ಉಡುಪಿ: ಟಿವಿ ಶೋ ನೆರವಿನಿಂದ ಅತ್ಯಾಚಾರಿ ಅರೆಸ್ಟ್!
ಟಿವಿಯಲ್ಲಿ ಕ್ರೈಂ ಶೋಗಳಿಗೆ ಅದರದ್ದೇ ಆದ ವೀಕ್ಷಕ ವರ್ಗವಿದೆ. 'ಕ್ರೈಂ ಡೈರಿ', 'ಕ್ರೈಂ ಕತೆ'ಗಳು ಹಲವು ಟಿವಿಗಳಲ್ಲಿ ಪ್ರಸಾರವಾಗಿ ಟಿಆರ್ಪಿ ಗಳಿಸಿಕೊಂಡಿವೆ
ಈಗಲೂ ಹಲವು ಕ್ರೈಂ ಆಧರಿತ ಶೋಗಳು ಪ್ರಸಾರವಾಗುತ್ತಿವೆ. ಈಗಾಗಲೇ ನಡೆದ ಅಪರಾಧ ಪ್ರಕರಣಗಳನ್ನು ನಟರುಗಳನ್ನು ಬಳಸಿ ಮರುಸೃಷ್ಟಿ ಮಾಡಿ ಎಪಿಸೋಡ್ ಗಳ ಮೂಲಕ ಪ್ರಸಾರ ಮಾಡುವುದು ಇತ್ತೀಚೆಗೆ ಜನಪ್ರಿಯತೆ ಪಡೆದುಕೊಂಡಿದೆ.
ಟಿವಿಯಲ್ಲಿ ಕ್ರೈಂ ಶೋಗಳು ಪ್ರಸಾರವಾಗುವುದನ್ನು ಟೀಕಿಸುವವರಿದ್ದಾರೆ. ಆದರೆ ಇದರಿಂದಾಗಿ ಅತ್ಯಾಚಾರಿಯೊಬ್ಬನ ಬಂಧನ ಆಗಿದೆ. ಅದೂ ಕರ್ನಾಟಕದ ಉಡುಪಿ ಬಳಿಯ ಕೊಲ್ಲೂರಿನಲ್ಲಿ!

2013 ರಲ್ಲಿ ಕೇರಳದಲ್ಲಿ ರಾಜೇಶ್ ಹೆಸರಿನ ವ್ಯಕ್ತಿಯೊಬ್ಬ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ. ಆತನಿಗೆ ಮರಣದಂಡನೆ ವಿಧಿಸಲಾಗಿತ್ತು. ಬಳಿಕ ಆ ಸಜೆಯನ್ನು 25 ವರ್ಷಗಳ ಪರೋಲ್ ರಹಿತ ಕಠಿಣ ಕಾರಾಗೃಹ ಶಿಕ್ಷೆಗೆ ಬದಲಾಯಿಸಲಾಯಿತು.
2020 ರಲ್ಲಿ ರಾಜೇಶ್ ಇದ್ದ ಜೈಲಿನಿಂದ ಕೆಲವು ಖೈದಿಗಳನ್ನು ಬೇರೆ ಜೈಲಿಗೆ ಸ್ಥಳಾಂತರ ಮಾಡುವಾಗ ರಾಜೇಶ್ ಹಾಗೂ ಆತನ ಸೆಲ್ನಲ್ಲಿದ್ದ ಮತ್ತೊಬ್ಬ ಅಪರಾಧಿ ತಪ್ಪಿಸಿಕೊಂಡಿದ್ದರು. ಅವರಿಗಾಗಿ ಹುಡುಕಾಡಿದ ಪೊಲೀಸರು ರಾಜೇಶ್ನ ಸೆಲ್ನಲ್ಲಿದ್ದ ವ್ಯಕ್ತಿಯನ್ನು ಪುನಃ ಬಂಧಿಸಿದ್ದರು. ಆದರೆ ರಾಜೇಶ್ ಪತ್ತೆಯಾಗಿರಲಿಲ್ಲ.
ರಾಜೇಶ್, ಕೇರಳದಿಂದ ಪರಾರಿಯಾಗಿ ಕರ್ನಾಟಕದ ಉಡುಪಿಗೆ ಬಂದು ಮಧುರ್ ಎಂದು ಹೆಸರು ಬದಲಾಯಿಸಿಕೊಂಡು ನೆಲೆಸಿದ್ದ. ಸ್ಥಳೀಯ ರಬ್ಬರ್ ಪ್ಲಾಂಟೇಶನ್ ಒಂದರಲ್ಲಿ ಕೆಲಸಕ್ಕೆ ಸೇರಿ 2021 ರಲ್ಲಿ ವಿವಾಹ ಸಹ ಆಗಿದ್ದ. ಬಳಿಕ ಅಲ್ಲಿಂದ ಕೊಲ್ಲೂರಿಗೆ ಬಂದು ಜಯನ್ ಎಂಬ ಹೆಸರಿನಲ್ಲಿ ಮತ್ತೊಂದು ಕಡೆ ಕೆಲಸಕ್ಕೆ ಸೇರಿದ್ದ.
ಇತ್ತೀಚೆಗೆ ಕೇರಳದ ಮಾತೃಭೂಮಿ ಎಂಬ ಚಾನೆಲ್ನಲ್ಲಿ 2013 ರಲ್ಲಿ ಈತ ಮಾಡಿದ್ದ ಅತ್ಯಾಚಾರ ಹಾಗೂ ಕೊಲೆಯ ಪ್ರಕರಣದ ಎಪಿಸೋಡ್ ಒಂದು ಪ್ರಸಾರವಾಗಿತ್ತು. ಅದರಲ್ಲಿ ಈತನ ಚಿತ್ರವನ್ನೂ ಪ್ರದರ್ಶಿಸಲಾಗಿತ್ತು. ರಾಜೇಶನಿಗೆ ಕೆಲಸ ಕೊಟ್ಟಿದ್ದ ವ್ಯಕ್ತಿ ಆ ಎಪಿಸೋಡ್ ನೋಡಿ ಸ್ಥಳೀಯ ಪೊಲೀಸರನ್ನು ಸಂಪರ್ಕ ಮಾಡಿದ್ದರು. ಅಲ್ಲಿಂದ ಕೇರಳ ಪೊಲೀಸರ ಸಂಪರ್ಕ ಮಾಡಿ ಚಿತ್ರಗಳನ್ನು ಅವರೊಟ್ಟಿಗೆ ಹಂಚಿಕೊಂಡಾಗ ರಾಜೇಶ್ ಅನ್ನು ಗುರುತಿಸಿದ ಪೊಲೀಸರು ಕಾರ್ಕಳಕ್ಕೆ ಬಂದು ಆತನನ್ನು ಬಂಧಿಸಿ ಕರೆದೊಯ್ದಿದ್ದಾರೆ.


Click it and Unblock the Notifications











