ಮಂಡ್ಯದಲ್ಲಿ ಸುಮಲತಾ ಸ್ವಂತ ಮನೆ: ಚುನಾವಣೆಗೆ ಅಭಿಷೇಕ್ ಸಿದ್ಧತೆ?
ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಸ್ಪರ್ಧೆ ಮಾಡಿದಾಗಲೇ ಒಂದು ಟೀಕೆ ಕೇಳಿ ಬಂದಿತ್ತು. ಸುಮಲತಾ ಅವರೇನಾ ಮಂಡ್ಯದವರಾ? ಮಂಡ್ಯದಲ್ಲಿ ಅವರ ಮನೆ ಇದ್ಯಾ? ಅವರಿಗೇಕೆ ಮಂಡ್ಯ ಚುನಾವಣೆ ಎಂದು ದೂಷಿಸಿದ್ದವರು ಇದ್ದಾರೆ. ಆಮೇಲೆ ಅಭಿಷೇಕ್ ಅಂಬರೀಶ್ ಬಾಡಿಗಿಗೆ ಮನೆ ಮಾಡಿಕೊಂಡು ಇದ್ದಿದ್ದು ನಡೆದಿದೆ.
Recommended Video
ಇದೀಗ, ಸುಮಲತಾ ಅಂಬರೀಶ್ ಮಂಡ್ಯದಲ್ಲಿ ಖಾಯಂ ಆಗಿ ವಾಸಿಸಲು ನಿರ್ಧರಿಸಿದ್ದಾರೆ. ಅದಕ್ಕಾಗಿ ಮಂಡ್ಯ ತಾಲೂಕಿನ ಹನಗೆರೆ ಗ್ರಾಮದ ಬಳಿ ಸ್ವಂತ ಮನೆ ನಿರ್ಮಿಸಲು ಮುಂದಾಗಿದ್ದಾರೆ. ಇದರ ಭಾಗವಾಗಿ ಇಂದು ಗುದ್ದಲಿ ಪೂಜೆ ಸಹ ನೆರವೇರಿದೆ. ತಮ್ಮ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಹನಕೆರೆ ಶಶಿ ಎಂಬುವವರಿಂದ ಜಮೀನು ಖರೀದಿ ಮಾಡಿ ಮುಕ್ಕಾಲು ಎಕೆರೆಯಲ್ಲಿ ಮನೆ ಕಟ್ಟಲು ಯೋಜಿಸಿದ್ದಾರೆ.
ಸೆಪ್ಟೆಂಬರ್ 1 ರಂದು ಭೂಮಿ ಪೂಜೆ ನಡೆದಿದ್ದು, ಸುಮಲತಾ, ಅಭಿಷೇಕ್ ಅಂಬರೀಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಇನ್ನು ಆರೇಳು ತಿಂಗಳಲ್ಲಿ ಈ ಮನೆ ನಿರ್ಮಾಣವಾಗಲಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಮಂಡ್ಯದಲ್ಲಿ ಶಾಶ್ವತವಾಗಿ ನೆಲೆ ಕಾಣಲು ಅಂಬಿ ಕುಟುಂಬ ತೀರ್ಮಾನಿಸಿದೆ.

ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಹೊಸ ಮನೆ ಕಟ್ಟುತ್ತಿರುವ ಬಗ್ಗೆ ರಾಜಕೀಯವಾಗಿ ಚರ್ಚೆಗೆ ಕಾರಣವಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮಗ ಅಭಿಷೇಕ್ ಅವರನ್ನು ಮಂಡ್ಯ ವಿಧಾನಸಭೆ ಕ್ಷೇತ್ರದಲ್ಲಿ ನಿಲ್ಲಿಸಲು ಈಗಿನಿಂದಲೂ ಸಿದ್ಧತೆ ಆರಂಭಿಸಿದ್ದಾರೆ ಎಂಬ ಅಭಿಪ್ರಾಯ ಕೇಳಿ ಬರ್ತಿದೆ.
ಜುಲೈ ತಿಂಗಳಲ್ಲಿ ಮದ್ದೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಭಿಷೇಕ್, ರಾಜಕೀಯ ಪ್ರವೇಶದ ಬಗ್ಗೆ ಸುಳಿವು ನೀಡಿದ್ದರು. ಇದರ ಬೆನ್ನಲ್ಲೆ ಈಗ ಮದ್ದೂರಿಗೆ ಸಮೀಪವಾಗಿ ಸ್ವಂತ ಮನೆ ನಿರ್ಮಾಣ ಮಾಡುತ್ತಿರುವುದು ಕುತೂಹಲ ಕೆರಳಿಸಿದೆ. ಜುಲೈ ಕೊನೆಯಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹುಳುಗನ ಹಳ್ಳಿಗೆ ಭೇಟಿ ನೀಡಿದ್ದ ಅಭಿಷೇಕ್ ಅಂಬರೀಶ್, ''ಜನರು ಬಯಸಿದರೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ನಾನು ಸಿದ್ಧ'' ಎಂದಿದ್ದರು.

''ಭವಿಷ್ಯದಲ್ಲಿ ಏನೇನೂ ಬದಲಾವಣೆಗಳು ಆಗುತ್ತೋ ಯಾರಿಗೂ ಗೊತ್ತು. ಕಳೆದ ವಾರ ಸಿಎಂ ಬದಲಾಗ್ತಾರೆ ಅಂತ ಯಾರಿಗಾದ್ರೂ ಗೊತ್ತಿತ್ತಾ? ಹಾಗಾಗಿ, ಭವಿಷ್ಯ ಏನು ಅಂತ ಈಗಲೇ ಹೇಳೋಕೆ ಸಾಧ್ಯನಾ? ಜನ ಬಯಸಿದರೆ ನಾನು ಬರ್ತೀನಿ. ಮಂಡ್ಯಗಾಗಲಿ ಮದ್ದೂರಿಗಾಗಲಿ ಏಳು ಕ್ಷೇತ್ರಗಳಿಗೂ ಒಳ್ಳೆಯ ಶಾಸಕರು ಸಿಗಬೇಕು. ಒಳ್ಳೆಯ ಪ್ರತಿನಿಧಿಗಳು ಸಿಗಬೇಕು'' ಎಂದು ಅಭಿಷೇಕ್ ಹೇಳಿದ್ದರು.
ವಿಧಾನಸಭೆ ಚುನಾವಣೆ ವೇಳೆಗೆ ಹೊಸ ಪಕ್ಷ ಸ್ಥಾಪಿಸಿ ಮಂಡ್ಯದ ಎಲ್ಲಾ ಕ್ಷೇತ್ರಗಳನ್ನು ನಮ್ಮವರನ್ನು ಗೆಲ್ಲಿಸುತ್ತೇವೆ ಎಂದು ಅಂಬರೀಶ್ ಅಭಿಮಾನಿಗಳು ಸುಮಲತಾ ಬಳಿ ವಿನಂತಿಸಿದ್ದರು. ಮತ್ತೊಂದೆಡೆ ಅಭಿಷೇಕ್ ಸಹ ಪರೋಕ್ಷವಾಗಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಸುಳಿವು ನೀಡಿದ್ದರು. ಈಗ ಮಂಡ್ಯದಲ್ಲೇ ಸುಮಲತಾ ಹೊಸ ಮನೆ ಕಟ್ಟುತ್ತಿದ್ದಾರೆ. ಇದೆಲ್ಲವನ್ನು ಗಮನಿಸಿದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅಭಿಷೇಕ್ ರಾಜಕೀಯಕ್ಕೆ ಅಧಿಕೃತವಾಗಿ ಎಂಟ್ರಿ ಕೊಟ್ಟರೂ ಅಚ್ಚರಿಯಿಲ್ಲ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಪರ ಅಭಿಷೇಕ್ ಅಂಬರೀಶ್ ಸಹ ಮಂಡ್ಯದಲ್ಲಿ ಪ್ರಚಾರ ಕೈಗೊಂಡಿದ್ದರು. ಅಮ್ಮನ ಪರವಾಗಿ, ನಟ ದರ್ಶನ್ ಮತ್ತು ಯಶ್ ಜೊತೆ ಸೇರಿ ಹಳ್ಳಿ-ಹಳ್ಳಿಗಳಲ್ಲೂ ಪ್ರಚಾರ ಮಾಡಿದ್ದರು. ಅದರ ಪರಿಣಾಮ ಸುಮಲತಾ ಸಂಸದರಾಗಿ ಆಯ್ಕೆಯಾದರು. ಇದೀಗ, ಅಮ್ಮನ ಹಾದಿಯಲ್ಲಿ ಅಭಿಷೇಕ್ ಸಹ ಹೆಜ್ಜೆ ಇಡಲು ತೀರ್ಮಾನಿಸಿರಬಹುದು ಎಂಬ ಪ್ರಶ್ನೆ ಹುಟ್ಟುಹಾಕಿದೆ.
ಮತ್ತೊಂದೆಡೆ ಕಳೆದ ಚುನಾವಣೆಯಲ್ಲಿ ಸೋಲು ಕಂಡಿದ್ದ ನಿಖಿಲ್ ಕುಮಾರ್ ಸಹ ಮಂಡ್ಯದಲ್ಲಿ ಉಳಿಯುತ್ತೇನೆ ಎಂದಿದ್ದರು. ನಾನು ಎಲೆಕ್ಷನ್ನಲ್ಲಿ ಸೋತರು ಗೆದ್ದರೂ ಇಲ್ಲೇ ಇರ್ತೀನಿ ಎಂದಿದ್ದರು. ಆಮೇಲೆ ಮಂಡ್ಯ ಕಡೆ ಮುಖ ಕೂಡ ಹಾಕಿಲ್ಲ ಎಂದು ಹೇಳಲಾಗಿದೆ.


Click it and Unblock the Notifications











