ದುಲ್ಖರ್ ಸಲ್ಮಾನ್ ಸಿನಿಮಾಗೆ ಮೊದಲ ದಿನವೇ ಕಂಟಕ
ಕೊರೋನಾ ಹಾವಳಿಯ ನಿಯಂತ್ರಣದ ನಂತರ ಎಲ್ಲಾ ಚಿತ್ರೋದ್ಯಮಗಳು ನಿಧಾನವಾಗಿ ಸುಧಾರಿಸಿಕೊಳ್ಳುತ್ತಿದೆ. ಕನ್ನಡ, ಹಿಂದಿ,ತಮಿಳು, ತೆಲುಗು, ಮಲಯಾಳಂ ಇಂಡಸ್ಟ್ರಿಗಳಲ್ಲಿ ಲಾಕ್ಡೌನ್ ಬಳಿಕ ಥಿಯೇಟರ್ಗೆ ಸಿನಿಮಾಗಳು ಎಂಟ್ರಿಯಾಗುತ್ತಿವೆ. ಅಂತೆಯೇ ಇವತ್ತು ಸಿನಿ ಶುಕ್ರವಾರ ಸಾಕಷ್ಟು ಭಾಷೆಯ ಸಿನಿಮಾಗಳು ತೆರೆಕಾಣುತ್ತಿದ್ದು, ಇದರಲ್ಲಿ ಮಲಯಾಳಂನ 'ಕುರುಪ್' ಸಿನಿಮಾ ಕೂಡ ಒಂದು. 'ಕುರುಪ್' ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದ ಸಿನಿ ಪ್ರೇಕ್ಷಕರು ಇಂದು ಸಾಕಷ್ಟು ಸಂಖ್ಯೆಯಲ್ಲಿ ಥಿಯೇಟರ್ಗೆ ಆಗಮಿಸಿ ಶೋ ವೀಕ್ಷಿಸಿದ್ದಾರೆ. ದುಲ್ಖರ್ ಸಲ್ಮಾನ್ ನಟನೆಯ ಸಿನಿಮಾ ಇದಾಗಿದ್ದು, ಚಿತ್ರದ ಬಗ್ಗೆ ಒಳ್ಳೆ ರೆಸ್ಪಾನ್ಸ್ ಕೂಡ ವ್ಯಕ್ತವಾಗುತ್ತಿದೆ. ಆದರೆ ಸಿನಿಮಾ ರಿಲೀಸ್ ಆದ ಮೊದಲ ದಿನವೇ ಈ ಸಿನಿಮಾಗೆ ಕಂಟಕವೊಂದು ಎದುರಾಗಿದೆ.
'ಕುರುಪ್' ಸಿನಿಮಾ ನಿಜ ಕಥೆ ಆಧಾರಿತ ಚಿತ್ರ. ಸುಕುಮಾರ್ ಕುರುಪ್ / ಸುಕುಮಾರ್ ಪಿಳೈ ಎಂಬ ಹೆಸರಿನ ಕ್ರಿಮಿನಲ್ ಜೀವನಾಧಾರಿತ ಸಿನಿಮಾ ಇದು. ಸುಕುಮಾರ್ ಕುರುಪ್ ಕೇರಳ ರಾಜ್ಯದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಕೂಡ ಹೌದು. ಸಾಕಷ್ಟು ವರ್ಷಗಳ ಹಿಂದೆಯೇ ನಾಪತ್ತೆ ಆಗಿರುವ ಈತ 1984ರಿಂದ ಯಾವುದೇ ಕುರುಹಿಲ್ಲದಂತೆ ನಾಪತ್ತೆ ಆಗಿದ್ದಾನೆ. 4 ದಶಕಗಳಿಂದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿರುವ ಕುರುಪ್ ಎಲ್ಲಿದ್ದಾನೆ, ಹೇಗಿದ್ದಾನೆ ಎಂಬ ಬಗ್ಗೆ ಯಾರಿಗೂ ತಿಳಿದಿಲ್ಲ. ಈತನ ರೋಚಕ ಕಥೆಯನ್ನು ಕುರುಪ್ ಸಿನಿಮಾದಲ್ಲಿ ಸೆರೆಹಿಡಿಯಲಾಗಿದೆ. ಆದರೆ ಸಿನಿಮಾದಲ್ಲಿ ಸುಕುಮಾರ್ ಪಿಳೈ ಖಾಸಗಿ ಜೀವನಕ್ಕೆ ಸಿನಿಮಾ ಧಕ್ಕೆ ಉಂಟು ಮಾಡಿದೆ ಎಂದು ಕೇರಳ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೊಚ್ಚಿಯ ನಿವಾಸಿಯೊಬ್ಬರು ಸಲ್ಲಿಸಿದ್ದಾರೆ.
ಹೀಗಾಗಿ ಚಿತ್ರತಂಡಕ್ಕೆ ಮೊದಲ ದಿನವೇ ಕೊಂಚ ಹಿನ್ನಡೆ ಯಾಗಿದೆ. ಆದರೆ ಸಮಾಧಾನ ಪಟ್ಟುಕೊಳ್ಳುವ ಸುದ್ದಿ ಏನೆಂದರೆ, ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದ್ದರೂ ಕೂಡ ಹೈಕೋರ್ಟ್ ಸಿನಿಮಾ ಬಿಡುಗಡೆಗೆ ತಡೆಯನ್ನು ನೀಡಲು ನಿರಾಕರಿಸಿದೆ. ಇದರಿಂದ ಚಿತ್ರತಂಡ ಕೊಂಚ ನಿರಾಳವಾಗಿದೆ. ಶ್ರೀನಾಥ್ ರಾಜೇಂದ್ರನ್ ನಿರ್ದೇಶನದ ಈ ಚಿತ್ರ ಹಿಂದೆಯೇ ರಿಲೀಸ್ ಆಗಬೇಕಿತ್ತು. ಆದರೆ ಕೊರೋನಾ ಕಾರಣದಿಂದ ಇಂದು ಸಿನಿಮಾ ರಿಲೀಸ್ ಆಗಿದೆ. ತಡವಾಗಿ ರಿಲೀಸ್ ಆದರೂ ಚಿತ್ರದ ಫಸ್ಟ್ ಡೇ ಫಸ್ಟ್ ಶೋಗೆ ತುಂಬಾ ಚೆನ್ನಾಗಿ ಪ್ರತಿಕ್ರಿಯೆ ಮೂಡಿಬಂದಿದೆ. ಚಿತ್ರವನ್ನು ನೋಡಿ ಸಿನಿ ಪ್ರೇಕ್ಷಕರು ಇಷ್ಟಪಡುತ್ತಿದ್ದಾರೆ. ಇದು ಚಿತ್ರತಂಡಕ್ಕೂ ಸಮಾಧಾನ ತಂದಿದೆ.

ಚಿತ್ರದಲ್ಲಿ ನಟ ದುಲ್ಖರ್ ಸಲ್ಮಾನ್ ಸುಕುಮಾರ್ ಕುರುಪ್ ಪಾತ್ರವನ್ನು ನಿರ್ವಹಿಸಿದ್ದು ಅವರಿಗೆ ತೇಜೊವಧೆ ಮಾಡುವಂತಹ ಯಾವ ಪ್ರಯತ್ನವನ್ನು ಕೂಡ ಸಿನಿಮಾ ತಂಡ ಮಾಡಿಲ್ಲ, ಸಿನಿಮಾದಲ್ಲಿ ತುಂಬಾ ಅಚ್ಚುಕಟ್ಟಾಗಿ ವಿಷಯವನ್ನಷ್ಟೆ ತೋರಿಸುವ ಪ್ರಯತ್ನ ಮಾಡಿದ್ದೇವೆ ಎಂದು ಚಿತ್ರತಂಡ ಈ ಹಿಂದೆ ಪತ್ರೀಕಾಗೋಷ್ಠಿಯಲ್ಲಿ ತಿಳಿಸಿತ್ತು. ಹಾಗೇ ಸಿನಿಮಾಗೆ ಉಂಟಾಗಿರುವ ಸಂಕಷ್ಟದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಚಿತ್ರತಂಡ ಸಿನಿಮಾ ನೋಡಿದ ಪ್ರೇಕ್ಷಕರು ಈ ಬಗ್ಗೆ ಯಾವುದೇ ನಕಾರತ್ಮಕ ಪ್ರತಿಕ್ರಿಯೆ ನೀಡಿಲ್ಲ. ಒಳ್ಳೆ ಸಿನಿಮಾ ಬಂದಾಗ ಇಂತಹ ಅಡೆತಡೆಗಳು ಸಾಮಾನ್ಯ ಎಂದು ಬರೆದುಕೊಂಡಿದೆ.

'ಕುರುಪ್' ಸಿನಿಮಾಗೆ ದುಲ್ಖರ್ ಸಲ್ಮಾನ್ ಮತ್ತು ಅಖಿಲ್ ಸಿ ನಾಯರ್ ಜಂಟಿಯಾಗಿ ಬಂಡವಾಳ ಹೂಡಿದ್ದು, ನಿಮಿಶ್ ರವಿ ಛಾಯಗ್ರಹಣ ಮಾಡಿದ್ದಾರೆ. ಸುಶೈನ್ ಶ್ಯಾಮ್ ಚಿತ್ರಕ್ಕೆ ಸಂಗೀತ ನೀಡಿದ್ದು, ಹಾಡುಗಳ ಬಗ್ಗೆ ಕೂಡ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ. 35 ಕೋಟಿ ವೆಚ್ಚದಲ್ಲಿ ತಯಾರಾಗಿರುವ ಈ ಸಿನಿಮಾವನ್ನು ಕೇರಳದ ದಟ್ಟ ಕಾಡು ಸೇರಿದಂತೆ ಹಲವು ಕಡೆಗಳಲ್ಲಿ ಚಿತ್ರೀಕರಿಸಲಾಗಿದೆ.


Click it and Unblock the Notifications











