ಒಂದಕ್ಕಿಂತ ಒಂದು ವಿಭಿನ್ನ ಎನ್ನುವ ಹಾಗೆ ಮೂಡಿ ಬಂದಿದೆ.
ಅವುಗಳಲ್ಲಿ ಅವರು ಮೂರು ಶೇಡ್ ಗಳಲ್ಲಿ ಕಾಣಿಸಿಕೊಳ್ಳಲಿರುವ ಮೇಲೊಬ್ಬ ಮಾಯಾವಿ ಕೂಡ ಒಂದು. ಇದರ ನಡುವೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಶೀರ್ಷಿಕೆಯ ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿದೆ. ಹೆಸರಿನಿಂದಲೇ ಆಕರ್ಷಣೆ ಮೂಡಿಸಿರುವ ಈ ಚಿತ್ರದ ವಿಶೇಷತೆಗಳ ಬಗ್ಗೆ ವಿಜಯ್ ಇಲ್ಲಿ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
'ರಾಮ ರಾಮ ರೇ' ಖ್ಯಾತಿಯ ನೊಬಿನ್ ಪೌಲ್ ಅವರು ನೀಡಿರುವ ಸಂಗೀತ, ವಾಸುಕಿ ವೈಭವ್ ಹಾಡುವುದರ ಜತೆಗೆ ನೀಡಿರುವ ಸಾಹಿತ್ಯ ಎಲ್ಲವೂ ಜನಪ್ರಿಯವಾಗಿದೆ. ಕತೆ ತಮಗೆ ಗೊತ್ತಿರುವುದರಿಂದಾಗಿ ಈ ಚಿತ್ರದಿಂದ ಖಂಡಿತವಾಗಿ ಒಂದು ಒಳ್ಳೆಯ ಸಂದೇಶ ರವಾನೆ ಆಗಲಿದೆ ಎಂದು ಭರವಸೆ ನೀಡುವ ಸಂಚಾರಿ ವಿಜಯ್ ಜತೆಗೆ ಫಿಲ್ಮೀಬೀಟ್ ನಡೆಸಿರುವ ವಿಶೇಷ ಸಂದರ್ಶನ ಇದು.

ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಹೆಸರು ಯಾಕೆ?
ಆಟಕ್ಕಿದ್ದರೂ ಲೆಕ್ಕಕ್ಕೆ ಇಲ್ಲ ಎನ್ನುವುದನ್ನು ಆಟದ ವೇಳೆ ಬಳಸಿ ಗೊತ್ತಿರುತ್ತದೆ. ಆದರೆ ಅದನ್ನೇ ಚಿತ್ರದ ಶೀರ್ಷಿಕೆಯಾಗಿಸಿರುವಲ್ಲಿ ಒಂದು ಪ್ರಮುಖ ಕಾರಣವಿದೆ. ಚಿತ್ರದ ಪ್ರಮುಖ ಪಾತ್ರವೊಂದರ ಉಪಸ್ಥಿತಿ ಇದ್ದರೂ ಇರದಂಥ ಸಂದರ್ಭ ಕತೆಯಲ್ಲಿ ಬರುತ್ತದೆ. ಅದು ಯಾರು, ಯಾವ ಪಾತ್ರ ಎನ್ನುವುದು ಪೂರ್ತಿ ಸಿನಿಮಾ ನೋಡಿದ ಬಳಿಕ ಗೊತ್ತಾಗುತ್ತದೆ.

ಟ್ರೇಲರ್ ಗಮನಿಸಿದಾಗ ಇದೊಂದು ಹಾರರ್ ಸಿನಿಮಾ ಇರುವಂತಿದೆ?
ಈ ಸಂದೇಹ ಈಗಾಗಲೇ ಬಹಳ ಮಂದಿಯಲ್ಲಿದೆ. ಖಂಡಿತವಾಗಿ ಇದು ಹಾರರ್ ಚಿತ್ರವಲ್ಲ. ಸೈಕಾಲಜಿಕಲ್ ಥ್ರಿಲ್ಲರ್ ಎಂದು ಹೇಳಬಹುದು. ಅಥವಾ ಮರ್ಡರ್ ಮಿಸ್ಟರಿ ಎಂದು ಕೂಡ ಹೇಳಬಹುದು. ಜಗತ್ತಿನ ಪ್ರತಿಯೊಬ್ಬ ಮನುಷ್ಯನಲ್ಲಿ ಕೂಡ ಪಾಯಿಂಟ್ ಫೈವ್ ಪರ್ಸೆಂಟ್ ಒಂದು ರೋಗದ ಲಕ್ಷಣ ಇರುತ್ತದೆ. ಅದೇನು ಎನ್ನುವುದೇ ಚಿತ್ರದ ಸಬ್ಜೆಕ್ಟ್ ಇರುತ್ತದೆ.

ಇದುವರೆಗಿನ ಪಾತ್ರಗಳಿಗಿಂತ ನಿಮಗೆ ಎಷ್ಟು ಚಿತ್ರ ಎಷ್ಟು ವಿಭಿನ್ನವಾಗಿದೆ?
ಈ ಸಿನಿಮಾದ ಕತೆ ಜಗತ್ತಿನ ಕೆಲವರ ಜೀವನದಲ್ಲಿ ನಡೆದಿರುವಂಥ ನೈಜ ಘಟನೆಯನ್ನುಆಧಾರಿಸಿ ಮಾಡಿರುವಂಥದ್ದಾಗಿದೆ. ನನ್ನ ಮಟ್ಟಿಗೆ ಹೇಳುವುದಾದರೆ ಇದು ನಾನು ಇಲ್ಲಿಯವರೆಗೆ ಮಾಡಿರದಂಥ ಪಾತ್ರ ಎಂದು ಧೈರ್ಯದಿಂದ ಹೇಳಬಲ್ಲೆ. ಒಬ್ಬ ಮನುಷ್ಯನ ಸಾಂಸಾರಿಕ ಜೀವನದಲ್ಲಿ ಹೇಗೆ ಬೇರೆ ಬೇರೆ ಘಟನೆ, ವ್ಯಕ್ತಿ, ಸಂದರ್ಭಗಳು ಪ್ರಭಾವ ಬೀರುತ್ತವೆ ಎನ್ನುವುದನ್ನು ತೋರಿಸುವಂಥ ಪಾತ್ರ.

ಚಿತ್ರ ತಂಡದ ಬಗ್ಗೆ ಹೇಳಿ
ನಿರ್ದೇಶಕ ರಾಮ್ ಜಯಚಂದ್ರ ಮೆಡಿಸಿನ್ ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡಿರುವ ಕಾರಣ, ಖುದ್ದಾಗಿ ಕಂಡಿರುವ, ಅಧ್ಯಯನ ನಡೆಸಿರುವ ಸಬ್ಜೆಕ್ಟ್ ಎಂದೇ ಹೇಳಬಹುದು. ವೃತ್ತಿಯಲ್ಲಿ ಎದುರಾದ, ಕಾಡಿದ ವಿಚಾರವನ್ನೇ ಇರಿಸಿಕೊಂಡು ಚಿತ್ರ ಮಾಡಿದ್ದಾರೆ. ನನಗೆ ಸಹನಟಿಯಾಗಿ ಮಯೂರಿ ಕ್ಯಾತರಿ ಸಾಥ್ ನೀಡಿದ್ದಾರೆ. ಜತೆಗೆ ದುನಿಯಾ ರಶ್ಮಿಯವರು ಒಂದು ಬ್ರೇಕ್ ಬಳಿಕ ಈ ಚಿತ್ರದ ಮೂಲಕ ಕಾಣಿಸಿಕೊಳ್ಳುತ್ತಿದ್ದಾರೆ. ಅಚ್ಯುತ್ ಕುಮಾರ್, ಶೋಭರಾಜ್, ಕಡ್ಡಿಪುಡಿ ಚಂದ್ರು ಮೊದಲಾದವರ ತಂಡ ಇದೆ. ಚಿತ್ರದ ಹೆಚ್ಚಿನ ಭಾಗವನ್ನು ರಾತ್ರಿ ಕಾಲದಲ್ಲಿ ಶೂಟ್ ಮಾಡಿರುವುದರಿಂದ ಸ್ವಲ್ಪ ಹೆಚ್ಚೇ ಶ್ರಮ ಪಡಬೇಕಾಯಿತು. ಪರಮೇಶ್ ಸಿಎಮ್ ಛಾಯಾಗ್ರಹಣ ಇದೆ. ಉಗ್ರಂ, ಕೆಜಿಎಫ್ ಖ್ಯಾತಿಯ ಶ್ರೀಕಾಂತ್ ಸಂಕಲನ ನಿರ್ವಹಿಸಿದ್ದಾರೆ.


Click it and Unblock the Notifications











